ಶರತ್ ಮಡಿವಾಳ ಹತ್ಯೆಯಾಗಿ ತಿಂಗಳು ಕಳೆಯಿತು, ಆರೋಪಿ ಎಲ್ಲಿ?
ಮಂಗಳೂರು : ದಕ್ಷಿಣ ಕನ್ನಡದಲ್ಲಿ ಆರ್ಎಸ್ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆಯಾಗಿ ಒಂದು ತಿಂಗಳು ಕಳೆದಿದೆ. ಇದುವರೆಗೆ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗಿಲ್ಲ. 'ಆರೋಪಿಗಳನ್ನು ಬಂಧಿಸದಂತೆ ಪ್ರಭಾವಿಗಳು ಪೊಲೀಸರ ಕೈ ಕಟ್ಟಿಹಾಕಿದ್ದಾರೆ ಎಂಬ ಅನುಮಾನ ಮೂಡುತ್ತಿದೆ' ಎಂದು ಶರತ್ ತಂದೆ ತನಿಯಪ್ಪ ಹೇಳಿದ್ದಾರೆ.
ಬಂಟ್ವಾಳದ ಆರ್ಎಸ್ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆಯಾಗಿ ಒಂದು ತಿಂಗಳು ಕಳೆದು ಹೋಗಿದೆ. ಕರಾವಳಿ ಸೇರಿದಂತೆ ಇಡೀ ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಈ ಹತ್ಯೆ ಪ್ರಕರಣದ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ.

ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತಂಡ ಇದುವರೆಗೂ ಶರತ್ ಕುಟುಂಬದವರನ್ನು ಭೇಟಿ ಮಾಡಿಲ್ಲ. ತನಿಖೆಗೆಗಾಗಿ ಸ್ಥಳೀಯರ ವಿಚಾರಣೆಯನ್ನೂ ಮಾಡಿಲ್ಲ. ಆದ್ದರಿಂದ, ಪೊಲೀಸರೇ ಈ ಪ್ರಕರಣ ಮುಚ್ಚಿ ಹಾಕುತ್ತಿದ್ದಾರೆಯೇ? ಎಂಬ ಅನುಮಾನ ಮೂಡಿದೆ.
ಇದುವರೆಗೂ ಪೊಲೀಸರು ದೂರವಾಣಿ ಕರೆ ಮಾಹಿತಿ, ಸಿಸಿಟಿವಿ ದೃಶ್ಯಾವಳಿ ಅನುಸರಿಸಿ ತನಿಖೆ ನಡೆಸಿದ್ದಾರೆ. ಯಾವುದೇ ಸಂಶಯ ಬಂದ ವ್ಯಕ್ತಿಗಳ ವಿಚಾರಣೆ ನಡೆಸಿಲ್ಲ.

ಆರೋಪಿಗಳನ್ನು ಬಂಧಿಸುವ ವಿಚಾರದಲ್ಲಿ ಪ್ರಭಾವಿ ರಾಜಕೀಯ ಶಕ್ತಿಗಳಿಂದ ಒತ್ತಡ ಹೇರಲಾಗಿದೆ ಎನ್ನುವ ಗುಸು ಗುಸು ಕೇಳಿಬರುತ್ತಿದೆ. ಇದೇ ಕಾರಣದಿಂದ ಪ್ರಕರಣವನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕುವ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಲಾಗುತ್ತಿದೆ.
ಶರತ್ ತನ್ನ ಊರು ಸಜಿಪ ಮುನ್ನೂರಿನಲ್ಲಿ ಮರಳು ಮಾಫಿಯಾ ವಿರುದ್ಧ ಹೋರಾಟದಲ್ಲಿ ಸಕ್ರಿಯವಾಗಿದ್ದ. ಈ ಹಿನ್ನೆಲೆಯಲ್ಲಿ ಮರಳು ಮಾಫಿಯಾ ಕೊಲೆಗೆ ಸಂಚು ನಡೆಸಿತ್ತಾ? ಅನ್ನೋ ಸಂಶಯವೂ ಮೂಡಲಾರಂಭಿಸಿದೆ.

ಮತ್ತೊಂದುಕಡೆ ಶರತ್ ಕೊಲೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸಬೇಕೆಂಬ ಕೂಗು ಬಲವಾಗಿದ್ದರೂ, ಪೊಲೀಸರು ಸುಮ್ಮನಿರುವುದು ಪ್ರಕರಣದಲ್ಲಿ ನಿಗೂಢ ಕೈಗಳು ಕೈಯಾಡಿಸಿರುವುದಕ್ಕೆ ಸಾಕ್ಷಿ ಹೇಳುವಂತಿವೆ.












Click it and Unblock the Notifications