Charmadi Ghat: ಶಿರಾಡಿ ಘಾಟ್, ಕಾರ್ಕಳ-ಶೃಂಗೇರಿ ರಸ್ತೆ ಬಂದ್; ಚಾರ್ಮಾಡಿ ಘಾಟ್ಗೆ ಸಂಕಷ್ಟ
ರಾಜ್ಯದ ಕರಾವಳಿ, ಮಲೆನಾಡು ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಹಲವು ಅನಾಹುತ ಸಂಭವಿಸಿದೆ. ಮಿತಿ ಮೀರಿದ, ಅವೈಜ್ಞಾನಿಕ ಅಭಿವೃದ್ಧಿಯಿಂದಾಗಿ ಪಶ್ಚಿಮ ಘಟ್ಟಗಳಲ್ಲಿ ಭೂಕುಸಿತ ಸಂಭವಿಸುತ್ತಿದ್ದು, ರಸ್ತೆ ಸಂಚಾರಕ್ಕೆ ಅಡಚಣೆಯಾಗಿದೆ.
ಭಾರಿ ಮಳೆಯಿಂದ ಭೂಕುಸಿತದ ಪರಿಣಾಮವಾಗಿ ಸಕಲೇಶಪುರದಲ್ಲಿ ಶಿರಾಡಿ ಘಾಟ್ ಹೆದ್ದಾರಿ ಬಂದ್ ಮಾಡಲಾಗಿದ್ದರೆ, ಚಿಕ್ಕಮಗಳೂರಿನಲ್ಲಿ ಕಾರ್ಕಳ-ಶೃಂಗೇರಿ ಹೆದ್ದಾರಿಯನ್ನು ಕೂಡ ಮುಚ್ಚಲಾಗಿದೆ, ಇದರಿಂದಾಗಿ ಕರಾವಳಿ ಜಿಲ್ಲೆಗಳಿಗೆ ತೆರಳಲು ಚಾರ್ಮಾಡಿ ಘಾಟ್ ಒಂದೇ ಮಾರ್ಗವಾಗಿದ್ದು ಭಾರಿ ಸಂಚಾರ ದಟ್ಟಣೆಗೆ ಕಾರಣವಾಗಿದೆ.

ಮಂಗಳೂರು ಸಂಪರ್ಕಿಸಲು ಇರುವುದು ಇದು ಒಂದೇ ಮಾರ್ಗವಾಗಿರುವ ಕಾರಣ, ಚಾರ್ಮಾಡಿ ಘಾಟ್ನಲ್ಲಿ ಭಾರಿ ಪ್ರಮಾಣದ ವಾಹನಗಳ ಸಂಚಾರ ಶುರುವಾಗಿದೆ. ಈಗಾಗಲೇ ಚಾರ್ಮಾಡಿ ರಸ್ತೆಯಲ್ಲಿ ಬಿರುಕು ಮೂಡಿದ್ದು ಭಯದಿಂದಲೇ ವಾಹನ ಸಂಚಾರರು ಪ್ರಯಾಣಿಸಬೇಕಿದೆ.
ಚಾರ್ಮಾಡಿ ಘಾಟ್ನಲ್ಲಿ ಕೂಡ ದಾಖಲೆ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಭಾರಿ ಪ್ರಮಾಣದ ವಾಹನಗಳನ್ನು ಈ ರಸ್ತೆಯಲ್ಲಿ ನಿಷೇಧಿಸಲಾಗಿದೆ. ಚಾರ್ಮಾಡಿ ಘಾಟ್ ರಸ್ತೆಯ ಅಲ್ಲಲ್ಲಿ ರಸ್ತೆ ಹಾಗೂ ತಡೆಗೋಡೆ ಬಿರುಕು ಬಿಟ್ಟಿದ್ದು, ಮಿತಿ ಮೀರಿದ ವಾಹನಗಳು ಸಂಚರಿಸಿದರೆ ಮತ್ತಷ್ಟು ದುರಂತ ಸಂಭವಿಸುವ ಅಪಾಯವಿದೆ.
ದುರಸ್ತಿ ಆಗುವವರೆಗೆ ಸಂಕಷ್ಟ
ಶಿರಾಡಿಘಾಟ್ನಲ್ಲಿ ಸರಣಿ ಭೂ ಕುಸಿತದಿಂದ ಅವಘಡ ಆಗದಂತೆ ವಾಹನ ಸಂಚಾರ ಬಂದ್ ಮಾಡಿ ಹಾಸನ ಡಿಸಿ ಸಿ ಸತ್ಯಭಾಮ ಆದೇಶ ನೀಡಿದ್ದಾರೆ. ಬೆಂಗಳೂರು ಮಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ ಶಿರಾಡಿಘಾಟ್ನಲ್ಲಿ ಗುರುವಾರದಿಂದ ರಸ್ತೆ ದುರಸ್ತಿ ಆಗುವವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ.
ರೈಲು ಹಳಿ ಮೇಲೆ ಉರುಳಿದ ಮರ
ಭಾರಿ ಮಳೆ ಗಾಳಿಯಿಂದಾಗಿ ಹೊಸನಗರ ತಾಲೂಕಿನ ಅರಸಾಳು ಸಮೀಪದ ಬಟಾಣಿಜಡ್ಡು ಗ್ರಾಮದ ಬಳಿ ರೈಲು ಹಳಿ ಮೇಲೆ ಬೃಹತ್ ಮರ ಉರುಳಿ ಬಿದ್ದಿದೆ. ಗುರುವಾರ ಸಂಜೆ 5 ಗಂಟೆಗೆ ಘಟನೆ ನಡೆದಿದೆ. ಮರ ಬಿದ್ದ ಹಿನ್ನೆಲೆಯಲ್ಲಿ ವಿದ್ಯುತ್ ತಂತಿಗಳು ತುಂಡಾಗಿವೆ. ಅರಣ್ಯ ಇಲಾಖೆ, ಮೆಸ್ಕಾಂ ಸಿಬ್ಬಂದಿ ಸ್ಥಳಕ್ಕಾಗಮಿಸಿ ಮರ ತೆರವುಗೊಳಿಸಿದ್ದಾರೆ. ಗುರುವಾರ ಬೆಳಗ್ಗೆ ಕೂಡ ಮರ ಬಿದ್ದ ಪರಿಣಾಮ ರೈಲು 2 ಗಂಟೆ ತಡವಾಗಿ ಚಲಿಸಿತ್ತು.












Click it and Unblock the Notifications