Assembly election 2023: ಮಂಡ್ಯದ ಏಳು ಕ್ಷೇತ್ರಗಳಲ್ಲೂ ಗೆಲುವಿನ ಯೋಜನೆಗೆ ಸಿದ್ಧತೆ: ಸಿ.ಟಿ. ರವಿ
ಮಂಡ್ಯ, ಫೆಬ್ರವರಿ, 22: ಕೆ.ಆರ್. ಪೇಟೆ ಉಪ ಚುನಾವಣೆಯಿಂದ ಜಿಲ್ಲೆಯಲ್ಲಿ ರಾಜಕೀಯ ಪರಿವರ್ತನೆ ಆರಂಭವಾಗಿದೆ. ಜಿಲ್ಲೆಯ ಏಳೂ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವಿನ ಯೋಜನೆ ಸಿದ್ಧವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಇಂಡುವಾಳು ಗ್ರಾಮದಲ್ಲಿ ಹೇಳಿದರು.
ಮಂಡ್ಯ ತಾಲೂಕಿನ ಇಂಡುವಾಳು ಗ್ರಾಮದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ರಾಜಕೀಯ ಧೃವೀಕರಣ ಆರಂಭವಾಗಿದೆ. ಬೇರೆ ಬೇರೆ ಪಕ್ಷಗಳನ್ನು ತೊರೆದು ಸಾಕಷ್ಟು ಯುವಕರು ಬಿಜೆಪಿ ಕಡೆಗೆ ಮುಖ ಮಾಡುತ್ತಿದ್ದಾರೆ. ಇದರೊಂದಿಗೆ ಪರಿವರ್ತನೆ ಮುಂದುವರಿಯಲಿದೆ ಎಂದು ತಿಳಿಸಿದರು. ಪಕ್ಷದ ಕಾರ್ಯಕರ್ತರು ಮಂಡ್ಯದಲ್ಲಿ ಹೆಚ್ಚು ಸ್ಥಾನ ಗೆಲ್ಲಿಸಿಕೊಡುವ ಮೂಲಕ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೊಡುಗೆ ನೀಡಬೇಕು ಎಂದು ಸೂಚಿಸಿದರು.

JDSನಿಂದ ನೂರಾರು ಕೋಟಿ ರೂ. ಖರ್ಚು
ಕೆ.ಆರ್. ಪೇಟೆ ಉಪ ಚುನಾವಣೆ, ಲೋಕಸಭಾ ಚುನಾವಣೆಯಲ್ಲೂ ಮಂಡ್ಯ ಜೆಡಿಎಸ್ ಭದ್ರಕೋಟೆ ಎಂದು ಹೇಳಿದ್ದರು. ಆದರೆ ಜೆಡಿಎಸ್ನಿಂದ ನೂರಾರು ಕೋಟಿ ರೂಪಾಯಿ ಖರ್ಚು ಮಾಡಬೇಕಾಯಿತು. ಕೊನೆಗೆ ಗೆದ್ದಿದ್ದು ಯಾರು ಎಂದು ಪ್ರಶ್ನಿಸಿದ ಅವರು, ಮಂಡ್ಯ ಜಿಲ್ಲೆಯ ಮಾಲೀಕರು ಎಂದರೆ ಮತದಾರರು. ಅವರು ಯಾವ ಕಾಲಕ್ಕೆ ಯಾವ ತೀರ್ಮಾನ ಕೊಡಬೇಕೋ ಅದನ್ನೇ ಕೊಟ್ಟಿದ್ದಾರೆ. ಮುಂದೆಯೂ ಆದೇ ರೀತಿ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾನೇನು ಗೌಡನಲ್ಲವಾ?
ಸಿಎಂ ಮಾಡುವಂತೆ ಡಿ.ಕೆ. ಶಿವಕುಮಾರ್ ಒಕ್ಕಲಿಗ ಸಮುದಾಯದ ಮುಂದೆ ಮನವಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನೇನು ಗೌಡನಲ್ಲವಾ? ನಾರಾಯಣಗೌಡ್ರು ಗೌಡರಲ್ಲವಾ? ಒಂದು ಜಾತಿಯ ಮೇಲೆ ರಾಜಕೀಯ ಮಾಡುವುದಕ್ಕೆ ಆಗುತ್ತಾ ಎಂದು ಪ್ರಶ್ನಿಸಿದರು. ಅಲ್ಲದೆ, ಒಕ್ಕಲಿಗರ ಸಂಘದ ಚುನಾವಣೆಗೆ ಡಿ.ಕೆ. ಶಿವಕುಮಾರ್ ಅವರನ್ನು ನಿಲ್ಲಿಸೋಣ. ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದಾಗ ಅವರು ಸ್ಪರ್ಧೆ ಮಾಡಬಹುದು ಎಂದು ವ್ಯಂಗ್ಯವಾಡಿದರು.

