ದೇವಸ್ಥಾನದಲ್ಲಿ ಪ್ರಸಾದ ಹಂಚುವ ಮುನ್ನಾ ಪರೀಕ್ಷೆ ಕಡ್ಡಾಯ!
ಬೆಂಗಳೂರು, ಏಪ್ರಿಲ್ 30: ದೇವಸ್ಥಾನದಲ್ಲಿ ಕೋಸಂಬರಿ, ಪುಳಿಯೋಗರೆ ಹಂಚುವುದು ಇನ್ನು ಮುಂದೆ ಸುಲಭವಾಗಲಿಕ್ಕಿಲ್ಲ. ನೈವೇದ್ಯಕ್ಕೆ ಮುನ್ನಾ ಪ್ರಸಾದವು ಸರ್ಕಾರಿ ಲ್ಯಾಬೊರೇಟರಿಗಳ ಮೂಲಕ ಹಾದು ಬರಬೇಕಾಗುವ ಸಮಯ ಸಮೀಪವಿದೆ.
ಚಾಮರಾಜನಗರ ಕಿಚ್ಗುತ್ತ ಮಾರಮ್ಮ ದೇವಾಲಯದಲ್ಲಿ ಸಂಭವಿಸಿದ ಭಾರಿ ಪ್ರಮಾದದ ನಂತರ ಎಚ್ಚೆತ್ತುಕೊಂಡಿರುವ ಸರ್ಕಾರವು ಹೀಗೊಂದು ಆದೇಶ ತರಲು ಯೋಜಿಸಿದ್ದು, ಯಾವುದೇ ದೇವಸ್ಥಾನದಲ್ಲಿ ಪ್ರಸಾದ ವಿತರಣೆಗೆ ಮುನ್ನ ಪರೀಕ್ಷೆ ಕಡ್ಡಾಯವೆಂಬ ನಿಯಮವನ್ನು ಮುಜರಾಯಿ ಇಲಾಖೆ ಮೂಲಕ ಜಾರಿಗೆ ತರಲು ಯೋಜಿಸಿದೆ.
ವಿಷ ಪ್ರಸಾದ ದುರಂತದ ಸುಳ್ವಾಡಿ ಮಾರಮ್ಮ ದೇವಾಲಯ ಸರ್ಕಾರದ ವಶಕ್ಕೆ
ಹೊಸ ನಿಯಮದನ್ವಯ ಸ್ಥಳೀಯ ಆರೋಗ್ಯಾಧಿಕಾರಿಗಳು ತಪಾಸಣೆ ನಡೆಸಿದ ಬಳಿಕವಷ್ಟೆ ದೇವಸ್ಥಾನಗಳಲ್ಲಿ ಪ್ರಸಾದ ವಿತರಿಸಬೇಕು, ಮುಜರಾಯಿ ಇಲಾಖೆ ದೇವಸ್ಥಾನಗಳಲ್ಲಿ ಮಾತ್ರವೇ ಈ ನಿಯಮ ಜಾರಿ ಆಗಲಿದೆ ಎನ್ನಲಾಗುತ್ತಿದೆ.
ಮುಜರಾಯಿ ಇಲಾಖೆಗೆ ಒಳಪಡದ ದೇವಸ್ಥಾನಗಳಲ್ಲಿ ಸ್ಥಳೀಯರೆ, ಅಥವಾ ಸ್ಥಳೀಯ ಆಡಳಿತ ಮಂಡಳಿ ಉಸ್ತುವಾರಿಯಲ್ಲಿ ಪ್ರಸಾದವನ್ನು ಪರೀಕ್ಷೆ ನಡೆಸಿದ ಬಳಿಕವಷ್ಟೆ ಭಕ್ತಾದಿಗಳಿಗೆ ಹಂಚಬೇಕಾಗುತ್ತದೆ.
ಪ್ರಸಾದಕ್ಕೆ ಬಳಸುವ ಸಾಮಗ್ರಿಗಳು ಗುಣಮಟ್ಟದಿಂದ ಕೂಡಿರಬೇಕು ಮತ್ತು ಪ್ರಸಾದ ತಯಾರಿಕೆ ಸಹ ಶುಚಿತ್ವದಿಂದ ಕೂಡಿರಬೇಕು ಎಂದು ಮುಜರಾಯಿ ಇಲಾಖೆ ಹೇಳಿದ್ದು, ಅದಕ್ಕೆ ತಕ್ಕಂತೆ ನಿಯಮಗಳನ್ನು ರೂಪಿಸಲಾಗಿದೆ.
ವಿಷಪ್ರಸಾದ ಸೇವಿಸಿದ ಸಂತ್ರಸ್ತರ ಆಸ್ಪತ್ರೆ ಬಿಲ್ ಎಷ್ಟಾಗಿದೆ ಗೊತ್ತಾ?
ರಾಜ್ಯದಲ್ಲಿ ಮುಜರಾಯಿ ವ್ಯಾಪ್ತಿಗೆ ಒಳಪಡುವ ಸುಮಾರು 35 ಸಾವಿರ ದೇವಾಲಯಗಳಿವೆ. ಈ ಎಲ್ಲ ದೇವಾಲಯಗಳಲ್ಲಿ ಪ್ರಸಾದ ವಿತರಣೆಗೆ ಮುನ್ನಾ ಆರೋಗ್ಯಾಧಿಕಾರಿಗಳು ಅಥವಾ ವೈದ್ಯಾಧಿಕಾರಿಗಳು ಪ್ರಸಾದವನ್ನು ಪರೀಕ್ಷೆ ಮಾಡಿದ ನಂತರವೇ ಭಕ್ತಾದಿಗಳಿಗೆ ವಿತರಣೆ ಮಾಡಬೇಕಾಗಿದೆ.
ಕಳೆದ ಡಿಸೆಂಬರ್ನಲ್ಲಿ ಚಾಮರಾಜನಗರದ ಸುಳ್ವಾಡಿಯ ಕಿಚ್ಗುತ್ ಮಾರಮ್ಮ ದೇವಾಲಯದಲ್ಲಿ ನಡೆದ ಆಡಳಿತ ಮಂಡಳಿ ಹಿತಾಸಕ್ತಿ ಸಂಘರ್ಷದಿಂದ ಪ್ರಸಾದದಲ್ಲಿ ವಿಷ ಬೆರೆಸಿದ್ದರಿಂದ 17 ಮಂದಿ ಸಾವನ್ನಪ್ಪಿದ್ದರು, ಇದು ದೇಶದಾದ್ಯಂತ ಸುದ್ದಿಯಾಗಿತ್ತು.