Tomato Price: ಟೊಮೆಟೊ ಬೆಲೆ 25 ರೂಪಾಯಿಗೆ ಕುಸಿತ, ಕಾರಣ ತಿಳಿಯಿರಿ
ಟೊಮೆಟೊ ಬೆಲೆ ಭಾರಿ ಏರಿಕೆ ಕಂಡಿದ್ದ ಹಿನ್ನೆಲೆ ಖುಷಿ ಖುಷಿಯಾಗಿ ಮಾರುಕಟ್ಟೆಗೆ ತಮ್ಮ ಬೆಳೆ ತಂದ ರೈತರಿಗೆ ಆಘಾತವಾಗಿದೆ. ಲಕ್ಷಾಂತರ ರೂಪಾಯಿ ಲಾಭ ತಂದುಕೊಟ್ಟ, ಇದೇ ಟೊಮೆಟೊ ಈಗ ನೆಲಕಚ್ಚಿದೆ. ಹತ್ತಿರ ಹತ್ತಿರ 200 ರೂಪಾಯಿ ಪ್ರತಿ ಕೆಜಿಯಂತೆ ಮಾರಾಟ ಮಾಡಿದ್ದ ಟೊಮೆಟೊ, ಈಗ ಕೇವಲ 25 ರೂಪಾಯಿಗೆ ಬಂತು ನಿಂತಿದೆ. ಹಾಗಾದರೆ ಹೀಗೆ ದಿಢೀರ್ ಟೊಮೆಟೊ ಬೆಲೆ ಕುಸಿಯಲು ಕಾರಣ ಏನು? ಬನ್ನಿ ತಿಳಿಯೋಣ.
ಭಾರತದ ಕೃಷಿ ಮಾರುಕಟ್ಟೆ ಅವೈಜ್ಞಾನಿಕ ಎಂಬ ಆರೋಪ ಇದೆ. ಅದರಲ್ಲೂ ಕೃಷಿಕರಿಗೆ ನಮ್ಮ ದೇಶದ ಮಾರುಕಟ್ಟೆಗಳು ನಷ್ಟದ ತವರು. ಬೆಳೆ ಭಾರಿ ಪ್ರಮಾಣದಲ್ಲಿ ಬಂದರೆ ಬೆಲೆ ಬಿದ್ದು ಹೋಗುತ್ತದೆ, ಬೆಳೆ ಬಾರದೆ ಸಂಕಷ್ಟ ಎದುರಾದರೆ ಬೆಲೆ ಆಕಾಶ ಮುಟ್ಟುತ್ತದೆ. ಈ ರೀತಿ ಬೆಳೆ ಭಾರಿ ಪ್ರಮಾಣದಲ್ಲಿ ಬಂದಾಗ ಸಂಗ್ರಹ ಮಾಡಲು ಸೂಕ್ತ ವ್ಯವಸ್ಥೆಯೆ ನಮ್ಮಲ್ಲಿ ಇಲ್ಲ. ಹೀಗಾಗಿ ಬೆಲೆ ಏರುಪೇರು ಗ್ರಾಹಕನಾದ ಜನ ಸಾಮಾನ್ಯರಿಗೂ & ಕಷ್ಟಪಟ್ಟು ಬೆಳೆ ಬೆಳೆದ ರೈತನಿಗೂ ಭಾರಿ ಸಂಕಷ್ಟ ತಂದೊಡ್ಡುತ್ತಿದೆ. ಹಾಗಾದರೆ ಈಗ ಟೊಮೆಟೊ ದಿಢೀರ್ ಕುಸಿಯಲು ಕಾರಣವೇನು? ಮುಂದೆ ಓದಿ.

