ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯರ ನಿತ್ಯ ಜಗಳ:ಸಾಮೂಹಿಕವಾಗಿ ಶಾಲೆ ಬಿಟ್ಟ ಮಕ್ಕಳು
ಮಂಗಳೂರು, ಜುಲೈ 03: ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯರ ಜಗಳದಿಂದ ಶಾಲೆಗೆ ಶಾಲೆಯೇ ಖಾಲಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಸೋಣಂದಣೂರೂ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಶಿಕ್ಷಕಿಯರ ಜಗಳದಿಂದ ಬೇಸತ್ತು ವಿದ್ಯಾರ್ಥಿಗಳು ಬೇರೆ ಶಾಲೆಗಳಿಗೆ ತೆರಳಿದ್ದು, ಈಗ ಇಡೀ ಶಾಲೆಯಲ್ಲಿ ಸ್ಮಶಾನ ಮೌನ ಆವರಿಸಿದೆ.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಸೋಣಂದೂರು ಮಾಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರಲಿದ್ದು, ಶಾಲೆಗೆ ಸುಮಾರು 75 ವರ್ಷಗಳ ಇತಿಹಾಸವಿದೆ. ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ ಶಾಲೆಯಲ್ಲಿ 37 ಮಕ್ಕಳಿದ್ದಾರೆ. ಆದರೆ ಶಾಲೆಯ ಮೂವರು ಶಿಕ್ಷಕಿಯರಾದ ರೀನಾ, ಟೀನಾ, ಜೆಸಿಂತಾ ನಡುವೆ ಆಗಾಗ ಜಗಳ ನಡೆಯುತಿತ್ತು.

ವಿದ್ಯಾರ್ಥಿಗಳ ಎದುರಲ್ಲೇ ಬಹಿರಂಗವಾಗಿ ಶಿಕ್ಷಕಿಯರು ಜಗಳವಾಡುತ್ತಿದ್ದಾರೆ. ಶಿಕ್ಷಕಿಯರ ಜಗಳದಿಂದ ಬೇಸತ್ತು ಇದೀಗ 37 ವಿದ್ಯಾರ್ಥಿಗಳು ಶಾಲೆ ಬಿಟ್ಟಿದ್ದು, ವಿದ್ಯಾರ್ಥಿಗಳನ್ನು ಪೋಷಕರು ಅಕ್ಕಪಕ್ಕದ ಶಾಲೆಗಳಿಗೆ ಸೇರಿಸಿದ್ದಾರೆ.
ಶಾಲೆಯನ್ನು ಕಳೆದ ಒಂದು ವರ್ಷದಿಂದ ಮಂಗಳೂರಿನ ಎವಿ ಫೌಂಡೇಶನ್ ದತ್ತು ಪಡೆದಿದೆ. ಗಾಯಕ ಅರವಿಂದ್ ವಿವೇಕ್ ನೇತೃತ್ವದ ಫೌಂಡೇಶನ್ ಇದಾಗಿದ್ದು, ಶಾಲೆಯ ಅಭಿವೃದ್ಧಿಯನ್ನು ಎವಿ ಫೌಂಡೇಶನ್ ಮಾಡಿದೆ. ಅಲ್ಲದೇ ಎವಿ ಫೌಂಡೇಶನ್ನಿಂದ ಶಾಲೆಗೆ ಇಬ್ಬರು ಶಿಕ್ಷಕಿಯರನ್ನು ನೀಡಲಾಗಿತ್ತು. ಕಾಲ ಕ್ರಮೇಣ ಈ ಶಿಕ್ಷಕಿಯರ ಜೊತೆಗೂ ಮೂವರು ಶಿಕ್ಷಕಿಯರು ಜಗಳ ಕಾದಿದ್ದಾರೆ. ಶಿಕ್ಷಕಿಯರ ಜಗಳಕ್ಕೆ ಮೊದಲು ಇಬ್ಬರು ಶಿಕ್ಷಕರು ಶಾಲೆ ಬಿಟ್ಟಿದ್ದು, ಈಗ ಮಕ್ಕಳೂ ಅಕ್ಕಪಕ್ಕದ ಶಾಲೆಗಳಿಗೆ ಶಿಫ್ಟ್ ಆಗಿದ್ದಾರೆ.

