ತಪ್ಪು ಮಾಡಿದ ಅಧಿಕಾರಿಗಳಿಗೆ ಶಿಕ್ಷೆ ಗ್ಯಾರಂಟಿ: ಸಚಿವ ಕೃಷ್ಣ ಬೈರೇಗೌಡ!
ರಾಜ್ಯದಲ್ಲಿ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ, ಜನರಿಗೆ ಇದರಿಂದ ಸಾಕಷ್ಟು ಸಮಸ್ಯೆ ಆಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಹೊಸ ಸರ್ಕಾರ ಕೂಡ ಈ ವಿಚಾರದ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿತ್ತು. ಈಗ ಕಂದಾಯ ಸಚಿವರು ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಅಧಿಕಾರಿಗಳ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ.
ಹೌದು, ಕಂದಾಯ ಎಲ್ಲಾ ಇಲಾಖೆಗಳ ಮಾತೃ ಇಲಾಖೆ. ಒಂದಲ್ಲಾ ಒಂದು ರೀತಿಯಲ್ಲಿ ನಿತ್ಯ ಜನರೊಂದಿಗೆ ಒಡನಾಟ ಇಟ್ಟುಕೊಂಡಿರುವ ಇಲಾಖೆ. ಇಂತಹ ಮಹತ್ವದ ಇಲಾಖೆಯಲ್ಲೂ ಕೆಲ ಭ್ರಷ್ಟ ಅಧಿಕಾರಿಗಳು ಮತ್ತು ನೌಕರರೂ ಇದ್ದಾರೆ ಎಂಬ ವಿಚಾರವನ್ನ ತಳ್ಳಿಹಾಕುವಂತಿಲ್ಲ. ಆದರೆ, ಕಾಂಗ್ರೆಸ್ ಸರ್ಕಾರ ಚುನಾವಣೆಗೆ ಮುನ್ನ ನೀಡಿದ ಮಾತಿನಂತೆ ಭ್ರಷ್ಟಾಚಾರಕ್ಕೆ ಇತಿಶ್ರೀ ಹಾಡಲು, ಜನರಿಗೆ ಶುದ್ಧ ಮತ್ತು ಭ್ರಷ್ಟಾಚಾರ ರಹಿತ ಆಡಳಿತ ನೀಡಲು ಇಲಾಖೆ ಹಾಗೂ ಸರ್ಕಾರ ಬದ್ಧವಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ಭ್ರಷ್ಟರ ವಿರುದ್ಧ ಕಠಿಣ ಕ್ರಮ
ಕಂದಾಯ ಇಲಾಖೆಯಲ್ಲಿ ಬೇರುಬಿಟ್ಟಿರುವ ಭ್ರಷ್ಟಾಚಾರ ಕೊನೆಗೊಳಿಸಿ, ಇಲಾಖೆಯ ಮೇಲೆ ಜನರಿಗೆ ಸಕಾರಾತ್ಮಕ ಭಾವನೆ ಮೂಡಬೇಕು ಎಂಬ ಉದ್ದೇಶದಿಂದ ಪಕ್ಷ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನನ್ನು ಸಚಿವನನ್ನಾಗಿ ಮಾಡಿ ಕಂದಾಯ ಇಲಾಖೆಯ ಜವಾಬ್ದಾರಿ ನೀಡಿದ್ದಾರೆ. ಈ ನಿಟ್ಟಿನಲ್ಲಿ ಕಳೆದ ಎರಡು ತಿಂಗಳ ಅವಧಿಯಲ್ಲಿ ಇಲಾಖೆಯಲ್ಲಿ ಸಾಕಷ್ಟು ಸುಧಾರಣಾ ಕ್ರಮಗಳನ್ನು ತರಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಬಾಕಿ ಇದ್ದ ಕೇಸ್ಗಳು ಫಿನಿಷ್!
ಅಲ್ಲದೆ ಅಧಿಕಾರಿ ವಲಯಕ್ಕೆ ಚುರುಕು ಮುಟ್ಟಿಸಲಾಗಿದೆ. ಕಳೆದ ಹಲವು ವರ್ಷಗಳಿಂದ ಬಾಕಿ ಇದ್ದಂತಹ ಅಧಿಕಾರಿಗಳ ಮೇಲಿನ ಶಿಸ್ತುಕ್ರಮ ಕಡತಗಳನ್ನು ವಿಲೇವಾರಿ ಮಾಡಲಾಗುತ್ತಿದೆ. ತಪ್ಪಿತಸ್ಥಅಧಿಕಾರಿಗಳಿಗೆ ಶಿಕ್ಷೆಯನ್ನು ಖಚಿತಗೊಳಿಸುವ ಕೆಲಸವೂ ನಡೆಯುತ್ತಿದೆ. ಜುಲೈ 26 ರಂದು ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿದ್ದ 66 ಅಧಿಕಾರಿಗಳ ವಿರುದ್ಧದ ವಿಚಾರಣೆ ನಡೆಸಿ ಶಿಕ್ಷೆ ಪ್ರಮಾಣ ಘೋಷಿಸಲಾಗಿತ್ತು. ಇದೀಗ ಮತ್ತೆ ತೀರ್ಮಾನವಾಗದೆ ಬಾಕಿ ಇದ್ದ ಸುಮಾರು 108 ಪ್ರಕರಣ ಪ್ರಸ್ತುತ ಇತ್ಯರ್ಥಗೊಳಿಸಲಾಗಿದೆ. ಭ್ರಷ್ಟಾಚಾರ ಸಾಬೀತಾದ ಅಧಿಕಾರಿಗಳಿಗೆ ಶಿಕ್ಷೆ ಖಚಿತಪಡಿಸಲಾಗಿದೆ ಎಂದಿದ್ದಾರೆ ಸಚಿವ ಸಚಿವ ಕೃಷ್ಣ ಬೈರೇಗೌಡ.
