ಬಳಕೆಯಾಗದ ಕೇಂದ್ರದ ಅನುದಾನ : ಪೂರ್ಣ ಅಂಕಿ ಅಂಶಗಳನ್ನ ಕೊಟ್ಟ ಬಿಜೆಪಿ! ಇಲ್ಲಿದೆ ನೋಡಿ
ಬೆಂಗಳೂರು, ಸೆಪ್ಟೆಂಬರ್ 07: ಎಲ್ಲಾ ರಾಜಕೀಯ ಪಕ್ಷಗಳೂ ಸುದ್ದಿ ಮಾಡುತ್ತವೆ, ಸುದ್ದಿಯಾಗುತ್ತವೆ. ಆದರೆ ಕರ್ನಾಟಕ ಕಾಂಗ್ರೆಸ್ ಮಾತ್ರ ಸುದ್ದಿಯನ್ನು ಸ್ವತಃ ತಯಾರು ಮಾಡುತ್ತದೆ. ಯೋಜಿತವಾಗಿ ಆಯ್ಕೆ ಮಾಡಿದ ಅಂಕಿ-ಅಂಶಗಳನ್ನು ಅಪೂರ್ಣ ಮಾಹಿತಿಯ ಜತೆಗೆ ಹರಿಯಬಿಟ್ಟರೆ ಅದು ಸತ್ಯವಾಗುವುದಿಲ್ಲ ಎಂದು ಸರ್ಕಾರದ ವಿರುದ್ದ ಕರ್ನಾಟಕ ಬಿಜೆಪಿ ವಾಗ್ದಾಳಿ ನಡೆಸಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಸುದ್ದಿ ಹರಿಬಿಟ್ಟು ಅದನ್ನು ಕ್ಷುಲ್ಲಕ ರಾಜಕಾರಣಕ್ಕೆ ಬಳಸುವ ಮೊದಲು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಂದ ಮಾಹಿತಿ ತರಿಸಿ ನೋಡುವ ಜವಾಬ್ದಾರಿ ಸರ್ಕಾರ ನಡೆಸುವವರಿಗೆ ಇರಬೇಕು. ಹೋಗಲಿ ಬಿಡಿ, ಪೂರ್ಣ ಅಂಕಿ-ಅಂಶಗಳನ್ನು ನಾವೇ ಕೊಡುತ್ತೇವೆ ಎಂದು ಅಂಕಿ ಅಂಶಗಳನ್ನ ಬಿಡುಗಡೆ ಮಾಡಿದೆ.

ಕೇಂದ್ರದ ನರೇಂದ್ರ ಮೋದಿ ಸರ್ಕಾರ ನೀಡುತ್ತಿರುವ ಪ್ರತಿಯೊಂದು ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಆಯಾ ಯೋಜನೆಗಳಡಿ ಇರುವ ಸಿಂಗಲ್ ನೋಡಲ್ ಏಜನ್ಸಿ (SNA) ಮೂಲಕವೇ ರಾಜ್ಯಗಳು ಅನುದಾನ ಪಡೆದುಕೊಳ್ಳುತ್ತವೆ. ಆದರೆ ನಮ್ಮ ರಾಜ್ಯದಲ್ಲಿ ಮಾತ್ರ ಕೇಂದ್ರದ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಲ್ಲ ಎಂಬುದಕ್ಕೆ SNAಗಳಲ್ಲಿ ಬಾಕಿ ಉಳಿದಿರುವ ಅನುದಾನದ ಪ್ರಮಾಣವೇ ಸಾಕ್ಷಿ ನುಡಿಯುತ್ತದೆ.
MNREGA ಅಡಿಯಲ್ಲಿ, ಕೇಂದ್ರ ಸರ್ಕಾರ 2022-23 ರಲ್ಲಿ ₹2595.52 ಕೋಟಿ ಬಿಡುಗಡೆ ಮಾಡಿತ್ತು. ಹೆಚ್ಚುವರಿಯಾಗಿ, 2023-24ರಲ್ಲಿ ₹3488.79 ಕೋಟಿ ಮತ್ತೆ ಬಿಡುಗಡೆ ಮಾಡಲಾಗಿದೆ. ಆದರೆ ಪ್ರಸ್ತುತ SNA ಬಳಿ ₹1333.87 ಕೋಟಿ ಖರ್ಚು ಮಾಡದೆ ಬಾಕಿ ಉಳಿದಿದೆ.
