ಕೈ ಪಾಳಯದಲ್ಲಿ ಸಿಎಂ ಫೈಟ್: ಸಿದ್ದರಾಮಯ್ಯಗೆ ಧೈರ್ಯವಿದ್ದರೆ ಐದು ವರ್ಷ ಸಿಎಂ ನಾನೇ ಅಂತ ಹೇಳಲಿ: ಪ್ರತಾಪ್ ಸಿಂಹ
ಮೈಸೂರು, ಜೂನ್ 19: ಕಾಂಗ್ರೆಸ್ ಸರ್ಕಾರ ರಚನೆಯ ಆರಂಭದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಅಗಿ ಜಟಾಪಟಿ ಶುರುವಾಗಿದ್ದು, ಇದೀಗ ಹೈಕಮಾಂಡ್ ಸಿಎಂ ಆಯ್ಕೆ ವಿಚಾರಕ್ಕೆ ಬ್ರೇಕ್ ಹಾಕಿದೆ.ಆದರೆ ಕಾಂಗ್ರೆಸ್ ಪಾಳಯದಲ್ಲಿ ಅಧಿಕಾರ ಹಂಚಿಕೆಯ ವಿಚಾರ ಸಾಕಷ್ಟು ಸದ್ದು ಮಾಡುತ್ತಿದ್ದು, ವಿರೋಧ ಪಕ್ಷಕ್ಕೆ ಈ ವಿಚಾರ ದೊಡ್ಡ ಅಸ್ತ್ರ ಸಿಕ್ಕಂತಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಧಿಕಾರ ಬಿಟ್ಟು ಕೊಡುವ ಇರಾದೆ ಇಲ್ಲ. ಸಿದ್ದರಾಮಯ್ಯಗೆ ಧೈರ್ಯವಿದ್ದರೆ ಐದು ವರ್ಷ ಸಿಎಂ ನಾನೇ ಅಂತ ಹೇಳಲಿ ಎಂದು ಸಂಸದ ಪ್ರತಾಪ್ ಸಿಂಹ ಮೈಸೂರಿನಲ್ಲಿ ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ತಮ್ಮ ಚೇಲಾ ಪಡೆ ಮೂಲಕ ತಾವು ಪೂರ್ಣ ಅವಧಿಗೆ ಸಿಎಂ ಅಂತಾ ಹೇಳಿಸುತ್ತಿದ್ದಾರೆ. ಸಚಿವರಾದ ಮಹದೇವಪ್ಪ ಎಂ.ಬಿ.ಪಾಟೀಲ್ ಮೂಲಕ ಹೇಳಿಸಿದ್ದಾರೆ. ಸಿದ್ದರಾಮಯ್ಯಗೆ ಪೂರ್ಣವಧಿ ಸಿಎಂ ಅಂತಾ ಹೇಳುವ ಧೈರ್ಯವಿಲ್ಲ. ಕಾಂಗ್ರೆಸ್ ಧಾರಾಳ ಮನಸ್ಸಿನಿಂದ ಸಿದ್ದರಾಮಯ್ಯರನ್ನು ಸಿಎಂ ಮಾಡಿದೆ. ಆದರೆ ಸಿದ್ದರಾಮಯ್ಯಗೆ ಉದಾರತನದ ಮನಸ್ಸು ಇಲ್ಲ ಧೈರ್ಯವಿದ್ದರೆ ಸಿದ್ದರಾಮಯ್ಯ 5 ವರ್ಷ ಸಿಎಂ ನಾನೆ ಅಂತ ಹೇಳಲಿ ಎಂದರು.