ಒಟ್ಟು 108 ಕೇಸ್ಗಳು ಇತ್ಯರ್ಥ!
ಇನ್ನು ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ನೌಕರರ ವಿರುದ್ಧದವೇ 108 ಶಿಸ್ತುಕ್ರಮ ಕಡತಗಳು ವಿಚಾರಣೆಯಾಗದೆ ಅಥವಾ ವಿಚಾರಣೆ ಆಗಿಯೂ ಇತ್ಯರ್ಥಗಳಿಸದೆ ಕಳೆದ 5 ರಿಂದ 7 ವರ್ಷಗಳ ಕಾಲ, ಸಚಿವಾಲಯದಲ್ಲೇ ಬಾಕಿ ಇದ್ದವು. ಪ್ರಸ್ತುತ ಆ ಎಲ್ಲಾ ಕಡತ ವಿಲೇವಾರಿ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಸದರಿ ಪ್ರಕರಣಗಳ ಪೈಕಿ ತಹಶೀಲ್ದಾರ್ 35, ಜಿಲ್ಲಾ ನೋಂದಣಾಧಿಕಾರಿ 06, ಕೇಂದ್ರ ಸ್ಥಾನಿಕ ಸಹಾಯಕರು 13 ಸೇರಿದಂತೆ ಹಿರಿಯ ಉಪ ನೋಂದಣಾಧಿಕಾರಿಗಳು 20, ಉಪ ನೋಂದಣಿ ಅಧಿಕಾರಿಗಳು 26 ಹಾಗೂ ಪ್ರಥಮ ದರ್ಜೆ ಸಹಾಯಕರು 02, ದ್ವಿತೀಯ ದರ್ಜೆ ಸಹಾಯಕರು 06 ಪ್ರಕರಣಗಳು ಸೇರಿವೆ.
ಈ ಪ್ರಕರಣಗಳ ಪೈಕಿ 4 ಜನ ಅಧಿಕಾರಿ ಹಾಗೂ ನೌಕರರಿಗೆ ವಾರ್ಷಿಕ ವೇತನ ಬಡ್ತಿ ತಡೆಹಿಡಿವ ದಂಡನೆ ನೀಡಲಾಗಿದೆ. ಶಿಸ್ತುಕ್ರಮ ಜರುಗಿಸುವ ಮುನ್ನ ನಿವೃತ್ತಿಗೊಂಡ 06 ಅಧಿಕಾರಿ ಮತ್ತು ನೌಕರರಿಗೆ ನಿವೃತ್ತಿ ವೇತನದಲ್ಲಿ ಕಡಿತದ ಶಿಕ್ಷೆ ನೀಡಲಾಗಿದೆ. ಶೇ.05 ರಿಂದ ಶೇ.10ರ ವರೆಗೆ ನಿವೃತ್ತಿ ವೇತನ ಕಡಿತಗೊಳಿಸುವ ಶಿಕ್ಷೆ ನೀಡಲಾಗಿದೆ ಅಂತಾ ಕಂದಾಯ ಇಲಾಖೆ ತಿಳಿಸಿದೆ.
ಉಳಿದಂತೆ ಲೋಕಾಯುಕ್ತಕ್ಕೆ 15 ಕೇಸ್ಗಳ ತನಿಖೆಗೆ ವಹಿಸಲಾಗಿದೆ. 30 ಪ್ರಕರಣ ಇಲಾಖೆಯ ವಿಚಾರಣೆ ಕೈಗೊಳ್ಳಲು ಶಿಫಾರಸು ಮಾಡಲಾಗಿದೆ. 1 ಪ್ರಕರಣದಲ್ಲಿ ವಾಗ್ದಂಡನೆ ನೀಡಿದ್ದರೆ, ಲೋಕಾಯುಕ್ತ ತನಿಖಾ ವರದಿ ಶಿಫಾರಸಿನಂತೆ ಉಳಿದ ಪ್ರಕರಣಗಳಲ್ಲಿ ಅಧಿಕಾರಿ & ನೌಕರರ ಮೇಲಿನ ಆರೋಪಗಳು ಸಾಬೀತಾಗದ ಕಾರಣ ಅವರನ್ನ ಕೇಸ್ನಿಂದ ಖುಲಾಸೆಗೊಳಿಸಲಾಗಿದೆ. ಒಟ್ನಲ್ಲಿ ಈ ಮೂಲಕ ಕಂದಾಯ ಸಚಿವಾಲಯ ಭ್ರಷ್ಟಾಚಾರ ಆರೋಪ ಕೇಳಿಬಂದಿದ್ದ ಅಧಿಕಾರಿಗಳು ಹಾಗೂ ನೌಕರರ ವಿರುದ್ಧ ಕ್ರಮ ಕೈಗೊಂಡಿರುವ ಬಗ್ಗೆ ತಿಳಿಸಿದೆ.












Click it and Unblock the Notifications