ಕಾವೇರಿ ವಿಚಾರವಾಗಿ ಕರ್ನಾಟಕಕ್ಕೆ ಪದೇ ಪದೇ ಹಿನ್ನಡೆಯಾಗುತ್ತಿರುವುದು ಯಾಕೆ? ಇಲ್ಲಿವೆ ಕಾರಣಗಳು
ಬೆಂಗಳೂರು,ಸೆಪ್ಟೆಂಬರ್ 21: ಕಾವೇರಿ ಕರ್ನಾಟಕದ ಜನತೆಗೆ ಜೀವನದಿ. ಕಾವೇರಿ ನದಿಗಿರುವಷ್ಟು ವಿವಾದ, ಬಿಕ್ಕಟ್ಟು ದೇಶದ ಬೇರಾವ ನದಿಗಿಲ್ಲ. ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ನಡುವೆ ಕಾವೇರಿಗಾಗಿ ಬಿಕ್ಕಟ್ಟು ಎದುರಾಗಿದೆ. ಪದೇ ಪದೇ ಕಾವೇರಿಗಾಗಿ ನೆರೆ ರಾಜ್ಯ ತಮಿಳುನಾಡು ಕ್ಯಾತೆ ಮಾತ್ರ ತಪ್ಪುತ್ತಿಲ್ಲ.
ಹೌದು, ಪ್ರತಿ ರಾಜ್ಯದಲ್ಲಿ ಭಾಷೆ, ನೆಲ, ಜಲದ ಮೇಲಿನ ಪ್ರಾದೇಶಿಕ ವ್ಯಾಮೋಹ ಎಲ್ಲಾ ರಾಜ್ಯಗಳಲ್ಲೂ ಇದ್ದರೂ ತಮಿಳುನಾಡಿನಲ್ಲಿ ಸ್ವಲ್ಪಮಟ್ಟಿಗೆ ಹೆಚ್ಚೆ ಇದೆ. ಈ ಪ್ರಾದೇಶಿಕ ವ್ಯಾಮೋಹದಿಂದಲೇ ತಮಿಳುನಾಡಿನಲ್ಲಿ ರಾಷ್ಟ್ರೀಯ ಪಕ್ಷಗಳ ಸುಳಿವಿಲ್ಲದಂತಾಗಿದೆ.

ಕಾವೇರಿ ನದಿ ತಲಕಾವೇರಿಯಲ್ಲಿ ಹುಟ್ಟಿ ಕರ್ನಾಟಕದಲ್ಲಿ 350 ಕಿ.ಮೀ, ತಮಿಳುನಾಡಿನಲ್ಲಿ 402 ಕಿ.ಮೀ, ಹರಿದು ಬ೦ಗಾಕೊಲ್ಲಿ ಸೇರುತ್ತದೆ. ಅ೦ದಾಜಿನ ಪ್ರಕಾರ ಕಾವೇರಿ ನದಿಯ ಸ೦ಗ್ರಹಣ ಸಾಮರ್ಥ್ಯ 740 T.M.C ಇದರಲ್ಲಿ ಕರ್ನಾಟಕಕ್ಕೆ 270 T.M.C,ತಮಿಳುನಾಡಿಗೆ 419 T.M.C, ಕೇರಳ 10 T.M.C, ಪುದುಚೇರಿಗೆ 07 ಮತ್ತು ಪರಿಸರ ಸ೦ರಕ್ಷಣೆಗೆ 10T.M.C ನೀರನ್ನು ಹ೦ಚಲಾಗಿದೆ. ಇದರಲ್ಲಿ ಸಿ೦ಹಪಾಲು ತಮಿಳುನಾಡೆ ಪಡೆಯುತ್ತಿದೆ.
ತಮಿಳುನಾಡಿಗೆ 5000 ಕ್ಯೂಸೆಕ್ಸ್ ಕಾವೇರಿ ನೀರು ಬಿಡಬೇಕೆಂದು ಕಾವೇರಿ ನೀರು ನಿಯಂತ್ರಣಾ ಪ್ರಾಧಿಕಾರದವರು ಸೂಚಿಸಿದ್ದು, ಇಂದು (ಸೆಪ್ಟೆಂಬರ್ 21) ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್ ಕೂಡ ಶಾಕ್ ನೀಡಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದ್ದು, ಮುಂದಿನ 15 ದಿನ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಿದೆ. ಇದರಿಂದ ಕಾವೇರಿ ಕೊಳ್ಳದಲ್ಲಿ ಸಮಸ್ಯೆ ಮತ್ತಷ್ಟು ಉಲ್ಭಣಗೊಳ್ಳುವ ಸಾಧ್ಯತೆ ಇದೆ.
ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿ ಬಿಆರ್ ಗವಾಯಿ ನೇತೃತ್ವದ ತ್ರಿಸದಸ್ಯ ಪೀಠವು ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಮಧ್ಯಪ್ರವೇಶ ಮಾಡಲು ನಿರಾಕರಿಸಿದೆ. ಸಿಡಬ್ಲ್ಯೂಎಂಎ ಆದೇಶವನ್ನು ಪಾಲಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಿದ್ದು, ಪ್ರತಿ 15 ದಿನಗಳಿಗೊಮ್ಮೆ ಪ್ರಾಧಿಕಾರ ಸಭೆ ನಡೆಸಬೇಕು ಎಂದು ಸೂಚನೆ ನೀಡಿದೆ.
ಕಾವೇರಿ ವಿಚಾರವಾಗಿ ರಾಜ್ಯಕ್ಕೆ ಹಿನ್ನಡೆಗೆ ಕಾರಣಗಳು ಇಲ್ಲಿವೆ?
ಸಂಕಷ್ಟದ ಸೂತ್ರ ಇಲ್ಲದಿರುವುದು ರಾಜ್ಯದಲ್ಲಿ ಈ ವರ್ಷ ಮುಂಗಾರು ದುರ್ಬಲವಾಗಿದ್ದು, ವಾಡಿಕೆಯಂತೆ ಈ ವರ್ಷ ರಾಜ್ಯದಲ್ಲಿ ಮಳೆಯಾಗದ ಹಿನ್ನೆಲೆ ಕರ್ನಾಟಕದ ಪ್ರಮುಖ ಜಲಾಶಯಗಳು ಖಾಲಿಯಾಗಿದ್ದು, ಉತ್ತಮ ಮಳೆಯಾಗದ ಹಿನ್ನೆಲೆ ಕಾವೇರಿಯಲ್ಲಿ ನೀರಿಲ್ಲ, ನೀರಿಲ್ಲದ ಸಂದರ್ಭದಲ್ಲಿಯೂ ಕುಡಿಯುವ ನೀರು ಹಾಗೂ ಬೆಳೆಗಳಿಗೆ ನೀರು ಒದಗಿಸಬೇಕಿದೆ.

ಈಗಾಗಲೇ ರಾಜ್ಯದಲ್ಲಿ ಬರದ ಛಾಯೆ ಆವರಿಸಿದ್ದು, ಪ್ರತಿ ದಿನ 5000 ಕ್ಯೂಸೆಕ್ಸ್ ನೀರನ್ನು 15 ದಿನ ಬಿಡಬೇಕೆಂದು ಸೂಚನೆ ನೀಡಿದ್ದಾರೆ. ಕಾವೇರಿ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ಸಂಕಷ್ಟ ಸೂತ್ರವನ್ನು ಇನ್ನೂ ಸಿದ್ಧಪಡಿಸಿಲ್ಲ. ಮಳೆ ಬರದೇ ಇದ್ದಾಗ ಎಷ್ಟು ಪ್ರಮಾಣದ ನೀರನ್ನ ತಮಿಳುನಾಡಿಗೆ ಬಿಡಬೇಕು ಎಂಬ ಬಗ್ಗೆ ಚರ್ಚೆಯಾಗಿಲ್ಲ. ಹೀಗಾಗಿ ಸಂಕಷ್ಟ ಸೂತ್ರ ಇಲ್ಲದಿರುವುದರಿಂದಲೇ ಕರ್ನಾಟಕ ಈ ಪರಿಸ್ಥಿತಿಯನ್ನ ಎದುರಿಸಬೇಕಾಗಿದೆ. ಸುಪ್ರೀಂ ಕೋರ್ಟ್ ಆದೇಶ ಪ್ರಕಾರ ಸಾಮಾನ್ಯ ವರ್ಷಗಳಲ್ಲಿ 177.25 ಟಿಎಂಸಿ ನೀರು ಬಿಡಬೇಕು. ಆದರೆ, ದುರದೃಷ್ಟವಶಾತ್ ಸಂಕಷ್ಟ ಹಂಚಿಕೆ ಸೂತ್ರವಿಲ್ಲದ ಕಾರಣ ಕಷ್ಟಕ್ಕೆ ಸಿಲುಕಿಕೊಳ್ಳುತ್ತಿದ್ದೇವೆ. 