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿಯಲ್ಲಿ, 2022-23 ರಲ್ಲಿ ₹720.47 ಕೋಟಿ ಬಿಡುಗಡೆ ಮಾಡಲಾಗಿತ್ತು. ಆದರೆ ಆ ಪೈಕಿ ₹382.74 ಕೋಟಿ ಮೊತ್ತಕ್ಕೆ ರಾಜ್ಯ ಸರ್ಕಾರ ಪ್ರಸ್ತಾವನೆಯನ್ನೂ ಸಲ್ಲಿಸಿಲ್ಲ. ಹಾಗಾಗಿ ಆ ಮೊತ್ತವೂ SNA ಬಳಿಯೇ ಇದೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) ಅಡಿ 2022-23 ರಲ್ಲಿ ₹863.64 ಕೋಟಿ ಬಿಡುಗಡೆ ಮಾಡಲಾಗಿದ್ದು ಇದರಲ್ಲಿ ರಾಜ್ಯ ಸರ್ಕಾರ ಯೋಜನೆಗೆ ಸೂಕ್ತ ಪ್ರಸ್ತಾವ ಸಲ್ಲಿಸದ ಕಾರಣ ₹493.07 ಕೋಟಿ ನೋಡಲ್ ಕೇಂದ್ರದಲ್ಲಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) ಅಡಿಯಲ್ಲಿ SNA ಬಳಿ ಸೂಕ್ತ ಪ್ರಸ್ತಾವಗಳಿಲ್ಲದೆ ₹605.61 ಕೋಟಿ ಬಾಕಿ ಇದೆ. ಆದಾಗ್ಯೂ ಕೇಂದ್ರದಿಂದ 2022-23 ರಲ್ಲಿ ₹214.92 ಕೋಟಿ ಹೆಚ್ಚುವರಿ ಲಭಿಸಿದೆ.
ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ 2022-23ರಲ್ಲಿ ₹881.1 ಕೋಟಿಗಳನ್ನು ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಹಂಚಿಕೆ ಮಾಡಿದೆ. ಹೆಚ್ಚುವರಿಯಾಗಿ 2023-24ರಲ್ಲಿ ಮತ್ತೆ ₹318.58 ಕೋಟಿ ಬಿಡುಗಡೆಯಾಗಿದೆ. ಆದರೆ ರಾಜ್ಯ ಸರ್ಕಾರ ₹266.77 ಕೋಟಿ ಖರ್ಚು ಮಾಡದೆ SNA ಬಳಿ ಇರಿಸಿದೆ.
ಸಮಗ್ರ ಶಿಕ್ಷಾ ಅಭಿಯಾನದ ಅಡಿಯಲ್ಲಿ 2022-23 ₹861.52 ಕೋಟಿ ಮೊತ್ತ ರಾಜ್ಯಕ್ಕೆ ಬಿಡುಗಡೆಯಾಗಿತ್ತು. ಅದರಲ್ಲಿ ₹178.7 ಕೋಟಿಗಳನ್ನು ಕಾಂಗ್ರೆಸ್ ಸರ್ಕಾರ ಖರ್ಚು ಮಾಡದೆ ಉಳಿಸಿಕೊಂಡಿದೆ. ಮಧ್ಯಾಹ್ನದ ಬಿಸಿಯೂಟದ ಯೋಜನೆಯಡಿಯಲ್ಲಿ 2022-23 ರಲ್ಲಿ ₹690.77 ಕೋಟಿ ಬಿಡುಗಡೆ ಮಾಡಿದ್ದರಲ್ಲಿ ₹118.36 ಕೋಟಿ ಖರ್ಚಾಗದೆ ಉಳಿದಿದೆ.
ಸ್ಮಾರ್ಟ್ ಸಿಟಿ ಯೋಜನೆಯ ಬಗ್ಗೆ ಹೇಳುವುದಾದರೆ ಇದರಡಿ 2022-23 ರಲ್ಲಿ ₹604.84 ಕೋಟಿ ಬಿಡುಗಡೆ ಮಾಡಲಾಗಿದೆ. ಅಲ್ಲದೆ ಈ ವರ್ಷ ₹73.5 ಕೋಟಿ ಮತ್ತೆ ನೀಡಲಾಗಿದೆ. ಆದರೆ ₹510.69 ಕೋಟಿ ಖರ್ಚಾಗದೆ ಉಳಿದಿದೆ. ಪೋಷಣ್ ಯೋಜನೆಯಡಿ 2022-23 ರಲ್ಲಿ ಕೇಂದ್ರ ಸರ್ಕಾರ ನೀಡಿದ್ದು ₹765.87 ಕೋಟಿ. ಮಿಗಿಲಾಗಿ ಈ ವರ್ಷ ನೀಡಿದ್ದು ₹97.05 ಕೋಟಿ. ಆ ಪೈಕಿ ನೋಡಲ್ ಸಂಸ್ಥೆಯ ಬಳಿ ಇರುವುದು ₹210.11 ಕೋಟಿ.
