Get Updates
Get notified of breaking news, exclusive insights, and must-see stories!

ಜೆಡಿಎಸ್‌ನಿಂದ ಬಂದ ಸಿದ್ದೇಗೌಡರಿಗೆ ಚಾಮುಂಡೇಶ್ವರಿ ಟಿಕೆಟ್‌:ಕಾಂಗ್ರೆಸ್‌ ತಂತ್ರವೇನು?

ಮೈಸೂರು, ಏಪ್ರಿಲ್‌ 7: ರಾಜಕೀಯದಲ್ಲಿ ಏನೂ ಬೇಕಾದರೂ ಆಗಬಹುದು ಮತ್ತು ಪಕ್ಷದಲ್ಲಿದ್ದು ಪಕ್ಷಕ್ಕಾಗಿ ದುಡಿದವರಿಗಿಂತ ಬೇರೆ ಪಕ್ಷ ಬಿಟ್ಟು ಬಂದವರಿಗೆ ಮನ್ನಣೆ ಸಿಗಬಹುದು. ಇದು ಪ್ರತಿ ಚುನಾವಣೆ ಬಂದಾಗಲೂ ನಡೆಯುತ್ತದೆ. ಇದಕ್ಕೆ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಬಂದ ನಾಯಕನಿಗೆ ಕಾಂಗ್ರೆಸ್‌ನ ಟಿಕೆಟ್ ನೀಡಿರುವುದು ಸಾಕ್ಷಿಯಾಗಿದೆ.

ಸಿದ್ದರಾಮಯ್ಯ 2018ರಲ್ಲಿ ನಡೆದು ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿ ಎದುರಾಳಿ ಜೆಡಿಎಸ್‌ನ ಜಿ.ಟಿ.ದೇವೇಗೌಡರ ಎದುರು ಹೆಚ್ಚಿನ ಅಂತರದಿಂದ ಸೋಲು ಕಂಡಿದ್ದರು. ಈ ಸೋಲಿನ ಬಳಿಕ ಬೇಸರಗೊಂಡಿದ್ದ ಸಿದ್ದರಾಮಯ್ಯ ಅತ್ತ ತಲೆ ಹಾಕಿರಲಿಲ್ಲ. ಕ್ಷೇತ್ರದ ಜನರು ನನ್ನನ್ನು ಸೋಲಿಸಿಬಿಟ್ಟರಲ್ಲ ಎಂಬ ನೋವು ಇವತ್ತಿಗೂ ಕಾಡುತ್ತಲೇ ಇದೆ.

Karnataka Election 2023: Mavinahalli Siddegowda Contesting From Chamundeshwari Constituency

ಚಾಮುಂಡೇಶ್ವರಿ ಕ್ಷೇತ್ರದ ಬಗ್ಗೆ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ಹಿರಿಯ ನಾಯಕರು ತಲೆಕೆಡಿಸಿಕೊಳ್ಳದಿದ್ದ ಸಂದರ್ಭದಲ್ಲಿ ಸ್ಥಳೀಯ ಬಹುತೇಕ ನಾಯಕರು ಸಭೆ ಕರೆದು, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಒಟ್ಟುಗೂಡಿಸಿ ಪಕ್ಷದ ಸಂಘಟನೆಯತ್ತ ಗಮನಹರಿಸಿದ್ದರು.

ಕಾಂಗ್ರೆಸ್‌ ಟಿಕೆಟ್‌ಗಾಗಿ ಸಾಲು ಅರ್ಜಿ

ಪಕ್ಷದ ಟಿಕೆಟ್ ಕೇಳಿ ಅರ್ಜಿ ಸಲ್ಲಿಸಿದ್ದ ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಕೆಪಿಸಿಸಿ ಸದಸ್ಯ ಕೆ.ಮರೀಗೌಡ, ಜಿಪಂ ಮಾಜಿ ಸದಸ್ಯರಾದ ರಾಕೇಶ್ ಪಾಪಣ್ಣ, ಅರುಣ್ ಕುಮಾರ್, ಮುಖಂಡರಾದ ಲೇಖಾ ವೆಂಕಟೇಶ್, ಕೂರ್ಗಳ್ಳಿ ಮಹದೇವ್, ಕೃಷ್ಣಕುಮಾರ್ ಸಾಗರ್, ಬೆಳ್ಳುಳ್ಳಿ ಬಸವರಾಜ್, ಮೆಲ್ಲಳ್ಳಿ ಮಹದೇವಸ್ವಾಮಿ ಮೊದಲಾದವರು ಪಕ್ಷಕ್ಕಾಗಿ ಕೆಲಸ ಮಾಡುತ್ತಾ ಬಂದಿದ್ದರು.

