Get Updates
Get notified of breaking news, exclusive insights, and must-see stories!

G T Devegowda Networth: ಚಾಮುಂಡೇಶ್ವರಿ ಕ್ಷೇತ್ರ: 9ಕೋಟಿ ರೂ ಸಾಲದ ಹೊರೆ ಹೊತ್ತಿರುವ ಜಿ.ಟಿ.ದೇವೇಗೌಡರ ಆಸ್ತಿ ವಿವರ

ಮೈಸೂರು, ಏಪ್ರಿಲ್‌ 19: ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರನ್ನು ಸೋಲಿಸಿದ್ದ ಜೆಡಿಎಸ್ ನ ಶಾಸಕ ಜಿ.ಟಿ.ದೇವೇಗೌಡರು ಈ ಬಾರಿಯೂ ಚಾಮುಂಡೇಶ್ವರಿ ಕ್ಷೇತ್ರದಿಂದ ಮರು ಆಯ್ಕೆ ಬಯಸಿ ಕಣಕ್ಕಿಳಿದಿದ್ದು, ಅವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಜೆಡಿಎಸ್ ತೊರೆದು ಬಂದಿದ್ದ ಮಾವಿನಹಳ್ಳಿ ಸಿದ್ದೇಗೌಡ ಕಣದಲ್ಲಿದ್ದಾರೆ. ಇಬ್ಬರು ನಾಮಪತ್ರ ಸಲ್ಲಿಸಿದ್ದು, ಇನ್ಮುಂದೆ ಆರಂಭವಾಗುವ ಜಿದ್ದಾಜಿದ್ದಿಯಲ್ಲಿ 'ಸಿದ್ದು ತಂತ್ರ' ಕುತೂಹಲ ಕೆರಳಿಸಿದೆ

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗಟ್ಟಿಯಾಗಿ ನೆಲೆಯೂರಿರುವ ಜಿ.ಟಿ.ದೇವೇಗೌಡರಿಗೆ ಎದುರಾಳಿಯಾಗಿ ನಿಂತು ಗೆಲುವು ಪಡೆಯುವುದು ಅಷ್ಟು ಸುಲಭವಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೂ ಅವರಿಗೆ ಎದುರಾಳಿಯಾಗಿ ಕಾಂಗ್ರೆಸ್ ನಿಂದ ಮಾವಿನಹಳ್ಳಿ ಸಿದ್ದೇಗೌಡ ಮತ್ತು ಬಿಜೆಪಿಯಿಂದ ಕವೀಶ್ ಗೌಡ ಅವರು ಸ್ಪರ್ಧಿಸಿದ್ದಾರೆ. ಬಿಜೆಪಿಯ ಕವೀಶ್ ಗೌಡ ಯುವಕರಾಗಿರುವುದರಿಂದ ಇವರು ಬಿಜೆಪಿ ಭವಿಷ್ಯದ ಅಭ್ಯರ್ಥಿ ಎಂದೇ ಹೇಳಲಾಗುತ್ತಿದೆ. ಇದೆಲ್ಲದರ ನಡುವೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ಸಿನ ಮೂಲ ನಾಯಕರನ್ನು ಬದಿಗೊತ್ತಿ ವಲಸೆ ಬಂದವರಿಗೆ ಟಿಕೆಟ್ ನೀಡಲು ಶ್ರಮ ವಹಿಸುವುದರೊಂದಿಗೆ ಹೊಸತಂತ್ರ ಪ್ರಯೋಗಿಸಿರುವುದು ಮೇಲ್ನೋಟಕ್ಕೆ ಎದ್ದು ಕಾಣಿಸುತ್ತಿದೆ.