ಈಗ ಸಿದ್ದರಾಮಯ್ಯರೇ ಪೂರ್ಣವಧಿ ಸಿಎಂ ಎನ್ನುವ ಮೂಲಕ ಒಕ್ಕಲಿಗರನ್ನು ಮುಗಿಸಲು ಹೊರಟ್ಟಿದ್ದರಾ ಎಂದು ಎಂ ಬಿ ಪಾಟೀಲ್ ಅವರನ್ನ ಪ್ರಶ್ನಿಸಿದ್ದಾರೆ. ನಿಮ್ಮ ಒಂದು ಹೇಳಿಕೆ ಪರಿಣಾಮ ಡಿ ಕೆ ಸುರೇಶ್ ನಿಮ್ಮ ಕೈ ಎಳೆದಿದ್ದಾರೆ. ಇನ್ನೊಂದು ಬಾರಿ ಅಂತಹ ಹೇಳಿಕೆ ಕೊಡಿ ಡಿ ಕೆ ಸುರೇಶ್ ನಿಮ್ಮ ಕೊರಳಪಟ್ಟಿ ಹಿಡಿಯುತ್ತಾರೆ. ಸಿದ್ದರಾಮಯ್ಯರ ಛೇಲಾ ಪಡೆಯ ಅಧ್ಯಕ್ಷ ಎಂದು
ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಬಗ್ಗೆ ಎಂ ಬಿ ಪಾಟೀಲ್ ವ್ಯಂಗ್ಯವಾಡಿದ ಅವರು, ಸಂತೋಷ್ ಅವರ ಬಗ್ಗೆ ಪದೇ ಪದೇ ಯಾಕೆ ಮಾತಾಡ್ತೀರಿ?
ಬ್ರಾಹ್ಮಣರನ್ನು ದಿನವೂ ಯಾಕೆ ಬೈಯ್ತೀರಿ, ಯಾಕೆ ನಿಮಗೆ ಬ್ರಾಹ್ಮಣರ ಮೇಲೆ ಇಷ್ಟು ದ್ವೇಷ ಎಂದು ಪ್ರಶ್ನಿಸಿದ್ದಾರೆ. ಬಸವೇಶ್ವರರು ಮೂಲದಲ್ಲಿ ಬ್ರಾಹ್ಮಣರು ಅಲ್ವಾ? ಬಿ ಎಲ್ ಸಂತೋಷ್ ನಿಮಗೆ ಏನಾದರೂ ತಿವಿದಿದ್ದಾರಾ? ಎಂ.ಬಿ ಪಾಟೀಲ್ ರೇ ನೀವು ನಿಜವಾಗಲೂ ಲಿಂಗಾಯತರಾ? ಎಂದು ಪ್ರಶ್ನಿಸಿದರು.

ಯಡಿಯೂರಪ್ಪ ಅವರನ್ನು ಜೈಲಿಗೆ ಕಳಿಸಿದ್ದು ಕಾಂಗ್ರೆಸ್ ಕುತಂತ್ರ ಅಲ್ವಾ. ಕಾಂಗ್ರೆಸ್ ಲಿಂಗಾಯತರಿಗೆ ಅನ್ಯಾಯ ಮಾಡಿದ್ರೂ ನೀವು ಸುಮ್ಮನೆ ಇದ್ರಿ. ದಿನೇಶ್ ಗುಂಡೂರಾವ್ ಯಡಿಯೂರಪ್ಪರನ್ನು ಹುಚ್ಚ ಅಂದಿದ್ದರು. ಆಗಲೂ ನಿಮ್ಮೊಳಗೆ ಲಿಂಗಾಯತ ಭಾವನೆ ಜಾಗೃತ ಆಗಲಿಲ್ಲವಲ್ಲ? ಯಡಿಯೂರಪ್ಪ ವಿರುದ್ದ ಷಡ್ಯಂತ್ರ ಮಾಡಲು ಕಾಂಗ್ರೆಸ್ ನಿಂದ ಸುಫಾರಿ ತೆಗೆದು ಕೊಂಡವರು ನೀವೆ ತಾನೇ? ಸಿದ್ದರಾಮಯ್ಯರು ಲಿಂಗಾಯತ ಧರ್ಮ ಒಡೆಯಲು ಹೋದಾಗ ಅದರ ಸುಫಾರಿ ಪಡೆದವರು ನೀವೆ ತಾನೇ? ಎಂದು ಪ್ರಶ್ನಿಸಿದರು.
