ಮೋದಿ ಸರ್ಕಾರದಿಂದ ಆಮೂಲಾಗ್ರ ಬದಲಾವಣೆ- ಕರಂದ್ಲಾಜೆ
ಮಂಗಳೂರು.ಮೇ.26: ಮೋದಿ ನೇತೃತ್ವದ ಸರಕಾರ ದೇಶದಲ್ಲಿ ಆಮೂಲಾಗ್ರ ಬದಲಾವಣೆ ತರಲಿದೆ. ದೇಶದ ರಕ್ಷಣೆಗಾಗಿ ಮೋದಿ ಕೈಗೊಳ್ಳುವ ಜನಪರ ಕಾರ್ಯಕ್ರಮಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ತಾನು ಹೆಜ್ಜೆ ಹಾಕಿ ಮುಂದಿನ ಐದು ವರ್ಷಗಳಲ್ಲಿ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಸಾಧಿಸಲು ಶ್ರಮಿಸುವುದಾಗಿ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಶುಕ್ರವಾರ ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಮತ್ತು ಅಕ್ಕಿ, ಬೆಲ್ಲ, ತೆಂಗಿನಕಾಯಿಯಲ್ಲಿ ತುಲಾಭಾರ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಜನತೆ ಮೋದಿ ಅವರ ಮೇಲೆ ಭಾರಿ ನಿರೀಕ್ಷೆ ಇಟ್ಟಿದ್ದಾರೆ. ಮೋದಿ ಪ್ರಧಾನಮಂತ್ರಿಯಾದರೆ ದೇಶದಲ್ಲಿ ಭಾರಿ ಬದಲಾವಣೆಯಾಗುತ್ತದೆ ಎಂಬ ನಿರೀಕ್ಷೆ ಹೊಂದಿದ್ದಾರೆ. ಜನರ ನಿರೀಕ್ಷೆ ಹುಸಿಯಾಗದಂತೆ ಬಡವರ, ಯುವಕರ, ಹಿಂದುಳಿದವರ ಅಭಿವೃದ್ಧಿಗೆ ಆದ್ಯತೆ ನೀಡಿ ಕೆಲಸ ಮಾಡುತ್ತೇನೆ ಎಂದರು.
ದೇಶದ ಜನತೆ ಸ್ವಂತ ಬಲದ ಸರ್ಕಾರ ನಡೆಸಲು ಸದವಕಾಶ ನೀಡಿದ್ದಾರೆ. ಈ ಹಿಂದೆ 1984ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಹಿರಿತನದಲ್ಲಿ ಕೇವಲ ಎರಡು ಸಂಸದರನ್ನು ಹೊಂದಿತ್ತು. ಆಗ ಕಾಂಗ್ರೆಸ್ನವರು ಛೇಡಿಸುತ್ತಿದ್ದರು. ಅಂದು ವಾಜಪೇಯಿ ಸೋಲಿಗೆ ಬೆದರದೆ ಪಕ್ಷವನ್ನು ಕಟ್ಟಿ ಬೆಳೆಸುತ್ತೇನೆ ಎಂದು ದೃಢ ಸಂಕಲ್ಪ ಮಾಡಿ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ ಎಂದರು.

ಅಭಿವೃದ್ದಿಗೆ ಆದ್ಯತೆ: ಅಡಿಕೆ, ಕಾಫಿ ಬೆಳೆಗಾರರ ಹಿತ ಕಾಪಾಡುವುದರ ಜತೆಗೆ ಜಿಲ್ಲೆಯ ಜನತೆಯ ಮೂಲಸೌಕರ್ಯಗಳ ಈಡೇರಿಕೆ ಸೇರಿದಂತೆ ಸರ್ವಾಂಗೀಣ ಅಭಿವೃದ್ಧಿಯತ್ತ ಗಮನ ಹರಿಸುತ್ತೇನೆ. ರಾಜ್ಯದಲ್ಲಿ ಏಕೈಕ ಮಹಿಳಾ ಸಂಸದೆಯಾಗಿ ಆಯ್ಕೆ ಆಗಿದ್ದರೂ ನಾನು ಮಂತ್ರಿ ಪದವಿ ಆಕಾಂಕ್ಷಿಯಲ್ಲ. ರಾಜ್ಯದಲ್ಲಿ ಸಾಕಷ್ಟು ಹಿರಿಯ ಮಂದಿ ಸಂಸದರಿದ್ದಾರೆ. ಅವರಿಗೆ ಮೊದಲ ಆದ್ಯತೆಯನ್ನು ಮೋದಿ ನೀಡಲಿದ್ದಾರೆ ಎಂದರು.
ಆಶೀರ್ವಾದ ಪಡೆದ ಸಂಸದೆ: ಸುಬ್ರಹ್ಮಣ್ಯ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಭೇಟಿ ಮಾಡಿ ಶೋಭಾ ಕರಂದ್ಲಾಜೆ ಆಶೀರ್ವಾದ ಪಡೆದುಕೊಂಡರು. ಇದೇ ಸಂದರ್ಭದಲ್ಲಿ ಮಠದಲ್ಲಿದ್ದ ಪೇಜಾವರದ ವಿಶ್ವೇಶ್ವರ ತೀರ್ಥ ಶ್ರೀಪಾದರೂ ಸಂಸದೆಗೆ ಫಲಪುಷ್ಪ, ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
ಆದಿ ಸುಬ್ರಹ್ಮಣ್ಯಕ್ಕೆ ತೆರಳಿದ ಸಂಸದೆ ದೇವರ ದರ್ಶನ ಪಡೆದರು. ಸುಬ್ರಹ್ಮಣ್ಯ ಭೇಟಿಗೆ ಮೊದಲು ನಡುಗಲ್ಲಿನ ಮರಕತ ದುರ್ಗಾಪರಮೇಶ್ವರಿ ದೇವಳಕ್ಕೆ ಭೇಟಿ ನೀಡಿ ವಿಶೇಷ ಪೂಜೆ ನೆರವೇರಿಸಿದರು. ಅವರ ತಾಯಿ, ಸಹೋದರ, ಸಹೋದರಿ ಹಾಗೂ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ ಮಡ್ತಿಲ, ಸದಸ್ಯರಾದ ಮೋನಪ್ಪ ಮಾನಾಡು, ಸುಬ್ರಹ್ಮಣ್ಯ ಭಟ್, ವನಜಾ ವಿ ಭಟ್, ಬಿಜೆಪಿ ಮುಖಂಡರು, ಮಹಿಳಾ ಮೋರ್ಚಾದ ಸದಸ್ಯರು ಉಪಸ್ಥಿತರಿದ್ದರು.












Click it and Unblock the Notifications