Shakti scheme effect: ಮಕ್ಕಳಿಗೆ ಹಾಲು, ಹಣ್ಣು ಖರೀದಿಸಲು ಈಗ ಶಕ್ತಿ ಬಂದಿದೆ- ಮಹಿಳಾ ಪ್ರಯಾಣಿಕರು ಹೇಳಿದ್ದೇನು?
ಬೆಂಗಳೂರು, ಆಗಸ್ಟ್ 14: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆಯು ಕಾರ್ಮಿಕ ವರ್ಗದ ಮಹಿಳೆಯರಿಗೆ ಆರ್ಥಿಕ ಬಲ ತಂದುಕೊಟ್ಟಿದೆ. ಬೆಂಗಳೂರಿನಲ್ಲಿ ದುಡಿಯುತ್ತಿರುವ ಲಕ್ಷಾಂತರ ಮಹಿಳೆಯರು ಉಚಿತ ಬಸ್ ಪ್ರಯಾಣ ಯೋಜನೆಯಿಂದ ಹೆಚ್ಚು ಕಮ್ಮಿ ಒಂದು ಸಾವಿರ ರೂಪಾಯಿಯಷ್ಟನ್ನು ಉಳಿಸುತ್ತಿದ್ದಾರೆ.
ಈ ಯೋಜನೆಯು ಸಾವಿರಾರು ಗಾರ್ಮೆಂಟ್ಸ್ ಕಾರ್ಮಿಕರು, ಪೌರಕಾರ್ಮಿಕರು, ಮನೆಗೆಲಸದವರು ಮತ್ತು ಇತರ ಕೆಳ-ಮಧ್ಯಮ ವರ್ಗದ ಮಹಿಳೆಯರಿಗೆ ಸಹಾಯ ಮಾಡಿದೆ. ಪ್ರತಿದಿನ ಮನೆಯಿಂದ ಕೆಲಸಕ್ಕೆ ತೆರಳುವ ಮಹಿಳೆಯರಿಗೆ ಇದು ವರದಾನವಾಗಿ ಮಾರ್ಪಟ್ಟಿದೆ. ಇದರಿಂದಾಗುವ ಉಳಿತಾಯವು ತಮ್ಮ ಮಕ್ಕಳಿಗೆ ಹಣ್ಣ, ಹಾಲನ್ನು ಪೂರೈಸಲು ಸಹಾಯ ಮಾಡುತ್ತದೆ ಎಂದು ಮಹಿಳೆಯರು ಹೇಳುತ್ತಿದ್ದಾರೆ.

ಬೆಂಗಳೂರು ಬಸ್ ಪ್ರಯಾಣಿಕ ವೇದಿಕೆಯ (ಬಿಬಿಪಿವಿ) 10ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಗಾರ್ಮೆಂಟ್ಸ್, ಗೃಹ ಕಾರ್ಮಿಕರ ಸಂಘಗಳು, ಬೀದಿ ಬದಿ ವ್ಯಾಪಾರಿಗಳ ಗುಂಪುಗಳು, ಮಾನವ ಹಕ್ಕುಗಳ ಸಂಘಟನೆಗಳು ಮತ್ತು ಗಡಿಭಾಗದ ಪಟ್ಟಣಗಳ ಮಹಿಳೆಯರು ಯೋಜನೆಯ ಫಲಶ್ರತಿಯ ಕುರಿತು ಮಾತನಾಡಿದ್ದಾರೆ. ಈ ಯೋಜನೆಯು ತಮ್ಮ ಜೀವನದಲ್ಲಿ ಮಾಡಿದ ವ್ಯತ್ಯಾಸದ ಬಗ್ಗೆ ಹೇಳಿಕೊಂಡಿದ್ದಾರೆ.
'ಶಾಲೆ ಹಾಗೂ ಕಾಲೇಜುಗಳಿಗೆ ಹೋಗುವ ಯುವತಿಯರು ಮತ್ತು ಉದ್ಯೋಗಸ್ಥ ಮಹಿಳೆಯರು ಈ ಯೋಜನೆಯಿಂದ ಹೆಚ್ಚು ಪ್ರಯೋಜನ ಪಡೆದಿದ್ದಾರೆ. ಕೆಲವು ಟಿವಿ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ತೋರಿಸಿರುವಂತೆ ಯಾವುದೇ ದುರುಪಯೋಗ ಆಗುತ್ತಿಲ್ಲ' ಎಂದು ಆನೇಕಲ್ನ ಮಹಾದೇವಿ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ಗಾರ್ಮೆಂಟ್ ಮತ್ತು ಟೆಕ್ಸ್ಟೈಲ್ ವರ್ಕರ್ಸ್ ಯೂನಿಯನ್ನ ಮಣಿ ಎಂಬುವವರು, 'ತಮ್ಮ ಸಹೋದ್ಯೋಗಿಗಳು ಪ್ರಯಾಣದ ಖರ್ಚಾಗುತ್ತಿದ್ದ ಹಣವನ್ನು ಉಳಿಸಲು ಊಟನ್ನು ಬಿಡುತ್ತಿದ್ದರು. ಮಕ್ಕಳಿಗೆ ಹಾಲು, ಹಣ್ಣಿಗಾಗಿ ಹಣ ಉಳಿತಾಯ ಮಾಡಬೇಕು ಎಂದು ಹೇಳುತ್ತಿದ್ದಾರೆ. ಆದರೆ, ಶಕ್ತಿ ಯೋಜನೆ ಬಂದಾಗಿನಿಂದ ಮಕ್ಕಳಿಗೆ ಹಾಲು, ಹಣ್ಣು ಹಾಗೂ ತಮ್ಮ ಉಪಹಾರ ಮತ್ತು ಮಧ್ಯಾಹ್ನದ ಊಟವನ್ನು ಹೊಂದಬಹುದಾಗಿದೆ. ಇದರಿಂದ ಮಹಿಳೆಯರು ಖುಷಿಯಾಗಿದ್ದಾರೆ' ಎಂದು ತಿಳಿಸಿದ್ದಾರೆ.

