ಗೊಂದಲಾಪುರದಲ್ಲಿ ಬಿಎಸ್ವೈ; ಶೋಭಾನೂ ರಾಜ್ಯಕ್ಕೆ ಸೀಮಿತ
ಬೆಂಗಳೂರು, ಮೇ 23: ಅದೇನು ಅಭಾವ ವೈರಾಗ್ಯವೋ ಅಥವಾ ಗೊಂದಲದಲ್ಲಿ ಸಿಲುಕಿಕೊಂಡು ಹಾಗೆ ಹೇಳುತ್ತಿದ್ದಾರೋ, ಅಥವಾ ಪರಿಸ್ಥಿತಿಯ ಒತ್ತಡವೇ ಹಾಗಿದೆಯೋ ಅಂತೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಕೇಂದ್ರಕ್ಕೆ ಹೋಗದೆ ತಮ್ಮನ್ನು ಕರ್ನಾಟಕಕ್ಕೆ ಸೀಮಿತಗೊಳಿಸಲು ನಿರ್ಧರಿಸಿದ್ದಾರೆ. ಇದರಿಂದ ಯಡಿಯೂರಪ್ಪ ಅಭಿಮಾನಿಗಳು ತೀವ್ರ ನಿರಾಶರಾಗಿದ್ದು, ಯಡಿಯೂರಪ್ಪ ತಮ್ಮ ನಿರ್ಧಾರ ಬದಲಿಸಿ, ಕೇಂದ್ರದಲ್ಲಿ ಕೃಷಿ ಸಚಿವರಾಗುವತ್ತ ಗಮನಹರಿಸಬೇಕು ಎಂದು ಆಗ್ರಹಿಸಿದ್ದಾರೆ.
ಆದರೆ ಇತ್ತ ತಾವು ರಾಜ್ಯಕ್ಕೆ ಅಂಕಿತರಾಗಿ ಅತ್ತ ತಮ್ಮ ಆಪ್ತರಾದ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ನೂತನ ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ತಮ್ಮ ಬದಲಿಗೆ ಮಂತ್ರಿ ಮಾಡಿಸುತ್ತಾರೆ ಎಂದು ಜನ ಮಾತನಾಡಿಕೊಳ್ಳುತ್ತಿರುವಾಗಲೇ ಶೋಭಾರಿಂದ ಸ್ಪಷ್ಟನೆ ರೂಪದ ನಿರ್ಧಾರವೊಂದು ಹೊರಬಿದ್ದಿದೆ. 'ಎಲ್ಲಿ ಯಡಿಯೂರಪ್ಪನವರೋ ತಾನೂ ಅಲ್ಲೇ' ಎಂದು ಶೋಭಾ ಹೇಳಿದ್ದಾರೆ.

ಅಂದರೆ ಯಡಿಯೂರಪ್ಪ ಅವರ ನಿರ್ಧಾರದ ಬೆನ್ನಿಗೆ ಶೋಭಾ ಕರಂದ್ಲಾಜೆ ಅವರೂ ಸಹ ಇದೀಗ ತಾವು ಸಚಿವಾಕಾಂಕ್ಷಿಯಲ್ಲ. ಪಕ್ಷ ಬಲಪಡಿಸಲು ಬಿಎಸ್ವೈ ಅವರು ರಾಜ್ಯ ರಾಜಕಾರಣಕ್ಕೆ ಬರಬೇಕೆಂಬ ಸಲಹೆ/ಇಚ್ಛೆಯೂ ನನ್ನದಾಗಿತ್ತು. ಅದರಂತೆ ತಾನೂ ಸಹ ರಾಜ್ಯದಲ್ಲೇ ಇದ್ದು ಪಕ್ಷವನ್ನು ಬಲಪಡಿಸಲು ಶ್ರಮಿಸುವುದಾಗಿ ನಿನ್ನೆ ಸ್ಪಷ್ಟಪಡಿಸಿದ್ದಾರೆ.
ನಾನು ಬಹಳ ಕಿರಿಯಳು. ರಾಜ್ಯದಲ್ಲಿ ಅದೆಷ್ಟೋ ಹಿರಿಯ ನಾಯಕರು ಗೆದ್ದಿದ್ದಾರೆ. ಅವರು ಮಂತ್ರಿಗಳಾಗಲಿ. ನಾನು ಲೋಕಸಭಾ ಸದಸ್ಯಯಾಗಿದ್ದುಕೊಂಡೇ ಯಶಸ್ವಿಯಾಗಿ ನನ್ನ ಕರ್ತವ್ಯ ನಿಭಾಯಿಸುವೆ' ಎಂದು ಉಡುಪಿಯ ಹೆಜಮಾಡಿಯಲ್ಲಿ ನಡೆದ ವಿಜಯೋತ್ಸವದಲ್ಲಿ ಶೋಭಾ ತಮ್ಮ ಮನದಿಂಗಿತವನ್ನು ಹೊರಹಾಕಿದ್ದಾರೆ. (ಸಚಿವ ಸ್ಥಾನ ಬೇಡ: ಮೋದಿಗೆ ಪತ್ರ ಬರೆದ ಯಡಿಯೂರಪ್ಪ)
ತಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ತಮ್ಮ ಸಲಹೆಯಂತೆ ಕರ್ನಾಟಕದಲ್ಲಿ ಬಿಜೆಪಿಯನ್ನ ಬಲಿಷ್ಠಗೊಳಿಸುವ ಕಾರ್ಯಕ್ಕೆ ಸಜ್ಜಾಗುತ್ತೇನೆ. ಸ್ವಯಂಪ್ರೇರಣೆಯಿಂದ ರಾಜ್ಯದ ನಾಯಕತ್ವ ವಹಿಸಿಕೊಳ್ಳುತ್ತೇನೆ ಎಂದು ನಿಯೋಜಿತ ಪ್ರಧಾನಿ ಮೋದಿಗೆ ಯಡಿಯೂರಪ್ಪ ಅವರು ನಿನ್ನೆ ಪತ್ರ ಬರೆದಿದ್ದಾರೆ.












Click it and Unblock the Notifications