Karnataka By Election: ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಉಪಚುನಾವಣೆ: ಈ ಮೂರು ಕ್ಷೇತ್ರದಲ್ಲಿ ಯಾರಿಗೆ ಗೆಲುವು?
ಶಿವಮೊಗ್ಗ,ನವೆಂಬರ್ 16: ರಾಜ್ಯದಲ್ಲಿ ನಡೆದ ಉಪಚುನಾವಣೆಯ ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಕ್ಷೇತ್ರದಲ್ಲಿ ಎನ್ ಡಿಎ ಬೆಂಬಲಿತ ಅಭ್ಯರ್ಥಿ ಗೆಲ್ಲುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭವಿಷ್ಯ ನುಡಿದಿದ್ದಾರೆ.
ಈ ಕುರಿತು ಶನಿವಾರ ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆಗೆ ಮಾತಾನಾಡಿದ ಅವರು ರಾಜ್ಯದಲ್ಲಿ ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿದೆ, ಮೂರು ಕ್ಷೇತ್ರದಲ್ಲಿ ಎನ್ ಡಿಎ ಬೆಂಬಲಿತ ಅಭ್ಯರ್ಥಿ ಗೆಲ್ಲುತ್ತೇವೆ. ಮೂರು ಕ್ಷೇತ್ರಗಳಲ್ಲೂ ವಾತಾವರಣ ಚೆನ್ನಾಗಿತ್ತು ಜನರು ಒಳ್ಳೆಯ ಬೆಂಬಲ ಸೂಚಿಸಿದ್ದಾರೆ ಎಂದರು.

ಇನ್ನು ವಕ್ಪ್ ಬೋರ್ಡ್ ವಿರುದ್ದ ಬಿಜೆಪಿ ಕಮಿಟಿ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತಾನಾಡಿದ ಅವರು ವಕ್ಪ್ ಬೋರ್ಡ್ ಆಸ್ತಿ ಕಬಳಿಕೆ ವಿರುದ್ದ ಬಿಜೆಪಿ ಕಮಿಟಿ ರಚನೆ ಮಾಡಿದ್ದೇವೆ, ಈ ಕಮಿಟಿ ರಾಜ್ಯದಲ್ಲಿ ಪ್ರವಾಸ ಮಾಡಿ ಬಂದು ವರದಿ ಕೊಡ್ತಾರೆ, ವರದಿ ನಂತರ ಮುಂದಿನ ಹೋರಾಟದ ನಿರ್ಧಾರ ಮಾಡುತ್ತೇವೆ ಎಂದರು.
ಕಾಂಗ್ರೆಸ್ ಸರ್ಕಾರದ ಎಸ್ ಐಟಿ ರಚನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ ಅವರು, ಕೋವಿಡ್ ಸಂದರ್ಭದಲ್ಲಿ ಜೀವ ಉಳಿಸುವ ಕೆಲಸ ಮಾಡಿದ್ದೇವೆ, ದುರುದ್ದೇಶದಿಂದ ಎಸ್ ಐಟಿ ರಚನೆ ಮಾಡಿದ್ದಾರೆ, ನಾವು ಎಲ್ಲಾ ರೀತಿ ತನಿಖೆ ಎದುರಿಸಿ ಅದರಿಂದ ಹೊರಗೆ ಬರುತ್ತೇವೆ, ಕೋವಿಡ್ ಸಮಯದಲ್ಲಿ ಜನರ ಪ್ರಾಣ ಉಳಿಸುವ ಕೆಲಸ ಮಾಡಿದ್ದೇವೆ, ಜನರ ಡೈವರ್ಟ್ ಮಾಡಲು ಹಗರಣ ನಡೆದಿದೆ ಎಂಬ ಮಾತು ಹೇಳ್ತಿದ್ದಾರೆ ಎಂದರು.
ಕಾಂಗ್ರೆಸ್ ಸರ್ಕಾರ ಪತನದ ಕುರಿತು ಮಾತನಾಡಿ, ಸರ್ಕಾರ ಬೀಳಿಸುವ ಕೆಲಸ ಯಾರು ಮಾಡ್ತಿಲ್ಲ, ಹುಚ್ಚುತನದ ಪರಮಾವಧಿ ತೋರುತ್ತಿದ್ದಾರೆ, ಬಿಜೆಪಿ ಶಾಸಕರನ್ನು ಯಾರು ಕರೆಯುತ್ತಿಲ್ಲ, ಕಾಂಗ್ರೆಸ್ ಶಾಸಕರನ್ನು ಯಾರು ಕರೆಯುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಹೇಳಿದರು.