ಜೆಡಿಎಸ್ ವಿರುದ್ಧವಾಗಿ ಕಾಂಗ್ರೆಸ್‌ಅನ್ನು ಸಂಘಟನೆಗೊಳಿಸಲು ತಯಾರಿ ನಡೆಸಿದ್ದರು. ಕಳೆದ ಮೂರು ವರ್ಷಗಳ ಕಾಲ ಕ್ಷೇತ್ರದಲ್ಲಿ ಜಿ.ಟಿ.ದೇವೇಗೌಡರು ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಮುನಿಸಿಕೊಂಡು ತಟಸ್ಥರಾಗಿ ಉಳಿದಿದ್ದರು. ಆ ಸಂದರ್ಭದಲ್ಲಿ ಜಿ.ಟಿ.ದೇವೇಗೌಡರು ಕಾಂಗ್ರೆಸ್‌ಅನ್ನು ಸೇರುತ್ತಾರೆ ಎಂಬ ವದಂತಿಗಳ ನಡುವೆಯೂ ಮೂಲ ಕಾಂಗ್ರೆಸ್ಸಿಗರು ಪಕ್ಷ ಸಂಘಟನೆಯಲ್ಲಿ ತೊಡಗಿದ್ದರು.

Karnataka Election 2023: Mavinahalli Siddegowda Contesting From Chamundeshwari Constituency

ಜಿಟಿಡಿ ವಿರುದ್ಧ ಸಿಡಿದೆದ್ದಿದ್ದ ಸಿದ್ದೇಗೌಡರು

ಜಿ.ಟಿ.ದೇವೇಗೌಡರು ಜೆಡಿಎಸ್‌ನಿಂದ ಹೊರಹೋದರೆ ತಾವೇ ಮುಂದಿನ ಜೆಡಿಎಸ್ ಅಭ್ಯರ್ಥಿ ಎಂಬ ಖುಷಿಯಲ್ಲಿ ಇವತ್ತಿನ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಾವಿನಹಳ್ಳಿ ಸಿದ್ದೇಗೌಡರು ಇದ್ದರು. ಜೊತೆಗೆ ಜಿ.ಟಿ.ದೇವೇಗೌಡರ ಅನುಪಸ್ಥಿತಿಯಲ್ಲಿ ಜೆಡಿಎಸ್ ಸಭೆ ನಡೆಸಿ ಜಿ.ಟಿ.ದೇವೇಗೌಡರ ವಿರುದ್ಧವೇ ಸಮರ ಸಾರಿದ್ದರು. ಅಷ್ಟೇ ಅಲ್ಲದೇ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಹಲವು ಜೆಡಿಎಸ್ ನಾಯಕರನ್ನು ಕರೆಯಿಸಿ ಪಕ್ಷದ ಸಂಘಟನೆ ಮಾಡಿದ್ದರು.

ಆದರೆ ಹೆಚ್.ಡಿ.ದೇವೇಗೌಡರ ಸಂಧಾನದ ಫಲವಾಗಿ ಜಿ.ಟಿ.ದೇವೇಗೌಡರು ಜೆಡಿಎಸ್‌ನಲ್ಲಿ ಉಳಿಯುವಂತಾಗಿತ್ತು. ಯಾವಾಗ ಜಿ.ಟಿ.ದೇವೇಗೌಡರು ಜೆಡಿಎಸ್‌ನಲ್ಲಿ ಉಳಿಯುತ್ತಾರೆ ಎನ್ನುವುದು ಗೊತ್ತಾಯಿತೋ ಜೆಡಿಎಸ್‌ನಲ್ಲಿದ್ದ ಮಾವಿನಹಳ್ಳಿ ಸಿದ್ದೇಗೌಡರು ಕಾಂಗ್ರೆಸ್ ಪಕ್ಷದ ಕದ ತಟ್ಟಿದ್ದರಲ್ಲದೆ, ಕೆಲವು ಸಮಯಗಳ ಹಿಂದೆ ಕಾಂಗ್ರೆಸ್ ಸೇರ್ಪಡೆಯಾಗಿದ್ದರು.

