ಕೆಫೆ ಕಾಫಿ ಡೇ ಮಾಲೀಕ ಸಿದ್ದಾರ್ಥ ಆತ್ಮಹತ್ಯೆಗೆ ವರ್ಷ; ಕಾರಣ ಇನ್ನೂ ನಿಗೂಢ...
ಮಂಗಳೂರು, ಜುಲೈ 29: ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಅಳಿಯ, ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ. ಸಿದ್ದಾರ್ಥ ಅವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಇಂದಿಗೆ ಒಂದು ವರ್ಷ. ಆದರೆ ವರ್ಷ ಉರುಳಿದರೂ ಅವರ ಆತ್ಮಹತ್ಯೆಯ ಕಾರಣ ಮಾತ್ರ ಇನ್ನೂ ಅಸ್ಪಷ್ಟವಾಗಿಯೇ ಉಳಿದಿದೆ.
ಕಳೆದ ವರ್ಷ ಜುಲೈ 29ರಂದು ಸಂಜೆ ಕಾರಿನಲ್ಲಿ ಹೊರಟಿದ್ದ ಸಿದ್ದಾರ್ಥ ಅವರು ಮಂಗಳೂರಿನ ಉಳ್ಳಾಲ ರಸ್ತೆಯ ನೇತ್ರಾವತಿ ಸೇತುವೆ ಬಳಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಸುದ್ದಿ ತಿಳಿಯುತ್ತಿದ್ದಂತೆ ನಿರಂತರ ಎರಡು ದಿನಗಳ ಕಾಲ ಅವರಿಗಾಗಿ ಸೇತುವೆ ಬಳಿ ತೀವ್ರ ಶೋಧ ಕಾರ್ಯ ಮುಂದುವರೆದಿತ್ತು. ಜುಲೈ 31ರಂದು ಹೊಯ್ಗೆ ಬಜಾರ್ ಸಮೀಪ ಅವರ ಮೃತದೇಹ ಪತ್ತೆಯಾಗಿತ್ತು. ಅವರ ಸಾವು, ಸಾವಿನ ಕಾರಣಗಳ ಕುರಿತು ಹಲವು ಅನುಮಾನಗಳು ವ್ಯಕ್ತವಾದವು...
ನೇತ್ರಾವತಿ ಸೇತುವೆ ಬಳಿ ಆತ್ಮಹತ್ಯೆ ಮಾಡಿಕೊಂಡಿದ್ದ ಸಿದ್ಧಾರ್ಥ್
ಸಿದ್ಧಾರ್ಥ್ ಅವರ ಮೃತದೇಹ ಪತ್ತೆಯಾಗುತ್ತಿದ್ದಂತೆ, ನಗರ ಸಹಾಯಕ ಪೊಲೀಸ್ ಆಯುಕ್ತರ ನೇತೃತ್ವದ ತನಿಖಾ ತಂಡವು ಈ ಪ್ರಕರಣವನ್ನು ವಿವಿಧ ಆಯಾಮಗಳಿಂದ ತನಿಖೆ ನಡೆಸಿ ಆಗಸ್ಟ್ 26, 2019ರಂದು ಅಂತಿಮ ವರದಿ ಸಲ್ಲಿಸಿತ್ತು. ಸಿದ್ದಾರ್ಥ ಅವರು ಉಸಿರುಗಟ್ಟಿ ಸಾವನ್ನಪ್ಪಿದ್ದು, ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿ ತಿಳಿಸಿತ್ತು. ಅದಾದ ನಂತರ ಅವರ ಆತ್ಮಹತ್ಯೆ ಹಿಂದಿನ ಕಾರಣಗಳ ಬಗ್ಗೆ ತನಿಖೆ ಶುರುವಾಗಿತ್ತು. ಆದರೆ ಇಂದಿಗೂ ಅವರ ಆತ್ಮಹತ್ಯೆ ಹಿಂದಿದ್ದ ಬಲವಾದ ಕಾರಣ ಪತ್ತೆಯಾಗಿಲ್ಲ.
ಸಿದ್ದಾರ್ಥ್ ಸಾವಿನ ಪ್ರಕರಣದಲ್ಲಿ ನಿಗೂಢ ಪ್ರಶ್ನೆಗಳು; ಉತ್ತರದ ಹುಡುಕಾಟದಲ್ಲಿ ಪೊಲೀಸ್ ತಂಡ
ಐಟಿ ಇಲಾಖೆ ಕಿರುಕುಳದ ಆರೋಪ
ಕಾರಣಗಳನ್ನು ಕೆದಕುತ್ತಾ ಹೋದಂತೆ, ಕಾಫಿ ಡೇ ಸೇರಿದಂತೆ ಹಲವು ಉದ್ಯಮಗಳ ಒಡೆಯರಾಗಿದ್ದ ಸಿದ್ಧಾರ್ಥ ಅವರು ಇತ್ತೀಚೆಗೆ ಹಣಕಾಸಿನ ಮುಕ್ಕಟ್ಟಿಗೆ ಸಿಲುಕಿದ್ದರು. ಹಾಗಾಗಿ ಸಿದ್ಧಾರ್ಥ ಅವರು ಆತ್ಮಹತ್ಯೆಗೆ ಶರಣಾಗಿರಬಹುದು ಎಂಬ ಶಂಕೆಯನ್ನು ವ್ಯಕ್ತಪಡಿಸಲಾಗಿತ್ತು.
