Bengaluru Second Airport: ಬೆಂಗಳೂರು ಕನಸಿಗೆ ಕೊಳ್ಳಿಇಟ್ಟ ತಮಿಳುನಾಡು; ಹೊಸೂರಿನಲ್ಲಿ ವಿಮಾನ ನಿಲ್ದಾಣ ಘೋಷಣೆ!
ಬೆಂಗಳೂರು, ಆಗಸ್ಟ್ 28: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪರ್ಯಾಯವಾಗಿ ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣದ ನಿರ್ಮಿಸಲು ಕರ್ನಾಟಕ ಸರ್ಕಾರವು ಮುಂದಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಎರಡನೇ ಏರ್ಪೋರ್ಟ್ ಸುದ್ದಿ ಹಬ್ಬಿದಾಗಿನಿಂದಲೂ ಪಕ್ಕದ ರಾಜ್ಯ ತಮಿಳುನಾಡು ಹಾಗೂ ಕರ್ನಾಟಕದ ಮಧ್ಯೆ ಮುಸುಕಿನ ಗುದ್ಧಾಟ ನಡೆಯುತ್ತಲೇ ಇತ್ತು, ಸ್ಥಳ ಫೈನಲ್ ಮಾಡುವುದಕ್ಕಾಗಿ ಎರಡು ರಾಜ್ಯಗಳ ಮಧ್ಯೆ ಪೈಪೋಟಿ ಶುರುವಾಗಿತ್ತು. ಇದೀಗ ತಮಿಳುನಾಡು ರಾಜ್ಯ ಹೊಸ ವಿಮಾನ ನಿಲ್ದಾಣ ನಿರ್ಮಾಣದ ಜಾಗ ಘೋಷಣೆ ಮಾಡುವ ಮೂಲಕ ಕರ್ನಾಟಕಕ್ಕೆ ಟಕ್ಕರ್ ಕೊಟ್ಟಿದೆ.
ಹೊಸೂರಿನಲ್ಲಿ ಬೃಹತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸುವುದಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅಧಿಕೃತವಾಗಿ ಘೋಷಿಸಿದ್ದಾರೆ. ಕರ್ನಾಟಕ ಸರ್ಕಾರ ಬೆಂಗಳೂರಿನ ಟ್ರಾಫಿಕ್ ಒತ್ತಡ ಕಡಿಮೆ ಮಾಡಲು ಎರಡನೇ ವಿಮಾನ ನಿಲ್ದಾಣಕ್ಕೆ ಜಾಗ ಹುಡುಕುತ್ತಿರುವ ಹೊತ್ತಿನಲ್ಲೇ, ತಮಿಳುನಾಡು ಈ ಮಹತ್ವದ ದಾಳ ಉರುಳಿಸಿದೆ. ಅಲ್ಲದೇ ಕರ್ನಾಟಕ ಸರ್ಕಾರ ಈಗಾಗಲೇ ಮೂರು ಸ್ಥಳಗಳನ್ನ ಫೈನಲ್ ಮಾಡಿತ್ತು. ಆದರೆ, ವಿಮಾನ ನಿಲ್ದಾಣ ನಿರ್ಮಾಣಕ್ಕೆ ಆ ಸ್ಥಳ ಸೂಕ್ತವಲ್ಲ ಎಂಬ ಮಾತುಗಳು ಕೇಳಿಬಂದಿತ್ತು. ಈ ನಡುವೆ ಕರ್ನಾಟಕ ಸಚಿವರಾದ ಎಂ ಬಿ ಪಾಟೀಲ್ ಅವರು ಕೇಂದ್ರ ವಿಮಾನಯಾನ ಸಚಿವರನ್ನ ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಈ ನಡುವೆ ತಮಿಳು ನಾಡು ಸರ್ಕಾರ ಜಾಗವನ್ನ ಘೋಷಣೆ ಮಾಡಿದೆ.

ಕೃಷ್ಣಗಿರಿ ಜಿಲ್ಲೆಯ ಹೊಸೂರಿನಲ್ಲಿ ಉದ್ದೇಶಿತ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ತಮಿಳುನಾಡು ಸರ್ಕಾರವು ಅಂತಿಮವಾಗಿ ಸ್ಥಳವನ್ನು ಗುರುತಿಸಿದ್ದು, ಮುಂದಿನ ಎರಡು ವಾರಗಳಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಅನುಮೋದನೆ ಕೋರಿ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದೆ. ಆಯ್ಕೆಯಾದ ಸ್ಥಳವು ಹೊಸೂರು ನಗರದ ಪೂರ್ವಕ್ಕೆ, ಹೊಸೂರು ಮತ್ತು ಶೂಲಗಿರಿ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಬೇರಿಗೈ ಮತ್ತು ಬಾಗಲೂರು ನಡುವೆ ಇದೆ. ಈ ವಿಮಾನ ನಿಲ್ದಾಣ ನಿರ್ಮಾಣ ಆದ್ರೆ ಹೊಸೂರು, ಕೃಷ್ಣಗಿರಿ ಮತ್ತು ಧರ್ಮಪುರಿ ಜಿಲ್ಲೆಗಳ ಸಾಮಾಜಿಕ-ಆರ್ಥಿಕ ಪ್ರಗತಿಗೆ ಈ ವಿಮಾನ ನಿಲ್ದಾಣ ಅತ್ಯಗತ್ಯ ಎಂದು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಹೇಳಿದರು.
ಸುಮಾರು 2,300 ಎಕರೆಗಳಷ್ಟು ವಿಶಾಲವಾದ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ಈ ವಿಮಾನ ನಿಲ್ದಾಣವೂ ವಾರ್ಷಿಕವಾಗಿ 3 ಕೋಟಿ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯ ಹೊಂದಲಿದೆ. ಇದು ಸದ್ಯ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಾಮರ್ಥ್ಯಕ್ಕೆ ಸರಿಸಮನಾಗಿದೆ ಎಂದು ಹೇಳಲಾಗಿದೆ. ಈ ಮೆಗಾ ಪ್ರಾಜೆಕ್ಟ್, ಕೇವಲ ತಮಿಳುನಾಡಿನ ಅಭಿವೃದ್ಧಿಯ ದೃಷ್ಟಿಯಿಂದ ಮಾತ್ರವಲ್ಲ, ಬೆಂಗಳೂರಿನ ಮೇಲೂ ಗಂಭೀರ ಪರಿಣಾಮಗಳನ್ನು ಬೀರಲಿದೆ.












Click it and Unblock the Notifications