ಮೌಲ್ವಿ ಜೊತೆ ವ್ಯವಹಾರದಲ್ಲಿ ಪಾಲುದಾರಿಕೆ ಹೊಂದಿದ್ದಾರ ಯತ್ನಾಳ್?
ಸದ್ಯ ರಾಜ್ಯ ರಾಜಕೀಯದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಭಾರಿ ಸದ್ದು ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ದಿನ ಒಂದಿಲ್ಲೊಂದು ಆರೋಪ ಮಾಡುತ್ತಲೇ ಇದ್ದಾರೆ. ಈಗ ಸಿಎಂ ಸಿದ್ದರಾಮಯ್ಯ ಜೊತೆ ವೇದಿಕೆ ಹಂಚಿಕೊಂಡಿದ್ದ ಮೌಲ್ವಿಗೆ ಐಸಿಸ್ ಉಗ್ರರ ನಂಟಿಗೆ ಎನ್ನುವ ಮೂಲಕ ಸಂಚಲನ ಮೂಡಿಸಿದ್ದರು.
ಆದರೆ, ಬಸನಗೌಡ ಪಾಟೀಲ್ ಯತ್ನಾಳ್ ಭಯೋತ್ಪಾದಕರ ನಂಟಿದೆ ಎಂದು ಆರೋಪ ಮಾಡಿರುವ ಜಮಾತ್ ಎ ಅಹಲೆ ಸುನ್ನತ್ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರೂ ಆದ ಮೌಲ್ವಿ ತನ್ವೀರ್ ಪೀರಾ ಹಾಶ್ಮಿ ಅವರ ಜೊತೆ ವ್ಯಾವಹಾರಿಕ ನಂಟು ಹೊಂದಿದ್ದಾರೆ ಎಂದು ವರದಿಯಾಗಿದೆ.

ಪ್ರಜಾವಾಣಿ ಪತ್ರಿಕೆಯಲ್ಲಿ ಈ ವರದಿ ಪ್ರಕಟವಾಗಿದ್ದು ಸದ್ಯ ವಿವಾದಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ವಿಜಯಪುರದ ಗಾಂಧಿಚೌಕದ ಬಳಿ ಇರುವ "ಟೂರಿಸ್ಟ್ ಹೋಟೆಲ್" ವ್ಯವಹಾರದಲ್ಲಿ ಇಬ್ಬರೂ ಪಾಲು ಹೊಂದಿದ್ದಾರೆ ಎಂದು ಹೇಳಲಾಗಿದೆ.
ಇದು ಮಾತ್ರವಲ್ಲದೆ, ನಗರದ ಹೊರವಲಯದಲ್ಲಿ ವಿಜಯಪುರ-ಕಲಬುರಗಿ ರಾಷ್ಟ್ರೀಯ ಹೆದ್ದಾರಿ ಬಳಿ ಯತ್ನಾಳ್ ಮತ್ತು ಮೌಲ್ವಿ ಅವರಿಗೆ ಸೇರಿಗೆ ಮನೆಗಳು, ವಾಣಿಜ್ಯ ಕಟ್ಟಡಗಳು ಅಕ್ಕಪಕ್ಕದಲ್ಲಿವೆ ಎಂದು ಹೇಳಲಾಗಿದೆ.
ತನ್ವಿರ್ ಹಶೀಮ್ ಪೀರಾ ಜೊತೆ ನನ್ನ ವ್ಯಾಪಾರ ಇರುವುದನ್ನು ಸಾಬೀತು ಪಡಿಸಲಿ.
— Basanagouda R Patil (Yatnal) (@BasanagoudaBJP) December 8, 2023
ಸುಖಾ ಸುಮ್ಮನೆ ಆರೋಪ ಮಾಡಬೇಡಿ. https://t.co/SZientt7OQ
ಯತ್ನಾಳ್ ಗಡೀಪಾರು ಮಾಡಲು ಒತ್ತಾಯ
ಗುರುವಾರ ಪತ್ರಿಕಾಗೋಷ್ಠಿ ನಡೆಸಿರುವ ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ ಗಣಿಹಾರ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತು ಮೌಲ್ವಿ ತನ್ವೀರ್ ಪೀರಾ ವ್ಯವಹಾರದಲ್ಲಿ ಪಾಲುದಾರರಾಗಿದ್ದು, ಅವರಿಗೆ ಮೌಲ್ವಿ ವಿರುದ್ಧ ಆರೋಪ ಮಾಡಲು ಯಾವ ನೈತಿಕತೆ ಇದೆ ಎಂದು ಪ್ರಶ್ನೆ ಮಾಡಿದ್ದಾರೆ.
