ಬೀದಿಗೆ ಬಿದ್ದಿವೆ ನೀವೇ ಪೂಜೆ ಮಾಡಿದ ಗಜಮುಖ
ಮೈಸೂರು, ಸೆಪ್ಟೆಂಬರ್ 2 : ಗಣಪತಿ ಹಬ್ಬ ಮುಗಿದು ವಾರವೇ ಕಳೆದಿದೆ. ಗಣಪತಿ ತಂದು ಆಯ್ತು, ಪೂಜಿಸಿಯೂ ಆಯ್ತು, ತೆಗೆದುಕೊಂಡು ಅದನ್ನು ನಾಲೆಗೆ ಬಿಟ್ಟದ್ದು ಆಯ್ತು. ಈಗೇಕೆ ಇವರು ಈ ವಿಷಯವನ್ನು ಮಾತನಾಡುತ್ತಿದ್ದಾರಪ್ಪ ಎಂದು ಆಶ್ಚರ್ಯ ಪಡಬೇಡಿ. ಈ ಗಣಪತಿ ನಿಮ್ಮ ಮನೆಯಲ್ಲಿ ಪೂಜೆಗೊಂಡಿದ್ದವನೇ. ಈಗ ಹೀಗೆ ಬೀದಿ ಪಾಲಾಗಿದ್ದಾನೆ.
ನಮ್ಮ ಜನಕ್ಕೆ, ಯುವಕರಿಗೆ ಎಷ್ಟು ಬಡ್ಕೊಂಡ್ರು, ಯಾವಾಗ ಬುದ್ಧಿ ಬರುತ್ತದೋ ಗೊತ್ತಿಲ್ಲ. ರಸ್ತೆ -ರಸ್ತೆಯಲ್ಲಿ ಸಾವಿರಾರು ರುಪಾಯಿ ಖರ್ಚು ಮಾಡಿ, ಪೆಂಡಾಲು ಹಾಕಿ, ಪ್ರಸಾದ ಹಂಚಿ, ಡ್ಯಾನ್ಸ್, ಡೊಳ್ಳು -ನಗಾರಿ ಸದ್ದು ಮಾಡಿ, ಚಂದಾ ವಸೂಲಿ ಮಾಡಿ ಗಣಪನನ್ನೇನೋ ಇಡುತ್ತಾರೆ.

ಅದೇ ಉತ್ಸುಕತೆಯಲ್ಲಿ ಗಣಪತಿಯನ್ನು ಬಿಡುವ ದಿನ ಅವರೆಲ್ಲರಿಗೂ ಹಬ್ಬದ ವಾತಾವರಣ. ಕುಣಿದು - ಕುಪ್ಪಳಿಸಿ ಗಣಪನನ್ನು ತೆಗೆದುಕೊಂಡು ಹೋಗಿ ದೊಪ್ಪೆಂದು ನಾಲೆಗೆ - ನದಿಗೆ ಹಾಕಿ ಹಿಂತಿರುಗುತ್ತಾರೆ.

ಇದಾದ ಬಳಿಕ ಎಲ್ಲವೂ ಮುಗಿಯಿತೇ? ಖಂಡಿತಾ ಇಲ್ಲ. ಆರಂಭವೇ ಇದು. ಹೀಗೆ ನಾಲೆಗಳಲ್ಲಿ ತೇಲದೇ -ಮುಳುಗದೆ ಇರುವುದು ನೀವೇ ಪೂಜೆ ಮಾಡಿರುವ ಗಣಪ. ಮೈಸೂರು -ಬೆಂಗಳೂರು ರಸ್ತೆಯಲ್ಲಿ ಸಾಗುವ ದಾರಿಯಲ್ಲಿ ಕಂಡುಬರುವ ಸಾಲು -ಸಾಲು ನಾಲೆಗಳಲ್ಲಿ ಗಣಪ ಅನಾಥವಾಗಿದ್ದಾನೆ.

ಅವನ ಕೈ -ಕಾಲುಗಳು, ದೇಹದ ಅಂಗಾಂಗಗಳು ಊನವಾಗಿವೆ. ಈ ಚಿತ್ರವನ್ನು ಸೆರೆ ಹಿಡಿದದ್ದು ಛಾಯಾಚಿತ್ರಗ್ರಾಹಕ ನಂದನ್ ಎ. ವಿವಿಧ ಭಂಗಿಗಗಳಲ್ಲಿರುವ ಈ ಗಣಪನ ಸೈನ್ಯವೇ ಅಲ್ಲಿ ಕಣ್ಣಿಗೆ ರಾಚುವಂತಿತ್ತು. ಅದನ್ನು ನೋಡಿ ಬೇಸರಗೊಂಡು ಈ ಚಿತ್ರ ಕ್ಲಿಕ್ಕಿಸದೇ ಎನ್ನುತ್ತಾರೆ ಅವರು.

ನಾಲೆಗಳಲ್ಲಿ ನೀರಿಲ್ಲದೆ ಗಣಪ ತೇಲುತ್ತಿದ್ದ ಎಂಬುದಕ್ಕಿಂತ, ಅಲ್ಲಿದ್ದದ್ದು ಪಿಒಪಿ ಗಣಪತಿ ಮೂರ್ತಿಗಳೇ ಹೆಚ್ಚು. ನಮ್ಮ ಜಿಲ್ಲಾಡಳಿತ, ಸರಕಾರ ಅದೆಷ್ಟೇ ಪರಿಸರಸ್ನೇಹಿ ಗಣಪನನ್ನು ಪೂಜಿಸುವಂತೆ ಸೂಚನೆ ನೀಡಿದರೂ ನಮ್ಮ ಜನಕ್ಕೆ ಬುದ್ಧಿ ಬರುವುದಿಲ್ಲ ಏಕೆ ಎಂಬುದಕ್ಕೆ ಉತ್ತರ ಗಣಪನೇ ಹೇಳಬೇಕಷ್ಟೇ.












Click it and Unblock the Notifications