ಮೈಸೂರಿನಲ್ಲಿ 125 ಮೂಟೆ ಅಕ್ರಮ ಪಡಿತರ ಅಕ್ಕಿ ವಶ
ಮೈಸೂರು, ಮೇ 17: ಸಾರ್ವಜನಿಕ ವಿತರಣಾ ವ್ಯವಸ್ಥೆಯ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಲಾಗಿದ್ದು, ಅಕ್ಕಿಯನ್ನು ವಶಕ್ಕೆ ಪಡೆದು, ಅಂಗಡಿ ಮಾಲೀಕನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಘಟನೆ ಶನಿವಾರ ಸಂಜೆ ನಂಜನಗೂಡಿನಲ್ಲಿ ನಡೆದಿದೆ.
ನಂಜನಗೂಡಿನ ಸಿನಿಮಾ ರಸ್ತೆಯಲ್ಲಿರುವ ಯಕೂಬ್ ಟ್ರೇಡರ್ಸ್ ನಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ತೆಗೆದುಕೊಂಡು, ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಮೈಸೂರು ಜಿಲ್ಲಾ ಅಪರಾಧ ಪತ್ತೆ ದಳದ ಇನ್ಸ್ ಪೆಕ್ಟರ್ ಎಂ.ಸಿ ರವಿಕುಮಾರ್ ಹಾಗೂ ತಾಲ್ಲೂಕು ಆಹಾರ ಸರಬರಾಜು ಇಲಾಖೆಯ ಆಹಾರ ಶಿರಸ್ತೇದಾರ್ ಅರವಿಂದ್ ಅವರ ನೇತೃತ್ವದಲ್ಲಿ ಜಂಟಿ ಕಾರ್ಯಾಚರಣೆ ನಡೆಸಲಾಯಿತು.
ಯಕೂಬ್ ಟ್ರೇಡರ್ಸ್ ಎಂಬ ಅಂಗಡಿ ಹಾಗೂ ಗೋದಾಮಿನಲ್ಲಿ ದಾಸ್ತಾನು ಆಗಿದ್ದ 125 ಕ್ಕೂ ಹೆಚ್ಚು ಮೂಟೆ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆದು ಮಾಲೀಕ ಸಿದ್ಧಿಕ್ ನನ್ನು ವಶಕ್ಕೆ ಪಡೆದಿದ್ದಾರೆ.

4 ದಿನಗಳ ಹಿಂದೆ 500 ಮೂಟೆ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆದ ಪ್ರಕರಣ ಕಣ್ಮುಂದೆ ಇರುವಾಗಲೇ ನಗರದ ಮಳಿಗೆಯಲ್ಲೇ ಈ ಪ್ರಮಾಣದಲ್ಲಿ ಅನ್ನಭಾಗ್ಯದ ಅಕ್ಕಿ ಮಾರಾಟವಾಗುತ್ತಿರುವ ಪ್ರಕರಣ ಬಹಿರಂಗವಾಗಿದೆ.
ಇಲ್ಲಿ ಪಡಿತರ ಅಕ್ಕಿಯನ್ನು ಪಡಿತರ ವಿತರಣೆಗೆ ಸಂಬಂಧಪಟ್ಟವರೇ ಖಾಸಗಿ ಅಂಗಡಿಗಳಿಗೆ ಮಾರಿಕೊಂಡಿದ್ದಾರೆ ಎಂದು ಸ್ಪಷ್ಟವಾಗಿ ಗೋಚರವಾಗುತ್ತದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.












Click it and Unblock the Notifications