ತಿ ನರಸೀಪುರದ ಕುಂಭಮೇಳಕ್ಕೆ ಹರಿದು ಬಂದ ಜನಸಾಗರ
ಮೈಸೂರು, ಫೆಬ್ರವರಿ 18: ಕಾವೇರಿ-ಕಪಿಲ-ಸ್ಫಟಿಕ ಸರೋವರಗಳ ಸಂಗಮದ ಪುಣ್ಯಕ್ಷೇತ್ರ ತಿರುಮಕೂಡಲಿನಲ್ಲಿ ಹನ್ನೊಂದನೇ ಕುಂಭಮೇಳಕ್ಕೆ ಭಾನುವಾರ (ಫೆ.17)ವೈಭವದ ಚಾಲನೆ ದೊರೆತಿದೆ.
ತಿ.ನರಸೀಪುರ ತಾಲೂಕು ಹಾಗೂ ಸುತ್ತಮುತ್ತಲಿನ ಊರುಗಳ ಸಾವಿರಾರು ಮಂದಿ ಮೊದಲ ದಿನ ಪುಣ್ಯ ಸ್ನಾನ ಮಾಡಿದರು. ಬೆಳಗ್ಗೆಯಿಂದ ರಾತ್ರಿಯವರೆಗೂ ಭಕ್ತ ಸಮೂಹ ತ್ರಿವೇಣಿ ಸಂಗಮಕ್ಕೆ ಹರಿದುಬಂತು.
ಸಂಗಮದ ಸ್ಥಳದಲ್ಲಿ ನಿರ್ಮಿಸಿರುವ ಯಾಗ ಮಂಟಪದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ದೇವಸ್ಥಾನದ ಆಗಮಿಕರು ಸಂಕಲ್ಪ, ಗಣಹೋಮ, ಹವನ, ಮಂತ್ರ ಪಠಣದ ಮೂಲಕ ತ್ರಯೋದಶಿ ಅನುಜ್ಞೆ, ಪುಣ್ಯಾಹ, ಅಭಿಷೇಕ ಹಾಗೂ ಮಹಾಮಂಗಳಾರತಿ ಸಾಂಪ್ರದಾಯಿಕ ಪೂಜೆಗಳನ್ನು ನೆರವೇರಿಸಿದರು.
ಕುಂಭಮೇಳ 2019: ವೈಭವದ ಗಂಗಾರತಿಯ, ಆಕರ್ಷಕ ಚಿತ್ರಗಳು

ಕುಂಭಮೇಳಕ್ಕೆ ಬರುವ ಭಕ್ತರಿಗೆ ದಾಸೋಹದ ವ್ಯವಸ್ಥೆ ಮಾಡಿದ್ದು, ಅದರ ಸುರಕ್ಷತೆ ಹಾಗೂ ಗುಣಮಟ್ಟ ತಪಾಸಣೆ ಮಾಡಲು ಮೂವರು ಆಹಾರ ಭದ್ರತಾ ಅಧಿಕಾರಿಗಳ ಪ್ರತ್ಯೇಕ ತಂಡ ಕೆಲಸ ಮಾಡುತ್ತಿವೆ ಎಂದು ಕುಂಭಮೇಳದ ಆಹಾರ ಭದ್ರತಾ ಅಧಿಕಾರಿ ಡಾ.ಎಸ್.ಚಿದಂಬರ ತಿಳಿಸಿದರು.
ತಿ.ನರಸೀಪುರದ ಜೆ.ಎಸ್.ಎಸ್ ಸಭಾಭವನ, ಆದಿಚುಂಚನಗಿರಿ ಸಭಾ ಮಂಟಪ ಹಾಗೂ ಅದರ ಪಕ್ಕದಲ್ಲಿ ಪೊಲೀಸ್ ಸಿಬ್ಬಂದಿಗೆ ಟೆಂಟ್ ನಿರ್ಮಿಸಲಾಗಿದೆ. ಈ ಮೂರು ಸ್ಥಳಗಳಲ್ಲಿ ದಾಸೋಹ ವ್ಯವಸ್ಥೆ ಆಯೋಜಿಸಲಾಗಿದೆ, ನಮ್ಮ ಅಧಿಕಾರಿಗಳು ದಾಸೋಹಕ್ಕೆ ಉಪಯೋಗಿಸುವ ಪಧಾರ್ಥಗಳನ್ನು ತಪಾಸಣೆ ಮಾಡುತ್ತಿದ್ದಾರೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಮಾರ್ಗಸೂಚಿಯಂತೆ ಇರುವ ಪದಾರ್ಥಗಳನ್ನು ಮಾತ್ರ ಉಪಯೋಗಿಸುವಂತೆ ಸೂಚಿಸಲಾಗಿದೆ ಚಿದಂಬರ ಹೇಳಿದರು.

ಪಟ್ಟಣದ ಗುಂಜಾನರಸಿಂಹಸ್ವಾಮಿ ದೇವಾಲಯ, ಅಗಸ್ತ್ಯೇಶ್ವರ ಸ್ವಾಮಿ ದೇವಾಲಯ, ಬಳ್ಳೇಶ್ವರ ದೇಗುಲ, ಚೌಡೇಶ್ವರಿ, ಹನುಮಂತೇಶ್ವರ ದೇವಾಲಯಗಳಿಗೆ ವಿಶೇಷ ದೀಪಾಲಂಕಾರ ಮಾಡಲಾಗಿದೆ. ಪ್ರಮುಖ ರಸ್ತೆಗಳಾದ ಲಿಂಕ್ ರಸ್ತೆ, ಮಾರುಕಟ್ಟೆ ರಸ್ತೆ, ಜೋಡಿ ರಸ್ತೆ ಹಳೆಯ ಹಾಗೂ ಹೊಸ ಸೇತುವೆ ಮತ್ತು ಸಂಗಮದ ರಸ್ತೆಗಳು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿವೆ.
ಇನ್ನು ನಿನ್ನೆ ಸಂಜೆ ನಡೆದ ಧಾರ್ಮಿಕ ಸಭೆಯನ್ನು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಉದ್ಘಾಟಿಸಿದರು. ಬಳಿಕ ಮಾತನಾಡಿ, ಜಿಲ್ಲಾಡಳಿತ, ಜನಪ್ರತಿನಿಧಿಗಳು ಮತ್ತು ಎಲ್ಲಾ ಇಲಾಖೆಗಳ ನೆರವಿನಿಂದ ಕುಂಭಮೇಳವನ್ನು ಅಚ್ಚುಕಟ್ಟಾಗಿ ನಡೆಸಲು ಸಾಧ್ಯವಾಗಿದೆ. ಶಾಸಕರಾದ ಯತೀಂದ್ರ ಸಿದ್ದರಾಮಯ್ಯ ಮತ್ತು ಅಶ್ವಿನ್ ಕುಮಾರ್ ಅವರು ಲವ-ಕುಶ ರೀತಿಯಲ್ಲಿ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.












Click it and Unblock the Notifications