ಅನೇಕ ಕುಟುಂಬಗಳಿಗೆ 2 ಸಾವಿರ ಉಳಿತಾಯ
ಉಚಿತ ಬಸ್ ಪ್ರಯಾಣದಿಂದ ತಮ್ಮ ಕುಟುಂಬದಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ಅನೇಕ ಮಹಿಳೆಯರು ಮಾತನಾಡಿದ್ದಾರೆ.
'ನಾವು ಪ್ರತಿದಿನ ಸರಾಸರಿ 60ರಿಂದ 70 ರೂಪಾಯಿಗಳನ್ನು ಬಸ್ ಪ್ರಯಾಣಕ್ಕಾಗಿ ಖರ್ಚು ಮಾಡುತ್ತಿದ್ದೆವು. ಈಗ ಶಕ್ತಿ ಯೋಜನೆಯಿಂದ ಎಷ್ಟೋ ಕುಟುಂಬಗಳಿಗೆ 2,000 ರೂಪಾಯಿ ಉಳಿತಾಯವಾಗಿದೆ. ಇದು ನಮಗೆ ದೊಡ್ಡ ಮೊತ್ತವಾಗಿದೆ' ಎಂದು ಕುಸುಮಾ ಹೇಳಿದ್ದಾರೆ.
ಕುಸುಮಾ ಅವರು ಬೆಂಗಳೂರು ನಗರದ ಬಡವರು, ಲೈಂಗಿಕ ಕಾರ್ಯಕರ್ತರು ಮತ್ತು ಲೈಂಗಿಕ ಅಲ್ಪಸಂಖ್ಯಾತರಿಗಾಗಿ ಕೆಲಸ ಮಾಡುವ ಸಂಗಮ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

'ಬಸ್ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಶಕ್ತಿ ಯೋಜನೆ ಹೆಚ್ಚು ಪರಿಣಾಮಕಾರಿಯಾಗಿದೆ' ಎಂದು ಬಿಎಂಟಿಸಿಯ ಮುಖ್ಯ ಸಂಚಾರ ವ್ಯವಸ್ಥಾಪಕ ವಿಶ್ವನಾಥ್ ಕೋಟಗಲ್ ಹೇಳಿದ್ದಾರೆ.
2 ತಿಂಗಳಲ್ಲಿ 36.8 ಕೋಟಿ ಮಹಿಳಾ ಪ್ರಯಾಣಿಕರು
ಜೂನ್ 11 ರಿಂದ ಆಗಸ್ಟ್ 10 ರ ವರೆಗೆ ರಾಜ್ಯಾದ್ಯಂತ 67.4 ಕೋಟಿ ಪ್ರಯಾಣಿಕರು ಸರ್ಕಾರಿ ರಸ್ತೆ ಸಾರಿಗೆ ನಿಗಮಗಳ ಬಸ್ಗಳಲ್ಲಿ ಪ್ರಯಾಣಿಸಿದ್ದಾರೆ. ಅವರಲ್ಲಿ ಶೇ 54.6 ಅಥವಾ 36.8 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ. ಇದು ರಾಜ್ಯದ ನಾಲ್ಕು ನಿಗಮಗಳ ಮೇಲೆ ಒಟ್ಟು 854 ಕೋಟಿ ರೂಪಾಯಿಗಳಷ್ಟು ಹೊರೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಯೋಜನೆಯಿಂದ ರಾಜ್ಯದ ಧಾರ್ಮಿಕ ಸ್ಥಳಗಳಿಗೆ ತೆರಳುವ ಭಕ್ತರ ಸಂಖ್ಯೆಯಲ್ಲಿಯೂ ಗಣನೀಯ ಪ್ರಮಾಣದ ಹೆಚ್ಚಳ ಕಂಡುಬಂದಿದೆ. ಇದರಿಂದ ದೇವಸ್ಥಾನದ ಹುಂಡಿಗಳು ತುಂಬಿ ತುಳುಕುತ್ತಿವೆ.












Click it and Unblock the Notifications