ಶಾಲಾ ಮಕ್ಕಳಿಗೆ ವಾರದ 6 ದಿನ ಮೊಟ್ಟೆ: ಯೋಜನೆ ಖರ್ಚು, ವೆಚ್ಚ, ವಿವರ
ಬೆಂಗಳೂರು, ಸೆಪ್ಟೆಂಬರ್ 16: ಕರ್ನಾಟಕ ಸರ್ಕಾರ ಮಧ್ಯಾಹ್ನದ ಉಪಹಾರ ಯೋಜನೆಯಡಿ ಅಜೀಂ ಪ್ರೇಮ್ಜಿ ಫೌಂಡೇಷನ್, ಅನುದಾನದ ಸಹಭಾಗಿತ್ವದಲ್ಲಿ ಎಲ್ಲಾ ಸರ್ಕಾರಿ ಮತ್ತು ಅನುದಾನಿತ 1 ರಿಂದ 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಾರದ ಎಲ್ಲಾ 6 ದಿನಗಳಲ್ಲಿ ಪೂರಕ ಪೌಷ್ಠಿಕ ಆಹಾರವನ್ನು ವಿತರಿಸುವ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುತ್ತಿದೆ. ಇದರ ಭಾಗವಾಗಿ ಶಾಲಾ ಮಕ್ಕಳಿಗೆ ಮೊಟ್ಟೆ/ ಬಾಳೆಹಣ್ಣು/ ಶೇಂಗಾ ಚಿಕ್ಕಿಯನ್ನು ವಿತರಣೆ ಮಾಡಲಾಗುತ್ತದೆ. ಈ ಯೋಜನೆ ಜಾರಿಗೊಳಿಸುವ ಕುರಿತು ಶಿಕ್ಷಣ ಇಲಾಖೆ ಮಾರ್ಗಸೂಚಿ ಹೊರಡಿಸಿದೆ.
ಈ ಕುರಿತು ಬಿ. ಬಿ. ಕಾವೇರಿ, ಆಯುಕ್ತರು ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆಯನ್ನು ಹೊರಡಿಸಿದ್ದಾರೆ. ಈ ಸುತ್ತೋಲೆ 2024-25ನೇ ಸಾಲಿನಲ್ಲಿ ರಾಜ್ಯ ಸರ್ಕಾರವು ಮಧ್ಯಾಹ್ನ ಉಪಹಾರ ಯೋಜನೆಯಡಿ ಅಜೀಂ ಪ್ರೇಮ್ಜಿ ಫೌಂಡೇಷನ್, ಬೆಂಗಳೂರು ಇವರ ಅನುದಾನದ ಸಹಭಾಗಿತ್ವದಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ 1 ರಿಂದ 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ (ಈಗಾಗಲೇ ವಾರದಲ್ಲಿ ಎರಡು ದಿನ ನೀಡಲಾಗುತ್ತಿರುವ ಪೂರಕ ಪೌಷ್ಟಿಕ ಆಹಾರದ ಹೊರತಾಗಿ) ವಾರದ ಎಲ್ಲಾ 6 ದಿನಗಳಲ್ಲಿ ಪೂರಕ ಪೌಷ್ಠಿಕ ಆಹಾರವನ್ನು ವಿತರಿಸುವ ಕಾರ್ಯಕ್ರಮವನ್ನು ಅನುಷ್ಠಾನ ಮಾಡುವ ಸಂಬಂಧ ಮಾರ್ಗಸೂಚಿ ಎಂಬ ವಿಷಯ ಒಳಗೊಂಡಿದೆ.

ಈ ಯೋಜನೆ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಮಾತನಾಡಿದ್ದು, "ಅಜೀಂ ಪ್ರೇಮ್ಜಿ ಫೌಂಡೇಷನ್ನವರು ರೂ. 1500 ಕೋಟಿ ನೀಡಿದ್ದು ಮಕ್ಕಳಿಗೆ ಇನ್ನು ಮುಂದೆ ವಾರಕ್ಕೆ 6 ದಿನ ಮೊಟ್ಟೆ ನೀಡಲಾಗುವುದು" ಎಂದು ಹೇಳಿದ್ದಾರೆ. ಕಾರ್ಯಕ್ರಮದ ವಿವರ, ವೆಚ್ಚ, ಮಾರ್ಗಸೂಚಿ ಇಲ್ಲಿದೆ.
