ದೇವಾಲಯ ಧ್ವಂಸ ಪ್ರಕರಣ: ಮೈಸೂರು ಜಿಲ್ಲಾಡಳಿತಕ್ಕೆ ಚಾಟಿ ಬೀಸಿದ ಪ್ರತಾಪ್ ಸಿಂಹ
ಮೈಸೂರು, ಸೆಪ್ಟೆಂಬರ್ 13: ಹಿಂದೂ ದೇವಾಲಯಗಳನ್ನು ದ್ವಂಸಗೊಳಿಸುವ ಮೈಸೂರು ಜಿಲ್ಲಾಡಳಿತದ ನಡೆಯ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ, ದೇವಾಲಯಗಳನ್ನು ಒಡೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ಅಧಿಕಾರಿಗಳಿಗೆ ಚಾಟಿ ಬೀಸಿದ್ದಾರೆ.
ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಜಿಲ್ಲಾಡಳಿತ ಮಾತ್ರವಲ್ಲದೇ, ತಮ್ಮ ನಡೆಗೆ ಆಕ್ಷೇಪ ವ್ಯಕ್ತಪಡಿಸಿರುವ ತಮ್ಮದೇ ಪಕ್ಷದ ನಾಯಕರಿಗೂ ಟಾಂಗ್ ಕೊಟ್ಟಿದ್ದಾರೆ. ವಕ್ಫ್ ಬೋರ್ಡ್ ಮಾದರಿಯಲ್ಲಿ, ಹಿಂದೂ ದೇವಾಲಯ ರಕ್ಷಣೆಗೆ ಒಂದು ಪ್ರತ್ಯೇಕ ಬೋರ್ಡ್ ಮಾಡಬೇಕು. ಪ್ರತ್ಯೇಕ ಬೋರ್ಡ್ ಸ್ಥಾಪಿಸಿದರೆ ಈ ರೀತಿ ಸಮಸ್ಯೆ ಇರಲ್ಲ ಎಂದು ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ.

ಸುಪ್ರೀಂ ಕೋರ್ಟ್ ದೇವಾಲಯ ಒಡೆಯಲು ಹೇಳಿಲ್ಲ
ದೇವಾಲಯ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಸುಪ್ರೀಂ ಕೋರ್ಟ್ ದೇವಾಲಯವನ್ನು ಒಡೆಯಲು ಹೇಳಿಲ್ಲ. ಉಚ್ಚಗನಿ ಮಹದೇವಮ್ಮ ದೇಗುಲ ರಸ್ತೆಗೆ ಅಡ್ಡಿಯಾಗುತ್ತಿರಲಿಲ್ಲ. ಅದು ಐತಿಹಾಸಿಕ ದೇಗುಲ, ಅದನ್ನು ತೆರವು ಮಾಡಿದ್ದಾರೆ. ಮೂಲ ವಿಗ್ರಹ ಸ್ಥಳಾಂತರಿಸದೆ ನೆಲಸಮ ಮಾಡಿದ್ದಾರೆ. ಈ ಎಲ್ಲ ವಿಚಾರಗಳನ್ನು ಸಿಎಂ ಬೊಮ್ಮಾಯಿಗೆ ತಿಳಿಸಿದ್ದೇನೆ. ನಂಜನಗೂಡು ದಂಡಾಧಿಕಾರಿ ವಿರುದ್ಧ ಕ್ರಮಕ್ಕೆ ಮನವಿ ಮಾಡಿದ್ದೇನೆ. ಜಿಲ್ಲಾಡಳಿತಕ್ಕೂ ಸೂಚನೆ ನೀಡಬೇಕೆಂದು ಸಿಎಂಗೆ ಕೇಳಿದ್ದೇನೆ. ಸಿಎಂ ಬಸವರಾಜ ಬೊಮ್ಮಾಯಿ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. ಮೈಸೂರಿನಲ್ಲಿ ದೇಗುಲಗಳ ತೆರವು ನಿಲ್ಲಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಸುಪ್ರಿಂ ಕೋರ್ಟ್ ಆದೇಶ ಎಂದು ಅಧಿಕಾರಿಗಳು ಎಲ್ಲರ ದಾರಿ ತಪ್ಪಿಸುತ್ತಿದ್ದಾರೆ. ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಅಧಿಕಾರಿಗಳ ವಿರುದ್ಧ ಮತ್ತೆ ಕಿಡಿಕಾರಿದರು.

