Rain News: 24 ಗಂಟೆಯಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಸುರಿಯಲಿದೆ ಭಾರಿ ಮಳೆ!
ಕರ್ನಾಟಕದಲ್ಲಿ ಮುಂಗಾರು ಮಳೆ (Monsoon) ಸುರಿಯದೇ ಸಂಕಷ್ಟ ಎದುರಾಗಿರುವ ವೇಳೆಗೆ ಹಿಂಗಾರು ಮಳೆ ಕೈಹಿಡಿದಿದೆ. ಅದ್ರಲ್ಲೂ ಈ ಬಾರಿ ಸಿಕ್ಕಾಪಟ್ಟೆ ಮಳೆ ಕೊರತೆಯ ಕಾರಣಕ್ಕೆ ಪರದಾಡಿ ಹೋಗಿದ್ದ ದಕ್ಷಿಣ ಕರ್ನಾಟಕ ಜನತೆಗೆ, ನೆಮ್ಮದಿಯ ನಿಟ್ಟುಸಿರು ಬಿಡುವ ಸುದ್ದಿ ಸಿಕ್ಕಿದೆ. ಕರ್ನಾಟಕದ ಈ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಯಲ್ಲಿ ಭಾರಿ ಮಳೆ ಸುರಿಯುವ ಬಗ್ಗೆ ಮಾಹಿತಿ ಸಿಕ್ಕಿದೆ.
ಒಂದು ಕಡೆ ಬಂಗಾಳಕೊಲ್ಲಿ (Bay Of Bengal) ಭಾಗದಲ್ಲಿ ತೀವ್ರ ವಾಯುಭಾರ ಕುಸಿತವಾಗಿ ಭರ್ಜರಿ ಮಳೆ ಸುರಿಯುವ ಸೂಚನೆ ಸಿಕ್ಕಿದೆ. ಮತ್ತೊಂದು ಕಡೆ ಕರ್ನಾಟಕದ ದಕ್ಷಿಣದಲ್ಲಿ, ಭಾರಿ ಮಳೆ ಸುರಿಯುವ ಮುನ್ಸೂಚನೆ ಸಿಕ್ಕಿದೆ. ಅದರಲ್ಲೂ ತೀವ್ರ ಮಳೆ ಕೊರತೆ ಕಾರಣಕ್ಕೆ ನಲುಗಿ ಹೋಗಿರುವ ಕಾವೇರಿ ಕೋಳ್ಳದ ಜನರಿಗೆ ಇದೀಗ ಸಿಹಿಸುದ್ದಿ ಸಿಕ್ಕಿದೆ. ಹಾಗಾದ್ರೆ ಈಗ ಹಿಂಗಾರು ಮಳೆ ಯಾವ ಮಟ್ಟಿಗೆ ಸುರಿಯಬಹುದು? ಹವಾಮಾನ ಇಲಾಖೆ ಅಧಿಕಾರಿಗಳೀಗ ಅನ್ನದಾತರಿಗೆ ಮಳೆ ಬಗ್ಗೆ ನೀಡಿರುವ ಸಿಹಿ ಸುದ್ದಿ ಏನು?