ಯೋಜನೆಯ ವಿವರಗಳು: ರಾಜ್ಯ ಸರ್ಕಾರದ ಶೇಕಡಾ 100ರ ಆರ್ಥಿಕ ಅನುದಾನದ ನೆರವಿನಿಂದ ರಾಜ್ಯದಲ್ಲಿ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 1 ರಿಂದ 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅಪೌಷ್ಠಿಕತೆ ಮತ್ತು ರಕ್ತ ಹೀನತೆ ನಿವಾರಿಸಲು ಮಧ್ಯಾಹ್ನದ ಬಿಸಿಯೂಟದೊಂದಿಗೆ ವಾರಕ್ಕೆ 2 ದಿನಗಳಂದು ಪೂರಕ ಪೌಷ್ಠಿಕ ಆಹಾರವಾಗಿ ಮೊಟ್ಟೆ, ಮೊಟ್ಟೆಯನ್ನು ಸ್ವೀಕರಿಸದೇ ಇರುವ ವಿದ್ಯಾರ್ಥಿಗಳಿಗೆ ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿಯನ್ನು ವಿತರಿಸುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಈಗಾಗಲೇ ಅನುಷ್ಠಾನಗೊಳಿಸಲಾಗಿದೆ.
ಇದಕ್ಕೆ ಬೆಂಬಲವಾಗಿ ಹಾಗೂ ಪೂರಕವಾಗಿ, ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಸದರಿ ಕಾರ್ಯಕ್ರಮವನ್ನು ಮತ್ತಷ್ಟು ಬಲವರ್ಧನೆಗೊಳಿಸಲು ರಾಜ್ಯದ ಪ್ರತಿಷ್ಠಿತ ಖಾಸಗಿ ಸಂಸ್ಥೆಗಳ ವಲಯದಿಂದ ಅಜೀಂ ಪೇಮ್ಜೀ ಫೌಂಡೇಷನ್ ಫಾರ್ ಡೆವೆಲಪ್ಮೆಂಟ್ (APF) ಸಂಸ್ಥೆ, ಇವರು ತಮ್ಮ ಅನುದಾನದ ನೆರವಿನೊಂದಿಗೆ ಸಹಭಾಗಿತ್ವ ನೀಡಲು ಮುಂದೆ ಬಂದಿರುತ್ತಾರೆ ಎಂದು ಆದೇಶ ಹೇಳಿದೆ.
2024-25ನೇ ಸಾಲಿನಿಂದ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಪ್ರಸ್ತುತ 2 ದಿನಗಳಿಗೆ ನೀಡುತ್ತಿರುವ ಪೂರಕ ಪೌಷ್ಠಿಕ ಆಹಾರದ ಜೊತೆಗೆ ವಾರಕ್ಕೆ ಪ್ರತಿ ವಿದ್ಯಾರ್ಥಿಗೆ ಒಟ್ಟು 6 ದಿನಗಳ ಅವಧಿಗೆ ಪೂರಕ ಪೌಷ್ಠಿಕ ಆಹಾರವಾಗಿ ಮೊಟ್ಟೆಯನ್ನು, ಮೊಟ್ಟೆ ಸ್ವೀಕರಿಸದೇ ಇರುವ ವಿದ್ಯಾರ್ಥಿಗಳಿಗೆ ಇತರೆ ಪೂರಕ ಪೌಷ್ಠಿಕ ಆಹಾರವಾಗಿ ಬಾಳಹಣ್ಣು ಅಥವಾ ಶೇಂಗಾ ಚಿಕ್ಕಿಯನ್ನು ಹೆಚ್ಚುವರಿಯಾಗಿ ವಿತರಿಸುವ ಕುರಿತಂತೆ ಅಜೀಂ ಪೇಮ್ಜೀ ಫೌಂಡೇಷನ್ ಫಾರ್ ಡೆವೆಲಪ್ಮೆಂಟ್ ಸಂಸ್ಥೆಯು ಶಾಲಾ ಶಿಕ್ಷಣ ಇಲಾಖೆಯೊಂದಿಗೆ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ದಿನಾಂಕ 20.07.2024 ರಂದು ಒಡಂಬಡಿಕೆ ಮಾಡಿಕೊಂಡಿರುತ್ತಾರೆ.