ಇಂದಿರಾ ಗಾಂಧಿ ವೃದ್ಧಾಪ್ಯ ಪಿಂಚಣಿ ಯೋಜನೆ ಮತ್ತು ವಿಧವಾ ಪಿಂಚಣಿ ಯೋಜನೆಗಾಗಿ ಕೇಂದ್ರ ಸರ್ಕಾರ 2022-23 ರಲ್ಲಿ ₹403.12 Cr ಬಿಡುಗಡೆ ಮಾಡಿತ್ತು. ಇದೇ ವರ್ಷದ ಮಾರ್ಚ್ 29ರಂದು ರಾಜ್ಯಕ್ಕೆ ಮತ್ತೆ ಸರಿಸುಮಾರು ₹100 ಕೋಟಿ ಬಿಡುಗಡೆಯಾಗಿದೆ, ಆದರೆ ಆ ಮೊತ್ತವನ್ನು ರಾಜ್ಯದ ಸಿದ್ದರಾಮಯ್ಯ ಅವರ ಸರ್ಕಾರ ಇನ್ನೂ SNA ಖಾತೆಗೆ ರವಾನಿಸಿಲ್ಲ. ಯೋಜನೆ ಮರುವಿನ್ಯಾಸಗೊಳ್ಳಲಿರುವ ಕಾರಣ ಪ್ರಸಕ್ತ ವರ್ಷದಲ್ಲಿ ಯಾವುದೇ ಹೆಚ್ಚಿನ ಅನುದಾನ ಇದಕ್ಕಾಗಿ ಬಿಡುಗಡೆ ಮಾಡಲಾಗಿಲ್ಲ.
ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಅಡಿಯಲ್ಲಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ 2022-23 ರಲ್ಲಿ ನೀಡಿರುವುದು ₹155.84 ಕೋಟಿ. ಆದರೆ ಸೂಕ್ತ ಪ್ರಸ್ತಾವಗಳನ್ನು ಸಲ್ಲಿಸದೆ ರಾಜ್ಯ ಸರ್ಕಾರ SNA ಬಳಿ ₹376.96 ಕೋಟಿ ಉಳಿಸಿದೆ. ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ 2022-23 ರಲ್ಲಿ ₹284.61 ಕೋಟಿ ಬಿಡುಗಡೆ ಮಾಡಿ, ಮತ್ತೆ ಈ ವರ್ಷ ಹೆಚ್ಚುವರಿ ₹81.47 ಕೋಟಿ ಅನುದಾನ ಒದಗಿಸಲಾಗಿದೆ. ಇಲ್ಲಿಯೂ ₹98.41 ಕೋಟಿಯನ್ನು ರಾಜ್ಯ ಸರ್ಕಾರ ಖರ್ಚು ಮಾಡದೆ ಬಾಕಿ ಉಳಿಸಿಕೊಂಡಿದೆ.
ಇಲ್ಲಿ ನೀಡಿರುವ ಉಳಿಕೆ ಹಣವನ್ನು ಯೋಜನೆಯ ಸಮರ್ಪಕ ಅನುಷ್ಠಾನದ ಮೂಲಕ ಆಯಾ ಯೋಜನೆಗಳಿಗೇ ರಾಜ್ಯ ವಿನಿಯೋಗಿಸಬೇಕು. ಅದನ್ನು ಮಾಡಿದ ಮೇಲೆ ಹೆಚ್ಚುವರಿ ಅನುದಾನವನ್ನು ಧಾರಾಳವಾಗಿ ಕೇಳಬಹುದು.
ಇಂದು ಕರ್ನಾಟಕದಲ್ಲಿ ಯಾವುದೇ ಕುಂದು ಕೊರತೆಗಳಿಲ್ಲದೆ, ಅಂತೆ ಕಂತೆಗಳ ಗೊಂದಲಗಳಿಲ್ಲದೆ ನೇರವಾಗಿ ಫಲಾನುಭವಿಗಳಿಗೆ ತಲುಪುತ್ತಿರುವುದು ನರೇಂದ್ರ ಮೋದಿಯವರ ಸಾರಥ್ಯದ ಕೇಂದ್ರ ಸರ್ಕಾರದ ಯೋಜನೆಗಳಷ್ಟೇ ಆಗಿವೆ. ಹೇಳಿಕೊಳ್ಳುವುದಕ್ಕೆ ನಿಮ್ಮದೇನೂ ಇಲ್ಲದಿದ್ದಾಗ ಹಿಟ್ ಆ್ಯಂಡ್ ರನ್ ಮಾಡಬಹುದು ಎಂದು ಕಾಂಗ್ರೆಸ್ ಸರ್ಕಾರ ನಂಬಿರುವುದೇ ಹಾಸ್ಯಾಸ್ಪದ. ಇನ್ನಾದರೂ ನಿಮ್ಮ ತುಷ್ಟೀಕರಣ ಬದಿಗೊತ್ತಿ ಅನುಷ್ಠಾನಗಳತ್ತ ಸ್ವಲ್ಪ ಗಮನ ಕೊಡಿ. ಮತ್ತೆ ಹಿಟ್ ಆ್ಯಂಡ್ ರನ್ ಮಾಡುವ ಪ್ರಮೇಯ ತಪ್ಪುತ್ತದೆ ಎಂದು ಕಾಂಗ್ರೆಸ್ ವಿರುದ್ದ ಬಿಜೆಪಿ ವಾಗ್ದಾಳಿ ನಡೆಸಿದೆ.












Click it and Unblock the Notifications