ಶ್ರದ್ಧಾ-ಭಕ್ತಿಯಿಂದ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಹರಿದು ಬರುತ್ತಿರುವ ಜನಸಾಗರ
ಮಂಗಳೂರು, ಫೆಬ್ರವರಿ 25: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶಿವರಾತ್ರಿ ಆಚರಣೆಗೆ ಸಂಭ್ರಮದ ಸಿದ್ಧತೆ ನಡೆಯುತ್ತಿದೆ. ವಾರ್ಷಿಕ ಜಾತ್ರೆ ಮತ್ತು ಲಕ್ಷದೀಪೋತ್ಸವದಂತೆ ಶಿವರಾತ್ರಿಯೂ ಕೂಡ ದೇವಸ್ಥಾನದಲ್ಲಿ ನಾಡಿನ ಸಾವಿರಾರು ಭಕ್ತರ ಪಾಲ್ಗೊಳ್ಳುವಿಕೆಯಿಂದ ವಿಜೃಂಭಣೆಯಿಂದ ನಡೆಯುತ್ತದೆ. ಈ ಬಾರಿಯೂ ಕೂಡ ಶ್ರೀ ಕ್ಷೇತ್ರಕ್ಕೆ ನಾಡಿನ ವಿವಿಧ ಭಾಗಗಳಿಂದ ಸಾವಿರಾರು ಭಕ್ತರ ದಂಡು ಪಾದಾಯಾತ್ರೆಯ ಮುಖಾಂತರ ಹರಿದು ಬರುತ್ತಿದೆ.
ಶಿವರಾತ್ರಿಯಲ್ಲಿ ಭಾಗವಹಿಸಲು ಪಾದಯಾತ್ರೆಯ ಮೂಲಕ ಭಕ್ತರು ಶ್ರದ್ಧೆ ಭಾವ ಭಕ್ತಿಯಿಂದ ನೂರಾರು ಕಿ.ಮೀಗಳನ್ನು ಈ ಉರಿಬಿಸಿಲನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಸಾಗಿಬರುತ್ತಿದ್ದಾರೆ. ಅವರ ಮಾತುಗಳಲ್ಲಿ ಮಂಜುನಾಥನನ್ನು ತಲುಪುವ ಸಮರ್ಪಣಾ ಭಾವ ಕಂಡುಬರುತ್ತದೆ. ಹಾಸನದಿಂದ ಬಂದಿರುವ ಸುದೀಪ್ ಅವರು ವರ್ಷಕ್ಕೊಮ್ಮೆ ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ತಮ್ಮ ಕುಟುಂಬ ಮತ್ತು ಊರವರೊಂದಿಗೆ ಆಗಮಿಸಿ ಮಂಜುನಾಥನ ದರ್ಶನ ಪಡೆಯುವುದು ಧನ್ಯತಾ ಭಾವವನ್ನು ನೀಡುತ್ತದೆ ಎಂದಿದ್ದಾರೆ. ಅವರ ಜೊತೆಗೆ ಕುಟುಂಬದವರು ಮತ್ತು ಊರವರು ಸೇರಿ 30ಕ್ಕೂ ಹೆಚ್ಚು ಜನ ಬಂದಿದ್ದಾರೆ.

