Mysuru Dasara: ನಾಡ ಹಬ್ಬಕ್ಕೆ ಸಜ್ಜಾಗುತ್ತಿದೆ ಮೈಸೂರು; ಇಂದಿನಿಂದ ಯುವ ದಸರಾ ಸಂಭ್ರಮ
ಮೈಸೂರು ದಸರಾ ಮಹೋತ್ಸವ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಮೈಸೂರಿನಲ್ಲಿ ಸಂಭ್ರಮದ ಆಚರಣೆಗೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಹಬ್ಬದ ಪ್ರಯುಕ್ತ ನಗರದಲ್ಲಿ ರಸ್ತೆ ದುರಸ್ತಿ, ವಿದ್ಯುತ್ ದೀಪ ಅಳವಡಿಕೆ ಸೇರಿ ಹಲವು ಕೆಲಸಗಳು ಭರದಿಂದ ಸಾಗುತ್ತಿವೆ. ಇಂದು (ಮಂಗಳವಾರ) ಸಂಜೆ 6 ಗಂಟೆಗೆ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ದಸರಾ ಮಹೋತ್ಸವ -2024 ರ ಯುವ ಸಂಭ್ರಮದ ಉದ್ಘಾಟನಾ ಕಾರ್ಯಕ್ರಮ ಏರ್ಪಡಿಸಲಾಗಿದೆ.
ದಸರಾ ಹಬ್ಬಕ್ಕೆ ಇಡೀ ನಗರ ಸಜ್ಜಾಗುತ್ತಿದ್ದು, ನವವಧುವಿನಂತೆ ಕಂಗೊಳಿಸುತ್ತಿದೆ. ನಗರದ ಪ್ರಮುಖ ರಸ್ತೆಗಳಾದ ಸಯ್ಯಾಜಿ ರಾವ್ ರಸ್ತೆ, ಚಾಮರಾಜ ಜೋಡಿ ರಸ್ತೆ, ಜೆಎಲ್ ಬಿ ರಸ್ತೆ, ಬಿಎನ್ ರಸ್ತೆ, ಅಲ್ಬರ್ಟ್ ವಿಕ್ಟರ್ ರಸ್ತೆ, ಇರ್ವಿನ್ ರಸ್ತೆ, ಹೊರವಲಯದ ಪ್ರಮುಖ ಹೆದ್ದಾರಿಗಳಿಗೆ ದೀಪಾಲಂಕಾರ ಮಾಡುತ್ತಿದ್ದು, ಈಗಾಗಲೇ ಮೈಸೂರು ಮಹಾನಗರ ಪಾಲಿಕೆ ರಸ್ತೆಗಳಲ್ಲಿ ಉಂಟಾಗಿರುವ ಗುಂಡಿ ಮುಚ್ಚುವ ಕೆಲಸವನ್ನು ಮುಗಿಸಿದೆ.

ಹಾರ್ಡಿಂಗ್ ಸರ್ಕಲ್, ಕೆ.ಆರ್.ಸರ್ಕಲ್, ಚಾಮರಾಜ ಸರ್ಕಲ್ನ ಮೂರು ವೃತ್ತಗಳ ಗೋಪುರಕ್ಕೆ ಬಣ್ಣ ಬಳಿಯಲಾಗಿದ್ದು, ನಗರದಲ್ಲಿರುವ ಪ್ರತಿಮೆಗಳನ್ನು ಸ್ವಚ್ಛಗೊಳಿಸಲಾಗಿದೆ. ದಸರಾ ಜಂಬೂ ಸವಾರಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ಫುಟ್ಪಾತ್ಗಳಲ್ಲಿ ದುರಸ್ತಿ ಆರಂಭಿಸಲಾಗಿದ್ದು, ಒಳಚರಂಡಿಗಳನ್ನು ಕೂಡ ಸ್ವಚ್ಛಗೊಳಿಸಲಾಗುತ್ತಿದೆ.
ಅರಮನೆಯ ದರ್ಬಾರ್ ಹಾಲ್, ಆನೆ ಬಾಗಿಲಿನ ಬಳಿಯ ಚಾವಣಿ, ಗ್ಯಾಲರಿ ಸೇರಿದಂತೆ ಒಳಾವರಣದಲ್ಲಿ ಬಣ್ಣ ಬಳಿಯಲಾಗುತ್ತಿದೆ. ವಿದ್ಯುತ್ ದೀಪಗಳನ್ನು ದುರಸ್ತಿ ಮಾಡಲಾಗುತ್ತಿದೆ. ಇದಕ್ಕಾಗಿ 15 ಸಿಬ್ಬಂದಿಯನ್ನು ಒಳಗೊಂಡ ಎಲೆಕ್ಟ್ರಿಷಿಯನ್ಗಳು ಕೆಲಸ ಮಾಡುತ್ತಿದ್ದಾರೆ. 10 ದಿನದೊಳಗೆ ಅರಮನೆ ಒಳಾವರಣದಲ್ಲಿ ದಸರಾ ಸಿದ್ಧತಾ ಕಾರ್ಯ ಪೂರ್ಣಗೊಳಿಸಲು ಅರಮನೆ ಮಂಡಳಿ ಯೋಜಿಸಿದೆ.
ನವರಾತ್ರಿಯ ವೇಳೆ ಕುಪ್ಪಣ್ಣ ಪಾರ್ಕ್ನಲ್ಲಿ ತೋಟಗಾರಿಕೆ ಇಲಾಖೆಯಿಂದ ನಡೆಯಲಿರುವ ದಸರಾ ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿ ಒಂದು ಲಕ್ಷಕ್ಕೂ ಹೆಚ್ಚು ಹೂವಿನ ಕುಂಡಗಳಲ್ಲಿ ಬಗೆಬಗೆಯ ಹೂವಿನ ಗಿಡಗಳನ್ನು ಬೆಳೆಸಲಾಗಿದೆ. ಈ ಬಾರಿ 35 ರಿಂದ 40 ಕ್ಕೂ ಹೆಚ್ಚು ತಳಿಯ ವಿವಿಧ ಬಣ್ಣಗಳ ಹೂವಿನ ಹಾಗೂ ಅಲಂಕಾರಿಕ ಗಿಡಗಳು ನೋಡುಗರ ಮನಸೂರೆಗೊಳ್ಳಲಿವೆ.
ಇಂದಿನಿಂದ ಯುವ ಸಂಭ್ರಮ
ದಸರಾ ಮಹೋತ್ಸವ -2024 ರ ಯುವ ಸಂಭ್ರಮಕ್ಕೆ ಇಂದು ಚಾಲನೆ ಸಿಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಡಾ.ಹೆಚ್.ಸಿ ಮಹದೇವಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.












Click it and Unblock the Notifications