ರಾಜ್ಯದಲ್ಲಿ ಹೆಚ್ಚಾಯ್ತು ಹೆಣ್ಣು ಭ್ರೂಣ ಹತ್ಯೆ: ಸದನದಲ್ಲಿ ಕಣ್ಣೀರಿಟ್ಟ ಊಮಾಶ್ರೀ
ಬೆಳಗಾವಿ,ಡಿಸೆಂಬರ್ 12: ರಾಜ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ನಿರಾತಂಕವಾಗಿ ನಡೆಯುತ್ತಿದೆ. ಮಚ್ಚು ಇನ್ನೊಂದು ಬೇಕಿಲ್ಲ, ಕೇವಲ ಯಂತ್ರದ ಮೂಲಕ ಭ್ರೂಣ ತೆಗೆದು ಹತ್ಯೆ ಮಾಡಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಉಮಾಶ್ರೀ ಅವರು ಸದನದಲ್ಲಿ ಹೆಣ್ಣು ಭ್ರೂಣ ಹತ್ಯೆ ವಿಚಾರವಾಗಿ ಗಮನ ಸೆಳೆದರು.
ಈ ವೇಳೆ ಸದನದಲ್ಲಿ ಮಾತನಾಡಿದ ಊಮಾಶ್ರೀ, ಹೆಣ್ಣು ಇಲ್ಲದೆ ವರ್ತಮಾನ, ಭೂತ, ಭವಿಷ್ಯ ಇಲ್ಲ. ಪರೀಕ್ಷೆ ಮಾಡಿ ಹೆಣ್ಣು ಭ್ರೂಣವನ್ನ ತೆಗೆದಾಗ ಇನ್ನೂ ಹೃದಯ ಮಿಡಿಯುತ್ತಲೇ ಇರುತ್ತೆ. ಆದರೆ, ಅದನ್ನ ತೆಗೆದುಕೊಂಡು ಹೋಗಿ ಕಾವೇರಿ ಒಡಲಿಗೆ ಸೇರಿಸ್ತಾರೆ ಎಂದು ಸದನದಲ್ಲಿ ಕಣ್ಣೀರಿಟ್ಟರು. ಇದರ ತಡೆಗೆ ಕಠಿಣ ಕಾನೂನು ಇಲ್ಲ, ಹಾಗಾಗಿ ಇದು ನಡೆಯುತ್ತಿದೆ ಎಂದು ಊಮಾಶ್ರೀ ಪ್ರಸ್ತಾಪಿಸಿದರು.

ಭ್ರೂಣಹತ್ಯೆ ಪ್ರಕರಣ ತಡೆಗೆ ವಿಶೇಷ ನೀತಿ ಜಾರಿಗೆ ಚಿಂತನೆ
ರಾಜ್ಯದಲ್ಲಿ ನಡೆಯುತ್ತಿವೆ ಎನ್ನಲಾದ ಕಾನೂನು ಬಾಹೀರ ಭ್ರೂಣ ಪರೀಕ್ಷೆ ಮತ್ತು ಭ್ರೂಣ ಹತ್ಯೆ ಪ್ರಕರಣಗಳನ್ನು ಹತ್ತಿಕ್ಕುವ ನಿಟ್ಟಿನಲ್ಲಿ ವಿಶೇಷವಾದ ನೀತಿಯೊಂದನ್ನು ಜಾರಿ ಮಾಡಲು ಸರ್ಕಾರದಿಂದ ಚಿಂತನೆ ನಡೆದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಹೇಳಿದರು.
ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ, ಭಾರತಿ ಶೆಟ್ಟಿ, ಶರವಣ ಟಿ.ಎ., ಬಿ.ಎಂ.ಫಾರೂಖ್, ಸಿ.ಎನ್.ಮಂಜೇಗೌಡ ಅವರು ವಿಧಾನ ಪರಿಷತನಲ್ಲಿ ಗಮನ ಸೆಳೆಯುವ ಸೂಚನೆಯಡಿ ಕೇಳಿದ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಕಾನೂನು ಬಾಹೀರ ಭ್ರೂಣ ಪರೀಕ್ಷೆ ಮತ್ತು ಭ್ರೂಣ ಹತ್ಯೆ ಪ್ರಕರಣಗಳನ್ನು ಹೇಗೆ ಬೇಧಿಸಬಹುದು ಎಂಬುದರ ಬಗ್ಗೆ ಆರೋಗ್ಯ ಇಲಾಖೆಯು ಎಚ್ಚೆತ್ತುಕೊಂಡು ಗಂಭೀರ ಚಿಂತನೆ ನಡೆಸಿದೆ. ಈ ಬಗ್ಗೆ ಅಂಕಿಸAಖ್ಯೆಗಳನ್ನು ಸಂಗ್ರಹಿಸಿ, ಗುಪ್ತಚರವಾಗಿ ಮಾಹಿತಿ ಪಡೆದು ಇಲಾಖೆಯ ಕಾರ್ಯಾಚರಣೆಯನ್ನು ಬಲಗೊಳಿಸಲಾಗುವುದು ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಪಿಸಿಪಿಎನ್ಡಿಸಿ ಸೆಲ್ಗಳು ಕಾಲಕಾಲಕ್ಕೆ ಸಭೆ ನಡೆಸಿ ಜಿಲ್ಲಾ ಹಂತದಲ್ಲಿ ಕಾನೂನು ಬಾಹೀರ ಭ್ರೂಣ ಪರೀಕ್ಷೆ ಮತ್ತು ಭ್ರೂಣ ಹತ್ಯೆ ಪ್ರಕರಣ ತಡೆಗೆ ಕಾರ್ಯಪ್ರವೃತ್ತವಾಗಿವೆ. ಸಕ್ರಿಯವಾಗಿ ಇನ್ನಷ್ಟು ಕಾರ್ಯಶೀಲೆತೆಯಿಂದ ಕಾರ್ಯಪ್ರವೃತ್ತವಾಗಲು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿನ ಪಿಸಿಪಿಎನ್ಡಿಟಿ ಸೆಲ್ಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗುವುದು ಎಂದು ಸಚಿವರು ತಿಳಿಸಿದರು.
ಹೆಣ್ಣು ಮಗುವಿನ ಬಗ್ಗೆ ತಾತ್ಸಾರ ಮನೋಭಾವ ಸಲ್ಲದು. ಹೆಣ್ಣು ಮಗು ಕುಟುಂಬಕ್ಕೆ ಸಮಾಜಕ್ಕೆ ಭಾರ ಅನ್ನುವ ಮನಸ್ಥಿತಿಯಿಂದಲೇ ಕಾನೂನು ಬಾಹೀರ ಭ್ರೂಣ ಪರೀಕ್ಷೆ ಮತ್ತು ಭ್ರೂಣ ಹತ್ಯೆ ಪ್ರಕರಣಗಳು ಕಂಡು ಬರುತ್ತಿವೆ. ಹೀಗಾಗಿ ಜನರಲ್ಲಿ ಈ ಬಗ್ಗೆ ಅರಿವು ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ಕಾನೂನು ಉಲ್ಲಂಘಿಸಿದರೆ ಜೈಲು ಸೇರಬೇಕಾಗುತ್ತದೆ ಎಂಬುದಾಗಿ ತಪ್ಪಿತಸ್ಥರಲ್ಲಿ ಭಯ ಹುಟ್ಟಲು ಬಿಗಿಯಾದ ಕಾನೂನು ಕ್ರಮಗಳನ್ನು ರೂಪಿಸಲು ಮತ್ತು ಇಲಾಖೆಯ ಕಾರ್ಯಾಚರಣೆಯನ್ನು ಬಲಗೊಳಿಸುವ ಎಲ್ಲಾ ಕ್ರಮಗಳನ್ನು ಏಕಕಾಲಕ್ಕೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದರು.
ಜಿಲ್ಲೆಗಳಲ್ಲಿರುವಂತೆ ರಾಜ್ಯಮಟ್ಟದಲ್ಲಿನ ಪಿಸಿಪಿಎನ್ಡಿಟಿ ಸೆಲ್ನ್ನು ಸಹ ಇನ್ನಷ್ಟು ಸಕ್ರಿಯಗೊಳಿಸಲಾಗುವುದು. ಕಾನೂನು ಬಾಹೀರ ಭ್ರೂಣ ಪರೀಕ್ಷೆ ಮತ್ತು ಭ್ರೂಣ ಹತ್ಯೆ ಪ್ರಕರಣ ತಡೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ವಹಿಸಬೇಕು ಎಂದು ಈಗಾಗಲೇ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಉನ್ನತ ಶಿಕ್ಷಣ ಇಲಾಖೆಯ ಸಹಕಾರ ಪಡೆದು ಶಾಲಾ ಕಾಲೇಜುಗಳಲ್ಲಿ ಈ ಬಗ್ಗೆ ವ್ಯಾಪಕವಾಗಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲು ಕ್ರಮ ವಹಿಸಲಾಗುವುದು. ಪೊಲೀಸ್ ಇಲಾಖೆಯ ಸಹಕಾರ ಪಡೆದು ಕಾನೂನು ಬಾಹೀರ ಭ್ರೂಣ ಪರೀಕ್ಷೆ ಮತ್ತು ಭ್ರೂಣ ಹತ್ಯೆ ಪ್ರಕರಣಗಳನ್ನು ಹತ್ತಿಕ್ಕಲಾಗುವುದು ಎಂದು ಸಚಿವರು ತಿಳಿಸಿದರು












Click it and Unblock the Notifications