ಮೈಸೂರು: ವಿಚಿತ್ರ ರೋಗಕ್ಕೆ 75ಕ್ಕೂ ಹೆಚ್ಚು ಕುರಿ ಸಾವು
ಮೈಸೂರು, ನವೆಂಬರ್ 4: ಬರದ ಹಿನ್ನಲೆಯಲ್ಲಿ ಮೇವನ್ನರಸಿ ಕುರಿಮಂದೆಯೊಂದಿಗೆ ದೂರದ ತುಮಕೂರಿನಿಂದ ಎಚ್.ಡಿ.ಕೋಟೆಗೆ ಬಂದಿದ್ದ ಕುರಿಗಾಹಿಗಳು ಇದೀಗ ಆತಂಕಕ್ಕೀಡಾಗಿದ್ದಾರೆ. ಕಾರಣ ವಿಚಿತ್ರ ರೋಗ ಕುರಿಗಳಿಗೆ ತಗುಲಿದ್ದು ತಲೆಸುತ್ತಿ ಬಿದ್ದು ಸಾವನ್ನಪ್ಪುತ್ತಿವೆ.
ಸುಮಾರು ಐನೂರಕ್ಕೂ ಹೆಚ್ಚು ಕುರಿಗಳನ್ನು ಮೇಯಿಸಿಕೊಂಡು ತುಮಕೂರಿನ ಶಿರಾ ಗ್ರಾಮದಿಂದ ಮಾರಣ್ಣ ಎಂಬುವರು ಇತರೆ ಕುರಿಗಾಹಿಗಳೊಂದಿಗೆ ಬಂದಿದ್ದು ಎಚ್.ಡಿ.ಕೋಟೆ ಪಟ್ಟಣದ ಸಮೀಪದ ವಡ್ಡರಗುಡಿಯ ಗಿರೀಶ್ ಎಂಬುವರ ಜಮೀನಿನಲ್ಲಿ ವಾಸ್ತವ್ಯ ಹೂಡಿದ್ದರು.

ಈ ನಡುವೆ ಮಂದೆಯಲ್ಲಿದ್ದ ಕುರಿಗಳಿಗೆ ವಿಚಿತ್ರ ರೋಗ ಕಾಣಿಸಿಕೊಂಡಿದ್ದ ಸುಮಾರು 75ಕ್ಕೂ ಹೆಚ್ಚು ಕುರಿಗಳು ಈಗಾಗಲೇ ಮೃತಪಟ್ಟಿವೆ. ಇದರಿಂದ ಸುಮಾರು 6ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ.
ಕುರಿಗಳ ಬಾಯಲ್ಲಿ ನೊರೆಕಾಣಿಸಿಕೊಳ್ಳುತ್ತಿದ್ದು ಬಳಿಕ ತಲೆಸುತ್ತಿ ಬಿದ್ದು ಸಾಯುತ್ತಿವೆ. ಒಂದರ ಮೇಲೊಂದರಂತೆ ಕುರಿಗಳು ಸಾಯುತ್ತಿರುವುದನ್ನು ನೋಡಿದ ಕುರಿಗಾಹಿಗಳು ದಿಕ್ಕೇ ತೋಚದಂತಾಗಿ ತಲೆ ಮೇಲೆ ಕೈಹೊತ್ತು ಕೂತಿದ್ದಾರೆ.
ಕಳೆದ 20 ದಿನಗಳ ಹಿಂದೆ ಭೀಮನಕೊಲ್ಲಿ ದೇವಸ್ಥಾನದ ಬಳಿ ಇದೇ ಮಂದೆಯಲ್ಲಿದ್ದ ಸುಮಾರು 150ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ್ದವು.
ಇದೀಗ ಮತ್ತೆ ಕುರಿಗಳು ಸಾವನ್ನಪ್ಪುತ್ತಿವೆ. ಹೀಗೆ ಸಾಯಲು ಕಾರಣ ಏನು ಎಂಬುವುದನ್ನು ಪಶು ವೈದ್ಯರು ಪತ್ತೆ ಹಚ್ಚಬೇಕಿದೆ. ಇದನ್ನು ನಿರ್ಲಕ್ಷ್ಯ ಮಾಡಿದರೆ ಗ್ರಾಮದ ಇತರೆ ಕುರಿಗಳಿಗೂ ಹರಡುವ ಸಾಧ್ಯತೆ ಹೆಚ್ಚಾಗಿದೆ. ಸಂಬಂಧಿಸಿದವರು ಇತ್ತ ಗಮನಹರಿಸಿ ಕುರಿಗಾಹಿಗಳನ್ನು ರಕ್ಷಿಸಬೇಕಾಗಿದೆ.
ಮತ್ತೊಂದೆಡೆ ಸತ್ತ ಕುರಿಗಳನ್ನು ಕೊಂಡೊಯ್ದು ಮಾರಾಟ ಮಾಡುವ ಯತ್ನ ನಡೆಯುತ್ತಿದೆ ಎಂಬ ಆರೋಪವೂ ಕೇಳಿ ಬರುತ್ತಿದೆ. ಎಲ್ಲದಕ್ಕೂ ಸಾರ್ವಜನಿಕರು ಎಚ್ಚರವಾಗಿರುವುದು ಒಳಿತು.












Click it and Unblock the Notifications