ಕಾವೇರಿ ಕೊಳ್ಳದಲ್ಲಿ ಸುರಿಯಲಿದೆ ಭಾರಿ ಮಳೆ!
ಈ ಬಾರಿ ಉತ್ತಮವಾಗಿ ಮುಂಗಾರು ಮಳೆ ಸುರಿಯಬಹುದು ಎಂಬ ನಿರೀಕ್ಷೆಯಲ್ಲಿ ಜನರೂ ಇದ್ದರು. ಅದರಲ್ಲೂ ದಕ್ಷಿಣ ಭಾರತದಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚಾಗಿ ಮಳೆಯಾಗುತ್ತೆ ಎಂಬ ನಿರೀಕ್ಷೆ ಮೊಳಕೆಯೊಡೆದಿತ್ತು. ಆದರೆ ಆಗಿದ್ದೇ ಬೇರೆ ದಿಢೀರ್ ಮುಂಗಾರು ಮಾರುತ ಬರುವುದು ತಡವಾಗಿತ್ತು. ಹಾಗೇ ಸೈಕ್ಲೋನ್ ಪರಿಣಾಮ ಎಲ್ಲಾ ಅಲ್ಲೋಲ ಕಲ್ಲೋಲವಾಗಿ ಕರ್ನಾಟಕದಲ್ಲಿ ಮುಂಗಾರು ಮಳೆಯ ಭಾರಿ ಕೊರತೆ ಉಂಟಾಗಿದೆ. ಇನ್ನು ಈಗ ಹಿಂಗಾರು ಮಳೆಯ ಅಬ್ಬರ ಶುರುವಾಗಿದ್ದು, ರಾಜ್ಯದ ದಕ್ಷಿಣ ಒಳನಾಡು, ಕರಾವಳಿ ಸೇರಿ ಮಲೆನಾಡು ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯುವ ಮುನ್ಸೂಚನೆ ಸಿಕ್ಕಿದೆ.
ಮೈಸೂರು ಜಿಲ್ಲೆಗೆ ಪಕ್ಕಾ ಬಂಪರ್!
ಇನ್ನು ಮುಂದಿನ 24 ಗಂಟೆಯಲ್ಲಿ, ಮೈಸೂರು ಜಿಲ್ಲೆಗೆ ಭಾರಿ ಪ್ರಮಾಣದ ಮಳೆಯಾಗುವ ನಿರೀಕ್ಷೆ ಇದೆ. ಜೀವನದಿ ಕಾವೇರಿ ಉಗಮ ಸ್ಥಾನ ಕೊಡಗು ಜಿಲ್ಲೆ ಸೇರಿದಂತೆ ಹಾಸನ ಮತ್ತೆ ಮಂಡ್ಯ, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲೂ ಸಾಮಾನ್ಯದಿಂದ ಭಾರಿ ಮಳೆಯ ನಿರೀಕ್ಷೆ ಮಾಡಲಾಗಿದೆ. ಇಷ್ಟಾದರೂ ಮುಂಗಾರು ಮಳೆಯ ಅಬ್ಬರಕ್ಕೆ ತತ್ತರಿಸಿದ್ದ ರಾಜ್ಯದ ಉತ್ತರ ಭಾಗ, ಅಂದರೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಒಣ ಹವೆ ಇರುವ ಸಾಧ್ಯತೆಯಿದೆ.
ತುಂಬಲಿವೆಯಾ ಕರ್ನಾಟಕದ ಡ್ಯಾಂ?
ಒಟ್ನಲ್ಲಿ ರಾಜ್ಯದಲ್ಲಿ ಮತ್ತೆ ಮಳೆ ಆರ್ಭಟ ಶುರುವಾದ ಹಿನ್ನೆಲೆಯಲ್ಲಿ ಅನ್ನದಾತ ರೈತನಿಗೆ ಖುಷಿ ಸಿಕ್ಕಿದೆ. ಆದರೆ ಇದೇ ರೀತಿ ಕನಿಷ್ಠ ಒಂದು ವಾರ ಮಳೆ ಸುರಿಯಬೇಕು ಅಂತಿದ್ದಾರೆ ಹವಾಮಾನ ಇಲಾಖೆ ಅಧಿಕಾರಿಗಳು. ಬಂಗಾಳಕೊಲ್ಲಿ ಭಾಗದಲ್ಲಿ ಎದುರಾಗಿರುವ ಸ್ಥಿತಿ ಹಾಗೇ ವಾಯುಭಾರ ಕುಸಿತ ನೋಡುತ್ತಿದ್ದರೆ ಮುಂದಿನ 1 ವಾರ ಮಳೆ ಅಬ್ಬರ ಇರಬಹುದು ಅಂತ ಹೇಳಲಾಗುತ್ತಿದೆ. ಅಕಸ್ಮಾತ್ ಈ ಸಮಯದಲ್ಲಿ ಜಲಾಶಯಗಳು ತುಂಬಿದರೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಕೂಡ ಕಡಿಮೆ ಆಗಲಿದೆ.

ಬರದ ಬೇಗೆಯಲ್ಲಿ ಬೆಂದಿದ್ದ ಕರ್ನಾಟಕ ಜನರಿಗೆ ಈಗ ಮಳೆರಾಯನು ಒಂದಷ್ಟು ರಿಲೀಫ್ ನೀಡಿದ್ದಾನೆ. ಇದರ ಜೊತೆಗೆ ಕುಡಿವ ನೀರಿಗೆ ಗ್ರಾಮೀಣ ಭಾಗದಲ್ಲಿ ಸಮಸ್ಯೆ ಎದುರಾಗಲಿದೆ ಎಂಬ ಆತಂಕ ನಿಧಾನವಾಗಿ ದೂರವಾಗುತ್ತಿದೆ. ಆದರೆ, ಈ ರೀತಿ ಹಿಂಗಾರು ಮಳೆ ಇನ್ನೂ ಹಲವು ದಿನಗಳ ಕಾಲ ಅಬ್ಬರಿಸಬೇಕಾಗಿದೆ. ಹೀಗಾಗಿ ರೈತರು ಕೂಡ ದೇವರಲ್ಲಿ ಈ ಕುರಿತು ಮೊರೆ ಇಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರೈತರ ಈ ಪ್ರಾರ್ಥನೆ ಫಲಿಸುವ ನಿರೀಕ್ಷೆಯೂ ಇದೆ. ಅಲ್ಲದೆ ನಿಧಾನವಾಗಿ ಹಿಂಗಾರು ಮಳೆ ಜೋರಾಗುತ್ತಿದೆ.












Click it and Unblock the Notifications