ಬೆಚ್ಚಿಬಿದ್ದ ಮೂಲ ಕಾಂಗ್ರೆಸ್ ನಾಯಕರು

ಜೆಡಿಎಸ್‌ನಲ್ಲಿದ್ದು, ಜಿ.ಟಿ.ದೇವೇಗೌಡರ ವಿರುದ್ಧವೇ ಸಮರ ಸಾರಿದ್ದ ಮಾವಿನಹಳ್ಳಿ ಸಿದ್ದೇಗೌಡರನ್ನು ಇದೀಗ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿದೆ. ಆ ಮೂಲಕ ಪಕ್ಷಕ್ಕಾಗಿ ದುಡಿದ ಮೂಲ ಕಾಂಗ್ರೆಸ್ ನಾಯಕರನ್ನು ಬದಿಗೆ ತಳ್ಳಲಾಗಿದೆ. ನಿನ್ನೆ ಮೊನ್ನೆ ಬಂದವರಿಗೆ ರಾಜ್ಯ ನಾಯಕರು ಮಣೆ ಹಾಕಿ ಟಿಕೆಟ್ ನೀಡಿರುವುದು ಮೂಲ ಕಾಂಗ್ರೆಸ್ಸಿಗರು ಬೆಚ್ಚಿ ಬೀಳುವಂತೆ ಮಾಡಿದೆ.

ಮಾವಿನಹಳ್ಳಿ ಸಿದ್ದೇಗೌಡರು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿರಲಿಲ್ಲ. ಅವರಿಗೆ ದಿಢೀರ್ ಟಿಕೆಟ್ ನೀಡಿರುವುದರ ಹಿಂದೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕೃಪಾಶೀರ್ವಾದವಿದೆ ಎನ್ನಲಾಗಿದೆ. ಜೊತೆಗೆ ಜಿ.ಟಿ.ದೇವೇಗೌಡರನ್ನು ಕಟ್ಟಿ ಹಾಕಲು ತಂತ್ರವೂ ಇದೆ ಎಂದರೆ ತಪ್ಪಾಗಲಾರದು. ಇಬ್ಬರೂ ಒಕ್ಕಲಿಗ ನಾಯಕರು ಮತ್ತು ಒಂದೇ ಪಕ್ಷದಲ್ಲಿದ್ದವರು. ಹೀಗಾಗಿ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ತಂತ್ರವೂ ಇದಾಗಿದೆ.

ಮಾವಿನಹಳ್ಳಿ ಸಿದ್ದೇಗೌಡರ ರಾಜಕೀಯ ಜೀವನ

ಇನ್ನು ಮಾವಿನಹಳ್ಳಿ ಸಿದ್ದೇಗೌಡರು 1983ರಲ್ಲಿ ರಾಜಕೀಯಕ್ಕೆ ಸಿದ್ದರಾಮಯ್ಯ ರೊಂದಿಗೆ ಪ್ರವೇಶ ಮಾಡಿದ್ದರು. ಅದಾದ ನಂತರ ಸಿದ್ದರಾಮಯ್ಯನವರು ರಾಜ್ಯ ನಾಯಕರಾದರೆ ಸಿದ್ದೇಗೌಡರು ಮಾತ್ರ ಸ್ಥಳೀಯ ನಾಯಕರಾಗಿ ಉಳಿದು ಬಿಟ್ಟರು. ಅವರ ವೈಯಕ್ತಿಕ ಬದುಕು ಮತ್ತು ರಾಜಕೀಯ ಜೀವನವನ್ನು ನೋಡಿದ್ದೇ ಆದರೆ ಜಯಪುರ ಹೋಬಳಿಯ ಮಾವಿನಹಳ್ಳಿ ಗ್ರಾಮದ ರೈತಾಪಿ ಕುಟುಂಬದಲ್ಲಿ ಹುಟ್ಟಿದವರು.

