ಸೂರ್ಯ ಗ್ರಹಣ; ಕುಕ್ಕೆ ಸುಬ್ರಮಣ್ಯ ದೇವಾಲಯದ ಪ್ರಕಟಣೆ
ಮಂಗಳೂರು, ಡಿಸೆಂಬರ್ 18 : ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಮಣ್ಯ ದೇವಾಲಯ ಭಕ್ತರಿಗೆ ಪತ್ರಿಕಾ ಪ್ರಕಟಣೆ ಮೂಲಕ ಸೂಚನೆಯೊಂದನ್ನು ನೀಡಿದೆ. ದೇವಾಲಯಕ್ಕೆ ಭೇಟಿ ನೀಡುವವರು ಇದನ್ನು ಗಮನಿಸುವುದು ಉತ್ತಮ.
ಡಿಸೆಂಬರ್ 26ರಂದು ಸೂರ್ಯ ಗ್ರಹಣ ಇರುವುದರಿಂದ ಕುಕ್ಕೆ ಸುಬ್ರಮಣ್ಯ ದೇವಾಲಯ ಈ ಪ್ರಕಟಣೆ ನೀಡಿದೆ. ಡಿಸೆಂಬರ್ 25 ಮತ್ತು 26ಕ್ಕೆ ಮಾತ್ರ ಈ ಸೂಚನೆ ಅನ್ವಯವಾಗಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ಡಿಸೆಂಬರ್ 25ರ ಬುಧವಾರ ಸಂಜೆ 6.30ಕ್ಕೆ ರಾತ್ರಿ ಮಹಾಪೂಜೆ ನೆರವೇರಲಿದ್ದು, ಅಂದು ರಾತ್ರಿ ಭೋಜನ ವ್ಯವಸ್ಥೆ ಇರುವುದಿಲ್ಲ. ಡಿಸೆಂಬರ್ 26ರಂದು ಸಂಜೆ 5ರ ಬಳಿಕ ದೇವರ ದರ್ಶನಕ್ಕೆ ಅವಕಾಶವಿದೆ ಎಂದು ಪ್ರಕಟಣೆ ಹೇಳಿದೆ.

ಗ್ರಹಣದ ಕಾರಣ ದೇವಾಲಯವನ್ನು ಮುಚ್ಚಲಾಗುತ್ತದೆ. ಆದ್ದರಿಂದ, ಯಾವುದೇ ಸೇವೆಗಳು ನಡೆಯುವುದಿಲ್ಲ. ಮಧ್ಯಾಹ್ನದ ಭೋಜನ ವ್ಯವಸ್ಥೆ ಕೂಡಾ ಇರುವುದಿಲ್ಲ ಎಂದು ಭಕ್ತರಿಗೆ ಸೂಚನೆ ನೀಡಲಾಗಿದೆ.
2019ರ ವರ್ಷಾಂತ್ಯ ಜನರು ಸೂರ್ಯ ಗ್ರಹಣವನ್ನು ಕಣ್ತುಂಬಿಕೊಳ್ಳಬಹುದು. ಕ್ರಿಸ್ ಮಸ್ ಹಬ್ಬದ ಮರುದಿನ ಅಂದರೆ ಡಿಸೆಂಬರ್ 25 ಸೂರ್ಯ ಗ್ರಹಣ ಸಂಭವಿಸಲಿದೆ. ಗ್ರಹಣವನ್ನು ವೀಕ್ಷಿಸಲು ಜನರು ಕಾತರರಾಗಿದ್ದಾರೆ.
ಭೂಮಿ ಮತ್ತು ಸೂರ್ಯನ ನಡುವೆ ಚಂದ್ರ ಅಡ್ಡ ಬಂದು ಕಂಕಣ ಸೂರ್ಯ ಗ್ರಹಣ ಸಂಭವಿಸುತ್ತದೆ. ಚಂದ್ರ ಸಂಪೂರ್ಣವಾಗಿ ಸೂರ್ಯನನ್ನು ಮರೆಮಾಚುವುದಿಲ್ಲ. ಗ್ರಹಣ ಕಾಲದಲ್ಲಿ ಸೂರ್ಯನ ಸುತ್ತ ಅಂಚುಗಳು ಸುತ್ತಲೂ ಕಾಣಲಿದೆ. ಆದ್ದರಿಂದ, ಕಂಕಣ ಸೂರ್ಯಗ್ರಹಣ ಎಂದು ಕರೆಯಲಾಗುತ್ತದೆ.
ಕರ್ನಾಟಕದಲ್ಲಿ ಶೇ 85ರಷ್ಟು ಭಾಗ ಗ್ರಹಣವನ್ನು ನೋಡಬಹುದಾಗಿದೆ. ಬೆಳಗ್ಗೆ 8 ಗಂಟೆ 5 ನಿಮಿಷಕ್ಕೆ ಗ್ರಹಣ ಆರಂಭವಾಗಲಿದೆ. ಯಾವುದೇ ಕಾರಣಕ್ಕೂ ಬರಿಗಣ್ಣಿನಿಂದ ಅಂದು ಸೂರ್ಯನನ್ನು ನೋಡಬೇಡಿ ಎಂದು ಜನರಿಗೆ ಮನವಿ ಮಾಡಲಾಗಿದೆ.












Click it and Unblock the Notifications