ಗ್ರಾಮ ಪಂಚಾಯಿತಿ ಸದಸ್ಯ ಅತಿಥಿ ಶಿಕ್ಷಕನಾಗಿ ನೇಮಕವಾಗಬಹುದೇ?
ಬೆಂಗಳೂರು, ಜೂನ್ 19; ಗ್ರಾಮ ಪಂಚಾಯತಿ ಸದಸ್ಯರು ಮತ್ತು ಚುನಾಯಿತ ಸದಸ್ಯರನ್ನು ಅತಿಥಿ ಶಿಕ್ಷಕರಾಗಿ ನೇಮಕ ಮಾಡಿಕೊಳ್ಳಬಹುದೇ?. ಈ ಕುರಿತು ಶಿಕ್ಷಣ ಇಲಾಖೆ ಸ್ಪಷ್ಟನೆಯೊಂದನ್ನು ನೀಡಿದೆ.
ಸೋಮವಾರ ಡಾ. ವಿಶಾಲ್ ಆರ್. ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಗ್ರಾಮ ಪಂಚಾಯತಿ ಸದಸ್ಯರು ಮತ್ತು ಚುನಾಯಿತ ಸದಸ್ಯರನ್ನು ಅತಿಥಿ ಶಿಕ್ಷಕರಾಗಿ ನೇಮಕ ಮಾಡಿಕೊಳ್ಳದಂತೆ ಸೂಚನೆ ಎಂಬ ವಿಚಾರವನ್ನು ಜ್ಞಾಪನಾ ಪತ್ರ ಒಳಗೊಂಡಿದೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ದೊಡ್ಡರಾಂಪುರ, ಚಿಕ್ಕನಾಯಕನಹಳ್ಳಿ ತಾಲ್ಲೂಕು, ತುಮಕೂರು ಜಿಲ್ಲೆ ಈ ಶಾಲೆಗೆ ಪ್ರಸ್ತುತ ಗ್ರಾಮ ಪಂಚಾಯಿತಿ ಸದಸ್ಯರಾಗಿರುವ ಎಸ್. ಎಂ. ರಜನಿ ಅವರನ್ನು ಅತಿಥಿ ಶಿಕ್ಷಕರನ್ನಾಗಿ ನೇಮಕ ಮಾಡಿಕೊಳ್ಳುವ ಕುರಿತು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಚಿಕ್ಕನಾಯಕನಹಳ್ಳಿ ತಾಲ್ಲೂಕು ಇವರು ಸೃಷ್ಟೀಕರಣ ಕೇಳಿದ್ದರು.
ಷರತ್ತು ಇಲ್ಲವೆಂದು ಪರಿಶೀಲನೆ; ಉಪ ನಿರ್ದೇಶಕರು, ತುಮಕೂರು ಜಿಲ್ಲೆ ಸ್ಪಷ್ಟನೆ ಕೇಳಿದ ಕಾರಣ ಆಯುಕ್ತರು ಈ ಜ್ಞಾಪನಾ ಪತ್ರವನ್ನು ಹೊರಡಿಸಿದ್ದಾರೆ. ಪತ್ರದಲ್ಲಿ 2023-24ನೇ ಸಾಲಿನಲ್ಲಿ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲು ನೀಡಲಾದ ಷರತ್ತುಗಳಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾಗಿರುವ ಮತ್ತು ಚುನಾಯಿತ ಸದಸ್ಯರನ್ನು ಅತಿಥಿ ಶಿಕ್ಷಕರಾಗಿ ನೇಮಕ ಮಾಡಿಕೊಳ್ಳಲು ಯಾವುದೇ ಷರತ್ತು ಇಲ್ಲವೆಂಬುದಾಗಿ ಉಲ್ಲೇಖಿಸಿರುವುದನ್ನು ಪರಿಶೀಲಿಸಲಾಗಿದೆ.
1993 ಕರ್ನಾಟಕ ಆಕ್ಟ್ 14] ಪಂಚಾಯತ್ ರಾಜ್ 12 (ಜಿ) ಪುಕಾರ ರಾಜ್ಯ ಸರ್ಕಾರದ ಅಥವಾ ಯಾವುದೇ ಇತರ ರಾಜ್ಯ ಸರ್ಕಾರದ ನಿಯಂತ್ರಣಕ್ಕೆ ಒಳಪಟ್ಟಿರುವ ಯಾವುದೇ ಸ್ಥಳೀಯ ಅಥವಾ ಯಾವುದೇ ಇತರ ಪ್ರಾಧಿಕಾರದಲ್ಲಿ ಯಾವುದೇ ಲಾಭದಾಯಕ ಹುದ್ದೆಯನ್ನು ಹೊಂದಿದ್ದರೆ ಸದಸ್ಯರಾಗಲು ಅರ್ನಹರಾಗುತ್ತಾರೆ ಎಂಬುದಾಗಿ ಸ್ಪಷ್ಟಪಡಿಸಲಾಗಿದೆ.
