ಮೈಸೂರು ದಸರಾ: ಗ್ರಾಮೀಣ ಭಾಗದ ಜನರಿಗೆ ಕೆಎಸ್ ಆರ್ ಟಿಸಿಯಿಂದ ಬಂಪರ್ ಕೊಡುಗೆ
ಮೈಸೂರು, ಅಕ್ಟೋಬರ್. 15: ಕೆಎಸ್ಆರ್ ಟಿಸಿ ಬಸ್ ಗಳ ಮೂಲಕ ಮೈಸೂರಿನ ಸುತ್ತಲಿನ ಪ್ರವಾಸಿ ತಾಣಗಳನ್ನು, ದಸರಾ ಕಾರ್ಯಕ್ರಮಗಳನ್ನು ತೋರಿಸುವ ಯೋಜನೆ 'ದಸರಾ ದರ್ಶನ'ಕ್ಕೆ ಇಂದು ಸಾರಿಗೆ ಸಚಿವ ಡಿಸಿ ತಮ್ಮಣ್ಣ ಚಾಲನೆ ನೀಡಿದರು.
ಮೈಸೂರು ಸಮೀಪದ ತಾಲೂಕು, ಹೋಬಳಿ ಕೇಂದ್ರದಿಂದ ಮೈಸೂರಿಗೆ ಬಸ್ ಗಳು ಆಗಮಿಸುತ್ತಿದ್ದು, ಹಳ್ಳಿಗಾಡಿನ ಜನರಿಗೂ ದಸರಾ ಕಣ್ತುಂಬಿಕೊಳ್ಳುವ ಅವಕಾಶ ಈ ಬಾರಿ ಕಲ್ಪಿಸಲಾಗಿದೆ. 50 ರೂಪಾಯಿ ರಿಯಾಯಿತಿ ದರದ ಪಾಸ್ ಖರೀದಿಸಿದರೆ ಮೈಸೂರಿಗೆ ಬಂದು ಹೋಗಬಹುದಾಗಿದೆ.
ಪ್ರಕೃತಿ ಸೊಬಗು ವೀಕ್ಷಣೆಗೆ ಗಿರಿದರ್ಶಿನಿ, ಜಲಪಾತ ನದಿಗಳ ವೀಕ್ಷಣೆಗೆ ಜಲದರ್ಶಿನಿ ಸೇರಿದಂತೆ ವೈವಿಧ್ಯ ಕಾರ್ಯಕ್ರಮಗಳಿಗೆ ಈಗಾಗಲೇ ಚಾಲನೆ ದೊರಕಿತ್ತು.

ಇಂದಿನಿಂದ ಅಕ್ಟೋಬರ್ 17ರವರೆಗೆ ಮೈಸೂರು, ಮಂಡ್ಯ ,ಚಾಮರಾಜನಗರ ಹಾಸನ ಮತ್ತು ಕೊಡಗು ಜಿಲ್ಲೆಗಳ 31 ತಾಲೂಕುಗಳಿಂದ 174 ವಾಹನಗಳಲ್ಲಿ 9570 ಜನರನ್ನು ಕರೆತರಲಾಗುವುದು .
ದಸರಾ ನೋಡಿರದ ಮಹಿಳೆಯರು, ವೃದ್ಧರು ಆರ್ಥಿಕವಾಗಿ ಹಿಂದುಳಿದ ಜನರನ್ನು ದಸರಾ ದರ್ಶನಕ್ಕೆ ಕರೆತಂದು ಚಾಮುಂಡಿ ಬೆಟ್ಟ, ಮೃಗಾಲಯ, ಅರಮನೆ ತೋರಿಸುವ ಕಾರ್ಯ ನಡೆಯಲಿದೆ. ಸುಗಮ ದರ್ಶನಕ್ಕಾಗಿ ಪ್ರತಿ ವಾಹನದೊಳಗೆ ಒಬ್ಬ ಜವಾಬ್ದಾರಿಯುತ ಸಿಬ್ಬಂದಿ ನಿಯೋಜಿಸಲು ವ್ಯವಸ್ಥೆ ಮಾಡಲಾಗಿದೆ.
ಫಲಾನುಭವಿಗಳು 50 ರೂ ರಿಯಾಯಿತಿ ದರದ ಪಾಸ್ ಖರೀದಿಸಿ ದಸರಾ ದರ್ಶನ ಮಾಡಬಹುದಾಗಿದೆ. ದಸರಾ ದರ್ಶನಕ್ಕೆ ಬರುವ ನಾಗರಿಕರಿಗೆ ಊಟ, ತಿಂಡಿ ಸಹ ಕಲ್ಪಿಸಲಾಗಿದೆ .

ಇದೇ ಸಂದರ್ಭದಲ್ಲಿ ಸಚಿವ ಜಿ.ಟಿ. ದೇವೇಗೌಡ ಮಾತನಾಡಿ, ಗ್ರಾಮೀಣ ಪ್ರದೇಶದ ಜನರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಬೇಕೆಂಬ ದೃಷ್ಟಿಯಿಂದ ದಸರಾ ದರ್ಶನ ಕಾರ್ಯಕ್ರಮನ್ನು ಹಮ್ಮಿಕೊಳ್ಳಲಾಗಿದೆ. ಒಂದು ತಾಲೂಕಿನಿಂದ 300 ಜನ ಗ್ರಾಮೀಣ ಪ್ರದೇಶದ ಜನರಿಗೆ ಜನತಾದರ್ಶನದಲ್ಲಿ ಅವಕಾಶ ಮಾಡಿಕೊಡಲಾಗುವುದು.
ಮುಂದಿನ ದಸರೆಯಲ್ಲಿ ದಸರಾ ದರ್ಶನಕ್ಕೆ ಹೆಚ್ಚಿನ ಪ್ರವಾಸಿಗರು ಆಗಮಿಸಲು ಮತ್ತಷ್ಟು ಹೆಚ್ಚಿನ ಬಸ್ ವ್ಯವಸ್ಥೆ ಮಾಡಿಕೊಡಬೇಕೆಂದು ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್ ಸಾರಿಗೆ ಸಚಿವರಿಗೆ ಇದೇ ವೇಳೆ ಮನವಿ ಮಾಡಿದರು.












Click it and Unblock the Notifications