"ಮೌಲ್ವಿಯವರಿಗೆ ಐಸಿಸ್ ಜೊತೆ ನಂಟಿದೆ ಎನ್ನುವ ವಿಚಾರ ಗೊತ್ತಿದ್ದರೆ ಯತ್ನಾಳ್ ಇಷ್ಟು ವರ್ಷ ಸುಮ್ಮನೆ ಇದ್ದಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ಮೌಲ್ವಿ ವಿರುದ್ಧ ತಾವು ಮಾಡಿರುವ ಆರೋಪವನ್ನು ಯತ್ನಾಳು ಸಾಬೀತು ಪಡಿಸಲಿ ಇಲ್ಲ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು. ಯತ್ನಾಳ್ ವಿರುದ್ಧ ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು, ಅವರನ್ನು ಗಡೀಪಾರು ಮಾಡಲಿ ಎಂದು ಒತ್ತಾಯಿಸಿದರು.
"ಯತ್ನಾಳ್ ಮತ್ತು ಮೌಲ್ವಿ ನಡುವೆ ಉತ್ತಮ ಸ್ನೇಹ ಇತ್ತು, ಇಬ್ಬರನ್ನೂ ನಮ್ಮ ಮನೆಯಲ್ಲೇ ಭೇಟಿ ಮಾಡಿಸಿದ್ದೇನೆ, ಒಟ್ಟಿಗೆ ಊಟ ಕೂಡ ಮಾಡಿದ್ದಾರೆ, ಹಲವು ವೇದಿಕೆಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ" ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಸಿ. ಮುಲ್ಲಾ ತಿಳಿಸಿದ್ದಾರೆ.
ಸಾಬೀತು ಮಾಡಿ ಎಂದ ಯತ್ನಾಳ್
ಈ ವರದಿಗೆ ತಮ್ಮ ಟ್ವಿಟರ್ ಹ್ಯಾಂಡಲ್ನಲ್ಲಿ ಪ್ರತಿಕ್ರಿಯೆ ನೀಡಿರುವ ಯತ್ನಾಳ್, ಸುಮ್ಮನೆ ಆರೋಪ ಮಾಡುವುದನ್ನು ಬಿಟ್ಟು, ತನ್ವೀರ್ ಹಶೀಮ್ ಪೀರಾ ಜೊತೆ ನನ್ನ ವ್ಯಾಪಾರ ಇರುವುದನ್ನು ಸಾಬೀತು ಮಾಡಿ ಎಂದು ಸವಾಲು ಹಾಕಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, "ನೀವು ನಿಮ್ಮ ಹೋಂವರ್ಕ್ ಅನ್ನು ಸರಿಯಾಗಿ ಮಾಡದಿದ್ದಾಗ ಈ ರೀತಿ ಆಗುತ್ತದೆ. ನನ್ನೊಂದಿಗೆ ಪಾಲುದಾರರಾಗಿರುವ ವ್ಯಕ್ತಿಯನ್ನು ಕರೆತರಲು ನಾನು ನಿಮಗೆ ಸವಾಲು ಹಾಕುತ್ತೇನೆ! ಮಾನನಷ್ಟ ಮೊಕದ್ದಮೆ ಹೂಡಲು ನಾನು ನನ್ನ ವಕೀಲರನ್ನು ಕೇಳಿದ್ದೇನೆ, ನೀವು ಕ್ರಮ ಎದುರಿಸಿ" ಎಂದು ಹೇಳಿದ್ದಾರೆ.












Click it and Unblock the Notifications