ಬೀದರ್ ನಲ್ಲಿ ಫೆ.9ರಿಂದ ರಾಯಲ್ ಕ್ರಿಕೆಟ್ ಟ್ರೋಫಿ
ಬೀದರ್, ಜ.29 : ರಾಯಲ್ ಕ್ರಿಕೆಟ್ ಕ್ಲಬ್ ಬೀದರ್ ನಲ್ಲಿ ಫೆ.9ರಿಂದ 24ರವರೆಗೆ ಅಖಿಲ ಭಾರತ ಮಟ್ಟದ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಿದೆ. 50 ಓವರ್ ಗಳ ಈ ಕ್ರಿಕೆಟ್ ಟೂರ್ನಿಯಲ್ಲಿ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಗೋವಾ ಮತ್ತು ರಾಜ್ಯದ ವಿವಿಧ ನಗರಗಳ ತಂಡಗಳು ಭಾಗವಹಿಸಲಿವೆ. ಸಚಿವೆ ಉಮಾಶ್ರೀ ಮತ್ತು ಸಂಸದ ಧರಂಸಿಂಗ್ ಟೂರ್ನಿಗೆ ಶುಭ ಹಾರೈಸಿದ್ದಾರೆ.
ಎಸ್ಆರ್ಎಸ್ ಸಭಾಂಗಣದಲ್ಲಿ ರಾಯಲ್ ಕ್ರಿಕೆಟ್ ಕ್ಲಬ್ ಬೀದರ್, ಬೀದರ್ ಕ್ರಿಕೆಟ್ ಕಂಟ್ರೋಲ್ ಅಸೋಶಿಯೇಷನ್ ಹಾಗೂ ಕನ್ನಡ ಸಾಹಿತ್ಯ ಸಂಘ ಆಯೋಜಿಸಿದ್ದ ಸಮಾರಂಭದಲ್ಲಿ ರಾಯಲ್ ಟ್ರೋಫಿ 2014 ಅಖಿಲ ಭಾರತ ಕ್ರಿಕೆಟ್ ಟೂರ್ನಿಯ ಮುನ್ನೋಟ ಪ್ರತಿಯನ್ನು ಬೀದರ್ ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ ಮತ್ತು ಸಂಸದ ಧರಂಸಿಂಗ್ ಬಿಡುಗಡೆ ಮಾಡಿದರು.

ನಂತರ ಮಾತನಾಡಿದ ಸಚಿವೆ ಉಮಾಶ್ರೀ ಅಖಿಲ ಭಾರತ ಮಟ್ಟದ ಕ್ರಿಕೆಟ್ ಟೂರ್ನಿಯಿಂದಾಗಿ ಈ ಭಾಗದ ಕ್ರಿಕೆಟಿಗರಿಗೆ ಸಾಕಷ್ಟು ಅನುಭವ ಸಿಗುವ ಅವಕಾಶ ಒದಗಲಿದೆ ಎಂದು ಅಭಿಪ್ರಾಯಪಟ್ಟರು. ಬೀದರ್ ಜಿಲ್ಲೆಗೆ ಬೇರೆ-ಬೇರೆ ಜಿಲ್ಲೆಗಳಿಂದ ಮತ್ತು ಹೊರ ರಾಜ್ಯಗಳಿಂದ ಬರುವ ಕ್ರೀಡಾಪಟುಗಳು ಇಲ್ಲಿಯವರಿಗೆ ಪ್ರೇರಣೆಯಾದರೆ, ಇಲ್ಲಿಯ ಕ್ರೀಡಾಪಟುಗಳ ಪ್ರತಿಭೆ ಕೂಡ ಬೆಳಕಿಗೆ ಬರಲು ಸಾಧ್ಯ ಎಂದು ಅವರು ತಿಳಿಸಿದರು.
ಟೂರ್ನಿ ಬಗ್ಗೆ ಮಾಹಿತಿ ನೀಡಿದ ಕೆಎಸ್ಸಿಎ ಜಿಲ್ಲಾ ಸಂಯೋಜಕ ಕುಶಾಲ ಪಾಟೀಲ್ ಗಾದಗಿ, ರಾಯಲ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ದೇಶದ ವಿವಿಧೆಡೆಯಿಂದ ಕ್ರಿಕೆಟ್ ತಂಡಗಳು ಭಾಗವಹಿಸಲಿದ್ದು ಇದಕ್ಕೆ ಕೆಎಸ್ಸಿಎ ಸಂಪೂರ್ಣ ಸಹಕಾರ ನೀಡಿದೆ ಎಂದು ತಿಳಿಸಿದರು. ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಗೋವಾ ಮತ್ತು ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ, ರಾಯಚೂರು, ಬಿಜಾಪೂರ, ಗುಲ್ಬರ್ಗ, ಯಾದಗಿರಿ ಸೇರಿದಂತೆ ಬೀದರ್ ಜಿಲ್ಲೆಯ ಹಲವು ತಂಡಗಳು 50 ಓವರ್ ಗಳ ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿವೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ, ರಾಯಲ್ ಟ್ರಸ್ಟ್ ಕಾರ್ಯದರ್ಶಿ ಡಾ. ರಾಜಕುಮಾರ ಕರ್ವೆ, ಈ ಭಾಗದಲ್ಲಿ ಸಾಕಷ್ಟು ಪ್ರತಿಭೆಗಳಿದ್ದು ಅವುಗಳನ್ನು ಬೆಳಕಿಗೆ ತರುವ ಕೆಲಸವನ್ನು ರಾಯಲ್ ಕ್ರಿಕೆಟ್ ಕ್ಲಬ್ ಮಾಡುತ್ತಿದೆ ಎಂದು ಹೇಳಿದರು. ಕ್ಲಬ್ ಈ ಬಾರಿ ಅಖಿಲ ಭಾರತ ಮಟ್ಟದ ಟೂರ್ನಿಯನ್ನು ಸತತ 3ನೇ ವರ್ಷ ಆಯೋಜಿಸುತ್ತಿದೆ ಎಂದರು.
ಸಮಾರಂಭದಲ್ಲಿ ಶಾಸಕ ರಘುನಾಥ ಮಲ್ಕಾಪುರೆ, ಮಾಜಿ ಶಾಸಕ ರಹೀಮ್ ಖಾನ್, ಶಿವಶಂಕರ ಟೋಕರೆ, ರಾಯಲ್ ಟ್ರಸ್ಟ್ ಖಜಾಂಚಿ ರವಿ ಮೂಲೆಗೆ, ಅಸೋಶಿಯೇಷನ್ ಕಾರ್ಯದರ್ಶಿ ಅನೀಲ್ ಕುಮಾರ ದೇಶಮುಖ, ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಸುರೇಶ ಚೆನಶೆಟ್ಟಿ ಮುಂತಾದವರು ಭಾಗವಹಿಸಿದ್ದರು.












Click it and Unblock the Notifications