'ಹೊಂದಾಣಿಕೆ ರಾಜಕಾರಣ' ಸುಳಿಯಲ್ಲಿ ಬೊಮ್ಮಾಯಿ: ಶಾಮನೂರು ಜೊತೆಗಿನ ರಹಸ್ಯ ಭೇಟಿ ಕುರಿತು ಮಾಜಿ ಸಿಎಂ ಹೇಳಿದ್ದೇನು?
ಬೆಂಗಳೂರು, ಜೂನ್ 14: ಶಾಮನೂರು ಶಿವಶಂಕರಪ್ಪ ಅವರು ನಮ್ಮ ಹಿರಿಯರು ಮತ್ತು ದೂರದ ಸಂಬಂಧಿಯೂ ಹೌದು ಹಲವಾರು ಬಾರಿ ನಾವು ಅವರು ನಮ್ಮ ಮನೆಯಲ್ಲಿ ಭೇಟಿ ಆಗಿದ್ದೇವೆ. ಇದರಲ್ಲಿ ರಾಜಕಾರಣ ಬೆರೆಸುವುದು ಸೂಕ್ತವಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, 'ನಾನು ಶಿಗ್ಗಾಂವಿಯಿಂದ ಬೆಂಗಳೂರಿಗೆ ಬರುವಾಗ ರಾತ್ರಿ ಊಟ ಮಾಡಲು ಹೋಟೆಲ್ಗೆ ಹೋದಾಗ ಅವರು ತಮ್ಮ ಮೊಮ್ಮಕ್ಕಳ ಬಗ್ಗೆ ಹೊಸ ಸಂಬಂಧದ ಕುರಿತು ಚರ್ಚೆ ಮಾಡಲು ಸೇರಿದ್ದರು. ಆ ಸಂದರ್ಭದಲ್ಲಿ ಅವರ ಜೊತೆಗೆ ಹತ್ತು ನಿಮಿಷ ಉಭಯ ಕುಶಲೊಪರಿ ಮಾತನಾಡಿದ್ದು ಯಾವುದೇ ರಾಜಕೀಯ ವಿಷಯ ಪ್ರಸ್ತಾಪ ಆಗಿಲ್ಲ' ಎಂದು ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ.

'ಸ್ನೇಹ ಸಂಬಂಧಗಳೇ ಬೇರೆ ರಾಜಕೀಯ ಸಂಬಂಧವೇ ಬೇರೆ. ನಾನು ನನ್ನ ರಾಜಕೀಯ ನಿಲುವಿನಲ್ಲಿ ಯಾವುದೇ ರಾಜೀ ಮಾಡಿಕೊಳ್ಳುವ ಪ್ರಶ್ನೇಯೇ ಇಲ್ಲ' ಎಂದೂ ಅವರು ಹೇಳಿದ್ದಾರೆ.
ದಾವಣಗೆರೆಯ ರೆಸಾರ್ಟ್ ಒಂದರಲ್ಲಿ ಬುಧವಾರ ಬೊಮ್ಮಾಯಿ ಹಾಗೂ ಶಾಮನೂರು ಶಿವಶಂಕರಪ್ಪ ಅವರು ಭೇಟಿಯಾಗಿ ರಹಸ್ಯ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಹೊಂದಾಣಿಕೆ ರಾಜಕಾರಣದ ಬಗೆಗಿನ ಚರ್ಚೆಗಳು ನಡೆಯುತ್ತಿರುವಾಗಲೇ ಈ ಬೆಳವಣಿಗೆ ನಡೆದಿದ್ದು ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಹೊಂದಾಣಿಕೆ ರಾಜಕಾರಣದ ಬಗ್ಗೆ ಸಿಟಿ ರವಿ ಹೇಳಿದ್ದೇನು?
ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿರುವ ಬಿಜೆಪಿ ನಾಯಕ ಸಿಟಿ ರವಿ ಅವರು ತಮ್ಮ ಪಕ್ಷದ ಹಿರಿಯ ಮುಖಂಡರ ವಿರುದ್ಧ ಹರಿಹಾಯ್ದಿದ್ದಾರೆ. ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಹೊಂದಾಣಿಕೆ ರಾಜಕಾರಣವೇ ಕಾರಣವೆಂದು ಸಿಟಿ ರವಿ ಆರೋಪಿಸಿದ್ದಾರೆ.
'ಕೆಲವು ನಾಯಕರ ಹೊಂದಾಣಿಕೆ ರಾಜಕಾರಣ ನಮಗೆ ಸಮಸ್ಯೆ ತಂದಿದೆ. ಹೊಂದಾಣಿಕೆ ರಾಜಕಾರಣ ಮಾಡದಿದ್ದರೆ ಅಧಿಕಾರ ಕಳೆದುಕೊಳ್ಳುತ್ತಿರಲಿಲ್ಲ' ಎಂದು ತಿಳಿಸಿದರು.