ಪ್ರತಾಪ್ ಸಿಂಹ ಚಿಲ್ಲರೆ ರಾಜಕಾರಣ ಬಿಡಲಿ ಎಂಬ ಎಂ.ಬಿ ಪಾಟೀಲ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ಎಂ.ಬಿ ಪಾಟೀಲ್ ಗೆ ಈಗ ಸಿಕ್ಕಿರೋ ಖಾತೆಯಲ್ಲಿ ಬರೀ ಚಿಲ್ಲರೆ ಸಿಗುತ್ತದೆ. ಕೂತ ಕಡೆ ಕಂತೆ ಕಂತೆ ಕಾಸು ಬರುವ ಖಾತೆ ಸಿಗಲಿಲ್ಲ ಅಂತಾ ವಿಲ ವಿಲ ಒದ್ದಾಡುತ್ತಿದ್ದಾರೆ. ಎಂ ಬಿ ಪಾಟೀಲ್ ಗೆ ಬರೀ ಚಿಲ್ಲರೆ, ನೋಟು ಇದರ ಬಗ್ಗೆ ಮಾತ್ರ ಚಿಂತೆ. ಸಿದ್ದರಾಮಯ್ಯರ ಓಲೈಕೆಯೇ ತಮ್ಮ ಖಾತೆಯ ಜವಾಬ್ದಾರಿ ಅಂತಾ ಪಾಟೀಲ್ ಅಂದು ಕೊಂಡಿದ್ದಾರೆ. ಸಿದ್ದರಾಮಯ್ಯ ಬಂದೂಕಿಗೆ ಹೆಗಲು ಕೊಡೋದೆ ನಿಮ್ಮ ಕೆಲಸನಾ ಎಂದು ಪ್ರಶ್ನಿಸಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಯೋಗ್ಯ ವ್ಯಕ್ತಿ. ಉತ್ತರ ಕರ್ನಾಟಕದಲ್ಲಿ ಅವರದ್ದೇ ಆದ ಹವಾ ಇದೆ. ಹಿಂದುತ್ವ ಹಾಗೂ ರಾಷ್ಟ್ರೀಯವಾದ ದಲ್ಲಿ ಅವರಿಗೆ ನಂಬಿಕೆ ಇದೆ.
ಸೋಷಿಯಲ್ ಮಿಡಿಯಾದಲ್ಲಿ ಅವರಿಗೆ ವಿಪಕ್ಷ ನಾಯಕ ಸ್ಥಾನ ಕೊಡುವ ನಿಟ್ಟಿನಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ. ಕಾಂಗ್ರೆಸ್ ಪಕ್ಷದ ಸರ್ಕಾರವನ್ನ ಸಮರ್ಥವಾಗಿ ಎದುರಿಸುವ ನಾಯಕನ ಅವಶ್ಯಕತೆ ಇದೆ. ಅಧಿವೇಶನದ ಒಳಗಾಗಿ ವಿಪಕ್ಷ ಸ್ಥಾನಕ್ಕೆ ನಾಯಕನ ಆಯ್ಕೆ ಆಗುತ್ತೇ. ಕಾರ್ಯಕರ್ತರ ಮನದಾಸೆಯಂತೆ ಅರ್ಹ ವ್ಯಕ್ತಿಗೆ ಸ್ಥಾನ ಎಂದು ಹೇಳಿದರು.
ಗೃಹಲಕ್ಷ್ಮಿ ಯೋಜನೆ ಮಾತನಾಡಿ, ಗಂಡನ ದರೋಡೆ ಮಾಡಿ ಹೆಂಡತಿಗೆ ಕೊಡುವ ಕೆಲಸ ಮಾಡ್ತಾ ಇದ್ದಾರೆ. ಗಂಡನ ಜೇಬಿಗೆ ಕತ್ತರಿಹಾಕಿ ಹೆಂಡತಿಗೆ ಮಾಸಿಕ ಎರಡು ಸಾವಿರ ಕೊಡಲು ಹೊರಟಿದ್ದಾರೆ. ಅದು ಜನರಿಗೆ ಈಗ ಅರ್ಥ ಆಗ್ತಿದೆ . ಮದ್ಯದ ಬೆಲೆ ಏರಿಕೆ ಜೊತೆಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಬಿಟ್ಟಿ ಭಾಗ್ಯಗಳ ಯೋಜನೆ ಜಾರಿಗೆ ಮುಂದಾಗಿದ್ದಾರೆ.ಇದು ದೋಖಾ ಸರ್ಕಾರ ಎಂಬುದು ಜನರಿಗೆ ಗೊತ್ತಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.












Click it and Unblock the Notifications