ರಾಜ್ಯದಲ್ಲಿರುವ ಮಾಜಿ ಸೈನಿಕರಿಗೆ ನಿವೇಶನ: ಸದನದಲ್ಲಿ ಚರ್ಚೆಯಾಗಿದ್ದೇನು?
ಬೆಳಗಾವಿ, ಡಿಸೆಂಬರ್ 18: ರಾಜ್ಯದಲ್ಲಿರುವ ಮಾಜಿ ಸೈನಿಕರಿಗೆ ವ್ಯವಸಾಯದ ಉದ್ದೇಶಕ್ಕಾಗಿ ಭೂ ಮಂಜೂರಾತಿ ಮಾಡಲು ರಾಜ್ಯದಲ್ಲಿ ಸರ್ಕಾರಿ ಭೂಮಿಯ ತೀವ್ರ ಕೊರತೆಯಿರುವುದರಿಂದ, ಅವರಿಗೆ ನಿವೇಶನ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಬುಧವಾರ ವಿಧಾನ ಪರಿಷತ್ತಿನಲ್ಲಿ ಸದಸ್ಯ ಸಿ. ಎನ್. ಮಂಜೇಗೌಡ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿ, ದೇಶಕ್ಕಾಗಿ ಸೇವೆ ಸಲ್ಲಿಸಿರುವ ಮಾಜಿ ಸೈನಿಕರ ಕುರಿತಂತೆ ಗೌರವ ಮತ್ತು ಅಭಿಮಾನವಿದೆ. ಜವಾನ್ ಸಮ್ಮಾನ್ ಹೆಸರಿನಲ್ಲಿ ಮಾಜಿ ಸೈನಿಕರಿಗೆ ಸರ್ಕಾರಿ ವೆಚ್ಚದಲ್ಲಿಯೇ ಲೇ ಔಟ್ ಮಾಡಿ, ನಿವೇಶನ ನೀಡುವ ಕುರಿತಂತೆ ಪ್ರಸ್ತುತ ಅಧಿವೇಶನ ಮುಗಿದ ಕೂಡಲೇ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ರಾಜ್ಯದಲ್ಲಿ ಪ್ರಸ್ತುತ 16065 ಮಾಜಿ ಸೈನಿಕರು ಭೂ ಮಂಜುರಾತಿಗಾಗಿ ಅರ್ಜಿ ಸಲ್ಲಿಸಿದ್ದು, ಅದರಲ್ಲಿ 6783 ಅರ್ಜಿ ವಿಲೇವಾರಿ ಮಾಡಿದ್ದು, 9282 ಅರ್ಜಿಗಳು ಬಾಕಿ ಇವೆ ಎಂದರು.

ಅಭಿಯಾನ ಮಾದರಿಯಲ್ಲಿ ಮುಜರಾಯಿ ಆಸ್ತಿಗಳ ಸಂರಕ್ಷಣೆ
ರಾಜ್ಯದಲ್ಲಿ ಮುಜರಾಯಿ ಆಸ್ತಿಗಳ ಸಂರಕ್ಷಣೆಯನ್ನು ಅಭಿಯಾನ ಮಾದರಿಯಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಈ ವರ್ಷ ರಾಜ್ಯದಲ್ಲಿ 5022 ಮುಜರಾಯಿ ಆಸ್ತಿಗಳನ್ನು ಮುಜರಾಯಿ ಇಲಾಖೆಗೆ ಖಾತೆ ಮಾಡಿಕೊಡುವ ಮೂಲಕ ಸಂರಕ್ಷಣೆ ಮಾಡಿದ್ದು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿoದ ರಾಜ್ಯದ ಮುಜರಾಯಿ ಆಸ್ತಿಗಳ ಸಂರಕ್ಷಣೆಗೆ ಆದ್ಯತೆ ನೀಡಲಾಗಿದೆ ಎಂದರು.