ಜನರು ನಮ್ಮ ಜೊತೆ ಇರಬೇಕು
ಪ್ರಸ್ತುತ ನಡೆಯುವುದು ವಿಧಾನಸಭಾ ಚುನಾವಣೆ. ಎಲ್ಲ ಜಾತಿಯ ಜನರು ಕೂಡ ನಮ್ಮ ಜೊತೆ ಇರಬೇಕು. ಜಾತಿ ಚುನಾವಣೆ ನಡೆದಾಗ ಅವರು ಹೋಗಿ ಸ್ಪರ್ಧೆ ಮಾಡಬಹುದು. ಆ ಸಮಯದಲ್ಲಿ ಅವರವರ ಜಾತಿ ಮತದಾರರೇ ಮತ ಹಾಕುತ್ತಾರೆ ಎಂದರು. ನಂತರ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ, ಶೀಘ್ರದಲ್ಲೇ ಮಂಡ್ಯಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಬರುವ ಕಾರ್ಯಕ್ರಮ ಇದೆ. ಯುವಸಮೂಹ ಒಂದು ದೊಡ್ಡ ಶಕ್ತಿ. ರಾಜ್ಯದಲ್ಲಿ ಮೊದಲ ಬಾರಿಗೆ ಮಂಡ್ಯದಲ್ಲಿ ಯುವ ಮೋರ್ಚಾ ಸಮಾವೇಶ ನಡೆದಿರುವುದು ನಮಗೆಲ್ಲ ತುಂಬ ಖುಷಿ ತಂದಿದೆ ಎಂದರು.
ವಿಜಯೇಂದ್ರರನ್ನು ಉಸ್ತುವಾರಿ ಮಾಡಿದ್ರೆ ಒಳ್ಳೆಯದು
ಬಿ.ವೈ.ವಿಜಯೇಂದ್ರ ಅವರನ್ನು ಮಂಡ್ಯ ಜಿಲ್ಲೆಗೆ ಎಂದು ನೇಮಕ ಮಾಡಿಲ್ಲ. ಆದರೆ ಅವರ ಅವಶ್ಯಕತೆ ಜಿಲ್ಲೆಗೆ ಹೆಚ್ಚು ಇದೆ. ಅವರೇ ಉಸ್ತುವಾರಿ ವಹಿಸಿಕೊಂಡರೆ ಒಳ್ಳೆಯದು. ಜಿಲ್ಲೆಗೆ ಅವರನ್ನು ಪಕ್ಷ ಸೀಮಿತ ಮಾಡಿಲ್ಲ. ಏಳು ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ. ಮಂಡ್ಯದಲ್ಲಿ ಬಿಜೆಪಿ ಅಸ್ತಿತ್ವ ಇರಲಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಭದ್ರಕೋಟೆಯಾಗಿತ್ತು. ಆದರೀಗ ಮಂಡ್ಯದಲ್ಲಿ ಭದ್ರಕೋಟೆ ಒಡೆದಿದೆ. ಏಳು ಕ್ಷೇತ್ರದಲ್ಲಿ ಒಳ್ಳೆಯ ಅಭ್ಯರ್ಥಿಗಳು ಸಿಕ್ಕಿದ್ದಾರೆ. ಹಾಗೆಯೇ ಹೆಚ್ಚಿನ ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ.

