NWKRTC: ನಿವೃತ್ತಿಯಾದ ಸಾರಿಗೆ ಬಸ್ಗೆ ಗ್ರಾಮಸ್ಥರ ಭಾವುಕ ಬಿಳ್ಕೊಡುಗೆ!
ಹುಬ್ಬಳ್ಳಿ, ಸೆಪ್ಟಂಬರ್ 17: ದೇಶಕ್ಕೆ ಹೆದ್ದಾರಿಗಳು ಹೇಗೆ ಮುಖ್ಯವೋ ಅದೇ ರೀತಿ ಪ್ರತಿ ಗ್ರಾಮಗಳಿಗೆ ಸಾರಿಗೆ ಸೇವೆ ಅಷ್ಟೇ ಮುಖ್ಯವಾಗಿರುತ್ತದೆ. ಅಗತ್ಯ ವಸ್ತು ಖರೀದಿ, ಆಸ್ಪತ್ರೆ ಇನ್ನಿತರ ಕಾರಣಕ್ಕೆ ಪಟ್ಟಣ ಅವಲಂಬಿಸಿರುವ ಹಳ್ಳಿಗಳು ಸಂಖ್ಯೆ ಹೆಚ್ಚಿದೆ. ಇಂತಹ ಗ್ರಾಮಗಳಿಗೆ ಸೇವೆ ನೀಡುವ ಬಸ್ ಆ ಗ್ರಾಮಸ್ಥರಿಗೆ ಬಲು ಪ್ರಿಯವಾಗಿರುತ್ತದೆ. ಅಂತಹ ಅಪರೂಪದ ಬಸ್ವೊಂದು ಈ ಗ್ರಾಮಕ್ಕೆ ಸೇವೆ ನೀಡಿ ಇದೀಗ ನಿವೃತ್ತಿಯಾಗಿದೆ. ಇದಕ್ಕೆ ಗ್ರಾಮಸ್ಥರು ಭಾವುಕ ವಿದಾಯ ಹೇಳಿದ್ದಾರೆ.
ಒಂದೂವರೆ ದಶಕದ ಹಿಂದಿನಿಂದಲೂ ಈ ಗ್ರಾಮಕ್ಕೆ ಸಂಚಾರ ಸೇವೆ ನೀಡುತ್ತಿರುವ ಈ ಬಸ್ ನಿವೃತ್ತಿಯಾಗಿದ್ದಕ್ಕೆ ಹುಬ್ಬಳ್ಳಿಯ ಅಲ್ಲಾಪುರ ಗ್ರಾಮಸ್ಥರು ತಾವೇ ಸ್ವತಃ ಬಸ್ ಅನ್ನು ತೊಳೆದು ಅಲಂಕಾರ ಮಾಡಿದ್ದಾರೆ. ನಂತರ ವಿಶೇಷ ಪೂಜೆ ಮಾಡಿ ಬಿಳ್ಕೊಟ್ಟ ಅಪರೂಪದ ಘಟನೆ ನಡೆದಿದೆ. ಮಕ್ಕಳು, ಹಿರಿಯರು ಎಲ್ಲರು ನಿತ್ಯ ಓಡಾಡಿಸ್ ಬಸ್, ಅದರ ಸೇವೆಯನ್ನು ಗ್ರಾಮಸ್ಥರು ಸ್ಮರಿಸಿದ್ದಾರೆ. ಬಸ್ ಗೆ ಭಾವನಾತ್ಮಕ ವಿದಾಯ ಹೇಳಿದ್ದಾರೆ.

ಬಸ್ ಜೊತೆಗೆ ಗ್ರಾಮಸ್ಥರ ಉತ್ತಮ ನಂಟು
ಸಾರಿಗೆ ಇಲಾಖೆಗೆ ನಿಗಮದ ಆಯಾ ಘಟಕದ ಬಸ್ಗಳು ಗ್ರಾಮೀಣ ಪ್ರದೇಶ, ಪಟ್ಟಣ ಬರುತ್ತವೆ, ಹೋಗುತ್ತವೆ. ಆದರೆ ಕರ್ನಾಟಕ ವಾಯವ್ಯ ಸಾರಿಗೆ ಸಂಸ್ಥೆಗೆ (NWKRTC) ಸೇರಿದ ಬಸ್ವೊಂದು 'ಹುಬ್ಬಳ್ಳಿ-ಅಲ್ಲಾಪುರ' (Hubballi to Allapur Bus) ಗ್ರಾಮಕ್ಕೆ ಕಳೆದ 15-16 ವರ್ಷಗಳಿಂದ ನಿರಂತರ ಸೇವೆ ನೀಡಿದೆ. ಹೀಗಾಗಿಯೇ ಗ್ರಾಮಸ್ಥರಿಗೆ ಈ ಬಸ್ ಜೊತೆಗೆ ಭಾವನಾತ್ಮಕ ನಂಟು ಬೆಳೆದಿದೆ.