ಶಾಸಕ ಹರ್ಷವರ್ಧನ್ಗೆ ಸಿಂಹ ಟಾಂಗ್
ಇನ್ನೂ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಂಜನಗೂಡು ಬಿಜೆಪಿ ಶಾಸಕ ಹರ್ಷವರ್ಧನ್ ವಿರುದ್ಧವೂ ವಾಗ್ದಾಳಿ ನಡೆಸಿದ ಪ್ರತಾಪ್ ಸಿಂಹ, ಹಿಂದೂ ದೇವಾಲಯಗಳ ನೆಲಸಮಗೊಳಿಸುವ ಮೈಸೂರು ಜಿಲ್ಲಾಡಳಿತದ ವಿರುದ್ಧದ ತಮ್ಮ ಹೋರಾಟಕ್ಕೆ ಮುಖ್ಯಮಂತ್ರಿಗಳೇ ಸ್ಪಂದಿಸಿದ್ದಾರೆ. ನನಗೆ ಉಳಿದವರ ಸಹಕಾರ ಬೇಡ. ನಮ್ಮ ಭಾವನೆಗಳಿಗೆ ಸ್ಪಂದಿಸುವಂತಹ ಮುಖ್ಯಮಂತ್ರಿ ಇದ್ದಾರೆ. ನಾನು ರಾಜಕಾರಣ ಮಾಡಲು ಬಿಜೆಪಿಗೆ ಬಂದಿಲ್ಲ. ನಾನು ಆರ್ಎಸ್ಎಸ್ ಹಿನ್ನೆಲೆಯಿಂದ ಬಂದವನು. ಸಂಸದನಾದವನಿಗೆ ಇಡೀ ದೇಶವೇ ಕಾರ್ಯಕ್ಷೇತ್ರ. ಒಂದು ಕ್ಷೇತ್ರಕ್ಕೆ ಸೀಮಿತ ಎಂಬುದು ಬೇಡ ಅಂತ ಪ್ರತಾಪ್ ಸಿಂಹ ಕೌಂಟರ್ ಕೊಟ್ಟಿದ್ದಾರೆ.

ದೇವಾಲಯ ರಸ್ತೆಗೆ ಅಡಚಣೆ ಆಗುತ್ತಿರಲಿಲ್ಲ
ಅಲ್ಲದೇ, ದೇವಾಲಯಗಳನ್ನು ತೆರವು ಕಾರ್ಯಚರಣೆ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ದೂರವಾಣಿ ಮೂಲಕ ಮಾತನಾಡಿದೆ. ಸುಪ್ರೀಂ ಕೋರ್ಟ್ ಆದೇಶ ಏನಿದೆ ಅಂತ ಓದಿ ಅವರಿಗೆ ತಿಳಿಸಿದೆ. ಸುಪ್ರೀಂ ಕೋರ್ಟ್ ದೇವಾಲಯ ಒಡೆಯಲು ಹೇಳಿಲ್ಲ.
ಉಚ್ಚಗನಿ ಮಹದೇವಮ್ಮ ದೇವಾಲಯ ರಸ್ತೆಗೆ ಅಡಚಣೆ ಆಗುತ್ತಿರಲಿಲ್ಲ. ಅದು ಐತಿಹಾಸಿಕ ದೇವಾಲಯ. ಇಂತಹ ದೇವಸ್ಥಾನ ಒಡೆದಿದ್ದಾರೆ. ಮೂಲ ವಿಗ್ರಹವನ್ನು ಸ್ಥಳಾಂತರ ಮಾಡದೆ ನೆಲಸಮ ಮಾಡಿದ್ದಾರೆ ಅಂತ ತಿಳಿಸಿದೆ. ಜೊತೆಗೆ ನಂಜನಗೂಡು ದಂಡಾಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು, ಜಿಲ್ಲಾಡಳಿತಕ್ಕೂ ಸೂಚನೆ ನೀಡಬೇಕು ಎಂದು ಕೇಳಿದ್ದೇನೆ ಎಂದರು.

ಕಾರ್ಯಾಚರಣೆ ನಿಲ್ಲಿಸಲು ಸೂಚನೆ
ಇನ್ನು ಸುಪ್ರಿಂ ಕೋರ್ಟ್ ಆದೇಶದಂತೆ ಮೈಸೂರು ಜಿಲ್ಲೆಯ 92 ದೇವಾಲಯ ತೆರವು ಮಾಡಲು ಪಟ್ಟಿ ಮಾಡಿದ್ದ ಜಿಲ್ಲಾಡಳಿತಕ್ಕೆ ತೆರವು ಕಾರ್ಯಚರಣೆ ನಿಲ್ಲಿಸುವ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಸಂಸದ ಪ್ರತಾಪ್ ಸಿಂಹಗೆ ಕರೆ ಮಾಡಿ ಮಾಹಿತಿ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಇದರ ಬಗ್ಗೆ ಅಧಿಕೃತ ಆದೇಶ ಮಾಡುತ್ತೇನೆ. ಏಕಾಏಕಿ ಎಲ್ಲವನ್ನು ಒಡೆಯುವುದು ಸೂಕ್ತವಲ್ಲ. ಅವುಗಳ ಸ್ಥಳಾಂತರದ ಬಗ್ಗೆ ಸೂಚನೆ ನೀಡುತ್ತೇನೆ. ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ ಆಗದ ರೀತಿಯಲ್ಲಿ ದೇವಾಲಯ ರಕ್ಷಣೆ ಹೇಗೆ ಎಂಬುದನ್ನು ಚರ್ಚಿಸಿ ಆದೇಶ ಮಾಡುವುದಾಗಿ ಹೇಳಿದ್ದಾರೆ ಎಂದು ಸಿಎಂ ಜೊತೆ ಮಾತನಾಡಿರುವ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಸಂಸದ ಪ್ರತಾಪ್ ಸಿಂಹ ವಿವರಿಸಿದರು.












Click it and Unblock the Notifications