99 ಟಿಎಂಸಿ ನೀರು ಕೊಡಬೇಕಾಗಿತ್ತು. ಇವತ್ತಿನ ವರೆಗೆ 37.7 ಟಿಎಂಸಿ ನೀರು ಬಿಡಲಾಗಿದೆ. ಈಗಲೂ ನೀರು ಬಿಡಲಾಗದೆ ಇರುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ನೀರು ಹಂಚಿಕೆ ಸರಿಯಾಗಿ ಆಗದೇ ಇರುವುದು
ಕಾವೇರಿ ನದಿಯ ಸ೦ಗ್ರಹಣ ಸಾಮರ್ಥ್ಯ 740 T.M.C ಇದರಲ್ಲಿ ಕರ್ನಾಟಕಕ್ಕೆ 270 T.M.C,ತಮಿಳುನಾಡಿಗೆ 419 T.M.C, ಕೇರಳ 10 T.M.C, ಪುದುಚೇರಿಗೆ 07 ಮತ್ತು ಪರಿಸರ ಸ೦ರಕ್ಷಣೆಗೆ 10T.M.C ನೀರನ್ನು ಹ೦ಚಲಾಗಿದೆ. ಇದರಲ್ಲಿ ಸಿ೦ಹಪಾಲು ತಮಿಳುನಾಡೆ ಪಡೆಯುತ್ತಿದೆ.
ಸಮರ್ಥ ಪ್ರಾದೇಶಿಕ ಪಕ್ಷ ಇಲ್ಲದಿರುವುದು
ಕರ್ನಾಟಕದಲ್ಲಿ ಸಮರ್ಥ ಪ್ರದೇಶಿಕ ಪಕ್ಷ ಇಲ್ಲದಿರುವುದು. ಆದರೆ, ಮೊದಲಿನಿಂದಲೂ ತಮಿಳುನಾಡಿನಲ್ಲೇ ಪ್ರಾದೇಶಿಕ ಪಕ್ಷಗಳ ಸಮರ್ಥ್ಯ ಜೋರಾಗಿದ್ದು, ಇಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಅವಕಾಶ ಇಲ್ಲದಂತಾಗಿದೆ. ಪ್ರಾದೇಶಿಕ ಪಕ್ಷಗಳನ್ನ ಓಲೈಸಿಕೊಳ್ಳಲು ರಾಷ್ಟ್ರೀಯ ಪಕ್ಷಗಳು ಹಾಗೂ ಕೇಂದ್ರ ಸರ್ಕಾರಗಳು ಪರೋಕ್ಷವಾಗಿ ತಮಿಳುನಾಡಿಗೆ ಬೆಂಬಲ ಸೂಚಿಸುತ್ತವೆ. ಅಲ್ಲದೇ ಕರ್ನಾಟಕದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪ್ರಾಬಲ್ಯ ಹೆಚ್ಚಾಗಿರುವುದರಿಂದ ಕೇಂದ್ರ ಸರ್ಕಾರಕ್ಕೆ ಹೇಳಿದಂತೆ ಕೇಳಬೇಕಾದ ಅನಿವಾರ್ಯತೆ ಎದುರಾಗಿದೆ. ಕರ್ನಾಟಕಕ್ಕಾಗಿ ಹೋರಾಡುವಂತಹ ಸಮರ್ಥ ಪ್ರಾದೇಶಿಕ ಪಕ್ಷ ಕರ್ನಾಟಕದಲ್ಲಿ ಇಲ್ಲದಿರುವುದು ಪ್ರಮುಖ ಕಾರಣವಾಗಿದೆ.
