ಮಡಿಕೇರಿ ರಾಜಾಸೀಟಿನಲ್ಲಿ ಅಭಿವೃದ್ಧಿ ಮರೀಚಿಕೆ!
ಸರ್ಕಾರದ ನಿರ್ಲಕ್ಷ್ಯದಿಂದಾಗಿ ರಾಜಾ ಸೀಟ್ ನಲ್ಲಿರುವ ಪುಷ್ಪೋದ್ಯಾನ ಮುಂತಾದ ಪ್ರವಾಸಿ ತಾಣಗಳು ದಿನಗಳೆದಂತೆ ಕಳೆಗುಂದುತ್ತಿವೆ.
ಮಡಿಕೇರಿ, ಫೆಬ್ರವರಿ 24: ದಿನದಿಂದ ಕೊಡಗಿನತ್ತ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗೆ ಬರುವ ಪ್ರವಾಸಿಗರು ಮಡಿಕೇರಿಯ ರಾಜಾಸೀಟಿನತ್ತ ಹೆಜ್ಜೆ ಹಾಕುತ್ತಾರೆ. ಅದರೊಳಗೆ ಹೋಗಿ ಬಂದವರನ್ನು ಮಾತನಾಡಿಸಿದರೆ ಅವರಲ್ಲಿ ನಿರಾಸಾಭಾವ ಎದ್ದು ಕಾಣುತ್ತದೆ.
ಇದಕ್ಕೆ ಕಾರಣವೂ ಇದೆ. ನಿಸರ್ಗ ಮಡಿಲ ಸುಂದರ ತಾಣವಾಗಿರುವ ರಾಜಾಸೀಟ್ ನಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಅಲ್ಲಿ ಒಂದಿಷ್ಟು ನಿಸರ್ಗ ಸೌಂದರ್ಯ ಹೊರತು ಪಡಿಸಿದರೆ ಇನ್ಯಾವುದೂ ಇಲ್ಲದೆ ಬೋಳು ಬೋಳಾಗಿದೆ.

ಅಕ್ಟೋಬರ್ ತಿಂಗಳವರೆಗೆ ಮಳೆಗಾಲ ಇರುವುದರಿಂದ ನಿಸರ್ಗ ಸೌಂದರ್ಯ ಕಣ್ಣಿಗೆ ರಾಚುತ್ತದೆ. ಈ ಬೇಸಿಗೆ ಬಂದಿದ್ದರಿಂದ ಇಂಥ ಯಾವುದೇ ಸೌದರ್ಯ ಇಲ್ಲಿ ಮನಸೂರೆಗೊಳ್ಳುವುದಿಲ್ಲ. ಇಲ್ಲಿ ಸುಂದರ ಪುಷ್ಪೋದ್ಯಾನ ಇದೆಯಾದರೂ ಅದು ಈಗ ನಿರ್ವಹಣೆಯಿಲ್ಲದೆ ಸೊರಗಿದೆ. ಹುಲ್ಲು ಹಾಸು ಸೇರಿದಂತೆ ಪುಷ್ಪಗಿಡಗಳು ಹಸಿರಿನಿಂದ ಕಂಗೊಳಿಸುತ್ತಿದ್ದರೆ ಮಾತ್ರ ಚೆಂದ. ಆದರೆ ಇಲ್ಲಿ ಅದು ಇಲ್ಲದಾಗಿದೆ.
ಬಹಳಷ್ಟು ವರ್ಷದಿಂದ ರಾಜಾಸೀಟನ್ನು ಅಭಿವೃದ್ಧಿಗೊಳಿಸಿ ಎಂಬ ಕೂಗು ಇದ್ದೇ ಇದೆ. ಆದರೆ ಅದೇನೋ ಗೊತ್ತಿಲ್ಲ. ರಾಜಾಸೀಟಿನಲ್ಲಿ ಅಭಿವೃದ್ಧಿ ಎನ್ನುವುದು ಮರೀಚಿಕೆಯಾಗುತ್ತಿದೆ. ಅಭಿವೃದ್ಧಿಗೆ ಸಂಬಂಧಿಸಿದಂತೆ ಯೋಜನೆಗಳು ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಸಲ್ಲಿಕೆಯಾಗುತ್ತಿದೆಯೇ ಹೊರತು ಈ ಬಗ್ಗೆ ಸರ್ಕಾರದಿಂದ ಸ್ಪಂದನೆ ಮಾತ್ರ ಶೂನ್ಯ.

