ʼಗೂಂಡಾಗಿರಿ ಮಾಡಿದವರ ಕೇಸ್ನ್ನು ವಾಪಸ್ ಪಡೆದ ರಾಜ್ಯ ಸರ್ಕಾರʼ
ಧಾರವಾಡ, ಅಕ್ಟೋಬರ್ 11: ಯಾವ ಪ್ರಕರಣ ವಾಪಸ್ ಪಡೆಯಬೇಕು ಯಾವ ಪ್ರಕರಣ ವಾಪಸ್ ಪಡೆಯಬಾರದು ಎಂಬುದು ಸರ್ಕಾರಕ್ಕೆ ತಿಳಿಯಬೇಕಿತ್ತು. ಗೂಂಡಾಗಿರಿ ಮಾಡಿದವರ ಕೇಸನ್ನು ಈ ಸರ್ಕಾರ ವಾಪಸ್ ಪಡೆದಿದೆ ಎಂದು ಸಂಸದ ಜಗದೀಶ ಶೆಟ್ಟರ್ ವಾಗ್ದಾಳಿ ನಡೆಸಿದರು.
ಹುಬ್ಬಳ್ಳಿ ಗಲಭೆ ಪ್ರಕರಣವನ್ನು ರಾಜ್ಯ ಸರ್ಕಾರ ವಾಪಸ್ ಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಮಾತನಾಡಿದ ಅವರು, ಬೇರೆ ಬೇರೆ ಸರ್ಕಾರಗಳು ಅಧಿಕಾರದಲ್ಲಿದ್ದಾಗ ಕೇಸ್ ವಾಪಸ್ ಪಡೆಯುವುದು ಸಹಜ. ರೈತರ ಹೋರಾಟದ ಕೇಸ್ಗಳನ್ನು ವಾಪಸ್ ಪಡೆದರೆ ಸರಿ. ಆದರೆ, ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿ, ಪೊಲೀಸರ ಮೇಲೆ ಹಲ್ಲೆ ಮಾಡಿದವರ ಕೇಸುಗಳನ್ನು ವಾಪಸ್ ಪಡೆದಿದ್ದು ಸರಿಯಲ್ಲ. ಇದು ಕಾನೂನು ಮತ್ತು ಸುವ್ಯವಸ್ಥೆ ಹದಗೆಡಲು ಬೆಂಬಲ ನೀಡಿದಂತಾಗುತ್ತದೆ ಎಂದರು.

ಈ ಬಗ್ಗೆ ಕೈ ಸರ್ಕಾರ ಯೋಚಿಸಬೇಕಿತ್ತು. ಅವರಿಗೆ ಮತ್ತಷ್ಟು ಪ್ರೋತ್ಸಾಹ ಕೊಡಲು ಈ ರೀತಿ ಮಾಡಲಾಗುತ್ತಿದೆ. ಇದರಿಂದ ಕಾನೂನು ಮತ್ತು ಸುವ್ಯವಸ್ಥೆ ಮತ್ತಷ್ಟು ಹದಗೆಡುತ್ತದೆ. ಈ ನಿರ್ಧಾರ ಕಾನೂನಿನಡಿ ಎಷ್ಟು ನಿಲ್ಲುತ್ತದೆಯೋ ಗೊತ್ತಿಲ್ಲ. ಕೇಸಿನ ಫೈಲ್ ನೋಡಿದರೆ ಆ ಕೇಸನ್ನು ವಾಪಸ್ ಪಡೆಯಲು ಬರುವುದಿಲ್ಲ. ಆದರೂ ಕ್ಯಾಬಿನೆಟ್ನಲ್ಲಿ ಕೇಸ್ ವಾಪಸ್ ಪಡೆಯಲು ಒಪ್ಪಿಗೆ ನೀಡಲಾಗಿದೆ. ಇದು ಕಾನೂನು ಬಾಹಿರ. ಕೋರ್ಟ್ನಲ್ಲಿ ಯಾರಾದರೂ ಇದನ್ನು ಪ್ರಶ್ನಿಸಿದರೆ ಸರ್ಕಾರದ ನಿರ್ಧಾರ ಕೋರ್ಟ್ನಲ್ಲಿ ನಿಲ್ಲೋದಿಲ್ಲ. ಇದು ಅಲ್ಪಸಂಖ್ಯಾತರ ತುಷ್ಟೀಕರಣ ಎಂದರು.
ಈ ಸರ್ಕಾರ ಇಡೀ ಸಮಾಜವನ್ನು ಒಂದಾಗಿ ನೋಡಬೇಕು. ವ್ಯವಸ್ಥೆ ಹದಗೆಡಿಸುವ ರೀತಿಗೆ ಪ್ರೋತ್ಸಾಹ ಕೊಡಬಾರದು. ಈ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ತನ್ನ ರಾಜಕೀಯ ಲಾಭಕ್ಕಾಗಿ ಈ ಸರ್ಕಾರ ಈ ರೀತಿ ಮಾಡುತ್ತಿದೆ. ಇದರಿಂದ ಒಳ್ಳೆಯದಾಗುವುದಿಲ್ಲ. ಈ ಪ್ರಕರಣದಲ್ಲಿ ಎಷ್ಟೋ ರೌಡಿಶೀಟರ್ಗಳು ಇದ್ದಾರೆ. ಅಮಾಯಕರ ಮೇಲೆ ಹಾಕಲಾಗಿರುವ ರೌಡಿಶೀಟರ್ ಬೇಕಾದರೆ ತೆಗೆಯಲಿ ಆದರೆ, ಗೂಂಡಾಗಿರಿ ಮಾಡಿದವರ ಕೇಸ್ ವಾಪಸ್ ಪಡೆದಿದ್ದು ಸರಿಯಲ್ಲ ಎಂದರು.