ಈ ಕುರಿತು ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರು ಮಾತನಾಡಿ, ಮೂರು ಕ್ಷೇತ್ರದಲ್ಲಿ ಎನ್ ಡಿ ಎ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಸಿದ್ದರಾಮಯ್ಯನವರು ತಮ್ಮ ಹೇಳಿಕೆ ಮೂಲಕ ತಮ್ಮ ಪಕ್ಷವಾದ ಕಾಂಗ್ರೆಸ್ಸಿನ ಹೈಕಮಾಂಡಿಗೆ ಬೆದರಿಕೆ ಹಾಕಿದ್ದಾರೆ. ನನ್ನನ್ನು ಯಾರೂ ಬದಲಿಸಲು ಸಾಧ್ಯವಿಲ್ಲ; ನಾನೇ ಮುಖ್ಯಮಂತ್ರಿಯಾಗಿ ಮುಂದುವರೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿಕೆ ಕೊಟ್ಟಿದ್ದಾರೆ. ಇದು ಆಶ್ಚರ್ಯ ತರುವಂತಿದೆ ಎಂದು ತಿಳಿಸಿದ್ದಾರೆ.
ತಮ್ಮನ್ನು ಬದಲಿಸಲು ಹೋದರೆ ಇಡೀ ಕರ್ನಾಟಕದಲ್ಲೇ ಗೊಂದಲ ನಿರ್ಮಾಣವಾಗಲಿದೆ. ಜನರ ಆಕ್ರೋಶ ಇರುತ್ತದೆ ಎಂಬುದನ್ನು ತಿಳಿಸಿದ್ದಾರೆ. ಇದರ ಜೊತೆಗೆ ಅವರ ಮೇಲಿನ ಆಪಾದನೆ ಸತ್ಯಕ್ಕೆ ದೂರ ಎಂದು ತಿಳಿಸಿದ್ದಾರೆ. ನ್ಯಾಯಾಂಗ, ಕಾನೂನಿನ ಮೇಲೆ ಅವರಿಗೆ ನಂಬಿಕೆ ಇಲ್ಲ ಎಂದು ಟೀಕಿಸಿದರು.
ಶಾಸಕರನ್ನು ಕೊಂಡುಕೊಂಡು ಸರಕಾರ ಬೀಳಿಸಲು ಮುಂದಾಗಿದ್ದಾರೆ ಎಂಬುದು ಸತ್ಯದೂರ ವಿಚಾರ. ಸಿದ್ದರಾಮಯ್ಯನವರ ಸರಕಾರದಲ್ಲಿ ಅವರ ತೆರವಿಗೆ ಅವರ ಶಾಸಕರೇ ಮುಂದಾಗಿದ್ದಾರೆ. ಸಿದ್ದರಾಮಯ್ಯನವರು ಸಿಎಂ ಸ್ಥಾನ ತೆರವುಗೊಳಿಸಬೇಕೆಂದು ಬಯಸುವ ಮುಖ್ಯಮಂತ್ರಿ ಆಕಾಂಕ್ಷಿಗಳು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯನವರೇ ನಿಮಗೆ ಹೊರಗಿನಿಂದ ತೊಂದರೆ ಇಲ್ಲ; ನಿಮ್ಮ ಪಕ್ಷದೊಳಗೇ ನಿಮ್ಮನ್ನು ಬದಲಿಸುವ ಪ್ರಯತ್ನ ನಡೆದಿದೆ. ನಿಮ್ಮ ಮೇಲೆ ಭ್ರಷ್ಟಾಚಾರದ ಸಾಕಷ್ಟು ಆಪಾದನೆಗಳಿವೆ. ಈಗಾಗಲೇ ತನಿಖೆಯೂ ನಡೆದಿದೆ. ಈ ಎಲ್ಲ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಗಳು ಗೌರವಾನ್ವಿತರಾಗಿ ತಮ್ಮ ಸ್ಥಾನವನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.
ಅಲ್ಲಸಲ್ಲದ ಆಪಾದನೆ ಮಾಡುವುದು, ತಮ್ಮದೇ ಹೈಕಮಾಂಡನ್ನು ಹೆದರಿಸುವುದು ಮತ್ತು ಪ್ರತಿಪಕ್ಷವಾದ ಬಿಜೆಪಿ ಮೇಲೆ ಅಲ್ಲಸಲ್ಲದ ಆಪಾದನೆ ಮಾಡುತ್ತಿರುವುದು ಸರಿಯಲ್ಲ. ನಾವು ನಿಮ್ಮ ಪಕ್ಷದ ಶಾಸಕರನ್ನು ಕೊಂಡುಕೊಳ್ಳುತ್ತಿರುವ ಹೇಳಿಕೆಗೆ ಒಂದೇ ಒಂದು ಸಾಕ್ಷಿ ಕೊಡಿ ಎಂದು ಸವಾಲು ಹಾಕಿದರು.












Click it and Unblock the Notifications