ಉದ್ಯೋಗದಲ್ಲಿ ವ್ಯಕ್ತಿಯೊಬ್ಬರು ನಿವೃತ್ತಿ ಆದಾಗ ಮಾಡುವ ಸನ್ಮಾನದ ರೀತಿಯಲ್ಲಿಯೇ ಈ ಬಸ್ಗೆ ಊರಿನ ಗ್ರಾಮಸ್ಥರು, ಹಿರಿಯರು ಪೂಜೆ ಮಾಡಿ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಮೂಲಕ ಒಂದು ಗ್ರಾಮಕ್ಕೆ ಬಸ್/ಸಾರಿಗೆ ಸೇವೆ ಎಷ್ಟು ಮುಖ್ಯವಾಗಿರುತ್ತದೆ ಎಂದು ಗ್ರಾಮಸ್ಥರು ಸಾರಿ ಸಾರಿ ಹೇಳಿದ್ದಾರೆ.
2008 ರಿಂದ ಹುಬ್ಬಳ್ಳಿ ಅಲ್ಲಾಪುರ ಬಸ್ ಸೇವೆ
ಸುಮಾರು 16 ವರ್ಷಗಳ ಹಿಂದೆ ಅಂದರೆ 2008 ರಿಂದ ಈ ಬಸ್ ಸೇವೆ ಆರಂಭವಾಯಿತು. ಹುಬ್ಬಳ್ಳಿಯಿಂದ ಅಲ್ಲಾಪುರ ಕೇವಲ 15 ಕಿಲೋ ಮೀಟರ್ ದೂರದಲ್ಲಿದೆ. ಈ ಮೊದಲು ಅಲ್ಲಾಪುರಕ್ಕೆ ಬೇರೆ ಬಸ್ ಬರುತ್ತಿತ್ತು. ಆದರೆ ಅದು ಕಾರಣಾಂತರದಿಂದ ಸ್ಥಗಿತಗೊಂಡಿತು. ಅದಾದ ಮೇಲೆ ಗ್ರಾಮಸ್ಥರ ಬೇಡಿಕೆ ಮೇರೆಗೆ ಈ ಬಸ್ ಅನ್ನು ಓಡಿಸಲು ಆರಂಭಿಸಲಾಯಿತು. ಅಂದು ನಿರಂತರವಾಗಿ ಸಮಯಕ್ಕೆ ಸರಿಯಾಗಿ ಈ ಬಸ್ ಸಾರಿಗೆ ಸೇವೆ ನೀಡಲು ಶುರು ಮಾಡಿಕ್ಕೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದರು. ಆಗಲೂ ಸಹ ವಿಶೇಷ ಪೂಜೆ ಮೂಲಕ ಬಸ್ ಅನ್ನು ಗ್ರಾಮಸ್ಥರು ಸ್ವಾಗತಿಸಿದ್ದರು.

2008ರಿಂದ ನಿವೃತ್ತಿವರೆಗೆ ಈ ಬಸ್ ಹುಬ್ಬಳ್ಳಿಯಿಂದ ಅಲ್ಲಾಪುರ, ಕಡಪಟ್ಟಿ ಹಾಗೂ ಹಳ್ಯಾಳ ಗ್ರಾಮಗಳಿಗೆ ಸಂಪರ್ಕ ಸಾಧನವಾಗಿದೆ. ಮೂರು ಗ್ರಾಮಗಳ ವಿದ್ಯಾರ್ಥಿಗಳು, ರೈತರು, ಕೂಲಿಕಾರರು, ನೌಕರರು, ವ್ಯಾಪಾರಸ್ಥರು ಇನ್ನಿತರರು ಹುಬ್ಬಳ್ಳಿ ಸೇರಿದಂತೆ ವಿವಿಧ ಕಡೆ ಹೋಗಲು ಇದೇ ಬಸ್ನ್ನು ಅವಲಂಬಿಸಿದ್ದರು.
ನಿತ್ಯ ರಾತ್ರಿ ಅಲ್ಲಾಪುರದಲ್ಲೇ ವಸ್ತಿ (ತಂಗುತ್ತಿದ್ದ) ಮಾಡುತ್ತಿದ್ದ ಈ ಬಸ್ ಬೆಳಗ್ಗೆ ಗ್ರಾಮಸ್ಥರನ್ನು ಕರೆದುಕೊಂಡು ಹುಬ್ಬಳ್ಳಿಗೆ ತೆರಳುತ್ತಿತ್ತು. ಈ ಬಸ್ನಲ್ಲಿ ಸಂಚರಿಸಿ ಕೋರ್ಸ್ ಕಲಿತವರ ಪೈಕಿ ಕೆಲವು ದೊಡ್ಡ ದೊಡ್ಡ ಹುದ್ದೆಗಳಿಗೆ ಕೆಲಸ ಮಾಡುತ್ತಿದ್ದಾರೆ.