G. T. Devegowda Net Worth Revealed In His Karnataka Election Affidavit

ಈ ಕ್ಷೇತ್ರದಲ್ಲಿ ಜೆಡಿಎಸ್ ನ ಜಿ.ಟಿ.ದೇವೇಗೌಡ ಮತ್ತು ಕಾಂಗ್ರೆಸ್‌ಗಡ ಮಾವಿನಹಳ್ಳಿ ಸಿದ್ದೇಗೌಡ ನಡುವೆ ಜಿದ್ದಾಜಿದ್ದಿ ನಡೆಯುವ ಸಾಧ್ಯತೆ ಹೆಚ್ಚಿದೆ. ಜಿ.ಟಿ.ದೇವೇಗೌಡರ ಮುಂದೆ ಸೋಲು ಕಂಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಸ ತಂತ್ರವನ್ನು ಇಲ್ಲಿ ಮಾಡಿದ್ದು, ಕ್ಷೇತ್ರದಲ್ಲಿ ಮೂಲ ಕಾಂಗ್ರೆಸ್ಸಿನ ಆಕಾಂಕ್ಷಿಗಳಿದ್ದರೂ ಜೆಡಿಎಸ್ ನಿಂದ ವಲಸೆ ಬಂದ ಮಾವಿನಹಳ್ಳಿ ಸಿದ್ದೇಗೌಡರಿಗೆ ಟಿಕೆಟ್ ನೀಡಿದ್ದಾರೆ. ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯರ ವಿರುದ್ಧ ನಿಂತು ಜಿ.ಟಿ.ದೇವೇಗೌಡರ ಪರವಾಗಿಯೇ ಕೆಲಸ ಮಾಡಿದ್ದ ಸಿದ್ದೇಗೌಡರು ಈ ಬಾರಿ ಜಿ.ಟಿ.ದೇವೇಗೌಡರಿಗೆ ಎದುರಾಳಿಯಾಗಿದ್ದಾರೆ.

9 ಕೋಟಿಯ ಸಾಲಗಾರ ಜಿ.ಟಿ.ದೇವೇಗೌಡ

ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಮುನಿಸಿಕೊಂಡು ಜೆಡಿಎಸ್ ನಿಂದ ಜಿ.ಟಿ.ದೇವೇಗೌಡರು ದೂರವಿದ್ದ ಸಮಯದಲ್ಲಿ ಜೆಡಿಎಸ್ ನಲ್ಲಿದ್ದುಕೊಂಡು ಪಕ್ಷದ ಕೆಲಸ ಮಾಡಿದ್ದ ಮಾವಿನಹಳ್ಳಿ ಸಿದ್ದೇಗೌಡರು ಆ ನಂತರದ ಬೆಳವಣಿಗೆಯಲ್ಲಿ ಹೆಚ್.ಡಿ.ದೇವೇಗೌಡರ ಸಂಧಾನದ ಫಲವಾಗಿ ಜಿ.ಟಿ.ದೇವೇಗೌಡರು ಜೆಡಿಎಸ್ ನಲ್ಲಿ ಉಳಿಯುವಂತಾಯಿತು. ಇದೇ ಸಂದರ್ಭ ಅಸಮಾಧಾನಗೊಂಡ ಸಿದ್ದೇಗೌಡರು ಜೆಡಿಎಸ್ ನಿಂದ ದೂರ ಸರಿದು ಕಾಂಗ್ರೆಸ್ ಸೇರಿದರು. ಜೊತೆಗೆ ಟಿಕೆಟ್ ಕೂಡ ಪಡೆದುಕೊಂಡಿದ್ದಾರೆ. ಆ ಮೂಲಕ ಒಂದು ಕಾಲದ ಸ್ನೇಹಿತರು ಈಗ ಎದುರಾಳಿಯಾಗಿ ಅಖಾಡದಲ್ಲಿದ್ದಾರೆ.