ರಾಜ್ಯದ ಅಂದಾಜು 55,64,394 -ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್-2024ರಿಂದ ಮುಂದಿನ ಮೂರು ವರ್ಷಗಳ ಅವಧಿಗೆ ಆಗುವ ಒಟ್ಟು ಅಂದಾಜು ವೆಚ್ಚ ರೂ.1591,60,14,000 ಆರ್ಥಿಕ ಅನುದಾನವನ್ನು ಭರಿಸಲು ಒಪ್ಪಿಗೆ ಸೂಚಿಸಿ Grant Agreement ಅನ್ನು ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದೆ.
ಕಾರ್ಯಕ್ರಮದ ಉದ್ದೇಶಗಳು
* ಕರ್ನಾಟಕ ಸರ್ಕಾರದೊಂದಿಗೆ ಕೈಜೋಡಿಸಿ ಶಾಲಾ ವಿದ್ಯಾರ್ಥಿಗಳ ನಿರಂತರ ಕಲಿಕೆಯನ್ನು ಮತ್ತು ಬೌದ್ಧಿಕ ವಿಕಾಸವನ್ನು ಪ್ರೋತ್ಸಾಹಿಸುವುದು.
* ಶಾಲೆಗಳಿಗೆ ದಾಖಲಾಗಿರುವ ವಿದ್ಯಾರ್ಥಿಗಳ ದೈನಂದಿನ ತರಗತಿ ಹಾಜರಾತಿಯನ್ನು ವೃದ್ಧಿಸುವುದು.
* ವಿದ್ಯಾರ್ಥಿಗಳ ಸಮಗ್ರ ದೈಹಿಕ ಆರೋಗ್ಯ ಮತ್ತು ಬೆಳವಣಿಗೆಯನ್ನು ಉತ್ತಮಗೊಳಿಸಿ ಅಭಿವೃದ್ಧಿಪಡಿಸುವುದು.
* ವಿದ್ಯಾರ್ಥಿಗಳಲ್ಲಿರುವ ಅಪೌಷ್ಠಿಕತೆ ಮತ್ತು ರಕ್ತ ಹೀನತೆಯನ್ನು ನಿವಾರಿಸುವುದು. ರಾಜ್ಯ ಸರ್ಕಾರ ನೀಡುತ್ತಿರುವ ವಾರಕ್ಕೆ 2 ದಿನಗಳ ಪೂರಕ ಪೌಷ್ಠಿಕ ಆಹಾರವನ್ನು ವಾರದ ಎಲ್ಲಾ ದಿನಗಳಿಗೂ ವಿಸ್ತರಿಸಿ, ವಾರದಲ್ಲಿ ಹೆಚ್ಚುವರಿಯಾಗಿ 4 ದಿನಗಳಂದು ನೀಡಿ ವಿದ್ಯಾರ್ಥಿಗಳ ಪೌಷ್ಠಿಕತೆಯನ್ನು ಬೆಂಬಲಿಸುವುದು.
* ಮೊಟ್ಟೆ ಸ್ವೀಕರಿಸದೇ ಇರುವ ವಿದ್ಯಾರ್ಥಿಗಳಿಗೆ ಮೊಟ್ಟೆಗೆ ಪರ್ಯಾಯವಾಗಿ ಸಮನಾದ ಬಹು ಪೋಷಕಾಂಶಗಳುಳ್ಳ ಇತರೆ ಪೂರಕ ಪೌಷ್ಠಿಕ ಆಹಾರವನ್ನು (Eggs / Other Healthy Nutritional Supplements) ಒದಗಿಸುವುದು.












Click it and Unblock the Notifications