ರಾಜ್ಯದ ವಿವಿಧ ಕಡೆಗಳಿಂದ ಬರುತ್ತಿರುವ ಭಕ್ತರಿಗಾಗಿ ಉಜಿರೆ ಧರ್ಮಸ್ಥಳ ರಸ್ತೆಯುದ್ಧಕ್ಕೂ ವಿವಿಧ ವ್ಯವಸ್ಥೆಗಳನ್ನು ಮಾಡಲಾಗಿದೆ. ಭಕ್ತರ ಆರೋಗ್ಯ ತಪಾಸಣೆಗೆ ವ್ಯವಸ್ಥೆಯನ್ನು ಉಜಿರೆ ಎಸ್ಡಿಎಂ ಆಸ್ಪತ್ರೆ ವತಿಯಿಂದ ಮಾಡಲಾಗಿದ್ದು, ವಿಶ್ರಾಂತಿಗೆ ವ್ಯವಸ್ಥೆ, ಕುಡಿಯುವ ನೀರು, ಮಜ್ಜಿಗೆಗಳನ್ನು ಒದಗಿಸುವ ಮೂಲಕ ಅವರ ದಣಿವಾರಿಸಲಾಗುತ್ತಿದೆ.
ಹಾಸನದ ಅರಸಿಕೆರೆಯ ಯಡವನಹಳ್ಳಿಯಿಂದ 30ಕ್ಕೂ ಹೆಚ್ಚು ಜನರು ಪಾದಾಯತ್ರೆಯಲ್ಲಿ ಗುರುವಾರ ಹೊರಟವರು ಉಜಿರೆಯ ಇಂದ್ರಪ್ರಸ್ಥ ಕ್ರೀಡಾಂಗಣದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಅಲ್ಲಿರುವ ಮಹಿಳೆಯರನ್ನು ಮಾತನಾಡಿಸಿದಾಗ ಅವರಿಗೆ ಪಾದಾಯಾತ್ರೆಯಲ್ಲಿರುವ ಶ್ರದ್ಧೆ ಅಪಾರವಾದದ್ದು ಎಂದು ಕಂಡುಬಂತು. ಅವರ ತಂಡದಲ್ಲಿ 11 ವರ್ಷಗಳಿಂದ ಸತತವಾಗಿ ಪಾದಾಯಾತ್ರೆ ಬರುತ್ತಿರುವವರೂ ಇದ್ದಾರೆ. ಹೀಗೆ ಪಾದಯಾತ್ರೆ ಬರುತ್ತಿರುವವರು ದಿನಕ್ಕೆ ಇಂತಿಷ್ಟು ಕಿಲೋಮೀಟರ್ಗಳೆಂದು ನಡೆದು ಬಂದು ಶಿವರಾತ್ರಿಗೆ ಒಂದು ದಿನ ಮೊದಲು ಧರ್ಮಸ್ಥಳಕ್ಕೆ ಬಂದು ಸೇರುತ್ತಾರೆ.

ಶಿವರಾತ್ರಿಯಂದು ಮಂಜುನಾಥನ ರಥೋತ್ಸವವನ್ನು ಕಣ್ತುಂಬಿಕೊಂಡು, ಶಿವನಾಮ ಜಪಿಸುತ್ತ ದೇವಸ್ಥಾನದಲ್ಲಿ ನಡೆಯುವ ವಿಶೇಷ ಉತ್ಸವಗಳಲ್ಲಿ ಭಾಗಿಯಾಗುವ ಭಕ್ತರು ಪಾದಯಾತ್ರೆಯಲ್ಲಿ ಸಾಗಿಬಂದಿರುವ ದಣಿವನ್ನು ಜಾಗರಣೆ ಮಾಡುವ ಮೂಲಕ ಮರೆತು ಭಾವಪರವಶರಾಗುತ್ತಾರೆ. ಈಗಾಗಲೇ ರಾಜ್ಯದ ವಿವಿದೆಡೆಯಿಂದ ಬಂದು ಸೇರಿರುವ ಭಕ್ತರು ನಾಳಿನ ದಿನದ ಶಿವರಾತ್ರಿ ಆಚರಣೆಗೆ ಸಂಭ್ರಮದಿಂದ ಕಾಯುತ್ತಿದ್ದಾರೆ.
ವಿಶೇಷ ಬರಹ- ಶ್ರವಣ್ ನೀರಬಿದಿರೆ, ದ್ವಿತೀಯ ಎಂಸಿಜೆ, ಎಸ್ಡಿಎಂಸಿ ಉಜಿರೆ












Click it and Unblock the Notifications