ನಾಗರ ಪಂಚಮಿ, ಮಾರುಕಟ್ಟೆಯಲ್ಲಿ ಕೇದಗೆ ಘಮ
ಮಂಗಳೂರು, ಆಗಸ್ಟ್ 06 : ಆಷಾಢ ಮಾಸ ಮುಗಿದ ನಂತರ ಶ್ರಾವಣ ಮಾಸದಲ್ಲಿ ಪ್ರಥಮವಾಗಿ ಆರಂಭಗೊಳ್ಳುವ ಹಬ್ಬ ನಾಗರ ಪಂಚಮಿ. ಈ ದಿನ ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ನಾಗದೇವರಿಗೆ ಹೆಚ್ಚು ಪ್ರಿಯವಾದ ಹೂ ಅಂದರೆ ಅದು ಕೇದಗೆ ಹೂ. ನಾಗರಪಂಚಮಿಯ ಮೊದಲ ದಿನದಿಂದ ಹೂವಿನ ಮಾರುಕಟ್ಟೆ ಕೇದಗೆ ಘಮದಿಂದಲೇ ಕೂಡಿರುತ್ತದೆ.
ನಾಗರಪಂಚಮಿಯಂದು ಕೇದಗೆ ಬಳಕೆ ಬಗ್ಗೆ ಪುರಾಣದಲ್ಲಿ ಅನೇಕ ಮಾಹಿತಿಗಳಿವೆ. 6 ಜನ ಅಣ್ಣಂದಿರಿಗೆ ಒಬ್ಬ ತಂಗಿ ಇರುವಂತಹ ಕುಟುಂಬ. ಅಣ್ಣಂದಿರು ನಾಗಗಳಿಗೆ ತೊಂದರೆ ಕೊಟ್ಟ ಕಾರಣ ಎಲ್ಲರೂ ನಾಗಕೋಪಕ್ಕೆ ಗುರಿಯಾಗಿ ತೊಂದರೆ ಅನುಭವಿಸುವಂತಾಗುತ್ತದೆ.[ಆದಿಶೇಷನ ಕೃಪೆಗೆ ಪಾತ್ರರಾಗಲು ನಿಮಗೊಂದು ಅವಕಾಶ]

ಆಗ ತಂಗಿಯು ಪಂಚಮಿಯ ದಿನ ಕೇದಗೆ ಹೂವುಗಳನ್ನು ಬಳಸಿ ಪೂಜೆ ಮಾಡಿ ದೇವರನ್ನು ತೃಪ್ತಿಪಡಿಸಿ ಶಾಪ ವಿಮೋಚನೆಗೆ ಕಾರಣಳಾಗುತ್ತಾಳೆ. ಈ ಕಾರಣದಿಂದ ಪಂಚಮಿಯನ್ನು ಅಣ್ಣ-ತಂಗಿಯರ ಹಬ್ಬ ಎಂದೂ ಕರೆಯಲಾಗುತ್ತದೆ. ಕೇದಗೆಯನ್ನು ಪೂಜೆಗೆ ಬಳಸಲಾಗುತ್ತದೆ.[ನಾಗನನ್ನು ಪೂಜಿಸುವುದು ಮೂಢನಂಬಿಕೆಯಾಗಲು ಸಾಧ್ಯವೇ?]
ಕೇದಗೆ ಹೇಗೆ ಪೂಜ್ಯನೀಯ ಸ್ಥಾನ ಪಡೆದುಕೊಂಡಿದೆ ಅದೇ ರೀತಿ ಅದರ ಸುಗಂಧ ಭರಿತವಾದ ಪರಿಮಳ ಹಲವಾರು ಉದ್ಯಮಿಗಳಿಗೆ ಆರ್ಥಿಕತೆಯ ಮೂಲವಾಗಿ ಪರಿಣಮಿಸಿದೆ. ನಾಗ ಪಂಚಮಿ ಸಮೀಪಿಸುತ್ತಿದ್ದಂತೆಯೇ ಹಲವು ಭಾಗಗಳಲ್ಲಿ ಕೇದಗೆಯ ಸಂಗ್ರಹಣೆಯಲ್ಲಿ ತೊಡಗಿರುತ್ತಾರೆ ವ್ಯಾಪಾರಿಗಳು.
ವ್ಯಾಪಾರಿಗಳು ಕೇದಗೆ ಹೂವಿನ ಸುತ್ತ ಮುತ್ತ ಇರುವಂತಹ ಎಲೆಗಳ ಮಾರಾಟ ಮಾಡುತ್ತಿದ್ದು ಇದು 50 ರಿಂದ 60ರೂ. ಗೆ ದೊರೆಯುತ್ತದೆ. ಆದರೆ, ಹಳದಿ, ಕೇಸರಿ ಮಿಶ್ರಿತ ಕೇದಗೆಗಳು ನೈಜ ಹೂವುಗಳಾಗಿದ್ದು ಒಂದು ಹೂವಿಗೆ 100 ರಿಂದ 120ರೂ. ತನಕ ಮಾರಾಟ ಮಾಡಲಾಗುತ್ತಿದೆ.
ಕರಾವಳಿ ಭಾಗದಲ್ಲಿ ನಾಗದೇವರಿಗೆ ವಿಶೇಷ ಪ್ರಾಧಾನ್ಯತೆ ಇರುವ ಕಾರಣ ಇದರ ಖರೀದಿಯಲ್ಲಿ ಸಾಮಾನ್ಯವಾಗಿ ಜನರು ಹಿಂದೇಟು ಹಾಕುವುದಿಲ್ಲ ಎನ್ನುತ್ತಾರೆ ವ್ಯಾಪಾರಿಗಳು.












Click it and Unblock the Notifications