ಭಯದ ವಾತಾವರಣ ಇಲ್ಲ
ಡಿ.ಕೆ.ಶಿವಕುಮಾರ್ ಸಿಎಂ ಆಸೆ ಆಗುವ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರ ರಾಜಕಾರಣ ಮಾಡಲೇಬೇಕು. ನಮ್ಮ ಸರ್ಕಾರ ಇದೆ. ಸಿಎಂ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಯಡಿಯೂರಪ್ಪ ಇದ್ದಾರೆ, ಅಮಿತ್ ಶಾ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ. ಮೋದಿ ಅವರು ಬರುವುದು ಚುನಾವಣೆಗೆ ಅನುಕೂಲವಾಗಲಿದೆ. ಮಂಡ್ಯ ಉಸ್ತುವಾರಿ ಈಗಲೂ ಸಚಿವ ಆರ್.ಅಶೋಕ್ ಇದ್ದಾರೆ. ಬೇರೆ ಯಾರನ್ನು ನೇಮಕ ಮಾಡಿಲ್ಲ. ಅವರೇ ಬಂದು ಮುಂದುವರಿಯಬೇಕು. ಅವರು ಭದ್ರಕೋಟೆಯಲ್ಲಿ ಇದ್ದಾರೆ. ಭಯದ ವಾತಾವರಣ ಇಲ್ಲ. ಅಶೋಕ್ ಬಂದು ಮಂಡ್ಯಕ್ಕೆ ಒಂದು ಶಕ್ತಿ ತುಂಬಬೇಕು ಎಂದು ಆಹ್ವಾನ ನೀಡಿದರು.
ಕಾಂಗ್ರೆಸ್ನಲ್ಲಿ ನಾಯಕರ ಕೊರತೆ ಇದೆ
ಕೆ.ಆರ್.ಪೇಟೆ ಕಾಂಗ್ರೆಸ್ನಲ್ಲಿ ನಾಯಕರ ಕೊರತೆ ಇದೆ. ಆದ್ದರಿಂದ ನಾನು ಆ ಪಕ್ಷ ಸೇರುತ್ತೇನೆ ಎಂದು ಮಾತನಾಡುತ್ತಿದ್ದಾರೆ. ಆದರೆ ನಾವು ಯಾವುದೇ ರೀತಿಯ ಚಿಂತನೆ ಮಾಡಿಲ್ಲ. ಬಿಜೆಪಿ ವೀಕ್ ಆಗಲಿ ಎಂದು ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಕೆ.ಆರ್.ಪೇಟೆಯಲ್ಲಿ ಕಾಂಗ್ರೆಸ್ ಮೂರು ಬಾರಿ ಸೋತಿದೆ ಎಂದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಎಲ್ಲಿ ಬೇಕಾದರೂ ಸ್ಪರ್ಧಿಸಬಹುದು. ರೇವಣ್ಣ ಬಂದರೆ ಎಂದು ಹೇಳಿದ್ದೆ. ಹೆಸರು ಹೇಳಬಾರದಿತ್ತು ನಾನು. ಯಾರು ಬೇಕಾದರೂ ನಿಲ್ಲಬಹುದು. ಅವರ ಪಕ್ಷಕ್ಕೂ ನನಗೂ ಸಂಬಂಧ ಇಲ್ಲ ಎಂದರು.
ಗಮನ ಸೆಳೆದ ಬೃಹತ್ ಬೈಕ್ ರ್ಯಾಲಿ
ಸಮಾವೇಶಕ್ಕೆ ಆಗಮಿಸಿದ ನಾಯಕರಿಗೆ ಇಂಡುವಾಳು ಗ್ರಾಮದಲ್ಲಿ ಭರ್ಜರಿ ಸ್ವಾಗತ ನೀಡಲಾಯಿತು. ಹಾಗೆಯೇ ಬಿ.ವೈ.ವಿಜಯೇಂದ್ರ, ಸಿ.ಟಿ.ರವಿ, ಕೆ.ಸಿ.ನಾರಾಯಣಗೌಡ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರಿಗೆ ಕ್ರೇನ್ ಮೂಲಕ ಬೃಹತ್ ಮೂಸಂಬಿ ಹಾಗೂ ಕಬ್ಬಿನ ಹಾರ ಹಾಕಲಾಯಿತು. ಬಳಿಕ ಇಂಡುವಾಳು ಸಚ್ಚಿದಾನಂದ ನೇತೃತ್ವದಲ್ಲಿ ಬೃಹತ್ ಬೈಕ್ ರ್ಯಾಲಿ ನಡೆಯಿತು. ಈ ವೇಳೆ ಸಾವಿರಾರು ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು.












Click it and Unblock the Notifications