ನಂತರ ಐಟಿ ಇಲಾಖೆಯ ಕಿರುಕುಳವೇ ಸಿದ್ಧಾರ್ಥ ಅವರ ಆತ್ಮಹತ್ಯೆಗೆ ಕಾರಣ ಎನ್ನುವ ಮಾತುಗಳು, ಆರೋಪಗಳು ಕೇಳಿಬಂದವು. ಆದರೆ ಆದಾಯ ತೆರಿಗೆ ಇಲಾಖೆ ಅವರಿಗೆ ಕಿರುಕುಳ ನೀಡಲಾಗಿತ್ತು ಎಂಬ ಆರೋಪದ ವಿಚಾರವಾಗಿ ಐಟಿ ಇಲಾಖೆ ಕ್ಲೀನ್ ಚಿಟ್ ನೀಡಲಾಗಿದೆ ಎಂದು ಇತ್ತೀಚೆಗೆ ವರದಿಯಾಗಿದೆ.
ಆತ್ಮಹತ್ಯೆಗೆ ಮುನ್ನ ಪತ್ರ ಬರೆದಿದ್ದ ಸಿದ್ಧಾರ್ಥ್
ಆತ್ಮಹತ್ಯೆ ಮಾಡಿಕೊಳ್ಳುವ ನಾಲ್ಕು ದಿನಗಳ ಮುಂಚೆ ಸಿದ್ಧಾರ್ಥ್ ಅವರು ಇ ಮೇಲ್ ಮೂಲಕ ಪತ್ರ ಬರೆದಿದ್ದರು. ಅದರಲ್ಲಿ, "ಎಲ್ಲಾ ತಪ್ಪುಗಳಿಗೆ ನಾನೊಬ್ಬನೇ ಹೊಣೆಗಾರ. ನನ್ನ ತಂಡವಾಗಲೀ, ನನ್ನ ಆಡಿಟರ್ಗಳಾಗಲೀ, ಹಿರಿಯ ವ್ಯವಸ್ಥಾಪಕರುಗಳಿಗಾಲೀ ಕೆಲವೊಂದು ಕೊಡು ಕೊಳ್ಳುವಿಕೆ ಬಗ್ಗೆ ಮಾಹಿತಿ ಇಲ್ಲ. ಕಾನೂನು ನನ್ನನ್ನು ಮಾತ್ರವೇ ಪ್ರಶ್ನಿಸಬೇಕು. ನನ್ನ ಕುಟುಂಬವನ್ನೂ ಈ ವ್ಯವಹಾರದಿಂದ ದೂರ ಇಟ್ಟಿದ್ದೆ' ಎಂದು ವಿವರಿಸಿದ್ದರು.
ಆನಂತರ ಅವರ ಹಣಕಾಸಿನ ವ್ಯವಹಾರದ ಬಗ್ಗೆಯೂ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಲಾಗಿತ್ತು. ವ್ಯವಹಾರದಲ್ಲಿ ಸೋಲು ಕಂಡು ಸಿದ್ಧಾರ್ಥ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಮಾತುಗಳು ಕೇಳಿಬಂದವು.ವಿ.ಜಿ ಸಿದ್ದಾರ್ಥ ಮೃತದೇಹ ಪತ್ತೆ, ನೇತ್ರಾವತಿ ಪಾಲಾದ ಕಾಫಿ ಕಿಂಗ್
ಉದ್ಯಮಿಯಾಗಿ ವಿಫಲನಾಗಿದ್ದೆ ಎಂದಿದ್ದ ಸಿದ್ಧಾರ್ಥ್
ಅದೆ ಪತ್ರದಲ್ಲಿ ತಮ್ಮ ಭಾವನೆಗಳನ್ನೂ ವ್ಯಕ್ತಪಡಿಸಿದ್ದರು ಸಿದ್ಧಾರ್ಥ್. "ನನ್ನ ಉದ್ದೇಶ ತಪ್ಪು ದಾರಿಗೆ ಎಳೆಯುವುದಾಗಲೀ ಅಥವಾ ವಂಚಿಸುವುದಾಗಲೀ ಆಗಿರಲಿಲ್ಲ. ಒಬ್ಬ ಉದ್ಯಮಿಯಾಗಿ ನಾನು ವಿಫಲನಾಗಿದ್ದೆ. ಇದು ನನ್ನ ಪ್ರಾಮಾಣಿಕ ತಪ್ಪೊಪ್ಪುವಿಕೆಯಾಗಿದ್ದು ನೀವೆಲ್ಲ ನನ್ನ ಕ್ಷಮಿಸುತ್ತೀರಿ ಎಂದು ಭಾವಿಸಿದ್ದೇನೆ,'' ಎಂದು ಹೇಳಿದ್ದರು.
ಸಿದ್ಧಾರ್ಥ ನಂತರ ವರ್ಷದಲ್ಲಿ ಎಂಟು ಮಂದಿ ಸಾವು
ಸಿದ್ಧಾರ್ಥ ಅವರು ಉಳ್ಳಾಲ ಸೇತುವೆ ಬಳಿ ಆತ್ಮಹತ್ಯೆ ಮಾಡಿಕೊಂಡ ನಂತರ ಒಟ್ಟು ಈ ವರ್ಷದಲ್ಲಿ ಎಂಟು ಮಂದಿ ಅದೇ ಜಾಗದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸೇತುವೆ ಸೂಸೈಟ್ ಸ್ಪಾಟ್ ಎನ್ನುವ ಕುಖ್ಯಾತಿಯನ್ನೂ ಗಳಿಸಿದೆ. ಇದೀಗ ಈ ಸೇತುವೆಗೆ ರಕ್ಷಣಾತ್ಮಕ ಬೇಲಿ ನಿರ್ಮಿಸಿ ಸಿಸಿ ಟಿವಿ ಅಳವಡಿಸಲಾಗಿದೆ.