ವಿದೇಶಿ ನೆರವು ಪಡೆಯುವ ಎನ್ ಜಿಓಗಳ ವಿರುದ್ಧ ತನಿಖೆ
ಬೆಂಗಳೂರು, ಜು. 11 : ವಿದೇಶಗಳಿಂದ ಹಣಕಾಸಿನ ನೆರವು ಪಡೆದುಕೊಂಡು ಪರಿಸರ ಕಾಳಜಿ ಹೆಸರಿನಲ್ಲಿ ರಾಜ್ಯದ ಅಭಿವೃದ್ಧಿ ಯೋಜನೆಗಳ ವಿರುದ್ಧ ಹೋರಾಟ ನಡೆಸುವ ವಿದೇಶ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳ ವಿರುದ್ಧ ತನಿಖೆ ನಡೆಸಲಾಗುವುದು ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ವಿಧಾನಸಭೆಯಲ್ಲಿ ಹೇಳಿದ್ದಾರೆ.
ಗುರುವಾರದ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್, ಕೆಲವರು ದೇಶ ಭಕ್ತಿ ಹಾಗೂ ಪರಿಸರ ಕಾಳಜಿ ಹೆಸರಿನಲ್ಲಿ ಹೆಸರಿನಲ್ಲಿ ಸ್ವಯಂ ಸೇವಾ ಸಂಸ್ಥೆಗಳನ್ನು ಕಟ್ಟಿಕೊಂಡು ಸರ್ಕಾರಗಳು ಕೈಗೊಳ್ಳುವ ಎಲ್ಲಾ ಅಭಿವೃದ್ಧಿ ಯೋಜನೆಗಳಿಗೂ ಅಡ್ಡಿಪಡಿಸುತ್ತಿದ್ದಾರೆ ಎಂದು ವಿಷಯ ಪ್ರಸ್ತಾಪಿಸಿದರು.

ಎನ್ ಜಿಓಗಳು ಹೀಗೆ ಹೋರಾಟ ಆರಂಭಿಸಿದ ತಕ್ಷಣ ಅವುಗಳ ಬ್ಯಾಂಕ್ ಖಾತೆಗೆ ವಿದೇಶದಿಂದ ಹಣ ಬಂದು ಬೀಳುತ್ತದೆ. ಇದು ದೇಶದ್ರೋಹವಲ್ಲವೇ ಇಂತಹ ಎನ್ ಜಿಓಗಳ ವಿರುದ್ಧ ಏಕೆ ತನಿಖೆ ಮಾಡಿ, ಅವುಗಳ ಹಣಕಾಸಿನ ಮೂಲಗಳನ್ನು ಪತ್ತೆ ಹಚ್ಚಬಾರದು ಎಂದು ಪ್ರಶ್ನಿಸಿದರು. [ಲೋಕಾಯುಕ್ತ ಬಲೆಗೆ ಬಿದ್ದರೆ ಅಧಿಕಾರಿಗಳು ಅಮಾನತು]
ರಮೇಶ್ ಕುಮಾರ್ ಪ್ರಶ್ನೆಗೆ ಉತ್ತರ ನೀಡಿದ ಗೃಹ ಸಚಿವ ಕೆ.ಜೆ.ಜಾರ್ಜ್, ವಿದೇಶಿ ನೆರವು ಪಡೆದಿರುವ ಸ್ವಯಂ ಸೇವಾ ಸಂಸ್ಥೆಗಳ ಚಟುವಟಿಕೆ ಹಾಗೂ ಆರ್ಥಿಕ ವ್ಯವಹಾರದ ಬಗ್ಗೆ ಆಂತರಿಕ ಭದ್ರತಾ ಇಲಾಖೆಯ ಉನ್ನತ ಅಧಿಕಾರಿಗಳಿಂದ ತನಿಖೆ ನಡೆಸಿ ಮುಂದಿನ ಅಧಿವೇಶನದಲ್ಲಿ ಸದನಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ದೇಶದಲ್ಲಿ ಸ್ವಯಂ ಸೇವಾ ಸಂಸ್ಥೆಗಳು 11 ಸಾವಿರ ಕೋಟಿ ರೂ. ವಿದೇಶಗಳಿಂದ ಪಡೆದುಕೊಂಡಿವೆ. ಇವುಗಳಲ್ಲಿ ಕರ್ನಾಟಕದ ಸ್ವಯಂ ಸೇವಾ ಸಂಸ್ಥೆಗಳು 1069 ಕೋಟಿ ರೂ.ಗಳನ್ನು ಪಡೆದಿವೆ ಎಂಬ ವರದಿಗಳಿವೆ. ಹೀಗೆ ನೆರವು ಪಡೆದ ಸಂಸ್ಥೆಗಳು ಯಾವುವು? ಅವುಗಳ ಚಟುವಟಿಕೆ ಏನು? ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಜಾರ್ಜ್ ಹೇಳಿದರು.
ಎನ್ ಜಿಓ ಹಾವಳಿ ವಿಪರೀತವಾಗಿದೆ : ಕೆ.ಜೆ.ಜಾರ್ಜ್ ಮಾತಿಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಶಾಸಕ ಕೆ.ಜೆ. ಬೋಪಯ್ಯ, ಪರಿಸರದ ಹೆಸರಿನಲ್ಲಿ ಎನ್ ಜಿಓಗಳ ಹಾವಳಿ ವಿಪರೀತವಾಗಿದೆ. ವಿಚಿತ್ರವೆಂದರೆ, ವನ್ಯಜೀವಿ ಮಂಡಳಿಯಂತಹ ಪ್ರತಿಷ್ಠಿತ ಸರ್ಕಾರಿ ಅಂಗಗಳಲ್ಲಿ ಈ ಎನ್ ಜಿಓ ಪ್ರತಿನಿಧಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ ಎಂದರು.












Click it and Unblock the Notifications