ಗ್ರಾಮಸ್ಥರ ಕಿರೀಟದ ಬಸ್ ಇದೀಗ ನಿವೃತ್ತಿ
ಈ ಹುಬ್ಬಳ್ಳಿ-ಅಲ್ಲಾಪುರ ಬಸ್ ಗೆ ಮುಂದೆ ಮೇಲ್ಗಡೆಗೆ KSRTC ಸಂಕೇತ ಹಾಗೂ ಎರಡು ಬದಿ ನವಿಲುಗಳಿರುವ ಸಂಕೇತ ಹಾಕಲಾಗಿತ್ತು. ಇದು ಬಸ್ಗೆ ಕಿರೀಟ ಮಾದರಿಯಲ್ಲಿ ಗೋಚರಿಸುತ್ತಿತ್ತು. ಗ್ರಾಮಸ್ಥರು ಕಿರೀಟದ ಬಸ್ ಎಂದೇ ಕರೆಯುತ್ತಿದ್ದರು. ಈ ಸಂಕೇತಗಳನ್ನು ನೋಡಿಯೇ ಮೂರು ಗ್ರಾಮಗಳ ಅನಕ್ಷರಸ್ಥ ಪ್ರಯಾಣಿಕರಿಗೆ ಇದು ನಮ್ಮೂರಿನ ಬಸ್ ಎಂದು ಗುರುತಿಸುತ್ತಿದ್ದರು. ಕಳೆದ 15-16 ವರ್ಷಗಳಲ್ಲಿ ಈ ಬಸ್ ಸುಮಾರು 11.80 ಲಕ್ಷ ಕಿ.ಮೀ.ನಷ್ಟು ದೂರ ಕ್ರಮಿಸಿದೆ.
ಸದ್ಯ ಗ್ರಾಮಸ್ಥರು ಒಲ್ಲದ ಮನಸ್ಸಿನಿಂದಲೇ ಬಸ್ಗೆ ಬಿಳ್ಕೊಟ್ಟಿದ್ದಾರೆ. ಗ್ರಾಮದಲ್ಲಿ ಬಸ್ ತೊಳೆದು ಬಸ್ ಗೆ ತಳಿರು ತೋರಣ, ಹೂಗಳಿಂದ ಅಲಂಕರಿಸಿದ್ದಾರೆ. ಈ ಬಸ್ ಚಾಲಕ ಮತ್ತು ನಿರ್ವಾಹಕರನ್ನು ಸನ್ಮಾನಿಸಲಾಯಿತು.
ಕೇಸರಿಬಾತ್ ಪಲಾವ್ ಊಟದ ವ್ಯವಸ್ಥೆ
ಮಧ್ಯಾಹ್ನ 1 ಗಂಟೆಗೆ ಈ ಬಸ್ನ ಕರ್ತವ್ಯ ಆರಂಭವಾದರೆ ಮರುದಿನ ಮಧ್ಯಾಹ್ನ 1ಗಂಟೆಗೆ ಪೂರ್ಣಗೊಳ್ಳುತ್ತದೆ. ನಾನು ಇನ್ನೊಬ್ಬ ಚಾಲಕ ಇಬ್ಬರೇ ನಿರಂತರವಾಗಿ ಬಸ್ ಓಡಿಸಿದ್ದೇವೆ. ಅಲ್ಲಾಪುರ ಸಂಚಾರ ಆರಂಭಿಸಿದಾಗ ಬಸ್ ಹೊಸದಾಗಿತ್ತು. ನಗರ ಘಟಕ-2ರಿಂದ ಘಟಕ-1ಕ್ಕೆ ಬಂದ ನಾಲ್ಕು ಹೊಸ ಬಸ್ಗಳಲ್ಲಿ ಇದು ಒಂದು ಆಗಿದೆ ಎಂದು ಚಾಲಕರು ತಿಳಿಸಿದ್ದಾರೆ. ಬಿಳ್ಕೊಡುಗೆಯಲ್ಲಿ ಗ್ರಾಮಸ್ಥರು ಸೇರಿದ್ದರು. ಕಾರ್ಯಕ್ರಮದಲ್ಲಿ ಕೇಸರಿಬಾತ್, ಪಲಾವ್ ವ್ಯವಸ್ಥೆ ಸಹ ಮಾಡಲಾಗಿತ್ತು.












Click it and Unblock the Notifications