ಕೆಲವು ವರ್ಷಗಳ ಹಿಂದೆ ಜಿಲ್ಲಾಧಿಕಾರಿಗಳಾಗಿದ್ದ ಸುಭೋದ್ಯಾದವ್ ಅವರ ಅವಧಿಯಲ್ಲಿ ರಾಜಾಸೀಟಿನ ಅಭಿವೃದ್ಧಿಗೆ ಕೋಟಿ ರೂ.ಗಳ ಪ್ರಸ್ತಾವನೆಯೊಂದನ್ನು ಸರಕಾರಕ್ಕೆ ಸಲ್ಲಿಸಲಾಗಿತ್ತು. ಯೋಜನೆ ಕುರಿತ ಪ್ರಸ್ತಾವನೆ ಸರ್ಕಾರಕ್ಕೆ ತಲುಪುತ್ತಿದ್ದಂತೆ ಇತ್ತ ಜಿಲ್ಲಾಧಿಕಾರಿ ಸುಭೋದ್ ಯಾದವ್ ಸೇರಿದಂತೆ ಹಲವು ಅಧಿಕಾರಿಗಳು ವರ್ಗಾವಣೆಯಾದರು. ಅಭಿವೃದ್ಧಿ ಯೋಜನೆ ಅಲ್ಲಿಗೆ ನೆಲಕಚ್ಚಿತು.
ಜಿಲ್ಲಾಧಿಕಾರಿ ಸುಭೋದ್ ಯಾದವ್ ಅವರು ಸ್ವಇಚ್ಚೆಯಿಂದ ಲಕ್ಷಾಂತರ ರೂ.ಗಳ ವೆಚ್ಚ ಮಾಡಿ ಆಕರ್ಷಕ ಸಂಗೀತ ಕಾರಂಜಿ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಈಗ ಸಂಗೀತ ಕಾರಂಜಿ ನಿದ್ದೆ ಮಾಡಿದೆ.

ರಾಜಾಸೀಟಿನ ಈಗಿರುವ ವಿಸ್ತೀರ್ಣ 5.72 ಎಕರೆಗೆ ಸುತ್ತಮುತ್ತಲ್ಲಿರುವ ಸಿ ಮತ್ತು ಡಿ ಭೂಮಿಯನ್ನು ಬಳಸಿಕೊಂಡು ಉದ್ಯಾನವನದ ವಿಸ್ತೀರ್ಣವನ್ನು ಸುಮಾರು 10 ಎಕರೆಗಳಿಗೆ ಹೆಚ್ಚಿಸಿಕೊಂಡು ಅಷ್ಟು ಜಾಗವನ್ನು ರಾಜಾಸೀಟಿಗೆ ಮೀಸಲಿಟ್ಟು ಸುತ್ತಲೂ ಬೇಲಿ ಹಾಕಿಸಿ ಒಂದು ಸುಂದರ ಪುಷ್ಪೋದ್ಯಾನ ನಿರ್ಮಿಸುವ ಕಲ್ಪನೆಯಿತ್ತು. ಆದರೆ ಇದ್ಯಾವುದೂ ಸದ್ಯಕ್ಕೆ ಇಲ್ಲಿ ನಡೆಯುವಂತೆ ಕಾಣುತ್ತಿಲ್ಲ.
