ಸಿಎಂ ಬದಲಾವಣೆ: ದಲಿತ ಮುಖ್ಯಮಂತ್ರಿ ಕುರಿತು ಮಹತ್ವದ ಹೇಳಿಕೆ ನೀಡಿದ ಕೆ ಹೆಚ್ ಮುನಿಯಪ್ಪ
ಕೋಲಾರ, ಅಕ್ಟೋಬರ್ 10: ರಾಜ್ಯದಲ್ಲಿ ದಲಿತ ಸಿಎಂ ವಿಚಾರ ಮಲ್ಲಿಕಾರ್ಜುನ ಖರ್ಗೆ ಕಾಲದಿಂದ ಈ ಮಾತು ಕೇಳಿ ಬರುತ್ತಿದೆ. ಆದರೆ ದಲಿತ ಸಿಎಂ ಮಾಡಿದವರು ಯಾರು ಇಲ್ಲ. ರಾಜ್ಯದಲ್ಲಿ ಮಲ್ಲಿಕಾರ್ಜುನ ಖರ್ಗೆಗಿಂತ ಸೀನಿಯರ್ ಲೀಡರ್ ಯಾರು ಇಲ್ಲ. ಖರ್ಗೆ ಬಿಟ್ಟರೆ ಈಗ ರಾಜ್ಯದಲ್ಲಿ ಯಾರು ಸೀನಿಯರ್ ಲೀಡರ್ ಎಂದು ಕೆ.ಹೆಚ್.ಮುನಿಯಪ್ಪ ಪ್ರಶ್ನಿಸಿದರು.
ಕೋಲಾರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಸಿಎಂ ಬದಲಾವಣೆ ಪರಿಸ್ಥಿತಿ ಬಂದಿಲ್ಲ. ಅಂತಹ ಪರಿಸ್ಥಿತಿ ಬಂದರೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತೆ. ನಾನು ಸಿಎಂ ಆಕಾಂಕ್ಷಿ ಅಲ್ಲ. ದಲಿತ ಮುಖ್ಯಮಂತ್ರಿ ವಿಚಾರವನ್ನು ಹೈಕಮಾಂಡ್ ಗೆ ಬಿಟ್ಟುಬಿಡೋಣ. ಈಗ ಇರುವ ಸಿಎಂಗೆ ಸಂಪೂರ್ಣ ಸಹಕಾರ ಕೊಡೋಣ. ಶಾಸಕರು, ಪಕ್ಷ ಎಲ್ಲರೂ ಸೇರಿ ಒಗ್ಗಟ್ಟಾಗಿ ನಿಂತು ಸಿಎಂ ಕೈ ಬಲಪಡಿಸೋಣ. ಬಿಜೆಪಿಯವರು ಮಾಡುವ ಹುನ್ನಾರಗಳಿಗೆ ಪಾಠ ಹೇಳುವುದಕ್ಕೆ ಶಕ್ತಿ ತುಂಬೋಣ ಎಂದು ಆಹಾರ ಸಚಿವ ಕೆಹೆಚ್ ಮುನಿಯಪ್ಪ ಹೇಳಿದರು.

ಚಿತ್ರದುರ್ಗದಲ್ಲಿ ಐಕ್ಯತಾ ಸಮಾವೇಶ ಮಾಡುವ ಮುಖಾಂತರ SC-ST ಜನ ಸಂಪೂರ್ಣವಾಗಿ ಕಾಂಗ್ರೆಸ್ ಪಕ್ಷದ ಜೊತೆಗೆ ಇದ್ದಾರೆ. ಸಂವಿಧಾನ ಬದಲಾವಣೆ ಮಾಡ್ತಾರೆ ಅಂತ ಬಿಜೆಪಿಯವರ ಮೇಲೆ ಅನುಮಾನ ಇತ್ತು. ಶೋಷಿತ ಸಮುದಾಯದವರು ಕಾಂಗ್ರೆಸ್ ಸರ್ಕಾರಕ್ಕೆ ಬೆಂಬಲ ನೀಡಿದರು. ಇದರಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಮಾಡಿದ್ದೇವೆ ಎಂದರು.