ಇಂತಹ 'ಹೊಂದಾಣಿಕೆ ರಾಜಕಾರಣ'ದಿಂದಾಗಿ ಬಿಜೆಪಿಯು ಹೀನಾಯವಾಗಿ ಸೋಲು ಅನುಭವಿಸಿತು. 'ನಾನು ಹೆಚ್ಚು ಹೇಳಲಾರೆ. ಆದರೆ, ಕೆಲವರ ಹೊಂದಾಣಿಕೆ ರಾಜಕಾರಣ ಪಕ್ಷಕ್ಕೆ ನಷ್ಟ ಉಂಟು ಮಾಡಿದೆ. ಅರ್ಕಾವತಿ ಪ್ರಕರಣದ ವರದಿ ಮಂಡಿಸಲು ಎಷ್ಟು ಬಾರಿ ಕೇಳಿದ್ದೆವು? ಅದರ ವಿರುದ್ಧ ಯಾವುದೇ ಕ್ರಮವನ್ನು ಕೈಗೊಳ್ಳಲಿಲ್ಲ. ಸೌರ ವಿದ್ಯುತ್ಗೆ ಸಂಬಂಧಿಸಿದ ಅವ್ಯವಹಾರಗಳ ವಿರುದ್ಧ ನಾವು ಕ್ರಮಕೈಗೊಂಡಿದ್ದರೆ (ಡಿ ಕೆ ಶಿವಕುಮಾರ್ ವಿರುದ್ಧ) ಈ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.
ರಾಜ್ಯ ಬಿಜೆಪಿಯ ಎರಡು ಪ್ರಬಲ ಬಣಗಳು ಪಕ್ಷದ ಸೋಲಿಗೆ ಪರಸ್ಪರ ಆರೋಪ ಮಾಡುತ್ತಿರುವ ಸಂದರ್ಭದಲ್ಲೇ ರವಿ ಅವರ ಈ ಹೇಳಿಕೆ ಬಂದಿದೆ. ಚುನಾವಣೆಯಲ್ಲಿ ಸೋತವರಲ್ಲಿ ಸಿಟಿ ರವಿ ಸಹ ಒಬ್ಬರು. ಬಿಎಸ್ ಯಡಿಯೂರಪ್ಪ ಪಾಳಯದಲ್ಲಿ ಗುರುತಿಸಿಕೊಂಡಿದ್ದ ಎಚ್ ಡಿ ತಮ್ಮಯ್ಯ ಅವರಿಂದ ರವಿ ಸೋಲು ಅನುಭವಿಸಿದ್ದಾರೆ. ಚುನಾವಣೆಗೂ ಮುನ್ನ ಎಚ್ ಡಿ ತಮ್ಮಯ್ಯ ಕಾಂಗ್ರೆಸ್ಗೆ ಸೇರ್ಪಡೆಗೊಂಡರು.

ಮೈಸೂರು ಸಂಸದ ಪ್ರತಾಪ ಸಿಂಹ ಹೇಳಿದ್ದೇನು?
ಕರ್ನಾಟಕದ ಬಿಜೆಪಿಯ ಕೆಲ ನಾಯಕರು ಸಿಎಂ ಸಿದ್ದರಾಮಯ್ಯ ಜೊತೆ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಗಂಭೀರ ಆರೋಪ ಮಾಡಿದ್ದಾರೆ.
ಬಿಜೆಪಿಯ ಕೆಲವು ಹಿರಿಯ ನಾಯಕರು ಸಿದ್ದರಾಮಯ್ಯ ವಿರುದ್ಧ ಮಾತನಾಡದೇ ಇರಬಹುದು, ಆದರೆ ಬಿಜೆಪಿ ಕಾರ್ಯಕರ್ತರು ಅಂತಹ ಹೊಂದಾಣಿಕೆ ರಾಜಕಾರಣ ಮಾಡುವುದಿಲ್ಲ. ನಾಯಕರು ಚುನಾವಣೆಯಲ್ಲಿ ಸೋತಿರಬಹುದು, ಆದರೆ ಕಾರ್ಯಕರ್ತರು ಹೋರಾಟ ಮುಂದುವರಿಸುತ್ತಾರೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಹೇಳುತ್ತಿರುವುದೇನು?
ಯಡಿಯೂರಪ್ಪ ಪಾಳಯ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ ಎಲ್ ಸಂತೋಷ್ ಪಾಳಯದ ನಡುವಿನ ಭಿನ್ನಾಭಿಪ್ರಾಯವೇ ಪಕ್ಷದ ಪರಿಸ್ಥಿತಿಗೆ ಕಾರಣವೆಂದು ಬಿಜೆಪಿ ನಾಯಕರಿಗೂ ತಿಳಿದಿದೆ. ಇದಲ್ಲದೆ, ಜನರು ಬಿಜೆಪಿ ಮತ್ತು ಅದರ ಭ್ರಷ್ಟ ಸರ್ಕಾರದಿಂದ ಬೇಸತ್ತಿದ್ದರು ಎಂದು ಕಾಂಗ್ರೆಸ್ ವಕ್ತಾರರು ಹೇಳಿದ್ದಾರೆ.
224 ಸದಸ್ಯ ಬಲದ ಅಸೆಂಬ್ಲಿಯಲ್ಲಿ ಬಿಜೆಪಿಯು 66 ಸ್ಥಾನಗಳಿಗೆ ಕುಸಿದಿದೆ.












Click it and Unblock the Notifications