ಲೀಟರ್ ಹಾಲಿನ ದರ 3.80ರೂ. ಇದ್ದಾಗಲೇ ಸೈಕಲ್‌ನಲ್ಲಿ ಹಾಲು ಹಾಕುತ್ತಿದ್ದರು. ಹೊಲ ಉತ್ತು, ಬೆಳೆ ಬಿತ್ತಿ ರೈತ ಬದುಕು ಸಾಗಿಸಿದ 1983ರಲ್ಲಿ ರಾಜಕೀಯಕ್ಕೆ ಸಿದ್ದರಾಮಯ್ಯ ಜೊತೆ ರಾಜಕೀಯ ಪ್ರವೇಶ ಮಾಡಿದ್ದರು. 1993-94ರಲ್ಲಿ ಮಾವಿನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯನಾಗಿ ರಾಜಕೀಯ ಅಖಾಡಕ್ಕಿಳಿದ ಅವರು ಎಂಟ್ರಿ ಆಗಿದ್ದರು. ಅಂದೇ ಪಂಚಾಯಿತಿ ಅಧ್ಯಕ್ಷರಾಗಿ ಮನೆ ರಹಿತರಿಗೆ 800 ಗುಂಪು ಮನೆಗಳನ್ನು ನಿರ್ಮಿಸಿ ಕೊಟ್ಟಿದ್ದು ಅವರ ಸಾಧನೆ.

ಮೂಲ ಕಾಂಗ್ರೆಸ್ಸಿಗರು ಏನು ಮಾಡ್ತಾರೆ?

ಮಾವಿನಹಳ್ಳಿಯಲ್ಲಿ ಮುಚ್ಚಿ ಹೋಗಿದ್ದ ಕೃಷಿ ಪತ್ತಿನ ಸಹಕಾರ ಸಂಘವನ್ನು 30 ಲಕ್ಷಕ್ಕೂ ಹೆಚ್ಚಿನ ಹಣ ವಿನಿಯೋಗಿಸಿ ಉಳಿಸಿ ಅಧ್ಯಕ್ಷರಾಗಿದ್ದು, ಬಳಿಕ ಎಪಿಎಂಸಿ ಅಧ್ಯಕ್ಷರಾಗಿ, ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರಾಗಿ ಹಲವು ಡೇರಿಗಳ ಕಟ್ಟಡಕ್ಕೆ ಅನುಮೋದನೆ ನೀಡಿದ್ದರು. ಒಂದು ವರ್ಷಕ್ಕೆ ಸೀಮಿತವಾಗಿದ್ದ ಹಸು ವಿಮಾ ಯೋಜನೆ 3ವರ್ಷಕ್ಕೆ ಏರಿಕೆ ಮಾಡಿದ್ದು, ಹಾಲು ಒಕ್ಕೂಟದಿಂದಲೇ ಮೇವು ಉಚಿತವಾಗಿ ಒದಗಿಸುವ ಕೆಲಸ ಮಾಡಿದ್ದು, 60 ಕೋಟಿ ಲಾಭ ತಂದಿದ್ದು, ಸಮ್ಮಿಶ್ರ ಸರ್ಕಾರದ ಅವಧಿಯ ಸಾಲಮನ್ನಾದಲ್ಲಿ 1.5ಕೋಟಿ ಸಾಲಮನ್ನಾ ಮಾಡಿದ್ದು ಅವರ ಸಾಧನೆಯಂತೆ.

ಇದೀಗ ಕಾಂಗ್ರೆಸ್ ನಿಂದ ಕಣಕ್ಕಿಳಿದು ಜಿ.ಟಿ.ದೇವೇಗೌಡರ ವಿರುದ್ಧ ರಾಜಕೀಯ ಸಮರ ಆರಂಭಿಸಿದ್ದಾರೆ. ಇದರ ಹಿಂದೆ ಸಿದ್ದರಾಮಯ್ಯರವರ ಸಂಪೂರ್ಣ ಬೆಂಬಲವಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಕ್ಷೇತ್ರದ ಟಿಕೆಟ್ ವಂಚಿತ ನಾಯಕರು, ಮೂಲ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಯಾವ ರೀತಿ ಸಿದ್ದೇಗೌಡರನ್ನು ಸ್ವೀಕರಿಸುತ್ತಾರೆ ಎಂಬುದು ಬಹುಮುಖ್ಯವಾಗಿದ್ದು ಅದರ ಮೇಲೆ ಅವರ ಗೆಲುವಿನ ಭವಿಷ್ಯ ನಿಂತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+