ಇದೀಗ ಇಬ್ಬರು ನಾಮಪತ್ರ ಸಲ್ಲಿಸಿದ್ದು, ತಾವೆಷ್ಟು ಆಸ್ತಿ ಹೊಂದಿದ್ದೇವೆ ಎನ್ನುವುದನ್ನು ಬಹಿರಂಗಪಡಿಸಿದ್ದಾರೆ. ಅವರು ಚುನಾವಣಾ ಆಯೋಗಕ್ಕೆ ನೀಡಿದ ವಿವರದಂತೆ ಹೇಳುವುದಾದರೆ ಜೆಡಿಎಸ್ ಅಭ್ಯರ್ಥಿ ಶಾಸಕ ಜಿ.ಟಿ.ದೇವೇಗೌಡರು 16.59 ಕೋಟಿ ಒಡೆಯರಾಗಿದ್ದು, ಚರಾಸ್ತಿ 2.82 ಕೋಟಿಯಿದ್ದರೆ 9.88 ಕೋಟಿ ಸಾಲ ಮಾಡಿಕೊಂಡಿದ್ದಾರೆ. ಇನ್ನು 73 ವರ್ಷದ ಜಿ.ಟಿ.ದೇವೇಗೌಡ ಅವರ ಕೈಯಲ್ಲಿ 3.16 ಲಕ್ಷ ನಗದು ಇದ್ದು, 2021-22ನೇ ಸಾಲಿನ ವಾರ್ಷಿಕ ಆದಾಯ 66.61 ಲಕ್ಷವಾಗಿದೆ.

G. T. Devegowda Net Worth Revealed In His Karnataka Election Affidavit

ಪತ್ನಿ ಲಲಿತಾ ಅವರ ಸ್ಥಿರಾಸ್ತಿ 1.8 ಕೋಟಿ, ಚರಾಸ್ತಿ 1.58 ಕೋಟಿ ಇದೆ. ಅವರ ಆದಾಯ 10.27 ಲಕ್ಷ. ಕೈಯಲ್ಲಿರವ ನಗದು 1 ಲಕ್ಷವಾಗಿದೆ. ಜಿ.ಟಿ.ದೇವೇಗೌಡರ ಬಳಿ 23.95 ಲಕ್ಷ ಮೌಲ್ಯದ ಟೊಯೊಟಾ ಇನ್ನೊವಾ ಕ್ರಿಸ್ಟಾ ಕಾರು, 8 ಸಾವಿರ ಮೌಲ್ಯದ ಕೆನೆಟಿಕ್ ಹೊಂಡಾ ಇದೆ. 2.5 ಲಕ್ಷ ಮೌಲ್ಯದ 100 ಗ್ರಾಂ ಚಿನ್ನವಿದೆ. ಪತ್ನಿ ಲಲಿತಾ ಅವರ ಬಳಿ 14.75 ಲಕ್ಷ ಮೌಲ್ಯದ ಇನ್ನೊವಾ ಕಾರು, 10 ಲಕ್ಷ ಮೌಲ್ಯದ 400 ಗ್ರಾಂ ಚಿನ್ನ, 4 ಲಕ್ಷ ಮೌಲ್ಯದ 8 ಕೆ.ಜಿ ಬೆಳ್ಳಿ ಇದೆಯಂತೆ.

ಕೈ ಅಭ್ಯರ್ಥಿ ಮೇಲೆ ಎರಡು ಪ್ರಕರಣ

ಗುಂಗ್ರಾಲ್ ಛತ್ರದಲ್ಲಿ 1.30 ಕೋಟಿ ಮೌಲ್ಯದ 4 ಎಕರೆ 6 ಗುಂಟೆ ಪಿತ್ರಾರ್ಜಿತ ಆಸ್ತಿ, ರಟ್ನಹಳ್ಳಿಯಲ್ಲಿ 1.10 ಕೋಟಿ ಮೌಲ್ಯದ 10 ಎಕರೆ, ಇದೇ ಗ್ರಾಮದಲ್ಲಿ 40 ಲಕ್ಷ ಮೌಲ್ಯದ 2.8 ಎಕರೆ ಕೃಷಿ ಭೂಮಿಯಿದೆ. ಹುಯಿಲಾಳುವಿನಲ್ಲಿ 25 ಲಕ್ಷ ಮೌಲ್ಯ 14 ಗುಂಟೆ, ವಿಜಯನಗರದಲ್ಲಿ 1 ಕೋಟಿ ಮೌಲ್ಯದ ನಿವೇಶನವಿದೆ. ಮೈಸೂರಿನ ವಿಜಯನಗರ, ಬೆಂಗಳೂರಿನ ಸದಾಶಿವನಗರದಲ್ಲಿ 16.59 ಕೋಟಿ ಮೌಲ್ಯದ ವಾಣಿಜ್ಯ, ವಸತಿ ಕಟ್ಟಡಗಳಿವೆ ಎಂದು ಆಸ್ತಿ ವಿವರವನ್ನು ನೀಡಿದ್ದಾರೆ.

