ನಾಡ ದೋಣಿಗಳಿಗೆ ಸೀಮೆಎಣ್ಣೆ ವಿತರಣೆ: ಸಚಿವ ಯು.ಟಿ.ಖಾದರ್
ಮಂಗಳೂರು, ಅಕ್ಟೋಬರ್, 21: ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ 914 ನೋಂದಾಯಿತ ಮೀನುಗಾರಿಕಾ ನಾಡದೋಣಿಗಳಿಗೆ ತಿಂಗಳಿಗೆ ತಲಾ 300 ಲೀಟರ್ ಸೀಮೆಎಣ್ಣೆ ವಿತರಣೆಗೆ ಆದೇಶ ಹೊರಡಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು. ಟಿ. ಖಾದರ್ ತಿಳಿಸಿದರು.
"ತಾಂತ್ರಿಕ ಸಮಸ್ಯೆಯಿಂದಾಗಿ ಕೆಲವು ತಿಂಗಳುಗಳಿಂದ ನಾಡದೋಣಿಗಳ ಮಾಲೀಕರಿಗೆ ಸೀಮೆಎಣ್ಣೆ ವಿತರಿಸಲಿಲ್ಲ. ಈಗ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಮೀನುಗಾರಿಕಾ ದೋಣಿಗಳ ಬಳಕೆಗಾಗಿ ಸೀಮೆಎಣ್ಣೆ ನೀಡಲಾಗುತ್ತಿದೆ" ಎಂದು ಅವರು ಹೇಳಿದರು.

ಮೂರು ಜಿಲ್ಲೆಗಳಲ್ಲಿ ಒಟ್ಟೂ 1300 ಮೀನುಗಾರಿಕಾ ನಾಡದೋಣಿಗಳಿವೆ. ಅವುಗಳಲ್ಲಿ 914 ಮಾತ್ರ ನೊಂದಣಿ ಆಗಿವೆ. ಈ ದೋಣಿಗಳಿಗೆ ರಾಜ್ಯ ಸರಕಾರ ರಿಯಾಯಿತಿ ದರದಲ್ಲಿ ಸೀಮೆಎಣ್ಣೆ ವಿತರಿಸುತ್ತಿದೆ. ಎಂದು ಅವರು ಹೇಳಿದರು.
ಪಡಿತರ ಪೂರೈಕೆಯಲ್ಲಿ ಸೀಮೆಎಣ್ಣೆ ಕೊರತೆ ಉಂಟಾದರೆ ಆಗ ನಾಡದೋಣಿಗಳಿಗೆ ಸೀಮೆಎಣ್ಣೆಯನ್ನು ನೀಡುವುದಿಲ್ಲ. ಇಂತಹ ಸಮಸ್ಯೆ ಮುಂದುವರೆದರೆ ಕೇಂದ್ರ ಸರ್ಕಾರದಿಂದ ಅಧಿಕೃತವಾಗಿ ಸಬ್ಸಿಡಿ ರೂಪದಲ್ಲಿ ನಾಡದೋಣಿ ಮೀನುಗಾರರಿಗೆ ಸೀಮೆಎಣ್ಣೆ ಒದಗಿಸಿಕೊಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ನಾಡದೋಣಿಗಳಿಗೆ ಕೇಂದ್ರ ಸರ್ಕಾರ ಸೀಮೆಎಣ್ಣೆ ಮಂಜೂರಾತಿ ಮಾಡದೆ ಇರುವುದರಿಂದ ಸಮಸ್ಯೆ ಆಗಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಹಂಚಿಕೆಗೆ ಲಭ್ಯವಾದ ಸೀಮೆಎಣ್ಣೆಯನ್ನು ಬಳಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಖಾದರ್ ತಿಳಿಸಿದರು.












Click it and Unblock the Notifications