ಮೋದಿ ಜೊತೆ ಸಂವಾದ; ಸಂತಸ ಹಂಚಿಕೊಂಡ ಮಂಡ್ಯದ ನಿತೀಶ್ ಕುಮಾರ್
ಮಂಡ್ಯ, ಜೂನ್ 22 : ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಂಡ್ಯ ಜಿಲ್ಲೆಯ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಯೋಜನೆ ಫಲಾನುಭವಿ ನಿತೀಶ್ ಕುಮಾರ್ ಜೊತೆ ಸಂವಾದ ನಡೆಸಿ ಖುಷಿಪಟ್ಟರಲ್ಲದೆ, ತಮ್ಮ ಭಾಷಣದಲ್ಲೂ ವಿಷಯ ಪ್ರಸ್ತಾಪಿಸಿ ಸಂತಸ ವ್ಯಕ್ತಪಡಿಸಿದ್ದಾರೆ.
ನರೇಂದ್ರ ಮೋದಿ ಜೊತೆ ಸಂವಾದಕ್ಕೆ ಮಂಡ್ಯ ಜಿಲ್ಲೆಯಿಂದ ಐವರು ಆಯ್ಕೆಯಾಗಿದ್ದರು. ಅದರಲ್ಲಿ ಪಾಂಡವಪುರ ತಾಲೂಕು ಬೆಳ್ಳಾಳೆ ಗ್ರಾಮದ ನಿತೀಶ್ ಕುಮಾರ್ ಕೂಡ ಒಬ್ಬರಾಗಿದ್ದರು. ಸಂವಾದ ಕಾರ್ಯಕ್ರಮದಲ್ಲಿ ನಿತೀಶ್ ಕುಮಾರ್ ತನ್ನ ಪರಿಚಯ ಮಾಡಿಕೊಂಡ ಬಳಿಕ ನಾನು ಪಾಂಡವಪುರ ತಾಲೂಕಿನ ಬೆಳ್ಳಾಳೆ ಗ್ರಾಮದಿಂದ ಬಂದಿದ್ದು, ನನ್ನ ಮುಖಭಾಗದಲ್ಲಿ ನ್ಯೂನತೆ (ರೇಸಿಯಲ್ ಡಿ-ಫಾರ್ಮೆಟಿ) ಕಂಡುಬಂದು ವಿರೂಪವಾಗಿತ್ತು ಎಂದರು.

ಶಸ್ತ್ರಚಿಕಿತ್ಸೆಯಿಂದ ಸಂಪೂರ್ಣ ಗುಣಮುಖ
ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಯೋಜನೆಯಡಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಬಳಿಕ ಸಂಪೂರ್ಣ ಸರಿಹೋಗಿದೆ. ಈ ಯೋಜನೆಯಿಂದ ನನಗೆ ಒಳ್ಳೆಯದಾಗಿದೆ ಎಂದು ಕನ್ನಡದಲ್ಲಿ ಹೇಳಿದಾಗ, ಪ್ರಧಾನಿ ನರೇಂದ್ರಮೋದಿ ಅವರು ಸನ್ನೆಯಿಂದಲೇ ಅದನ್ನು ಅರ್ಥ ಮಾಡಿಕೊಂಡು ಈಗ ಎಲ್ಲವೂ ಸರಿಹೋಗಿದೆಯಾ?, ಇನ್ನೂ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೀಯಾ? ಎಂದಾಗ, ಇಲ್ಲ ಸರ್, ಸಂಪೂರ್ಣ ಗುಣಮುಖನಾಗಿದ್ದೇನೆ ಎಂದು ನಿತೀಶ್ ಹೇಳುತ್ತಲೇ, ಖುಷಿಯಾಗಿದೆಯಾ ಎಂದು ಮೋದಿ ಕೇಳಿದರು.
ಹುಟ್ಟಿದ ಹಾಗೂ ಹುಟ್ಟಿದ ನಂತರ ಮಕ್ಕಳಿಗೆ ಎದುರಾಗುವ ದೈಹಿಕ ನ್ಯೂನತೆ ಸೇರಿದಂತೆ ಹಲವು ರೋಗಗಳಿಗೆ ಸಕಾಲದಲ್ಲಿ ಉಚಿತವಾಗಿ ವೈದ್ಯಕೀಯ ಚಿಕಿತ್ಸೆ ನೀಡಿ ಗುಣಪಡಿಸುವ ಸದುದ್ದೇಶದಿಂದ ಜಿಲ್ಲೆಯಲ್ಲೇ ಮೊದಲ ಬಾರಿಗೆ ಮಕ್ಕಳ ತೀವ್ರ ನಿಗಾ ಕೇಂದ್ರ ಆರಂಭವಾಗಿದೆ. ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ ಹೃದಯ ರೋಗ, ಹೃದಯ ಸಂಬಂಧಿ ಸಮಸ್ಯೆ, ಕಾಲು ಕೈ ಊನವಾಗಿರುವುದು,ದೃಷ್ಟಿಹೀನತೆ, ಸೀಳುತಿಟಿ, ಕಿವಿ ಕೇಳಿಸದಿರುವುದು ಸೇರಿದಂತೆ ಲಕ್ಷಣ ಹೊಂದಿರುವ ಮಕ್ಕಳಿಗೆ ಉಚಿತವಾಗಿ ಆರೋಗ್ಯ ತಪಾಸಣೆ ನಡೆಸುವುದಲ್ಲದೇ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗುವುದು.

ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ವೈದ್ಯರ ತಂಡ ಭೇಟಿ
ನಿತೀಶ್ ಕುಮಾರ್ ಹುಟ್ಟುತ್ತಲೇ ಮುಖಭಾಗ ನ್ಯೂನತೆಯಿಂದ ಕೂಡಿತ್ತು. ಗಲ್ಲದ ಭಾಗ ಸಾಮಾನ್ಯರಿಂತ ಹೆಚ್ಚು ಮುಂದೆ ಬಂದು ಮುಖ ಲಕ್ಷಣ ವಿರೂಪವಾಗಿತ್ತು. ಈತ ಮಂಡ್ಯ ತಾಲೂಕಿನ ಸಂತೆಕಸಲಗೆರೆಯ ಮೊರಾರ್ಜಿ ಸರ್ಕಾರಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದನು. ಆಗ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ವೈದ್ಯರ ತಂಡ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿದಾಗ ನಿತೀಶ್ ಕುಮಾರ್ಗೆ ಇದ್ದ ನ್ಯೂನತೆಯನ್ನು ಗುರುತಿಸಿದರು.
ರಾಷ್ಟ್ರೀಯ ಬಾಲ ಸ್ವಾಸ್ಥ್ಯಕಾರ್ಯಕ್ರಮದಡಿ ಶಸ್ತ್ರಚಿಕಿತ್ಸೆಗೆ ಈತನನ್ನು ಆಯ್ಕೆ ಮಾಡಿಕೊಂಡರು. ಇದರ ಮುಖ್ಯಸ್ಥರಾಗಿರುವ ಡಾ.ನರೇಂದ್ರಬಾಬು ಅವರು ನಿತೀಶ್ ಕುಮಾರ್ನನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಿ ಮುಖದ ನ್ಯೂನತೆಯನ್ನು ಯಾವುದೇ ಕಲೆಯಾಗದ ರೀತಿಯಲ್ಲಿ ಗುಣಪಡಿಸಿದರು. ಈಗ ಆತ ಯಾವುದೇ ಚಿಕಿತ್ಸೆಯನ್ನು ಪಡೆದುಕೊಳ್ಳದೆ ಆರಾಮವಾಗಿದ್ದಾನೆ.

