ಸಿಎಂ ಸಿದ್ದುಗೆ ಥ್ಯಾಂಕ್ಸ್ ಹೇಳಿದ ವಾಟಾಳ್ ನಾಗರಾಜ್
ಬೆಂಗಳೂರು, ಸೆ.30: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಪಗ್ರಸ್ಥ ಚಾಮರಾಜನಗರ ಜಿಲ್ಲೆಗೆ ಭೇಟಿ ಕೊಡುತ್ತಾರೋ, ಇಲ್ವೋ ಅದು ಅವರ ರಾಜಕೀಯ ಮುತ್ಸದ್ದಿತನಕ್ಕೆ ಸಂಬಂಧಿಸಿದ್ದು. ಆದರೆ ಅಕ್ಟೋಬರ್ 7ರಂದು ಖಂಡಿತ ಭೇಟಿ ನೀಡುವುದಾಗಿ ಹೇಳಿದ್ದು, ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಇದನ್ನು ಕೇಳಿ ಆನಂದತುಂದಲಿತರಾಗಿರುವ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಇಂದು ಬೆಳಿಗ್ಗೆ ಸಿಎಂ ನಿವಾಸಕ್ಕೆ ತೆರಳಿ ಒಂದು ಥ್ಯಾಂಕ್ಸ್ ಹೇಳಿಬಂದಿದ್ದಾರೆ.

'ನಾಡಿನ ಮುಖ್ಯಮಂತ್ರಿಯಾಗಿರುವವರು ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿದರೆ ಅವರು ತಮ್ಮ ಅಧಿಕಾರ ಕಳೆದುಕೊಳ್ಳುತ್ತಾರೆ' ಎಂಬ ಶಾಪ ಚಾಮರಾಜನಗರಕ್ಕೆ ಅಂಟಿಕೊಂಡಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮರಾಜನಗರಕ್ಕೆ ಭೇಟಿ ನೀಡುತ್ತಿರುವ ಕ್ರಮವನ್ನು ಸ್ವಾಗತಿಸಿದ ವಾಟಾಳ್ ನಾಗರಾಜ್, ಇಂದು ಸಿಎಂ ಸಿದ್ದುರನ್ನು ಆತ್ಮೀಯವಾಗಿ ಅಭಿನಂದಿಸಿದ್ದಾರೆ.
'ಮೌಢ್ಯಗಳನ್ನು ಬದಿಗೊತ್ತಿ, ಕಂದಾಚಾರಗಳನ್ನು ಮೂಲೆಗೆ ತಳ್ಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡುವ ದಿಟ್ಟ ನಿರ್ಧಾರ ಕೈಗೊಂಡಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಹಿಂದುಳಿದ ಜಿಲ್ಲೆ ಚಾಮರಾಜನಗರದಲ್ಲಿ ಸಚಿವ ಸಂಪುಟ ಸಭೆ ನಡೆಸಬೇಕೆಂದೂ ಒತ್ತಾಯ ಮಾಡಲಾಗಿದೆ' ಎಂದು ಅವರು ಹೇಳಿದರು.
'ಹಲವು ವರ್ಷಗಳಿಂದ ಹಿಂದುಳಿದ ಜಿಲ್ಲೆ ಚಾಮರಾಜನಗರವನ್ನು ಮೌಢ್ಯಗಳಿಂದ ಶಾಪಗ್ರಸ್ಥವನ್ನಾಗಿ ಮಾಡಲಾಗಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ಸೋಮವಾರ ಇಲ್ಲಿಗೆ ಭೇಟಿ ನೀಡುವ ಮೂಲಕ ಶಾಪ ವಿಮೋಚನೆ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಆದ್ದರಿಂದ ಅವರಿಗೆ ಜಿಲ್ಲೆಯ ಜನತೆಯ ಪರವಾಗಿ ಅಭಿನಂದಿಸುತ್ತಿರುವುದಾಗಿ' ವಾಟಾಳ್ ಹೇಳಿದ್ದಾರೆ.
ಚಾಮರಾಜನಗರ ಜಿಲ್ಲೆಗೆ 2.5 ಸಾವಿರ ಕೋಟಿ ರೂ. ಗಳ ವಿಶೇಷ ಅಭಿವೃದ್ಧಿ ಪ್ಯಾಕೇಜ್ ಘೋಷಿಸಬೇಕೆಂದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗೆ ಮನವಿ ಮಾಡಿದರು. ಕಾವೇರಿ ಎರಡನೇ ಹಂತದ ನೀರಾವರಿ ಯೋಜನೆ, ಕಬಿನಿ ನೀರಾವರಿ ಯೋಜನೆ, ರೈಲ್ವೆ ಕಾಮಗಾರಿ, ರಸ್ತೆ ಕಾಮಗಾರಿ, ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನೆರವೇರಿಸುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಭೇಟಿಯ ನಂತರ ಸುದ್ದಿಗಾರರಿಗೆ ಅವರು ತಿಳಿಸಿದರು.
ಅಂದಹಾಗೆ, ರಾಜ್ಯ ಸರ್ಕಾರದ ನೂತನವಾಗಿ ಜಾರಿಗೆ ತರಲಿರುವ 40 ವರ್ಷ ದಾಟಿದ ಮಹಿಳೆಯರಿಗೆ ಮಾಸಾಶನ ನೀಡುವ 'ಮನಸ್ವಿನಿ' ಯೋಜನೆಗೆ ಸಿದ್ದರಾಮಯ್ಯ ಚಾಮರಾಜನಗರದಲ್ಲಿ ಚಾಲನೆ ನೀಡಲಿದ್ದಾರೆ.












Click it and Unblock the Notifications