ಇನ್ನು ಜಿ.ಟಿ.ದೇವೇಗೌಡರ ಒಂದು ಕಾಲದ ಬೆಂಬಲಿಗ, ಸ್ನೇಹಿತ ಇದೀಗ ಎದುರಾಳಿಯಾಗಿರುವ ಕಾಂಗ್ರೆಸ್ ನ ಅಭ್ಯರ್ಥಿ 56 ವರ್ಷದ ಮಾವಿನಹಳ್ಳಿ ಸಿದ್ದೇಗೌಡ ಕೂಡ ಕೋಟಿ ಕುಳವಾಗಿದ್ದು, ಒಂದಷ್ಟು ಸಾಲ ಜತೆಗೆ ಅವರ ಮೇಲೆ ಎರಡು ಪ್ರಕರಣಗಳು ದಾಖಲಾಗಿರುವುದು ಚನಾವಣಾ ಆಯೋಗಕ್ಕೆ ನೀಡಿದ ವರದಿಯಲ್ಲಿ ಉಲ್ಲೇಖವಾಗಿದೆ. ಅವರ ಚರಾಸ್ತಿ 1.40 ಕೋಟಿ, ಸ್ಥಿರಾಸ್ತಿ 7.7 ಕೋಟಿ ಹಾಗೂ ಬ್ಯಾಂಕ್ ಇತರೆ ಸಾಲ 1.21 ಕೋಟಿ ಆಗಿದೆ. ಅವರ ಕೈಯಲ್ಲಿರುವ ನಗದು 15 ಲಕ್ಷ, ಪತ್ನಿ ಬಳಿ 2 ಲಕ್ಷವಿದೆ. ಅವರ 2021-22ನೇ ಸಾಲಿನ ವಾರ್ಷಿಕ ಆದಾಯ 15.92 ಲಕ್ಷವಾಗಿದೆ.

ಮಕ್ಕಳ ಹೆಸರಿನಲ್ಲಿ 6.10 ಕೋಟಿ ಆಸ್ತಿ

ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಕಾರಣಕ್ಕಾಗಿ ಎರಡು ಪ್ರಕರಣಗಳು ಸಿದ್ದೇಗೌಡ ವಿರುದ್ಧ ದಾಖಲಾಗಿವೆ. ಏಪ್ರಿಲ್ 12ರಂದು ಮಾವಿನಹಳ್ಳಿಯಲ್ಲಿ 10 ಲಕ್ಷ ಚುನಾವಣಾ ದೇಣಿಗೆ ಪಡೆದರೆಂಬ ಆರೋಪ ಹಾಗೂ ಸಭೆ ನಡೆಸಿದ ಕಾರಣಕ್ಕಾಗಿ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೂರ್ಗಳ್ಳಿಯ ದೇವಸ್ಥಾನದಲ್ಲಿ ಪಕ್ಷದ ಸಭೆ ನಡೆಸಿದ್ದಕ್ಕೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಹಾಗೂ ಮಾವಿನಹಳ್ಳಿಯಲ್ಲಿ ಜೂನ್ 11, 2021ರಲ್ಲಿ ಶಾಲೆಯ ಕಾಮಗಾರಿಗೆ ಅಡ್ಡಿಪಡಿಸಿ ಗಲಾಟೆ ನಡೆಸಿದರೆಂಬ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಈ ಎಲ್ಲ ಪ್ರಕರಣಗಳ ವಿಚಾರಣೆಯಲ್ಲಿವೆ.