ಮಕ್ಕಳಿಗೆ ಉಚಿತ ಶಸ್ತ್ರಚಿಕಿತ್ಸೆ ಅವಕಾಶ
ಕೇಂದ್ರ ಸರ್ಕಾರ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮವನ್ನು 2014ರಲ್ಲಿ ಜಾರಿಗೆ ತಂದಿತು. ಈ ಯೋಜನೆಯಡಿ ಹುಟ್ಟಿದ ಮಕ್ಕಳಿಂದ ಆರಂಭವಾಗಿ 18 ವರ್ಷ ವಯಸ್ಸಿನವರೆಗೆ ಅಂಗ ನ್ಯೂನತೆ, ಮಾರಣಾಂತಿಕ ಕಾಯಿಲೆಗೆ ಒಳಗಾಗಿರುವ ಹಾಗೂ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಉಚಿತ ಶಸಚಿಕಿತ್ಸೆ ಹಾಗೂ ಚಿಕಿತ್ಸೆಗೆ ಒಳಗಾಗುವುದಕ್ಕೆ ಅವಕಾಶವಿದೆ.
2017ರಿಂದ ಮಂಡ್ಯದಲ್ಲಿ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ ಜಾರಿಯಾಗಿದೆ. ಇದರಡಿ ಬಿಪಿಎಲ್ ಕಾರ್ಡ್ ಹೊಂದಿರುವವರು ಹೃದಯ ಸಂಬಂಧಿ ಸಮಸ್ಯೆ, ಹರ್ನಿಯಾ, ಅಂಗನ್ಯೂನತೆ, ತಲೆ ದಪ್ಪ, ತಲೆ ಸಣ್ಣವಾಗಿರುವುದು, ಅಪೌಷ್ಠಿಕತೆ ಹೀಗೆ ನಾನಾ ರೀತಿಯ ಸಮಸ್ಯೆಗಳಿಂದ ಬಳಲುತ್ತಿರುವ ಬಿಪಿಎಲ್ ಕಾರ್ಡ್ ಫಲಾನುಭವಿಗಳು ಈ ಯೋಜನೆಯಡಿ ಉಚಿತ ಶಸ್ತ್ರ ಚಿಕಿತ್ಸೆಗೆ ಒಳಗಾಗಬಹುದು. ಪ್ರತಿ ತಿಂಗಳು ಕನಿಷ್ಠ 15 ರಿಂದ 20 ಪ್ರಕರಣಗಳನ್ನು ಗುರುತಿಸಿ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗುತ್ತಿದೆ.
ಕಳೆದ ಐದು ವರ್ಷಗಳಿಂದ ಸಾವಿರಾರು ಜನರು ಯೋಜನೆಯ ಫಲಾನುಭವಿಗಳಾಗಿ ಸಾವನ್ನು ಗೆದ್ದು ಬಂದಿದ್ದಾರೆ. ಬಡ ಕುಟುಂಬಗಳ ಮೇಲೆ ಬೀಳುತ್ತಿದ್ದ ಆರ್ಥಿಕ ಹೊರೆಯೂ ತಪ್ಪಿದೆ.

ಬಿಪಿಎಲ್ ಕಾರ್ಡ್ದಾರರಿಗೆ ಯೋಜನೆ ಅನುಕೂಲ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಕಚೇರಿದ್ದು, ಮಕ್ಕಳ ತಜ್ಞ ಡಾ.ನರೇಂದ್ರಬಾಬು ಮುಖ್ಯಸ್ಥರಾಗಿದ್ದಾರೆ. ಇವರೊಂದಿಗೆ ಸ್ಟನರ್ಸ್, ಫಿಸಿಯೋಥೆರಪಿಸ್ಟ್, ಸೈಕಾಲಜಿಸ್ಟ್, ಸ್ಪೀಚ್ ಥೆರಪಿಸ್ಟ್ ಕೂಡ ಇದ್ದಾರೆ. ತಾಲೂಕುವಾರು ತಂಡಗಳನ್ನು ರಚಿಸಲಾಗಿದ್ದು, ಈ ತಂಡಗಳು ಜಿಲ್ಲೆಯಲ್ಲಿರುವ ಸರ್ಕಾರಿ ಶಾಲಾ-ಕಾಲೇಜುಗಳಿಗೆ ತೆರಳಿ ಮಕ್ಕಳ ಆರೋಗ್ಯ ಸಮಸ್ಯೆಯನ್ನು ಗುರುತಿಸಿ ಮಾಹಿತಿ ಸಂಗ್ರಹಿಸಬೇಕು. ಅವರು ಬಿಪಿಎಲ್ ಕಾರ್ಡ್ದಾರರಾಗಿದ್ದರೆ ಅವರಿಗೆ ಯೋಜನೆಯ ಬಗ್ಗೆ ಮಾಹಿತಿ ನೀಡಿ ಚಿಕಿತ್ಸೆಗೆ ಒಳಪಡಿಸಲಾಗುತ್ತಿದೆ. ಅಗತ್ಯವಿದ್ದವರಿಗೆ ಶಸ್ತ್ರಚಿಕಿತ್ಸೆಯನ್ನೂ ಮಾಡಲಾಗುತ್ತಿದೆ.












Click it and Unblock the Notifications