ರಾಜಾಸೀಟು ಉದ್ಯಾನದ ವಿಸ್ತರಣೆಗಾಗಿ ಈಗಾಗಲೇ ಜಾಗ ಮಂಜೂರಾತಿಯಾಗಿದ್ದು, ಅರಣ್ಯ ಇಲಾಖೆಯಿಂದಲೂ ಸಹಕಾರ ದೊರೆತಿದೆ. ನೆಹರು ಮಂಟಪ ಕೂಡ ರಾಜಾಸೀಟು ವ್ಯಾಪ್ತಿಗೆ ಒಳಪಡಲಿದ್ದು, ಇದರ ಅಭಿವೃದ್ಧಿಗೂ ಕ್ರಮ ಕೈಗೊಳ್ಳುವುದು, ರಾಜಾಸೀಟು ಉದ್ಯಾನವನದ ಪ್ರವೇಶದ ಭಾಗದಲ್ಲಿ ಆಕರ್ಷಕ ಮಹಾದ್ವಾರ ನಿರ್ಮಾಣ ಮಾಡುವುದು, ಪುಟಾಣಿ ರೈಲು ಮಾರ್ಗವನ್ನು ಮತ್ತು ಸಂಗೀತ ಕಾರಂಜಿಯ ಧ್ವನಿ ವ್ಯವಸ್ಥೆಯನ್ನು ಮೇಲ್ದರ್ಜೆಗೆ ಏರಿಸುವ ಪ್ರಸ್ತಾಪಗಳು ಕೂಡ ನೂತನ ಯೋಜನೆಯಲ್ಲಿ ಅಡಕವಾಗಿದೆ. ಆದರೆ ಇದ್ಯಾವುದೂ ಕಾರ್ಯರೂಪಕ್ಕೆ ಬರುವ ಲಕ್ಷಣಗಳಿಲ್ಲ.
ರಾಜ್ಯ ಕಾಂಗ್ರೆಸ್ ಸರಕಾರ ತನ್ನ ಬಜೆಟ್ನಲ್ಲಿ ರಾಜಾಸೀಟಿನ ಸರ್ವತೋಮುಖ ಅಭಿವೃದ್ಧಿಗಾಗಿ 5 ಕೋಟಿ ರೂ.ಗಳನ್ನು ಮೀಸಲಿಟ್ಟಿತು. ಆದರೆ ಅದೇನಾಯಿತು ಎಂಬುದು ಇಲ್ಲಿ ಯಾರಿಗೂ ಗೊತ್ತಿಲ್ಲ.
ಹಿಂದಿನ ಜಿಲ್ಲಾಧಿಕಾರಿ ಅನುರಾಗ್ ತಿವಾರಿ ಅವರ ಸತತ ಪ್ರಯತ್ನದಿಂದಾಗಿ ರಾಜಾಸೀಟಿನ ಅಭಿವೃದ್ಧಿಗೆ ಎರಡೂವರೆ ವರ್ಷಗಳ ಹಿಂದೆ ರೂ.2 ಕೋಟಿ ಬಿಡುಗಡೆಯಾಗಿದ್ದು, ಆ ಅನುದಾನ ಇಂದಿಗೂ ಜಿಲ್ಲಾಧಿಕಾರಿಯವರ ಖಾತೆಯಲ್ಲೇ ಇದೆ ಎನ್ನಲಾಗುತ್ತಿದೆ.
ಒಟ್ಟಾರೆ ಹತ್ತಾರು ಕಾರಣಗಳಿಂದಾಗಿ ಸುಂದರ ಉದ್ಯಾನವೊಂದು ಅಭಿವೃದ್ಧಿ ಕಾಣದೆ ಸೊರಗುತ್ತಿದೆ. ಪರಿಣಾಮ ದೂರದಿಂದ ನಿಸರ್ಗ ಸೌಂದರ್ಯವನ್ನು ಸವಿಯಲು ಬರುವ ಪ್ರವಾಸಿಗರಿಗೆ ನಿರಾಸೆಯಾಗುತ್ತಿದೆ.












Click it and Unblock the Notifications