ಶ್ರೀರಂಗಪಟ್ಟಣದ ಶ್ರೀ ರಂಗನಾಥಸ್ವಾಮಿ ದೇವಾಲಯಕ್ಕೆ ದಾನವಾಗಿ ನೀಡಿರುವ 1198.34 ಎಕರೆ ಜಾಗದಲ್ಲಿ ಒತ್ತುವರಿಯಾಗಿರುವ ಜಾಗದ ವಿಷಯದ ಕುರಿತಂತೆ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಒತ್ತುವರಿ ಜಾಗವನ್ನು ತೆರೆವುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ರಾಜ್ಯದಲ್ಲಿ 16,644 ಪೋಡಿ ಮುಕ್ತ ಗ್ರಾಮ
ಬಹು ಮಾಲೀಕತ್ವದ ಖಾಸಗಿ ಒಡೆತನದ ಪಹಣಿಗಳನ್ನು ಏಕವ್ಯಕ್ತಿ ಪಹಣಿಗಳನ್ನಾಗಿ ಮಾಡುವ ಉದ್ದೇಶದ ಪೋಡಿ ಮುಕ್ತ ಯೋಜನೆಯಡಿ ರಾಜ್ಯದಲ್ಲಿ ಈಗಾಗಲೇ 16,644 ಗ್ರಾಮಗಳನ್ನು ಪೋಡಿ ಮುಕ್ತ ಗ್ರಾಮಗಳಾಗಿ ಮಾಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ರಾಜ್ಯದಲ್ಲಿ ಭೂ ಮಾಪನ ಇಲಾಖೆಯಲ್ಲಿ ಕಳೆದ 3 ವರ್ಷಗಳಲ್ಲಿ ವಿವಿಧ ರೀತಿಯ 6,62,825 ಪೋಡಿ ಅರ್ಜಿಗಳನ್ನು ಸ್ವೀಕರಿಸಿದ್ದು,ಅದರಲ್ಲಿ 5,33,545 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದು, ಪ್ರಕರಣಗಳಲ್ಲಿನ ನ್ಯೂನತೆಗಳನ್ನು ಶೀಘ್ರವಾಗಿ ಸರಿಪಡಿಸಿಕೊಂಡು ಕಂದಾಯ ಹಾಗೂ ಭೂ ಮಾಪನ ಇಲಾಖೆಯ ನಡವಳಿಗಳೊಂದಿಗೆ ವಿಳಂಬವಿಲ್ಲದೆ ಪೋಡಿ ದುರಸ್ತಿ ಮಾಡಲಾಗುತ್ತಿದೆ ಎಂದರು.
ಈ ಹಿಂದೆ, ಮ್ಯುಟೇಷನ್ ಪೋಡಿಯಂತಹ ಪ್ರಕ್ರಿಯೆಯನ್ನು ಪೂರೈಸಲು ನಾಲ್ಕರಿಂದ ಆರು ತಿಂಗಳವರೆಗೆ ಕಾಲಾವಕಾಶ ತೆಗೆದುಕೊಳ್ಳಲಾಗುತ್ತಿತ್ತು. ಆದರೆ ನಮ್ಮ ಸರ್ಕಾರವು ರೈತರಿಗೆ ಸಂಬಂಧಪಟ್ಟ ಇಂತಹ ಕೆಲಸಗಳಿಗೆ ಆದ್ಯತೆ ನೀಡಿ ಎಲ್ಲಾ ಹಂತಗಳ ಪ್ರಕ್ರಿಯೆಗಳನ್ನು ಸೂಕ್ತ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಚುರುಕುಗೊಳಿಸಿದ್ದು, ಪೋಡಿಗೆ ಯೋಗ್ಯವಾಗಿರುವ ಯಾವುದೇ ಪ್ರಕರಣಗಳನ್ನು ಸರಾಸರಿ ಒಂದು ತಿಂಗಳ ಅವಧಿಯಲ್ಲಿ ಪೂರೈಸಲಾಗುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.












Click it and Unblock the Notifications