ಚುನಾವಣೆಯಲ್ಲಿ ಸ್ಪರ್ಧಿಸಿ ಚುನಾಯಿತರಾದ ಅಕ್ಷರ ದಾಸೋಹ ಅಡುಗೆ ಸಿಬ್ಬಂದಿಗಳನ್ನು ಕರ್ತವ್ಯದಿಂದ ಬಿಡುಗಡೆಗೊಳಿಸುವ ಬಗ್ಗೆ ಹೊರಡಿಸಲಾದ ಜ್ಞಾಪನದಲ್ಲಿನ ನೀಡಲಾದ ಸೂಚನೆಗಳನ್ನು ಕ್ಷೇತ್ರ ಮಟ್ಟದಲ್ಲಿ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ/ ಜಿಲ್ಲಾ ಉಪನಿರ್ದೇಶಕರು ಈ ಕುರಿತು ಗಮನಿಸದೇ ಅನಾವಶ್ಯಕವಾಗಿ ಪತ್ರ ವ್ಯವಹರಿಸಿರುವುದನ್ನು ತೀವ್ರವಾಗಿ ಪರಿಗಣಿಸಿದೆ.
ರಾಜ್ಯದ ಸರ್ಕಾರಿ ಪ್ರಾಥಮಿಕ/ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳಿಗೆ ಎದುರಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳುವ ಸಂಬಂಧ ನೀಡಲಾದ ಷರತ್ತುಗಳನ್ನು ಪಾಲಿಸಿ ಮಾತ್ರ ನೇಮಕ ಮಾಡಿಕೊಳ್ಳಲು ತಿಳಿಸಿದೆ. ತಪ್ಪಿದಲ್ಲಿ ಷರತ್ತುಗಳನ್ನು ಪಾಲಿಸದ ಸಂಬಂಧಪಟ್ಟ ಶಾಲಾ ಮುಖ್ಯ ಶಿಕ್ಷಕರ ಸಹಿತ ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ಅಧ್ಯಕರ ಮೇಲೆ ಚಾಲ್ತಿ ನಿಯಮಗಳಂತೆ ಕ್ರಮಕೈಗೊಳ್ಳದ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮ ಜರುಗಿಸಲಾಗುವುದೆಂದು ತಿಳಿಸಿದೆ.
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗೆ ಸ್ವಯಂ ವಿವೇಚನಾ ಅಧಿಕಾರ ಇರುವುದಿಲ್ಲ. ಸಮಿತಿ ಅಧ್ಯಕ್ಷರು ಕೂಡ ಸರ್ಕಾರ/ ಇಲಾಖೆ ನೀತಿ/ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿರುತ್ತದೆ ಎಂಬುದಾಗಿ ಸ್ಪಷ್ಟಪಡಿಸಿದೆ.
ಇಂತಹ ಪ್ರಕರಣ ಇಲಾಖೆಯ ಗಮನಕ್ಕೆ ಬಂದ ಕೂಡಲೇ ಕ್ಷೇತ್ರ ಮಟ್ಟದ ಅಧಿಕಾರಿಗಳು ಕೂಡಲೇ ಚಾಲ್ತಿ ನಿಯಮಗಳನ್ನು ಉಲ್ಲೇಖಿಸಿ ಹಿಂಬರಹ ನೀಡಲು ಹಾಗೂ ಅಗತ್ಯವಿದ್ದಲ್ಲಿ ಪಂಚಾಯತ್ ರಾಜ್ ಅಧಿಕಾರಿಗಳನ್ನು ಸಂಪರ್ಕಿಸಿ ಅವರಿಂದಲೂ ಪಂಚಾಯತ್ ರಾಜ್ ನಿಯಮಗಳ ವಿವರಗಳನ್ನು ಪಡೆದು ಕ್ರಮವಹಿಸಲು ತಿಳಿಸಿದೆ ಎಂದು ಪತ್ರದಲ್ಲಿ ವಿವರಣೆ ನೀಡಲಾಗಿದೆ.












Click it and Unblock the Notifications