ನಳಿನ್ ಕುಮಾರ್ ಕಟೀಲ್ ಮೊಯ್ಲಿಯವರ ಬಳಿ ಕ್ಷಮೆ ಕೇಳಲಿ: ರಮಾನಾಥ್ ರೈ
ಮಂಗಳೂರು, ಜನವರಿ 18: ವಿಜಯಾ ಬ್ಯಾಂಕ್ ವಿಲೀನ ವಿಚಾರದಲ್ಲಿ ವೀರಪ್ಪ ಮೊಯ್ಲಿ ಕುರಿತು ಸುಳ್ಳು ಮಾಹಿತಿ ನೀಡಿದ ಸಂಸದ ನಳಿನ್ ಕುಮಾರ್, ಮೊಯ್ಲಿ ಅವರ ಬಳಿ ಕ್ಷಮೆಯಾಚಿಸ ಬೇಕೆಂದು ಮಾಜಿ ಸಚಿವ ರಮಾನಾಥ್ ರೈ ಒತ್ತಾಯಿಸಿದ್ದಾರೆ .
ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಮಾಜಿ ಕೇಂದ್ರ ಸಚಿವ ಮೊಯ್ಲಿಯವರು ದಕ್ಷಿಣ ಕನ್ನಡ ಜಿಲ್ಲೆ ಅಭಿವೃದ್ಧಿಗೆ ಸತತವಾಗಿ ಶ್ರಮಿಸಿದವರು. ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲೆಯನ್ನು ಸಾಕಷ್ಟು ಅಭಿವೃದ್ಧಿಪಡಿಸಿದ್ದಾರೆ. ಆದರೆ ಸಂಸದ ನಳಿನ್ ಕುಮಾರ್ ಕಟೀಲ್, ಮೊಯ್ಲಿ ಅವರ ಹೆಸರನ್ನು ಕೆಡಿಸುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿದರು.
ಒಂದು ಸುಳ್ಳಿನಿಂದ ತಪ್ಪಿಸಿಕೊಳ್ಳಲು ನಳಿನ್ ಕುಮಾರ್ ಕಟೀಲ್ ನೂರು ಸುಳ್ಳು ಹೇಳುತ್ತಿದ್ದಾರೆ ಎಂದು ಕಿಡಿಕಾರಿದ ರೈ, ಈ ಕೂಡಲೇ ಸಂಸದರು ಮೊಯ್ಲಿಯವರಲ್ಲಿ ಬಹಿರಂಗವಾಗಿ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು.

ಅಷ್ಟೇ ಅಲ್ಲ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸುವಂತೆ ಒತ್ತಾಯಿಸಿ ರಮಾನಾಥ್ ರೈ ನಡೆಸಿದ ಪ್ರತಿಭಟನಾ ಪಾದಯಾತ್ರೆಯ ಬಗ್ಗೆ ವ್ಯಂಗ್ಯವಾಡಿದ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ರಮಾನಾಥ್ ರೈ ತಿರುಗೇಟು ನೀಡಿದ್ದಾರೆ.
ಕೊಬ್ಬು, ಮದ ಯಾರಿಗೆ ಬಂದಿರೋದು ಜನರಿಗೆ ಗೊತ್ತಿದೆ. ಸಂಸದರಿಗೆ ಓಡಾಡಲು ವಾಹನ, ವಿಮಾನ, ಉಳಿದುಕೊಳ್ಳಲು ಮನೆ ಇದೆ. ಹೀಗಾಗಿ ಕೊಬ್ಬು ಬಂದಿರುವುದು ಅವರಿಗೆ, ನಮಗಲ್ಲ ಎಂದು ಹೇಳಿದ ರಮಾನಾಥ್ ರೈ, ಸಾರ್ವಜನಿಕ ಬದುಕಲ್ಲಿ ನಾವು ಸತ್ಯವನ್ನು ಹೇಳಬೇಕು. ರಸ್ತೆ ಕಾಮಗಾರಿ ಮಾಡಲು ಯಾವುದೇ ಸಮಸ್ಯೆಯಿಲ್ಲ. 30 ಹೆಕ್ಟೇರ್ ಭೂಸ್ವಾಧೀನಕ್ಕೆ ನಾನು ಮಂತ್ರಿಯಿದ್ದಾಗಲೇ ಅನುಮತಿ ಕೊಟ್ಟಿದ್ದೆ. ಈಗ ರಸ್ತೆ ಕಾಮಗಾರಿ ಸ್ಥಗಿತಕ್ಕೆ ಸಂಸದರೇ ಕಾರಣ ಎಂದು ಆರೋಪಿಸಿದರು.












Click it and Unblock the Notifications