ಈ ಕುರಿತು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ಅವರು ಮಾತನಾಡಿ, ಸಿದ್ದರಾಮಯ್ಯನವರ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಎಸ್ಡಿಪಿಐ ಹಾಗೂ ಪಿಎಫ್ಐ ಮೇಲಿನ ಕೇಸ್ ಮರಳಿ ಪಡೆದರು. ಬೆಂಗಳೂರಿನಲ್ಲಿ ನಡೆದಿದ್ದ ಗಲಭೆಯ ಕೇಸ್ನಲ್ಲಿದ್ದವರನ್ನು ಬಿಡುಗಡೆ ಮಾಡಿದರು. ಕುಕ್ಕರ್ ಬಾಂಬ್ ಸ್ಪೋಟ ಮಾಡಿದವರನ್ನು ನಮ್ಮ ಬ್ರದರ್ಸ್ ಎಂದು ಕರೆದರು. ಹುಬ್ಬಳ್ಳಿಯಲ್ಲಿ ಪೊಲೀಸ್ ಸ್ಟೇಷನ್ ಸುಡಲು ಯತ್ನಿಸಿದವರ ಮೇಲಿನ ಕೇಸ್ ವಾಪಸ್ ಪಡೆದಿದ್ದಾರೆ. ಅದರಲ್ಲಿ 120 ಜನ ಆರೋಪಿಗಳಿದ್ದಾರೆ. ಈ ಬಗ್ಗೆ ಎನ್ಐಎ ಕೇಸ್ ಕೂಡ ಆಗಿತ್ತು. ಅದನ್ನೂ ಮರಳಿ ಪಡೆಯಲು ನಿರ್ಧರಿಸಲಾಗಿದೆ. ಇದು ದೇಶ ವಿರೋಧಿ ಶಕ್ತಿಗಳಿಗೆ ಬೆಂಬಲ ಕೊಡುವಂತಹ ಕೆಲಸವಾಗಿದೆ ಎಂದರು.
ಆಡಳಿತ ನಡೆಸುವವರು ಗಲಭೆಕೋರರಿಗೆ ಎಚ್ಚರಿಕೆ ಕೊಡಬೇಕು. ಆಸ್ತಿ ಹಾಳು ಮಾಡುವವರಿಗೆ ಎಚ್ಚರಿಕೆ ಕೊಡಬೇಕು. ಎಲ್ಲರ ಮೇಲೂ ಒಂದೇ ರೀತಿಯ ಕ್ರಮ ತೆಗೆದುಕೊಳ್ಳಬೇಕು. ಆದರೆ, ಇಂತಹ ಗಲಭೆ ಕೇಸ್ನ್ನು ಈ ಸರ್ಕಾರ ಮರಳಿ ಪಡೆಯುತ್ತಾರೆ ಎಂದರೆ ಇವರ ಬೆಂಬಲ ಯಾರಿಗೆ ಇದೆ? ಸಿದ್ದರಾಮಯ್ಯ ಹತಾಶರಾಗಿದ್ದಾರೆ. ಅವರ ಅಧಿಕಾರ ಹೋಗುವುದು ಖಚಿತವಾಗಿದೆ. ಅದಕ್ಕೆ ಈ ರೀತಿಯ ಕೆಲಸ ಮಾಡುತ್ತಿದ್ದಾರೆ. ಇದನ್ನು ಸಾಮಾನ್ಯ ಮುಸ್ಲಿಂರು ಕೂಡ ಇದನ್ನು ಒಪ್ಪುತ್ತಿಲ್ಲ.
ಈ ರೀತಿ ಮಾಡಿಯೇ ಪಕ್ಷ ದೇಶದಾದ್ಯಂತ ನೆಲಕಚ್ಚಿದೆ. ಹರಿಯಾಣ, ಕಾಶ್ಮೀರದಲ್ಲಿ ಕಾಂಗ್ರೆಸ್ಗೆ ಕೆಟ್ಟ ಪರಿಸ್ಥಿತಿ ಬಂದಿದೆ. ದೇಶಕ್ಕೆ ಒಳ್ಳೆಯದಾಗುವ ನಿರ್ಧಾರವನ್ನು ಈ ಸರ್ಕಾರ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ಜನ ಇವರನ್ನು ತಿರಸ್ಕರಿಸುತ್ತಿದ್ದಾರೆ. ಇನ್ನಾದರೂ ಕಾಂಗ್ರೆಸ್ನವರು ಎಚ್ಚೆತ್ತುಕೊಳ್ಳಬೇಕು ಎಂದು ಬೆಲ್ಲದ ತಿಳಿಸಿದರು.












Click it and Unblock the Notifications