V Somanna Files Nomination: ನಾಮಪತ್ರ ಸಲ್ಲಿಸಿದ ವಿ ಸೋಮಣ್ಣ, ಸಿದ್ದರಾಮಯ್ಯ ವಿರುದ್ದ ತೊಡೆ ತಟ್ಟಲು ವೇದಿಕೆ ಸಿದ್ಧ
ನಂಜನಗೂಡು, ಏಪ್ರಿಲ್ 17: ಸೋಮವಾರ ವರುಣಾ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ವಿ ಸೋಮಣ್ಣ ಅವರು ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದ ಪ್ರತಾಪ್ ಸಿಂಹ ಸಾಥ್ ನೀಡಿದರು.
ಇದಕ್ಕೂ ಮೊದಲು ಅವರು ಮೈಸೂರಿನ ಇತಿಹಾಸ ಪ್ರಸಿದ್ಧ ಶ್ರೀ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ಜಗನ್ಮಾತೆ ಶ್ರೀ ಚಾಮುಂಡೇಶ್ವರಿ ತಾಯಿಯ ಆಶೀರ್ವಾದ ಪಡೆದರು. ಅಲ್ಲದೆ ಮೈಸೂರಿನ ಶ್ರೀ ಕೋಟೆ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿಯೂ ಪೂಜೆ ಸಲ್ಲಿಸಿದರು.

ವರುಣಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಸನ್ಮಾನ್ಯ ಶ್ರೀ ವಿ. ಸೋಮಣ್ಣರವರು ಇಂದು ನಾಮಪತ್ರ ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ ನಂಜನಗೂಡಿನಲ್ಲಿ ಏರ್ಪಡಿಸಲಾಗಿದ್ದ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಿದರು. ಈ ವೇಳೆ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ರವರು, ಸಿದ್ದರಾಜು ರವರು, ಸದಾನಂದ, ಮಹದೇವ ಸ್ವಾಮಿ, ಸಿದ್ದಲಿಂಗಸ್ವಾಮಿ, ಮಹದೇವಯ್ಯ, ಶಿವಣ್ಣ, ನಾರಾಯಣ ಸ್ವಾಮಿ, ಪ್ರತಾಪ್ ಉಪಸ್ಥಿತರಿದ್ದರು.
ವಿ ಸೋಮಣ್ಣ ಅವರಿಗೆ ಸಾಥ್ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೈಸೂರಿಗೆ ಬಂದಿದ್ದರು. ವರುಣಾದಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ಕಣಕ್ಕೆ ಇಳಿದಿರುವ ವಿ ಸೋಮಣ್ಣ ಅವರು ಬೃಹತ್ ರೋಡ್ ಶೋ ಕೂಡ ನಡೆಸಿದರು. ಇಲ್ಲಿ ಶಕ್ತಿ ಪ್ರದರ್ಶನ ಕೂಡ ನಡೆಯಿತು.
ಈ ವೇಳೇ ಮಾತನಾಡಿದ ಸಿಎಂ ಬೊಮ್ಮಾಯಿ, ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ. ಆ ಪಕ್ಷ ಆಡಳಿತದಲ್ಲಿದ್ದಾಗ ಶೇಕಡ 100ರಷ್ಟು ಕಮಿಷನ್ ವ್ಯವಹಾರ ನಡೆಯುತ್ತಿತ್ತು. ಎಲ್ಲ ಇಲಾಖೆಗಳಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿತ್ತು. ಈಗ ನಮ್ಮ ಮೇಲೆ ಅವರು ಗೂಬೆ ಕೂರಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಬಳಿಕ ಮಾತನಾಡಿದ ವಿ ಸೋಮಣ್ಣ ನಾನು ರಣರಂಗದಿಂದ ಓಡಿಹೋಗುವವನಲ್ಲ, ಆದರೆ ಈ ಅವಕಾಶಗಳು ಭಗವಂತನ ಪ್ರೇರಣೆ, ಯಾವುದೇ ಶಕ್ತಿಗಳಿಗೆ ಬಗ್ಗುವವನಲ್ಲ, ಸಾರ್ವಜನಿಕ ಜೀವನ ಒಂದು ಮುಳ್ಳಿನ ಹಾಸಿಗೆ. ಮೈಸೂರು ಬೆಂಗಳೂರು ಹೆದ್ದಾರಿ ಉದ್ಘಾಟನೆಯಾಗಿದೆ. ಇದು ಮೋದಿ ಅವರ ಕೊಡುಗೆ, 40 ವರ್ಷದ ನನ್ನ ರಾಜಕೀಯ ಜೀವನದಲ್ಲಿ ನಾನು ಎಲ್ಲೂ ಸೇವೆಯಲ್ಲಿ ತಪ್ಪಿಲ್ಲ ಎಂದರು.












Click it and Unblock the Notifications