ಪರಿಣಿತರ ವಕೀಲರ ತಂಡ ಇಲ್ಲದೆ ಇರುವುದು
ಕರ್ನಾಟಕದ ಪರಿಸ್ಥಿತಿಯನ್ನ ಉತ್ತಮವಾಗಿ ವಿವರಿಸುವ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಉತ್ತಮ ವಕೀಲರ ತಂಡ ಇಲ್ಲದಿರುವುದು ಒಂದು ಕಾರಣ ಎಂದು ಹೇಳಲಾಗುತ್ತಿದೆ. ತಮಿಳುನಾಡು ಪರ ಹಿರಿಯ ವಕೀಲ ಮುಕುಲ್ ರೊಹಟಗಿ ವಾದ ಮಂಡಿಸಿದರೆ, ಕರ್ನಾಟಕದ ಪರ ಹಿರಿಯ ವಕೀಲ ಶ್ಯಾಮ್ ದಿವಾನ್ ತಮ್ಮ ವಾದವನ್ನು ಮಂಡಿಸಿದರು. ಪ್ರಸ್ತುತ ನೀರಿನ ಸಂಕಷ್ಟ ಇದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಆದರೆ, ಸಂಕಷ್ಟ ಸೂತ್ರವನ್ನು ಕರ್ನಾಟಕ ಪಾಲಿಸುತ್ತಿಲ್ಲ. ನಾವು ಬಹಳಷ್ಟು ಕಡಿಮೆ ನೀರನ್ನು ಪಡೆಯುತ್ತಿದ್ದೇವೆ ಎಂದು ತಮಿಳುನಾಡು ಪರ ವಕೀಲ ಮುಕುಲ್ ರೋಹಟಗಿ ವಾದ ಮಂಡಿಸಿದರು.
ಕರ್ನಾಟಕ ಪರ ವಾದ ಮಂಡಿಸಿದ ಶ್ಯಾಮ್ ದಿವಾನ್, ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿರುವ ಆದೇಶವನ್ನು ನಾವು ಪಾಲಿಸಿದ್ದೇವೆ ಎಂದು ಹೇಳಿದರು. ಇಬ್ಬರ ವಾದ-ವಿವಾದಗಳನ್ನು ಆಲಿಸಿದ ಬಳಿಕ ನ್ಯಾಯಮೂರ್ತಿ ಬಿ ಆರ್ ಗವಾಯಿ ನೇತೃತ್ವದ ತ್ರಿಸದಸ್ಯ ಪೀಠ ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆದೇಶಿಸಿತು. ಇದರಿಂದ ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್ನಲ್ಲೂ ಹಿನ್ನೆಡೆಯಾಗಿದೆ. ನಿಜವಾದ ಪರಿಸ್ಥಿತಿಯನ್ನ ಮನವರಿಕೆ ಮಾಡದಿರುವುದು ಸಹ ಕರ್ನಾಟಕಕ್ಕೆ ಹಿನ್ನಡೆಯಾಗಲು ಪ್ರಮುಖ ಕಾರಣ ಎಂದು ಹೇಳಲಾಗಿದೆ.
ಈ ವರ್ಷ ಉತ್ತಮ ಮಳೆಯಾಗದೇ ಇರುವುದು
ಈ ವರ್ಷದ ಆರಂಭದಿಂದಲೂ ರಾಜ್ಯದಲ್ಲಿ ಉತ್ತಮ ಮಳೆಯಾಗಿಲ್ಲ. ಈಗಾಗಲೇ ರಾಜ್ಯದ ರೈತಾಪಿ ವರ್ಗ ಮಳೆ ಇಲ್ಲದೆ ಕಂಗಾಲಾಗಿದ್ದಾರೆ. ವಾಡಿಕೆಯಂತೆ ರಾಜ್ಯದಲ್ಲಿ ಮಳೆಯಾಗಿದ್ದರೆ. ರಾಜ್ಯದಲ್ಲಿ ಈ ಪರಿಸ್ಥಿತಿ ಉಂಟಾಗುತ್ತಿರಲಿಲ್ಲ. ಜೂನ್ನಿಂದ ಆಗಸ್ಟ್ವರೆಗೆ ಕಾವೇರಿ ಕೊಳ್ಳದಲ್ಲಿ ವಾಡಿಕೆಗಿಂತ 44 ರಷ್ಟು ಮಳೆ ಕಡಿಮೆಯಾಗಿದೆ. ಉತ್ತಮ ಮಳೆಯಾಗದೇ ಇರುವುದು ಒಂದು ಕಾರಣವಾಗಿದೆ.












Click it and Unblock the Notifications