ಬಿಜೆಪಿ ದಲಿತ ಸಂವಾದದಲ್ಲಿ ಪ್ರತಿಭಟನೆ, ಅಮಿತ್ ಶಾಗೆ ಧಿಕ್ಕಾರ
ಮೈಸೂರು, ಮಾರ್ಚ್ 30: ಬಿಜೆಪಿ ವತಿಯಿಂದ ಇಂದು ಮೈಸೂರಿನಲ್ಲಿ ಆಯೋಜಿಸಲಾಗಿದ್ದ ದಲಿತ ಸಂವಾದ ಕಾರ್ಯಕ್ರಮದಲ್ಲಿ ಅಮಿತ್ ಶಾ ವಿರುದ್ಧ ದಲಿತರು ತಿರುಗಿಬಿದ್ದರು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಅಮಿತ್ ಶಾ ಅವರಿಗೆ ವಿವಿಧ ದಲಿತ ಸಂಘಟನೆಗಳು ಮೊದಲೆ ಲಿಖಿತ ರೂಪದಲ್ಲಿ ಕೇಳಲಾಗಿದ್ದ 100 ಕ್ಕೂ ಹೆಚ್ಚು ಪ್ರಶ್ನೆಗಳ ಪೈಕಿ ಕೇವಲ 6 ಆಯ್ದ ಪ್ರಶ್ನೆಗಳಿಗೆ ಮಾತ್ರ ಉತ್ತರಿಸುತ್ತೇನೆ ಎಂದು ಅಮಿತ್ ಶಾ ಅವರು ಭಾಷಣ ಪ್ರಾರಂಭಿಸಿದರು.
ಇದರಿಂದ ಸಿಟ್ಟಿಗೆದ್ದ ಕೆಲವು ದಲಿತ ಮುಖಂಡರು 'ಕೇಂದ್ರ ಸಚಿವ ಅನಂತ್ಕುಮಾರ್ ಹೆಗಡೆ ಸಂವಿಧಾನ ಬದಲಿಸುತ್ತೇನೆ ಎಂಬ ಹೇಳಿಕೆ ಕೊಟ್ಟಿದ್ದಾರೆ ಇದರ ಬಗ್ಗೆ ಬಿಜೆಪಿ ನಿಲುವೇನು' ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಮಿತ್ ಶಾ, 'ಅನಂತ್ಕುಮಾರ್ ಹೆಗಡೆ ಅವರ ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲ' ಎಂದರು.

ಅಮಿತ್ ಶಾ ಅವರ ಉತ್ತರದಿಂದ ಇನ್ನಷ್ಟು ಕೆರಳಿದ ದಲಿತ ಹೊರಾಟಗಾರರು 'ಹಾಗಿದ್ದರೆ ಅನಂತ್ಕುಮಾರ್ ಹೆಗಡೆ ಅವರನ್ನು ಸಂಪುಟದಲ್ಲಿ ಏಕೆ ಉಳಿಸಿಕೊಂಡಿದ್ದೀರಿ? ಅವರನ್ನು ಕೂಡಲೇ ಸಂಪುಟದಿಂದ ಹೊರಗೆ ಹಾಕಿ' ಎಂದು ಒತ್ತಾಯಿಸಿದರು. ದಲಿತ ಹೋರಾಟಗಾರರು ಅಮಿತ್ ಶಾ ಹಾಗೂ ಅನಂತ್ಕುಮಾರ್ ಹೆಗಡೆ ವಿರುದ್ಧ ಘೋಷಣೆಗಳನ್ನು ಸಹ ಕೂಗಿದರು.
ಪರಿಸ್ಥಿತಿ ತಿಳಿಗೊಳಿಸಲು ಬಂದ ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ಅವರೂ ಕೂಡಾ ಪ್ರತಿಭಟನೆ ಬಿಸಿ ಎದುರಿಸಬೇಕಾಯಿತು. ಅವರ ವಿರುದ್ಧವೂ ದಲಿತ ಹೋರಾಟಗಾರರು ತಿರುಗಿ ಬಿದ್ದರು. ಬಿಜೆಪಿ ಕಾರ್ಯಕರ್ತರು ಹಾಗೂ ದಲಿತ ಹೊರಾಟಗಾರರ ನಡುವೆ ಜೋರು ಮಾತಿನ ಚಕಮಕಿಯೂ ನಡೆಯಿತು.
ಪರಿಸ್ಥಿತಿ ವಿಕೋಪಕ್ಕೆ ತೆರಳಿದಾಗ ಪೊಲೀಸರು ಕೆಲವು ದಲಿತ ಮುಖಂಡರನ್ನು ಬಂಧಿಸಿ ಕರೆದೊಯ್ದರು. ಸಂವಾದಕ್ಕೆಂದು ಕರೆದು ದಲಿತರ ಮೇಲೆ ದೌರ್ಜನ್ಯ ಮಾಡಿದ್ದಾರೆ ಎಂದು ಕೆಲವು ಹೊರಾಟಗಾರರು ಬಿಜೆಪಿ ವಿರುದ್ಧ ಸಿಟ್ಟಿಗೆದ್ದರು.











Click it and Unblock the Notifications