ಜಾತಿ ಜನಗಣತಿ ಬಗ್ಗೆ ಕ್ಯಾಬಿನೆಟ್ ನಲ್ಲಿ ಚರ್ಚೆಯಾಗಬೇಕಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಯಾರಿಗೂ ಅನ್ಯಾಯವಾಗಬಾರದು. ನೂರಾರು ಉಪಜಾತಿಗಳಿವೆ. ಅಂಕಿ ಅಂಶಗಳಿದ್ದರೆ ಮಾತ್ರ ಅವರಿಗೆಲ್ಲಾ ನ್ಯಾಯ ಕೊಡಲು ಸಾಧ್ಯವಾಗುತ್ತದೆ. ಜಾತಿ ಗಣತಿ ಎಲ್ಲಾ ವರ್ಗದವರಿಗೂ ಅನುಕೂಲವಾಗುತ್ತದೆ. ಒಂದು ವೇಳೆ ಏನಾದ್ರು ಲೋಪದೋಷಗಳು ಕಂಡುಬಂದಲ್ಲಿ ಸರ್ಕಾರವೇ ಸರಿ ಮಾಡಿ ಎಲ್ಲರ ಸಮ್ಮತಿಯನ್ನು ಪಡಿದು ಜಾರಿ ಮಾಡಲಾಗುತ್ತದೆ ಎಂದರು.
ಕಾಂಗ್ರೆಸ್ ಪಕ್ಷ ಬಹಳ ದೊಡ್ಡದು. ಇಂತಹ ಘಟನೆಗಳು ಮತ್ತೆ ನಡೆಯಬಾರದು. ಮುಂದಿನ ಚುನಾವಣೆಗಳಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಇತ್ತೀಚೆಗೆ ನಡೆದ ಗಲಾಟೆಯನ್ನು ಕುಳಿತು ಬಹೆಗರಿಸಿಕೊಳ್ಳಬೇಕು ಎಂದು ಹೇಳಿದ್ದೇನೆ. ಇನ್ನೊಂದು ವಾರದಲ್ಲಿ ಕೆಪಿಸಿಸಿ ಕಡೆಯಿಂದ ಕರೆಸಿ ಸಮಸ್ಯೆಯನ್ನು ಬಗೆಹರಿಸುತ್ತಾರೆ. ಗುಂಪುಗಾರಿಕೆ, ಸ್ವಪ್ರತಿಷ್ಠೆಯಿಂದ ಪಕ್ಷಕ್ಕೆ ಒಳ್ಳೆಯದಲ್ಲ. ಎಲ್ಲರೂ ಒಟ್ಟೆಗೆ ಹೋದರೆ ಕಾಂಗ್ರೆಸ್ ಪಕ್ಷ ಉಳಿಯುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ರತನ್ ಟಾಟಾ ರವರು ಈ ದೇಶಕ್ಕೆ ನೀಡಿರುವ ಕೊಡುಗೆ ಅಪಾರವಾಗಿದ್ದು, ಅವರು 86ನೇ ವರ್ಷದವರೆಗೂ ಕೈಗಾರಿಕೆಗಳ ಅಭಿವೃದ್ಧಿಗೆ ಶ್ರಮಿಸಿದರು. ಸ್ವತಂತ್ರ ಭಾರತದ ಮೊದಲಿನಿಂದ ಇಂದಿನವರೆಗೂ ಅವರು ಸ್ಥಾಪಿಸಿದ ಪ್ರಮುಖ ಸಂಸ್ಥೆಗಳಾದ ಟಾಟಾ ಇನ್ಸ್ಟಿಟ್ಯೂಟ್ ನಿಂದಿಡಿದು ಇಂಡಿಯನ್ ಇನ್ಸ್ಟಿಟ್ಯೂಟ್ ಆಪ್ ಸೈನ್ಸ್ ಸ್ಥಾಪನೆವರೆಗೂ ಅವರ ಶ್ರಮ ಬಹಳ ದೊಡ್ಡದು. ರತನ್ ಟಾಟಾ ರವರನ್ನು ಕೈಗಾರಿಗೆಗಳ ಭೀಷ್ಮ ಎಂದೇ ಕರೆಯಬಹುದು. ಇಂದು ಅವರು ನಿಧನರಾಗಿದ್ದು, ಅವರ ಕುಟುಂಬಕ್ಕೆ ಮತ್ತು ಟಾಟಾ ಸಮೂಹಕ್ಕೆ ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ದೇವರು ನೀಡಲಿ. ರತನ್ ಟಾಟಾ ರವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಚಿವರು ಪ್ರಾರ್ಥಿಸಿದರು.












Click it and Unblock the Notifications