ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಡರಾತ್ರಿ ಗುಡುಗು ಮಿಂಚು ಸಹಿತ ಮಳೆ
ಮಂಗಳೂರು, ಮೇ 20: ಮಂಗಳೂರು ನಗರ ಸೇರಿದಂತೆ ಜಿಲ್ಲೆಯ ಎಲ್ಲೆಡೆ ನೀರಿಗಾಗಿ ಜನರು ಪರಿತಪಿಸುತ್ತಿರುವ ಸಂದರ್ಭದಲ್ಲೇ ಭಾನುವಾರ (ಮೇ.19) ತಡರಾತ್ರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿರುಸಿನ ಮಳೆ ಸುರಿದಿದೆ. ಭಾನುವಾರ ಮಧ್ಯಾಹ್ನದ ಬಳಿಕ ಜಿಲ್ಲೆಯ ವಿವಿಧೆಡೆ ಮಳೆ ಬಂದಿದೆ.
ಮಂಗಳೂರು ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣವಿತ್ತು. ಸಂಜೆಯಾಗುತ್ತಿದ್ದಂತೆ ಮಂಗಳೂರು ಹೊರವಲಯದ ಕೋಟೆಕಾರು, ಬೀರಿ, ಕಿನ್ನಿಗೋಳಿ ಪರಿಸರದಲ್ಲಿ ಹನಿಮಳೆ ಸುರಿದಿದೆ. ನಂತರ ರಾತ್ರಿ ಮಳೆ ಬಿರುಸುಗೊಂಡಿದೆ.ಇಂದು ಮುಂಜಾನೆ ಕೂಡ ಮಂಗಳೂರು ನಗರದಲ್ಲಿ ಉತ್ತಮ ಮಳೆಯಾಗಿದೆ.
ಮಂಗಳೂರಿನ ಕೆಲವೆಡೆ ತಡರಾತ್ರಿ ಸಾಧಾರಣ ಮಳೆಯಾದರೆ, ಸುಬ್ರಹ್ಮಣ್ಯ ಸುತ್ತಮುತ್ತ ಗುಡುಗು, ಮಿಂಚು ಸಹಿತ ಸಾಧಾರಣ ಮಳೆ ಬಂದಿದೆ. ಸಜಿಪದಲ್ಲಿ ತುಂತುರು ಮಳೆಯಾಗಿದೆ. ಪುಂಜಾಲಕಟ್ಟೆ, ಮೂಡಬಿದಿರೆ, ವೇಣೂರಿನಲ್ಲಿ ಹನಿ ಮಳೆಯಾದರೆ, ಬೆಳ್ತಂಗಡಿ ತಾಲೂಕಿನಲ್ಲಿ ಸಾಧಾರಣ ಮಳೆಯಾಗಿದೆ.

ಮಂಗಳೂರು ನಗರದಲ್ಲಿ ಭಾನುವಾರ ರಾತ್ರಿ 10:30ರ ಬಳಿಕ ಆರಂಭವಾದ ತುಂತುರು ಮಳೆ ಕ್ರಮೇಣ ಬಿರುಸು ಪಡೆಯಿತು. ನಗರದಾದ್ಯಂತ ಗುಡುಗು, ಮಿಂಚು ಸಹಿತ ಉತ್ತಮ ಮಳೆಯಾಗಿದೆ. ಮಳೆ ಬಿರುಸುಗೊಳ್ಳುತ್ತಿದ್ದಂತೆ ಮುಂಜಾಗ್ರತಾ ಕ್ರಮವಾಗಿ ಮೆಸ್ಕಾಂನಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು.

ಮಳೆಗಾಗಿ ಕಳೆದ ಕೆಲ ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ದೇವಾಲಯಗಳಲ್ಲಿ, ಚರ್ಚ್ ಹಾಗೂ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿತ್ತು. ಇಂದು ಕೂಡ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣವಿದ್ದು, ಸಂಜೆ ಮಳೆಯಾಗುವ ಸಂಭವವಿದೆ.












Click it and Unblock the Notifications