ಕೊಡಗಿನ ಲಕ್ಕುಂದ ಬಳಿ ಹುಲಿ ಶವ ಪತ್ತೆ; ಇದೇನಾ ಆ ನರಭಕ್ಷಕ?
ಮಡಿಕೇರಿ, ಮಾರ್ಚ್ 19: ಶುಕ್ರವಾರ (ಮಾ.19) ಬೆಳಿಗ್ಗೆ ಗಂಡು ಹುಲಿಯ ಕೊಳೆತ ಶವವೊಂದು ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಕಾನೂರು ಸಮೀಪದ ಲಕ್ಕುಂದ ಅರಣ್ಯದ ಆನೆ ಕಂದಕದಲ್ಲಿ ಸಿಕ್ಕಿದೆ.
ಕಳೆದೊಂದು ತಿಂಗಳಿನಿಂದ ಈ ನರ ಹಂತಕ ಹುಲಿಯು ಬೆಳ್ಳೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಉಪಟಳ ನೀಡುತ್ತಿದ್ದು, 25ಕ್ಕೂ ಅಧಿಕ ಜಾನುವಾರುಗಳನ್ನು ಕೊಂದಿದ್ದಲ್ಲದೆ, ಮೂವರು ಮನುಷ್ಯರನ್ನೂ ಬಲಿ ತೆಗೆದುಕೊಂಡಿತ್ತು.
ಕಳೆದ ಫೆಬ್ರುವರಿ 21ರಿಂದ ಅರಣ್ಯ ಇಲಾಖೆಯು ಈ ಹುಲಿಯ ಸೆರೆಗೆ 150ಕ್ಕೂ ಅಧಿಕ ಸಿಬ್ಬಂದಿಗಳ ಮೂಲಕ ದೊಡ್ಡ ಮಟ್ಟದ ಕಾರ್ಯಾಚರಣೆಯನ್ನು ನಡೆಸುತ್ತಿತ್ತು. ಆದರೆ ಈಗ ಸತ್ತಿರುವ ಹುಲಿಯು ಜನರನ್ನು ಕೊಂದ ಆ ನರ ಹಂತಕ ಹುಲಿಯೇ ಇದು ಎಂದು ಹೇಳಲಾಗುತ್ತಿದೆ.

ಮಾ.8ರಂದು ಅರಣ್ಯ ಸಿಬ್ಬಂದಿ ಹುಲಿಗೆ ಶೂಟ್ ಮಾಡಿದ್ದರು ಎನ್ನಲಾಗಿದ್ದು, ಅರಣ್ಯ ಸಿಬ್ಬಂದಿ ಹುಲಿಯು ಸತ್ತು ಒಂದು ವಾರ ಆಗಿರಬಹುದು ಎನ್ನಲಾಗಿದ್ದು, ಸ್ಥಳಕ್ಕೆ ಧಾವಿಸಿದ ಅರಣ್ಯಾಧಿಕಾರಿಗಳು, ಪಶು ವೈದ್ಯರ ಮೂಲಕ ಪೋಸ್ಟ್ ಮಾರ್ಟಂ ನಡೆಸುತ್ತಿದ್ದಾರೆ.
ಈಗ ಸತ್ತಿರುವ ಹುಲಿಯು ಜನರನ್ನು ಕೊಂದ ಹುಲಿಯೇ ಆಗಿದೆ ಎಂದು ಕೊಡಗು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಣಾವತ್ ಸಿಂಗ್ ಅವರು ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ.
ಜಾನುವಾರುಗಳನ್ನು ಬಲಿ ತೆಗೆದುಕೊಂಡ ನಂತರ ಮನುಷ್ಯರನ್ನು ಕೊಲ್ಲುತ್ತಿದ್ದ ಈ ಗಂಡು ಹುಲಿಯನ್ನು ಗುರುತಿಸಲಾಗಿದ್ದು, ಇದಕ್ಕೆ ಹುಲಿ ಗಣತಿಯಲ್ಲಿ 205 ಎಂಬ ಸಂಖ್ಯೆಯನ್ನೂ ನೀಡಲಾಗಿತ್ತು.
Recommended Video
ಇದೀಗ ಮೃತ ಹುಲಿಯನ್ನು ಈ ಹಿಂದೆ ಗುರುತಿಸಲಾದ ಹುಲಿಗೆ ಮ್ಯಾಚ್ ಮಾಡಲಾಗಿದ್ದು, ಅದೇ ಹುಲಿ ಎಂದು ಅವರು ಖಚಿತಪಡಿಸಿದ್ದಾರೆ. ಇದರಿಂದಾಗಿ ನಾಗರಹೊಳೆ ಅರಣ್ಯದ ಸುತ್ತಮುತ್ತಲಿನ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.












Click it and Unblock the Notifications