ಇನ್ನು ಇವರ ಬಳಿ ಓಡಾಡಲು 12 ಲಕ್ಷ ಮೌಲ್ಯದ ಬ್ರೆಜಾ ಹಾಗೂ 19 ಲಕ್ಷ ಮೌಲ್ಯದ ಮಹೀಂದ್ರಾ ಎಕ್ಸ್ಯುವಿ 500 ಕಾರುಗಳಿವೆ. 45.98 ಲಕ್ಷ ಮೌಲ್ಯದ ಚಿನ್ನ, 3.5 ಲಕ್ಷ ಮೌಲ್ಯದ ಬೆಳ್ಳಿ ಇದ್ದರೆ, ಪತ್ನಿ ಬಳಿ 44.55 ಲಕ್ಷ ಮೌಲ್ಯದ 810 ಗ್ರಾಂ ಚಿನ್ನಾಭರಣವಿದೆ. ಚಿಕ್ಕನಹಳ್ಳಿಯಲ್ಲಿ 2.8 ಕೋಟಿ ಮಾರುಕಟ್ಟೆ ಮೌಲ್ಯದ 5 ಎಕರೆ 24 ಗುಂಟೆ ಪಿತ್ರಾರ್ಜಿತ ಕೃಷಿಭೂಮಿಯಿದೆ. ಮಾವಿನಹಳ್ಳಿ, ಚಿಕ್ಕನಹಳ್ಳಿಯಲ್ಲಿ 7.15 ಕೋಟಿ ಮೌಲ್ಯದ ಭೂಮಿಯಿದೆ. ಪತ್ನಿ ಹೆಸರಿನಲ್ಲಿ 76 ಲಕ್ಷ, ಮಕ್ಕಳ ಹೆಸರಿನಲ್ಲಿ 6.10 ಕೋಟಿ ಆಸ್ತಿ ಇದೆ.

ಮೂಲ ಕಾಂಗ್ರೆಸ್ಸಿಗರಿಗೆ ನುಂಗಲಾರದ ತುತ್ತು

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿ.ಟಿ.ದೇವೇಗೌಡರಿಗೆ ಪ್ರಬಲ ಪೈಪೋಟಿ ನೀಡಬೇಕೆಂಬ ಉದ್ದೇಶದಿಂದಲೇ ಜೆಡಿಎಸ್ ತೊರೆದು ಬಂದಿದ್ದ ಮಾವಿನಹಳ್ಳಿ ಸಿದ್ದೇಗೌಡರಿಗೆ ಕಾಂಗ್ರೆಸ್ ನಿಂದ ಟಿಕೆಟ್ ನೀಡಿ ಮುಳ್ಳನ್ನು ಮುಳ್ಳಿನಿಂದಲೇ ಚುಚ್ಚಿ ತೆಗೆಯುವ ಹಠಕ್ಕೆ ಬಿದ್ದಿದ್ದಾರೆ. ಆದರೆ ಸಿದ್ದರಾಮಯ್ಯ ಅವರ ಈ ನಿರ್ಧಾರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುತ್ತಾ ಬಂದಿದ್ದ ಕಾಂಗ್ರೆಸ್ಸಿನ ಮೂಲ ನಾಯಕರು ಮತ್ತು ಮುಖಂಡರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಅವರೇನು ಮಾಡುತ್ತಾರೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಆದರೆ ಇಲ್ಲಿ ಜಿ.ಟಿ.ದೇವೇಗೌಡರನ್ನು ಮಣಿಸಬೇಕೆನ್ನುವ ಸಿದ್ದರಾಮಯ್ಯ ಅವರ ತಂತ್ರ ಫಲಕೊಡುತ್ತಾ ಎಂಬುದನ್ನು ಕಾದು ನೋಡಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+