ಮಕ್ಕಳಿಲ್ಲದೇ ಶಾಲಾ ಪರಿಸರ ಭಣಗುಡುತಿದ್ದು, ತರಗತಿಗಳೆಲ್ಲವೂ ಸಂಪೂರ್ಣ ಖಾಲಿ ಖಾಲಿಯಾಗಿದೆ. ಇಂತಹ ಪರಿಸ್ಥಿತಿಗೆ ಕಾರಣರಾದ ಮೂವರು ಶಿಕ್ಷಕಿಯರ ವರ್ಗಾವಣೆ ಮಾಡಿ ಎಂದು ಶಾಲಾ ಹಳೆಯ ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ. ಶಾಲೆಯ ಪರಿಸ್ಥಿತಿಯನ್ನು ನೋಡಲು ಸಾಧ್ಯವಾಗುತ್ತಿಲ್ಲ. ಶಾಲೆಯಲ್ಲಿ ಸಂಭ್ರಮದ ವಾತವರಣ ಇಲ್ಲ. ಶಾಲೆಯಲ್ಲಿ ವಾರ್ಷಿಕೋತ್ಸವ, ಸ್ಪರ್ಧೆಗಳೆಲ್ಲಾ ನಡೆಯದೇ ಹಲವು ವರ್ಷಗಳೇ ಆಗಿದೆ. ಹಲವು ಬಾರಿ ಶಿಕ್ಷಣ ಇಲಾಖೆಯ ಗಮನಕ್ಕೆ ತಂದಿದ್ದೇವೆ. ಈ ಬಾರಿ ದೊಡ್ಡ ಮಟ್ಟದ ಅಸಮಾಧಾನ ಸೃಷ್ಠಿಯಾಗಿದೆ. ಕೂಡಲೇ ಶಿಕ್ಷಣ ಇಲಾಖೆ ಮಧ್ಯ ಪ್ರವೇಶಿಸಬೇಕು. ಈ ಶಿಕ್ಷಕಿಯರನ್ನು ವರ್ಗಾವಣೆ ಮಾಡಿ ಬೇರೆ ಶಿಕ್ಷಕರನ್ನು ನೇಮಿಸಬೇಕು ಎಂದು ಹಳೆ ವಿದ್ಯಾರ್ಥಿಗಳು ಶಿಕ್ಷಣ ಇಲಾಖೆಗೆ ಒತ್ತಾಯ ಮಾಡಿದ್ದಾರೆ.
ಶಾಲೆಯ ಅವ್ಯವಸ್ಥೆ ಯ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಶಾಲೆಯ ಹಳೆ ವಿದ್ಯಾರ್ಥಿನಿ ಸಂಧ್ಯಾ, 'ಈ ಶಾಲೆಗೆ ಎಪ್ಪತ್ತೈದು ವರ್ಷದ ಇತಿಹಾಸವಿದೆ. ಆದರೆ ಇಂತಹ ಪರಿಸ್ಥಿತಿ ಯಾವತ್ತೂ ನಿರ್ಮಾಣ ಆಗಿಲ್ಲ. ಮೂವರು ಶಿಕ್ಷಕಿಯರಿಂದ ಶಾಲೆಯ ಹೆಸರು ಹಾಳಾಗಿದೆ. ಮೂವರು ಶಿಕ್ಷಕಿಯರು ಶಾಲೆಯನ್ನು ಅಭಿವೃದ್ಧಿ ಮಾಡಲು ಬಿಟ್ಟಿಲ್ಲ. ಎವಿ ಫೌಂಡೇಶನ್ ಶಾಲೆಯನ್ನು ದತ್ತು ಪಡೆದ ಬಳಿಕ ಸಾಕಷ್ಟು ಅಭಿವೃದ್ಧಿಯಾಗಿದೆ. ಶಾಲೆಯನ್ನು ಎಲ್ಲರೂ ನೋಡುವಂತೆ ಮಾಡಿದ್ದಾರೆ. ಆದರೆ ಈ ಶಿಕ್ಷಕಿಯರ ಕಿರುಕುಳದಿಂದ ಅವರೂ ಶಾಲೆ ಬಿಟ್ಟು ತೆರಳಿದ್ದಾರೆ. ಮೂವರ ಜಗಳದಿಂದ ಶಾಲೆಯಲ್ಲಿ ಶಿಸ್ತು ಕಾಣೆಯಾಗಿದೆ. ಮಕ್ಕಳಿಗೆ ಪಾಠ,ಆಟ ಯಾವುದೂ ಸರಿಯಾಗಿ ನಡೆಯುತ್ತಿಲ್ಲ. ಹೀಗಾಗಿ ಈ ಶಿಕ್ಷಕಿಯರನ್ನು ವರ್ಗಾವಣೆ ಮಾಡಿ ಬೇರೆ ಶಿಕ್ಷಕಿಯರ ನೇಮಕ ಮಾಡಬೇಕು ಎಂದು ಆಗ್ರಹಿಸಿದ್ದಾರೆ.












Click it and Unblock the Notifications