ಮಾರುಕಟ್ಟೆಗೆ ಲಾರಿ ಲಾರಿ ಟೊಮೆಟೊ!
ಇಷ್ಟುದಿನ ಹವಾಮಾನ ಏರುಪೇರು ಹಾಗೂ ಬರದ ಕಾರಣಕ್ಕೆ ಟೊಮೆಟೊ ಬೆಳೆ ಕೊರತೆ ಉಂಟಾಗಿತ್ತು. ಆದರೆ ಕಳೆದ ಕೆಲವು ತಿಂಗಳಿಂದ ಉತ್ತಮ ಮಳೆ ಬಿದ್ದಿತ್ತು. ಹೀಗಾಗಿ ಹೊಸ ಟೊಮೆಟೊ ಮಾರುಕಟ್ಟೆಗೆ ಬಂದಿದೆ. ಹಾಗೇ ಹೊರ ದೇಶದಿಂದಲೂ ಟೊಮೆಟೊ ಆಮದು ಸೇರಿದಂತೆ ಕೇಂದ್ರ ಸರ್ಕಾರ ಟೊಮೆಟೊ ಬೆಲೆ ನಿಯಂತ್ರಣಕ್ಕೆ ಕ್ರಮ ಕೈಗೊಂಡಿತ್ತು. ಇದೇ ಕಾರಣದಿಂದ ಟೊಮೆಟೊ ಬೆಲೆ ಕುಸಿದಿರಬಹುದು ಎನ್ನಲಾಗಿದೆ. ಬೆಲೆ ಕುಸಿತಕ್ಕೆ ಕಾರಣವು ಸ್ಪಷ್ಟವಾಗದೇ ಇದ್ದರೂ, ಟೊಮೆಟೊ ಬೆಳೆದ ರೈತರು ತಲೆಮೇಲೆ ಕೈಹೊತ್ತು ಕೂತಿದ್ದಾರೆ.
ಹಾಗೆ ಮತ್ತೊಂದಿಷ್ಟು ಮೂಲಗಳ ಪ್ರಕಾರ ಮಾರುಕಟ್ಟೆಗೆ ಟೊಮೆಟೊ ಪೂರೈಕೆಯಲ್ಲಿ ಕಳೆದ ತಿಂಗಳಿಗೆ ಹೋಲಿಕೆ ಮಾಡಿದರೆ 3 ಪಟ್ಟು ಹೆಚ್ಚಾಗಿದೆ ಎನ್ನಲಾಗಿದೆ. ಪೂರೈಕೆ ಗಣನೀಯವಾಗಿ ಹೆಚ್ಚಾದ ನಂತರ ಬೆಲೆ ಕುಸಿತ ಕಾಣಲು ಆರಂಭಿಸಿದೆ. ಟೊಮೆಟೊ ಬೆಲೆ 25 ರೂ. ಆಸುಪಾಸು ಬಂದು ನಿಂತಿದೆ. ಇದಿಷ್ಟೇ ಅಲ್ಲ ಮುಂದಿನ ದಿನಗಳಲ್ಲಿ ಟೊಮೆಟೊ ಬೆಲೆ ಇನ್ನಷ್ಟು ಕುಸಿತ ಕಾಣುವ ಭೀತಿ ಇದೆ. ಹೀಗಾಗಿ ಟೊಮೆಟೊ ಬೆಳೆದ ರೈತರಿಗೆ ಆತಂಕ ಶುರುವಾಗಿದೆ. ಹೀಗೆ ಬೆಲೆ ಕುಸಿಯುತ್ತಿದ್ದರೆ ಪರಿಸ್ಥಿತಿ ಹೇಗೆ ಎಂಬ ಚಿಂತೆ ಶುರುವಾಗಿದೆ.

ಟೊಮೆಟೊಗೆ ಹಾಕಿದ ಬಂಡವಾಳ ಬರುತ್ತಾ?
ಜೂನ್ & ಜುಲೈ ತಿಂಗಳಲ್ಲಿ ಟೊಮೆಟೊ ಬೆಲೆ ದೇಶಾದ್ಯಂತ ಮುಗಿಲು ಮುಟ್ಟಿತ್ತು. ಟೊಮೆಟೊ ಬೆಳೆದ ರೈತರು ಕೈತುಂಬಾ ಕಾಸು ನೋಡಿದ್ದರು. ಆದರೆ ಆಗಸ್ಟ್ ಆರಂಭದಲ್ಲಿ ಮತ್ತೆ ಕುಸಿಯಲು ಆರಂಭಿಸಿದ್ದ ಟೊಮೆಟೊ, ಈಗ ಪಾತಾಳ ಸೇರಿದೆ. ಲಕ್ಷಾಂತರ ರೂಪಾಯಿ ಲಾಭ ನೋಡಿದ್ದ ರೈತರು ಈಗ ತಾವು ಹಾಕಿದ ಬಂಡವಾಳ ಬಂದರೆ ಸಾಕಪ್ಪ ದೇವರೆ ಅಂತಿದ್ದಾರೆ. ಮಳೆ ಕೊರತೆ ಹಾಗೂ ಟೊಮೆಟೊ ಬೆಳೆ ಮಾರುಕಟ್ಟೆಗೆ ಬರುವುದು ತಡವಾಗಿದ್ದ ಹಿನ್ನೆಲೆ ಟೊಮೆಟೊ ರೇಟ್ ಹೆಚ್ಚಾಗಿತ್ತು.
ಬೆಲೆ ಬಂದಾಗ ಬೆಳೆ ಬರಲ್ಲ ಬೆಳೆ ಬಂದ್ರೆ ರೈತರಿಗೆ ಬೆಲೆಯೇ ಸಿಗಲ್ಲ. ಈ ಪರಿಸ್ಥಿತಿ ಕಳೆದ ಹಲವು ದಶಕದಿಂದಲೂ ಮುಂದುವರಿದಿದೆ. ಆದರೆ ಇದಕ್ಕೆ ಸರಿಯಾದ ಕ್ರಮ ಮಾತ್ರ ಜರುಗಿಸಲಾಗಿಲ್ಲ. ರೈತರ ಬೆಳೆಗಳಿಗೆ & ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಸಿಗ್ತಿಲ್ಲ ಎಂಬುದು ರೈತರ ಆರೋಪ. ಮುಂದಿನ ದಿನಗಳಲ್ಲಿ ಈರುಳ್ಳಿ ಬೆಲೆ ಕೂಡ ಟೊಮೆಟೊ ರೀತಿ ಏರಿಕೆಯಾಗುವ ಭೀತಿಯು ಆವರಿಸಿದ್ದು, ಈಗಾಗಲೇ ಕೇಂದ್ರ ಸರ್ಕಾರ ಬೆಲೆ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದೆ. ಆದ್ರೆ ಟೊಮೆಟೊ ಬೆಲೆ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿರುವುದು ರೈತರ ಆತಂಕ ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿ ಎಂದು ರೈತರು ಆಗ್ರಹಿಸಿದ್ದಾರೆ.












Click it and Unblock the Notifications