ಬಿಜೆಪಿ ಸಪ್ತಗ್ರಹ ನಿವಾರಣೆಗೆ ಬಿಎಸ್ವೈ ಪೂಜೆ!
ಬೆಂಗಳೂರು, ಜ. 28 : ಕಳೆದ ನಾಲ್ಕು ದಿನಗಳಿಂದ ವಿಧಾನಸೌಧದ ಕಡೆ ತಲೆ ಹಾಕದ ಮಾಜಿ ಸಿಎಂ ಯಡಿಯೂರಪ್ಪ ಅವರು ಮಂಗಳವಾರ ವಿಧಾನಸಭೆ ಕಲಾಪಕ್ಕೆ ಆಗಮಿಸಿದ್ದರು. ಇಷ್ಟು ದಿನ ಯಡಿಯೂರಪ್ಪ ಎಲ್ಲಿದ್ದರು ಎನ್ನುವುದು ಎಲ್ಲರ ಕುತೂಹಲವಾಗಿತ್ತು. ಆ ಕುತೂಹಲಕಾರಿ ರಹಸ್ಯವನ್ನು ನಾವು ನಿಮ್ಮ ಮುಂದೆ ಬಿಚ್ಚಿಡುತ್ತಿದ್ದೇವೆ.
ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಎರಡು ದೇವರ ಮೇಲೆ ತುಂಬಾ ಪ್ರೀತಿ. ಒಂದು ವೈಷ್ಣೋದೇವಿ, ಇನ್ನೊಂದು ಕೇರಳದ ರಾಜರಾಜೇಶ್ವರ. ಸಂಕಟ ಬಂದಾಗ ಯಡಿಯೂರಪ್ಪಗೆ ಇವರಿಬ್ಬರಲ್ಲಿ ಒಬ್ಬರು ನೆನಪಾಗುತ್ತಾರೆ. ಆದರೆ, ನಿನ್ನೆ ಯಡಿಯೂರಪ್ಪನವರು ತಮ್ಮ ಇಷ್ಟ ದೇವರ ಪೂಜೆಗಾಗಿ ಕೇರಳದ ಕಣ್ಣೂರು ಜಿಲ್ಲೆಗೆ ತೆರಳಿದ್ದರು. [ಬಿಎಸ್ವೈ ಭೇಟಿ ನೀಡಿದ ದೇವಸ್ಥಾನಗಳ ಪಟ್ಟಿ]

ಕಣ್ಣೂರಿನ ತಳಿಪರಂಬದಲ್ಲಿರುವ ರಾಜರಾಜೇಶ್ವರನಿಗೆ ಪೂಜೆಯನ್ನೂ ಸಲ್ಲಿಸಿದರು. ಬೆಳಗ್ಗೆ 11 ಗಂಟೆಗೆ ತೆರಳಿದ್ದ ಯಡಿಯೂರಪ್ಪ ಸುಮಾರು ಅರ್ಧ ಗಂಟೆ ಕಾಲ ದೇವಸ್ಥಾನದಲ್ಲಿದ್ದರು. ತಮ್ಮ ಇಷ್ಟ ದೈವ ಈಶ್ವರನಿಗೆ ಪೂಜೆಯನ್ನೂ ಸಲ್ಲಿಸಿದರು. ಬಳಿಕ ರಸ್ತೆ ಮಾರ್ಗವಾಗಿ ಅವರು ನೇರವಾಗಿ ಮಂಗಳೂರಿಗೆ ಆಗಮಿಸಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿ ಬೆಂಗಳೂರಿಗೆ ವಾಪಸಾದರು.
ಯಡಿಯೂರಪ್ಪ ಅವರು ಕೇರಳಕ್ಕೆ ಹೋಗಿ ಮಾಡಿದ್ದೇನು ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಹಾಗಾಗೇ ನಮ್ಮ ವರದಿಗಾರರು ಇಂದು ಈ ಪ್ರಶ್ನೆಯನ್ನು ತಲೆಯಲ್ಲಿಟ್ಟುಕೊಂಡೇ ವಿಧಾನಸೌಧಕ್ಕೆ ಹೋಗಿದ್ದರು. ವಿಧಾನಸೌಧದ ಮೊಗಸಾಲೆಯಲ್ಲಿ ನಮ್ಮ ವರದಿಗಾರರಿಗೆ ಯಡಿಯೂರಪ್ಪ ಅವರ ಆಪ್ತರೊಬ್ಬರು ಸಿಕ್ಕಿದ್ದರು. [ರಾಜರಾಜೇಶ್ವರಗೆ ಅಡ್ಡಬಿದ್ದ ಯಡಿಯೂರಪ್ಪ]
ನಮ್ಮ ವರದಿಗಾರ ಏನ್ಸಾರ್, ಕೇರಳದಲ್ಲಿ ಸಾಹೇಬ್ರು ಏನು ಮಾಡಿದ್ರು ಅಂತ ಕೇಳಿದ್ರು. ಅದಕ್ಕೆ ಅವರು, ಬಿಜೆಪಿಯಲ್ಲಿ ಸುಮಾರು ಗ್ರಹಗಳಿವೆ. ಅದರಲ್ಲೂ ಬಿಜೆಪಿಯಲ್ಲಿರುವ ಸಪ್ತಗ್ರಹಗಳ ನಿವಾರಣೆಗೆಂದೇ ಅವರು ಕೇರಳಕ್ಕೆ ಹೋಗಿದ್ದರು ಅನ್ನೋದಾ? ಆದ್ರೆ ಆ ಸಪ್ತಗ್ರಹಗಳು ಯಾವುವು, ಅದು ಬಿಜೆಪಿಯ ರಾಜ್ಯ ನಾಯಕರನ್ನು ಉದ್ದೇಶಿಸಿ ಹೇಳಿದ್ದಾ ಎಂಬುದಕ್ಕೆ ಉತ್ತರವೇ ಇಲ್ಲ.
ಆದರೆ ಯಡಿಯೂರಪ್ಪ ಅವರು ಶೋಭಾ ಕರಂದ್ಲಾಜೆ, ಭಾರತಿ ಶೆಟ್ಟಿ ಅವರ ಜೊತೆಗೆ ಹೋಗಿದ್ದೂ ಹೌದು. ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದೂ ಹೌದು. ಆದರೆ ಪೂಜೆ ಯಾವ ಉದ್ದೇಶಕ್ಕೆ ಮಾಡಿದರು? ಸಪ್ತಗ್ರಹಗಳ ನಿವಾರಣೆಗೆಂದೇ ಪೂಜೆ ನಡೀತಾ ಅನ್ನೋ ಸಂಶಯಕ್ಕೆ ಮಾತ್ರ ಇನ್ನೂ ಉತ್ತರ ಸಿಕ್ಕಿಲ್ಲ! ಏನೇ ಆಗಲಿ, ದೇವರ ಸ್ವಂತ ದೇಶಕ್ಕೆ ತೀರ್ಥಯಾತ್ರೆ ಮಾಡಿಬಂದ ಯಡಿಯೂರಪ್ಪ ಮತ್ತು ಸಂಗಡಿಗರಿಗೆ ರಾಜರಾಜೇಶ್ವರ ಮತ್ತು ಕುಕ್ಕೆ ಸುಬ್ರಮಣ್ಯನ ಅನುಗ್ರಹ ಸದಾ ಇರ್ಲಿ.












Click it and Unblock the Notifications